Advertisement

ದಶಪಥ ಹೆದ್ದಾರಿ: ಅಪಘಾತ ತಡೆಗಿಲ್ಲ ಕ್ರಮ 

03:37 PM Mar 14, 2023 | Team Udayavani |

ಮಂಡ್ಯ: ಭಾನುವಾರ ಉದ್ಘಾಟನೆಗೊಂಡ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ದಶಪಥ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಆದರೆ, ಅಪಘಾತ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.

Advertisement

ಬೆಂಗಳೂರಿನ ಪಂಚಮುಖೀ ಗಣಪತಿ ದೇವಾಲಯದಿಂದ ಆರಂಭವಾಗುವ ಹೆದ್ದಾರಿಯ ಪ್ರಯಾಣದ ಸಮಯ ಕಡಿತಗೊಂಡಿದೆ. ಎರಡು ಗಂಟೆಗಳ ಪ್ರಯಾಣ 90 ನಿಮಿಷಕ್ಕೆ ಇಳಿಕೆ ಯಾಗಿದೆ. ಇದರಿಂದ ಬೇಗ ತಲುಪುವ ಧಾವಂತದಲ್ಲಿ ವಾಹನ ಚಾಲಕರು 120 ಕಿ.ಮೀಗಿಂತ ಹೆಚ್ಚು ವೇಗವಾಗಿ ಚಲಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಸೂಕ್ತ ಸೂಚನಾ ಫಲಕಗಳಿಲ್ಲ: ಅಪಘಾತಗಳನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೆದ್ದಾರಿ ನಿರ್ಮಿಸಿರುವುದು ಬಿಟ್ಟರೆ ತಿರುವು, ಪ್ಲೆ„ಓವರ್‌, ಅಪಾಯದ ಸ್ಥಳಗಳಲ್ಲಿ ಎಷ್ಟು ವೇಗದಲ್ಲಿ ಸಾಗಬೇಕು ಎಂಬ ಯಾವುದೇ ವೇಗದ ಮಿತಿ ಸೂಚಿಸುವ ವ್ಯವಸ್ಥೆ ಇಲ್ಲ. ಮೂರು ಪ್ಲೆ„ಓವರ್‌ಗಳು ಸಿಗಲಿವೆ. ಅಲ್ಲದೆ, ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಪ್ರಾಧಿಕಾರದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ.

ಬೈಪಾಸ್‌ ರಸ್ತೆಗಿಲ್ಲ ಸುರಕ್ಷತೆ: ಹೆದ್ದಾರಿಯಲ್ಲಿ ಐದು ಬೈಪಾಸ್‌ಗಳು ಸಿಗಲಿದ್ದು, ರಸ್ತೆಗೆ ಸುರಕ್ಷತೆ ಕೊರತೆ ಇದೆ. ಬಿಡದಿ ಬಳಿ 6.994 ಕಿ.ಮೀ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ 22.35 ಕಿ.ಮೀ, ಮದ್ದೂರು 4.459 ಕಿ.ಮೀ, ಮಂಡ್ಯ 10.040 ಕಿ.ಮೀ, ಶ್ರೀರಂಗ ಪಟ್ಟಣ 8.194 ಕಿ.ಮೀ ಉದ್ದದ ಬೈಪಾಸ್‌ಗಳು ಬರಲಿವೆ. ಇಲ್ಲಿ ಹಗಲು ಹಾಗೂ ರಾತ್ರಿ ವೇಳೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ. ಬೈಪಾಸ್‌ ದಾಟುವ ಹಿನ್ನೆಲೆಯಲ್ಲಿ ಅತಿ ವೇಗವಾಗಿ ಚಲಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಸೇತುವೆಗಳ ಬಳಿ ಸೂಚನಾಫಲಕವಿಲ್ಲ: ಅತಿ ಹೆಚ್ಚು ಪ್ರಮುಖ ಸೇತುವೆಗಳು ಬೈಪಾಸ್‌ ರಸ್ತೆಗಳಲ್ಲಿ ಬರುತ್ತವೆ. ಇಲ್ಲಿ ಯಾವುದೇ ವೇಗದ ಮಿತಿಯ ಸೂಚನಾ ಫಲಕವಿಲ್ಲ. 10 ಪ್ರಮುಖ ಸೇತುವೆಗಳು ಬೈಪಾಸ್‌ನಲ್ಲಿ ಸಿಗುತ್ತವೆ. ಬಿಡದಿ ಬೈಪಾಸ್‌ನಲ್ಲಿ 1, ರಾಮನಗರ ಮತ್ತು ಚನ್ನಪಟ್ಟಣದ ಬೈಪಾಸ್‌ಗಳಲ್ಲಿ 3, ಮದ್ದೂರು 2, ಮಂಡ್ಯ ಬೈಪಾಸ್‌ನಲ್ಲಿ 1 ಹಾಗೂ ಶ್ರೀರಂಗಪಟ್ಟಣ ಬೈಪಾಸ್‌ನಲ್ಲಿ ಮೂರು ಸೇತುಗಳು ಬರಲಿದ್ದು, 44 ಚಿಕ್ಕಸೇತುವೆಗಳು ಸಿಗಲಿವೆ. ಇಲ್ಲಿ ಅಗತ್ಯವಾಗಿ ವೇಗದ ಮಿತಿಯ ಸೂಚನಾ ಫಲಕಗಳನ್ನು ಅಳಡಿಸುವ ಅಗತ್ಯವಿದೆ.

Advertisement

80ಕ್ಕೂ ಹೆಚ್ಚು ಸಾವು: ಕಳೆದ ಆರು ತಿಂಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹೆದ್ದಾರಿ ಉದ್ಘಾಟಿಸಿದ ಕೆಲವೇ ಘಂಟೆಗಳಲ್ಲಿ ಮದ್ದೂರಿನ ಶಿಂಷಾನದಿಯ ಪ್ಲೆ„ಓವರ್‌ ಮೇಲೆ ಕಾರೊಂದು ಪಲ್ಟಿಯಾಗಿತ್ತು. ಕಾರಿನಲ್ಲಿದ್ದ ಏರ್‌ ಬ್ಯಾಗ್‌ ತೆರೆದಿದ್ದರಿಂದ ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇವೆ.

ತುರ್ತು ವೈದ್ಯಕೀಯ ಸೌಲಭ್ಯವಿಲ್ಲ: ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ತುರ್ತು ವೈದ್ಯಕೀಯ ಸೌಲಭ್ಯಗಳು ಸಿಗುವುದಿಲ್ಲ. ಇದರಿಂದ ಅಪಘಾತ ಸಂಭವಿಸಿದಾಗ ಗಾಯಾಳುಗಳು ಸಾವನ್ನಪ್ಪುವ ಸಾಧ್ಯತೆಗಳೇ ಹೆಚ್ಚಿದೆ. ಹೆದ್ದಾರಿಯ ಮಧ್ಯೆದಲ್ಲಿ ರಸ್ತೆ ವಿಭಜಕವಿದ್ದು, ಕಬ್ಬಿಣದ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗದ ಸ್ಥಿತಿ ಇದೆ. ತುರ್ತಾಗಿ ಆ್ಯಂಬುಲೆನ್ಸ್‌ಗಳು ಹೋಗಲು ಯುಟರ್ನ್ ಇಲ್ಲದಿರುವುದು ಗಾಯಾಳುಗಳನ್ನು ಸಾಗಿಸಲು ತೊಂದರೆಯಾಗುತ್ತಿದೆ.

ಇಂದು ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಜಾರಿ : ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಬಳಕೆಗಾಗಿ ಟೋಲ್‌ ಶುಲ್ಕಗಳು ಇಂದು ಬೆಳಗ್ಗೆ 8ಗಂಟೆಯೊಂದಲೇ ಅನ್ವಯವಾಗಲಿದೆ. ಕಾರು, ಜೀಪು, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ ರೂ.135 ಅದೇ ದಿನ ಮರು ಸಂಚಾರಕ್ಕೆ ರೂ. 205, 1 ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್‌ ಶುಲ್ಕ ರೂ. 4525, ಬಸ್‌ ಅಥವಾ ಟ್ರಕ್‌ ಏಕ ಮುಖ ಸಂಚಾರಕ್ಕೆ ರೂ. 460 ಅದೇ ದಿನ ಮರು ಸಂಚಾರಕ್ಕೆ ರೂ. 690, 1 ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್‌ ಶುಲ್ಕ ರೂ. 15325, ಲಘು ವಾಣಿಜ್ಯ ವಾಹನಗಳು, ಮೂರು ಅಕ್ಸೆಲ್‌ ವಾಣಿಜ್ಯ ವಾಹನಗಳು ಮತ್ತು ಭಾರಿ ಪ್ರಮಾಣ ಯಂತ್ರಗಳು ಗಳಿಗೆ ವಿವಿಧ ದರಗಳನ್ನು ನಿಗದಿಪಡಿಸಿರುವುದಾಗಿ ಪ್ರಕಟಣೆ ತಿಳಿಸಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿದಿನ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಬೆಂಗಳೂರು-ಮೈಸೂರು ಮಧ್ಯಭಾಗದಲ್ಲಿ ಟ್ರಾಮಾಕೇರ್‌ ಸೆಂಟರ್‌ ತೆರೆಯುವಂತೆ ಈಗಾಗಲೇ ಕೇಂದ್ರ, ರಾಜ್ಯ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದೇವೆ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು. – ದಿನೇಶ್‌ಗೂಳಿಗೌಡ, ಎಂಎಲ್‌ಸಿ, ಮಂಡ್ಯ

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next