Advertisement

Bengaluru Kambala: ಬೆಂಗೂರ್‌ ಕಂಬ್ಳ ಮುಗೀಂಡ್‌, ಊರುಗ್‌ ಪೋಯಿ

11:17 AM Nov 27, 2023 | Team Udayavani |

ಬೆಂಗಳೂರು: ಬೆಂಗ್ಳೂರ್ದ ಕಂಬ್ಳ ಮುಗೀಂಡ್‌….ನನ ಊರುಗ್‌ ಪೋಯಿ, ಪೋಯಿ….ಇದು ಬೆಂಗಳೂರು ಕಂಬಳ ಮುಗಿಸಿಕೊಂಡು ಮತ್ತೆ ಕರಾವಳಿಯತ್ತ ಸಾಗುತ್ತಿರುವ ಕೋಣಗಳ ಮಾಲಿಕರು, ಸಹಾಯಕರಿಂದ ಕೇಳಿ ಬಂದ ತುಳುವಿನ ಮಾತುಗಳು.

Advertisement

ಎರಡು ದಿನಗಳ ಅದ್ಧೂರಿ ಕಂಬಳಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದ ಬೆನ್ನಲ್ಲೇ “ನಮ್ಮ ಬೆಂಗಳೂರು ಕಂಬಳ’ಕ್ಕೆ ಬಂದಿದ್ದ ಕೋಣಗಳು ರಾತ್ರೋ ರಾತ್ರಿಯೇ ಲಾರಿಗಳನ್ನು ಹತ್ತಿ ಕಡಲತಡಿಯತ್ತ ಸಾಗಿದವು. ಗೆದ್ದ ಕೋಣಗಳ ಮಾಲೀಕರು ಬಂಗಾರದ ಮೆಡಲ್‌ ತೋರಿಸುತ್ತಾ ಸಂಭ್ರಮದಲ್ಲಿ ಕೋಣಗಳ ಬೆನ್ನು ತಟ್ಟಿ ಶಬಾಸ್‌ಗಿರಿ ಕೊಟ್ಟು ಬೀಗಿದರೆ, ಸೋತ ಕೋಣಗಳ ಪರಿಚಾರಕರು ಮುಂದಿನ ಕಂಬಳದಲ್ಲಿ ನಮ್ಮ ಕೋಣ ಮೆಡಲ್‌ ಪಡೆಯುವ ವಿಶ್ವಾಸವಿದೆ ಎನ್ನುತ್ತಾ ಬೆಂಗಳೂರು ತೊರೆದರು.

ಒಂದಾದ ಮೇಲೊಂದರಂತೆ ಕೋಣಗಳನ್ನು ತುಂಬಿದ ಲಾರಿಗಳು ತುಮಕೂರು ರಸ್ತೆ ಮೂಲಕ ಹಾಸನದತ್ತ ಪ್ರಯಾಣ ಬೆಳೆಸಿದವು. ಹಾಸನದಲ್ಲಿ ಕೋಣಗಳಿಗೆ ಕೊಂಚ ವಿಶ್ರಾಂತಿ ಕೊಟ್ಟು ಶಿರಾಡಿ ಅಥವಾ ಚಾರ್ಮಾಡಿ ಘಾಟ್‌ ಇಳಿದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳತ್ತ ಪ್ರಯಾಣಿಸಲು ಯೋಜನೆ ರೂಪಿಸಿರುವುದಾಗಿ 10ಕ್ಕೂ ಹೆಚ್ಚಿನ ಕೋಣಗಳ ಮಾಲೀಕರು “ಉದಯವಾಣಿ’ಗೆ ತಿಳಿಸಿದ್ದಾರೆ.

ಊರಿಗಿಂತ ಬೆಂಗ್ಳೂರು ಕಂಬ್ಳ ಆಗ್ಬೋದು ಮಾರ್ರೆ: ಕರಾವಳಿಗಿಂತಲೂ ಬೆಂಗಳೂರಿನಲ್ಲೇ ಕಂಬಳ ಮಾಡಿದರೆ ಉತ್ತಮ ಮಾರ್ರೆ. ಆದರೆ, ಊರಿನಿಂದ ಬೆಂಗಳೂರಿಗೆ ಕೋಣಗಳನ್ನು ಕರೆ ತರುವುದೊಂದೇ ಸಮಸ್ಯೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಸಿದ್ಧತೆ ಮಾಡಿಕೊಂಡು ನುರಿತ ಕೋಣಗಳನ್ನು ಕರೆತರುತ್ತೇವೆ ಎಂದು ಬಹುತೇಕ ಮಾಲೀಕರು, ಓಡಿಸುವವರು, ಪರಿಚಾರಕರು ಅಭಿಪ್ರಾಯ ವ್ಯಕ್ತಪಡಿಸಿದರು. ಲಾರಿಯಿಂದ ಇಳಿಸುವ ವೇಳೆ ಬಹುತೇಕ ಕೋಣಗಳು ಗಲಿಬಿಲಿ ಕೊಂಡಿದ್ದವು. ಆದರೆ, ಈಗ ಬೆಂಗಳೂರಿನ ವಾತಾವರಣಕ್ಕೆ ಎಲ್ಲ ಕೋಣಗಳೂ ಒಗ್ಗಿಕೊಂಡಿವೆ. ಬೆಂಗಳೂರಿನಲ್ಲಿ ರಾತ್ರಿ ಆಗುತ್ತಿದ್ದಂತೆ ಕೊಂಚ ಚಳಿಯ ಅನುಭವವಾದರೂ ಕೋಣಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಲಿಲ್ಲ. ಶೇ.70 ಕೋಣಗಳು ಕಂಬಳದಲ್ಲಿ ಉತ್ತಮ ಪ್ರದರ್ಶನ ನೀಡಿವೆ ಎನ್ನುತ್ತಾರೆ ಕಂಬಳ ತಜ್ಞರು ಹಾಗೂ ಪರಿಚಾರಕರು.

ಕೋಣಗಳಿಗೆ ಸೂಕ್ತ ವ್ಯವಸ್ಥೆ ಕಂಬಳಕ್ಕೆ ಬಂದ ಕೋಣಗಳಿಗೆ ಉಳಿದುಕೊಳ್ಳಲು ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಇಲ್ಲಿರುವ ಯಾವುದೇ ಕೋಣಗಳಿಗೂ ಸಮಸ್ಯೆಯಾಗಿರುವ ವರದಿಯಾಗಿಲ್ಲ. 179 ಜೋಡಿ ಕೋಣಗಳಿಗೆ ವಿಶ್ರಾಂತಿ ಪಡೆಯಲೆಂದು ಹಾಕಿದ್ದ 200 ಡೆರೆಗಳಲ್ಲೇ ಕೋಣಗಳ ನಿರ್ವಹಣೆಗೆ ಬಂದಿದ್ದ ಪರಿಚಾರಕರೂ ಎರಡು ರಾತ್ರಿ ಕಳೆದಿದ್ದಾರೆ. ಕೋಣಗಳನ್ನು ಕರೆ ತಂದಿದ್ದ ಲಾರಿಗಳಲ್ಲೇ ಮೇಲ್ವಿಚಾರಕರು ವಿಶ್ರಾಂತಿ ಪಡೆದರು. ಲಾರಿಗಳ ಹಿಂಭಾಗಕ್ಕೆ ಹಲಗೆಯಿಟ್ಟು ಕಂಬಳದಲ್ಲಿ ಸೋತ ಕೋಣಗಳನ್ನು ಲಾರಿಗೆ ಹತ್ತಿಸಿ ಕರೆದೊಯ್ಯುವ ದೃಶ್ಯ ಕಂಡು ಬಂತು. ಕಂಬಳದಲ್ಲಿ ವಿಜಯ ಪತಾಕೆ ಹಾರಿಸಿ ಮೆಡಲ್‌ ಗೆದ್ದ ಹಾಗೂ ಫೈನಲ್‌ಗೆ ಬಂದ 40ಕ್ಕೂ ಹೆಚ್ಚಿನ ಜೊತೆ ಕೋಣಗಳು ಸೋಮವಾರದವರೆಗೆ ಅರಮನೆ ಮೈದಾನದಲ್ಲಿದ್ದ ಠಿಕಾಣಿ ಹೂಡಿದ್ದು, ಮಧ್ಯಾಹ್ನ ಅಲ್ಲಿಂದ ಒಂದೊಂದಾಗಿ ತೆರಳಲಿವೆ. ಟ್ಯಾಂಕರ್‌ಗಳಲ್ಲಿ ತಂದಿದ್ದ ಕರಾವಳಿಯ ಎರಡೂವರೆ ಸಾವಿರ ಲೀಟರ್‌ ನೀರು ಕೆಲವೆಡೆ ಖಾಲಿಯಾಗಿದ್ದು, ಪರಿಚಾರಕರು ಶುದ್ಧ ಬಾಟಲ್‌ ನೀರನ್ನು ಪಾತ್ರೆಗಳಿಗೆ ತುಂಬಿ ಕೋಣಗಳಿಗೆ ಕುಡಿಸಿದ್ದಾರೆ. ಕುಡು, ಹುರುಳಿ, ಬೈಹುಲ್ಲುಗಳಿಗೆ ಕೊರತೆಯಾಗಿಲ್ಲ.

Advertisement

ಎಲ್ಲ ಕೋಣದ ಮಾಲೀಕರಿಗೂ ಅಭಿನಂದನೆ: ಬೆಂಗಳೂರು ಕಂಬಳ ಸಮಿತಿಯು ಹಮ್ಮಿಕೊಂಡಿದ್ದ ನಮ್ಮ ಬೆಂಗಳೂರು ಕಂಬಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಕರೆಯೋಲೆಗೆ ಓಗೊಟ್ಟು ಕಂಬಳದಲ್ಲಿ ಭಾಗವಹಿಸಿದ ಎಲ್ಲ ಕೋಣಗಳ ಮಾಲೀ ಕರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಕಂಬಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಖುಷಿ ಇದೆ. ಎಲ್ಲರ ಸಹಕಾರದಿಂದ ಈ ಕಂಬಳ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಕಂಬಳ ನೋಡಲು ಬಂದವರ ಉತ್ಸಾಹ ಕಂಡು ಸಂತಸವಾಯಿತು ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕೆ.ಎಸ್‌. ಅಶೋಕ್‌ ಕುಮಾರ್‌ರೈ ಅಭಿಪ್ರಾಯಪಟ್ಟರು

ಬೆಂಗಳೂರು ಕಂಬಳ ಸುಸಜ್ಜಿತವಾಗಿತ್ತು. ಲಕ್ಷಾಂತರ ಜನರು ಚಪ್ಪಾಳೆ, ಶಿಳ್ಳೆಗಳ ಮೂಲಕ ಕೊಟ್ಟ ಪ್ರೋತ್ಸಾಹ ಅಚ್ಚರಿ ಮೂಡಿಸಿತು. ನಾನು ನೂರಾರು ಕಂಬಳಗಳಲ್ಲಿ ಭಾಗವಹಿಸಿದ್ದರೂ ಇಷ್ಟೊಂದು ಜನ ಸೇರಿಸುವುದನ್ನು ನೋಡಿರಲಿಲ್ಲ. ಧನಂಜಯ್‌, ಮಿಜಾರು ಶಕ್ತಿ ಪ್ರಸಾದ್‌ ಶೆಟ್ಟಿ ಕೋಣಗಳ ಪರಿಚಾರಕ.

ತುಳುನಾಡಿನಿಂದ ಬೆಂಗಳೂರಿಗೆ ಬಂದು 2 ದಿನಗಳ ಕಾಲ ಕೋಣಗಳೊಂದಿಗೆ ಕಳೆದಿರು ವುದು ಹೊಸ ಅನುಭವ ನೀಡಿದೆ. ಕೋಣಗಳಿಗೆ ಕೊಂಚ ಸುಸ್ತಾಗಿರುವುದು ಹೊರತುಪಡಿಸಿದರೆ ಬೇರೆ ಸಮಸ್ಯೆ ಇಲ್ಲ. ಅನಿಲ್‌, ಕುದ್ರಿಪದವು ಪ್ರವೀಣ್‌ ಕುಮಾರ್‌ ಕೋಣಗಳ ಮೇಲ್ವಿಚಾರಕ.

ಬೆಂಗಳೂರಿಗರ ಉತ್ಸಾಹ ನೋಡಿದರೆ 6 ತಿಂಗಳಿಗೊಮ್ಮೆ ಕಂಬಳ ಮಾಡಬಹುದು. ಆರಂಭದಲ್ಲಿ ಕೋಣಗಳು ಸೂಕ್ತವಾಗಿ ಸ್ಪಂದಿಸುತ್ತ ವೆಯೇ ಎಂಬ ಬಗ್ಗೆ ಕೊಂಚ ಆತಂಕವಿತ್ತು. ಸೋಮವಾರ ಬೆಳಗ್ಗೆ ಊರಿಗೆ ಪ್ರಯಾಣಿಸುತ್ತೇವೆ. ಗಣೇಶ್‌, ನರಿಂಗಾನದ ಸುಧಾಕರ್‌ ಆಳ್ವ ಮೋರ್ಲರ ಕೋಣಗಳ ಪರಿಚಾರಕ.

ಬೆಂಗಳೂರು ಕಂಬಳಕ್ಕೆ ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ. ಸಂಚಾರ ದಟ್ಟಣೆ, ಮಾರ್ಗಮಧ್ಯೆ ಕೋಣಗಳು ತುಂಬಿರುವ ಲಾರಿ ಗಳಿಗೂ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿದ್ದೇವೆ. ಕೋಣದ ಮಾಲೀಕರಲ್ಲಿ ಮಂದಹಾಸ ಮೂಡಿದೆ. ಮುರಳೀಧರ್‌ ರೈ ಮಠಂತಬೆಟ್ಟು, ಕಾರ್ಯಧ್ಯಕ್ಷ, ಬೆಂಗಳೂರು ಕಂಬಳ ಸಮಿತಿ.

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next