Advertisement

Bengaluru: ಕುಡಿದು ಗಲಾಟೆ ಮಾಡುತ್ತಿದ್ದ ಮಗನ ಕೊಂದ ಅಪ್ಪ!

11:51 AM Oct 20, 2024 | Team Udayavani |

ಬೆಂಗಳೂರು: ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಪುತ್ರನನ್ನು ಕುತ್ತಿಗೆ ಬಿಗಿದು ತಂದೆಯೇ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಾಗದೇವನಹಳ್ಳಿ ನಿವಾಸಿ ರಾಜೇಶ್‌(35) ಕೊಲೆ ಯಾದವ. ಕೃತ್ಯ ಎಸಗಿದ ಈತನ ತಂದೆ ಲಿಂಗಪ್ಪ(58) ಎಂಬುವರನ್ನು ಬಂಧಿಸ ಲಾಗಿದೆ. ಆರೋಪಿ ಅ.19 ರಂದು ನಸುಕಿನ 2 ಗಂಟೆ ಸುಮಾರಿಗೆ ಪುತ್ರ ರಾಜೇಶ್‌ನ ತಲೆಗೆ ಮರದ ಪಟ್ಟಿಯಿಂದ ಹೊಡೆದು, ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದ. ಈ ಸಂಬಂಧ ಮೃತನ ಚಿಕ್ಕಮ್ಮನ ಪುತ್ರ ಲೋಕೇಶ್‌ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವುಲೆ ಗ್ರಾಮದ ಲಿಂಗಪ್ಪ ಹಲವು ವರ್ಷಗಳ ಹಿಂದೆಯೆ ಬೆಂಗಳೂರಿಗೆ ಬಂದಿದ್ದು, ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಲಿಂಗಪ್ಪ ಅಡುಗೆ ಕೆಲಸ ಮಾಡಿಕೊಂಡಿದ್ದರು. ಪುತ್ರ ರಾಜೇಶ್‌ ಕ್ಯಾಬ್‌ ಚಾಲಕನಾಗಿದ್ದ. 6 ವರ್ಷಗಳ ಹಿಂದೆಯೇ ಆತನಿಗೆ ಮದುವೆಯಾಗಿದ್ದು, ದಂಪತಿಗೆ 1 ಮಗು ಇದೆ. ಈ ಮಧ್ಯೆ ಪ್ರತಿದಿನ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಪತ್ನಿ, ರಾಜೇಶ್‌ ಬಿಟ್ಟು ತವರು ಮನೆಗೆ ಹೋಗಿದ್ದಾರೆ. ಹೀಗಾಗಿ ತಂದೆ-ತಾಯಿ ಜತೆ ರಾಜೇಶ್‌ ವಾಸವಾಗಿದ್ದು, ಈಗಲೂ ಪ್ರತಿದಿನ ಕುಡಿದು ಬಂದು ತಂದೆ-ತಾಯಿ ಜತೆ ಗಲಾಟೆ ಮಾಡುತ್ತಿದ್ದ. ಕೆಲವೊಮ್ಮೆ ತಂದೆ ಮೇಲೆ ಹಲ್ಲೆಗೂ ಮುಂದಾಗಿದ್ದನು. ಹೀಗಾಗಿ ಮಗನ ಕುಡಿತ, ದುರ್ನಡತೆಯಿಂದ ತಂದೆ ರೋಸಿ ಹೋಗಿದ್ದರು. ಈ ಮಧ್ಯೆ, ಅ.19 ರಂದು ಕುಡಿದು ದಾಂಧಲೆ ಮಾಡಿದ ಪುತ್ರನನ್ನು ತಂದೆ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದೇ ವೇಳೆ ವಿಚಾರ ತಿಳಿದು ಸ್ಥಳಕ್ಕೆ ಬಂದ ದೂರುದಾರ ಲೋಕೇಶ್‌, ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆ ರವಾನಿಸಿದ್ದಾರೆ. ಬಳಿಕ ಲಿಂಗಪ್ಪರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮರದ ಪಟ್ಟಿಯಿಂದ ಹೊಡೆದು, ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ:

Advertisement

ಅ.19ರಂದು ತಡರಾತ್ರಿ ಕುಡಿದು ಬಂದಿದ್ದ ರಾಜೇಶ್‌, ಮನೆಯ ಕಿಟಕಿ ಗಾಜು ಹೊಡೆದು, ಮನೆಯ ಗೇಟ್‌ ಅನ್ನು ಕಾಲಿನಿಂದ ಒದ್ದು ಗಲಾಟೆ ಮಾಡಿದ್ದಾನೆ. ತಂದೆ ಲಿಂಗಪ್ಪ ಜತೆ ವಾಗ್ವಾದ ಮಾಡಿದ್ದಾನೆ. ಈ ವಿಚಾರವನ್ನು ರಾಜೇಶ್‌ ತಾಯಿ ಪುಟ್ಟಮ್ಮ, ತನ್ನ ಸಹೋದರಿಯ ಪುತ್ರ ಲೋಕೇಶ್‌ಗೆ ತಿಳಿಸಿದ್ದಾರೆ. ಮತ್ತೂಂದೆಡೆ ಪುತ್ರನ ವರ್ತನೆಗೆ ಕೋಪಗೊಂಡ ಲಿಂಗಪ್ಪ, ಪುತ್ರನಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದಿದ್ದಾರೆ. ಕೆಳಗೆ ಬಿದ್ದ ರಾಜೇಶ್‌ನ ಕೈಗಳನ್ನು ಹಿಂದಕ್ಕೆ ಕಟ್ಟಿ, ಮರದ ಪಟ್ಟಿಯಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next