Advertisement

Bengaluru: ಇಡಿ, ಆರ್‌ಬಿಐ ಹೆಸರು ಬಳಸಿ ವಂಚಿಸುತ್ತಿದ್ದ 7 ಮಂದಿ ಬಂಧನ

12:07 PM Aug 10, 2024 | Team Udayavani |

ಬೆಂಗಳೂರು: ತಮ್ಮ ಬಳಿ ಹೂಡಿಕೆ ಮಾಡಿದರೆ ಜಾರಿ ನಿರ್ದೇಶನಾಲಯ (ಇ.ಡಿ), ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದವರು (ಆರ್‌ಬಿಐ) ಜಪ್ತಿ ಮಾಡಿರುವ ಹಣ ಪಡೆದು ದುಪ್ಪಟ್ಟು ಲಾಭಾಂಶ ಕೊಡುವುದಾಗಿ ವಂಚಿಸಿದ್ದ 7 ಮಂದಿ ಆರೋಪಿ ಗಳನ್ನು ಹೆಬ್ಟಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ನಾಗೇಶ್ವರ ರಾವ್‌, ಹಾಸನ ಜಿಲ್ಲೆ ಚನ್ನರಾಯಪಣ್ಣದ ಕಲ್ಪನಾ, ದಿಲೀಪ್‌, ತರುಣಾ, ಗೌತಮ್, ಚಾಲಕ ಮಂಜು ಬಂಧಿತರು.‌

ಆರ್‌ಬಿಐ, ಇ.ಡಿ ಇಲಾಖೆಯ ಬಳಿ ಜಪ್ತಿಯಾಗಿರುವ ಕೋಟ್ಯಂತರ ರೂ. ದುಡ್ಡಿದೆ. ನೀವು ನಮ್ಮ ಬಳಿ ಮೊದಲು ಹೂಡಿಕೆ ಮಾಡಿದರೆ ನಿರ್ದೇಶನಾಲಯ (ಇ.ಡಿ), ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದವರು (ಆರ್‌ಬಿಐ) ಜಪ್ತಿ ಮಾಡಿರುವ ದುಡ್ಡಿನಲ್ಲಿ ದುಪ್ಪಟ್ಟು ಹಣ ನೀಡುತ್ತೇವೆ. ಜಮೀನು ಕೊಡಿಸುತ್ತೇವೆ ಎಂದು ಆರೋಪಿಗಳು ಕೆಲವು ಜನರನ್ನು ನಂಬಿಸಿದ್ದರು. ಒಂದು ಬಾರಿ ಇವರ ಕೈಗೆ ದುಡ್ಡು ಸಿಕ್ಕಿದ ಕೂಡಲೇ ವರಸೆ ಬದಲಿಸುತ್ತಿದ್ದ ಆರೋಪಿಗಳು, ದುಡ್ಡು ಮರಳಿಸುವುದಿಲ್ಲ ಎಂದು ಬೆದರಿಸಿ ಕಳಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮನೋರಾಯನಪಾಳ್ಯದ ನಿವಾಸಿ ಶಾಂತಿ ಎಂಬವವರು ಕೊಟ್ಟ ದೂರಿನ ಆಧಾರದ ಮೇರೆಗೆ ಹೆಬ್ಟಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸದ್ಯ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹಣದ ಕಂತೆಗೆ ಔಷಧ ಸಿಂಪಡಿಸಬೇಕೆಂದು ನಂಬಿಸಿ 4 ಕೋಟಿ ಪಡೆದಿದ್ದ ವಂಚಕರು! ದೂರುದಾರೆ ಶಾಂತಿ ಅವರಿಗೆ ಆರೋಪಿಗಳಾದ ನಾಗೇಶ್ವರ ರಾವ್‌, ಸುಜರಿತಾ ಎಂಬುವವರು ಆರೋಪಿ ಕಲ್ಪನಾಳನ್ನು 2020ರಲ್ಲಿ ಪರಿಚಯವಾಗಿದ್ದರು. ಕಲ್ಪನಾ ಅವರು, ಕುಡುಮುಡಿ ಎಂಬಲ್ಲಿ 100 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ನ್ಯಾಯಾಲಯದಲ್ಲಿ ಪ್ರಕರಣ ನಮ್ಮ ಪರವಾಗಿದೆ. ದಾಖಲಾತಿ ಪಡೆಯಲು ತುರ್ತು ದುಡ್ಡಿನ ಅವಶ್ಯಕತೆಯಿದೆ. ಸದ್ಯ 15 ಲಕ್ಷ ರೂ. ನೀಡಿದರೆ 15 ದಿನಗಳೊಳಗೆ ಬಡ್ಡಿ ಸಹಿತ ಹಣ ವಾಪಸ್‌ ನೀಡುವುದಾಗಿ ನಂಬಿಸಿದ್ದರು.

Advertisement

ನಾಗೇಶ್ವರ ರಾವ್‌, ಸಜರಿತಾ ಹಾಗೂ ಚಾಲಕ ಮಂಜು ಸಮ್ಮುಖದಲ್ಲಿ ಶಾಂತಿ ಅವರಿಂದ ಕಲ್ಪನಾ 15 ಲಕ್ಷ ರೂ. ಪಡೆದಿದ್ದರು. 15 ದಿನಗಳ ಬಳಿಕ ಹಣ ವಾಪಸ್‌ ಕೇಳಿದಾಗ, ಕಪ್ಪು ಹಣವನ್ನು ಕಾನೂನು ಬದ್ಧವಾಗಿ ಪರಿವರ್ತಿಸಲು 100 ಕೋಟಿಗೆ ಶೇ.30ರಂತೆ 30 ಕೋಟಿ ಪಾವತಿಸಬೇಕಿದೆ. ತಮ್ಮ ಹಣಕ್ಕೆ 10 ಪಟ್ಟು ಹೆಚ್ಚು ಹಣ ನೀಡುತ್ತೇವೆ. ಜೊತೆಗೆ 2 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ ವಿಗ್ರಹ ನೀಡುತ್ತೇವೆ. ಈ ವ್ಯವಹಾರದಲ್ಲಿ ಆರ್‌ಬಿಐ ಅಧಿಕಾರಿಗಳು ನಮ್ಮೊಂದಿಗೆ ಇದ್ದಾರೆ. ಬಂಧಿತರ ಪೈಕಿ ಒಬ್ಬ ಶಾಂತಿ ಅವರಿಗೆ ಕರೆ ಮಾಡಿ ತಾನು ಇ.ಡಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದ.

ಗೋದಾಮಿನಲ್ಲಿರುವ ಹಣದ ಕಂತೆಗಳಿಗೆ ಔಷಧಿ ಹಾಕಬೇಕು. ಇಲ್ಲದಿದ್ದರೆ ಹಣವು ಒಂದಕ್ಕೊಂದು ಅಂಟಿಕೊಂಡು ನಾಶವಾಗುತ್ತದೆ. ಹಣವನ್ನು ಈಗಲೇ ಕೊಟ್ಟರೆ 2 ದಿನಗಳಲ್ಲಿ 10 ಪಟ್ಟು ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ದೂರುದಾರೆ ಶಾಂತಿ ಸೇರಿದಂತೆ ನಾಲ್ವರು 4 ಕೋಟಿ ರೂ.ವನ್ನು ಹಂತ-ಹಂತವಾಗಿ ಆರೋಪಿಗಳಿಗೆ ನೀಡಿದ್ದರು.

ನಂತರ ಆರೋಪಿಗಳು ಲಾಭವನ್ನೂ ನೀಡದೇ, ಅಸಲು ದುಡ್ಡನ್ನು ಕೊಟ್ಟಿರಲಿಲ್ಲ. ಈ ಬಗ್ಗೆ ನಾಲ್ವರು ಪ್ರಶ್ನಿಸಿದಾಗ ದುಡ್ಡು ಕೊಡುವುದಿಲ್ಲ. ಇನ್ನು ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದರು. ಆರೋಪಿಗಳು ನಾಲ್ವರಿಂದ 4 ಕೋಟಿ ರೂ. ಪಡೆದು ವಂಚಿಸಿರುವುದು ಕಂಡು ಬಂದಿದೆ. ಘಟನೆ ಸಂಬಂಧ ಹೆಬ್ಟಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next