Advertisement

ಪರಿಹಾರದ ಚೆಕ್‌ ಬೌನ್ಸ್‌: ಫಲಾನುಭವಿಗೇ ದಂಡ!

01:00 AM Mar 21, 2019 | Team Udayavani |

ಉಳ್ಳಾಲ: ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಾಗಿ ಕೃಷಿಕರೊಬ್ಬರಿಗೆ ಕಂದಾಯ ಇಲಾಖೆ ನೀಡಿದ 800 ರೂ. ಪರಿಹಾರ ಮೊತ್ತದ ಚೆಕ್‌ ಎರಡು ಬಾರಿ ಬ್ಯಾಂಕ್‌ನಲ್ಲಿ ಬೌನ್ಸ್‌ ಆಗಿ ಫ‌ಲಾನುಭವಿಯೇ 472 ರೂ. ದಂಡ ಪಾವತಿಸುವಂತಾಗಿದೆ.

Advertisement

ಕೈರಂಗಳ ಕೊಪ್ಪಳ ನಿವಾಸಿ ಕೃಷಿಕ ಭಾಸ್ಕರ್‌ ಕಂದಾಯ ಇಲಾಖೆಯ ಬೇಜವಾಬ್ದಾರಿಯಿಂದ ಸಮಸ್ಯೆಗೆ ಒಳಗಾದವರು.

ಗಾಳಿ ಮಳೆಯಿಂದಾಗಿ ಅವರ 25 ಅಡಿಕೆ ಮರಗಳು, 2 ತೆಂಗಿನ ಮರಗಳು ಧರಾಶಾಯಿಯಾಗಿದ್ದವು. ಹಟ್ಟಿ ಭಾಗಶಃ ಹಾನಿಗೀಡಾಗಿತ್ತು. ಈ ಕುರಿತು ಸ್ಥಳೀಯ ಗ್ರಾಮಕರಣಿಕರಲ್ಲಿ ದೂರು ದಾಖಲಿಸಿದ್ದರು. ಫೋಟೊ ಸಹಿತ ದೂರಿನ ಪ್ರತಿಗಾಗಿ 300 ರೂ. ಖರ್ಚು ಮಾಡಿದ್ದರು.

ತಿಂಗಳ ಹಿಂದೆ ಅವರಿಗೆ 800 ರೂ. ಪರಿಹಾರ ಮೊತ್ತದ ಚೆಕ್‌ ಬಂದಿತ್ತು. ಬಿ.ಸಿ.ರೋಡಿನ ಅಜ್ಜಿಬೆಟ್ಟು ವಿಭಾಗದ ಎಚ್‌ಡಿಎಫ್‌ಸಿ ಬ್ಯಾಂಕಿನ ಚೆಕ್‌ ಅದಾಗಿದ್ದು, ಖಾತೆಗೆ ನಗದು ಜಮಾ ಆಗುವಂತೆ ಚೆಕ್‌ ಅನ್ನು ಮೊದಲ ಬಾರಿ ಹಾಕಿದಾಗ ತಹಶೀಲ್ದಾರ್‌ ಸಹಿ ಸರಿಯಾಗಿಲ್ಲ ಎಂದು ಹೇಳಿದ ಬ್ಯಾಂಕ್‌ 236 ರೂ. ದಂಡವನ್ನು ಭಾಸ್ಕರ್‌ ಖಾತೆಯಿಂದ ಕಡಿತ ಮಾಡಿತ್ತು. ಆ ಚೆಕ್‌ ಹಿಡಿದುಕೊಂಡು ನಗರದ ಮಿನಿ ವಿಧಾನಸೌಧಕ್ಕೆ ತೆರಳಿದಾಗ ಅಲ್ಲಿನ ಸಿಬಂದಿ ತಹಶೀಲ್ದಾರರ ಬದಲಾವಣೆಯಿಂದಾಗಿ ಸಮಸ್ಯೆಯಾಗಿದೆ ಎಂದು ಹೇಳಿ ಬೇರೆ ಚೆಕ್‌ ನೀಡಿದ್ದರು. ಮತ್ತೆ ಬ್ಯಾಂಕಿಗೆ ಚೆಕ್‌ ಹಾಕಿದಾಗ ನಗದು ಇಲ್ಲದೇ ಬೌನ್ಸ್‌ ಆಗಿದ್ದು ಮತ್ತೆ 236 ರೂ. ದಂಡ ವಿಧಿಸಲಾಗಿತ್ತು. ಕೇವಲ 800 ರೂ.ಗೆ ಭಾಸ್ಕರ್‌ ಒಟ್ಟು 472 ರೂ. ಕಳೆದುಕೊಂಡಿದ್ದು, ಅರ್ಜಿ ಸಲ್ಲಿಕೆ ಖರ್ಚು ಸೇರಿ ಸೇರಿ 772 ರೂ. ಕಳೆದುಕೊಂಡಂತಾಗಿದೆ. ಕೊನೆಗೆ ರಗಳೆಯೇ ಬೇಡವೆಂದು ಚೆಕ್ಕನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next