ಮೂಡುಬಿದಿರೆ: ಬೆಳುವಾಯಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದಾಗ ರಸ್ತೆ ಸಮತಟ್ಟುಗೊಳಿಸುವ ಯಂತ್ರ ಹಿಮ್ಮುಖವಾಗಿ ಚಲಿಸಿ ಕೂಲಿ ಕಾರ್ಮಿಕರೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಮಧ್ಯಪ್ರದೇಶದ ವಿವೇಕ್ (35) ಮೃತಪಟ್ಟವರು. ಮೂಡುಬಿದಿರೆ-ಕಾರ್ಕಳ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಕಾಮಗಾರಿ ನಡೆಯುತ್ತಿದ್ದಾಗ ರಸ್ತೆ ಸಮತಟ್ಟುಗೊಳಿಸುವ ಯಂತ್ರವನ್ನು ಚಾಲಕ ಹಿಮ್ಮುಖವಾಗಿ ಚಲಾಯಿಸಿದ್ದ.
ಹಿಂಬದಿಯಲ್ಲಿದ್ದ ಕಾರ್ಮಿಕನಿಗೆ ಯಂತ್ರ ಢಿಕ್ಕಿಯಾಗಿತ್ತು. ಯಂತ್ರದ ಚಾಲಕ ಮಧ್ಯ ಪ್ರದೇಶದ ರಾಹುಲ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.