Advertisement

Belthangady ಆನೆ ದಾಳಿ ಪ್ರಕರಣ: ಸ್ಥಳಕ್ಕೆ ಎಸಿಎಫ್‌ ಭೇಟಿ, ಪರಿಶೀಲನೆ

12:04 AM Nov 29, 2023 | Team Udayavani |

ಬೆಳ್ತಂಗಡಿ: ತಾಲೂಕಿನ ನೆರಿಯ-ಕಕ್ಕಿಂಜೆ ರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವು ಸೋಮವಾರ ರಾತ್ರಿ ಕಾರಿಗೆ ಹಾನಿ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್‌ ಭೇಟಿ ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದರು.ಒಂಟಿ ಸಲಗ,ಬೆಳ್ತಂಗಡಿ,Belthangady

Advertisement

ಗಾಯಗೊಂಡಿದ್ದ ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ಅಬ್ದುಲ್‌ ರೆಹಮಾನ್‌ (40) ಹಾಗೂ ನೆರಿಯ ಗ್ರಾಮದ ಇಟ್ಟಾಡಿ ಮನೆಯ ನಾಸಿಯಾ (30) ಅವರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.ಒಂದು ವರ್ಷದ ಮಗು ಫಾತಿಮಾ ಅಲ್ಫಾ ಕಾಲಿನ ಮೂಳೆಯಲ್ಲಿ ಸ್ವಲ್ಪ ಮಟ್ಟಿನ ಬಿರುಕು ಕಂಡಿದ್ದರಿಂದ ವೈದ್ಯರ ಸಲಹೆಯಂತೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದಂತೆ ಕಾರಿನಲ್ಲಿದ್ದ ರಹಮಾನ್‌ ಪತ್ನಿ ಫೌಸಿಯಾ (35), ನಾಸಿಯಾ ತಾಯಿ ಜುಬೈದಾ (50), ನಾಸಿಯಾ ಚಿಕ್ಕಮ್ಮ ಅಯಿಷಾ (45), ನಾಸಿಯಾ ಮಕ್ಕಳಾದ ಅಯಿಷಾ ವಾಫಾ (4), ರಹಮಾನ್‌ ಮಗಳು ಮಹಮ್ಮದ್‌ ಮೋಹಜ್‌ (4) ಪಾರಾಗಿದ್ದಾರೆ. ಕಾರಿನಲ್ಲಿ ಮೂವರು ಮಕ್ಕಳು ಸೇರಿ ಒಟ್ಟು 8 ಮಂದಿಯಿದ್ದರು.

ಘಟನೆ ವಿವರ
ಗಾಯಾಳು ರೆಹಮಾನ್‌ ಮತ್ತು ಪತ್ನಿ ಫೌಸಿಯಾ ಅವರು ಅತ್ತೆ ಮನೆಯಾದ ನೆರಿಯಾ ಗ್ರಾಮದ ಇಟ್ಟಾಡಿ ನಿವಾಸಿ ನೆಬಿಸಾ ಅವರ ಮನೆಗೆ ಮಗುವಿನೊಂದಿಗೆ ಸೋಮವಾರ ಬರುವವರಿದ್ದರು. ನೆರಿಯದಲ್ಲಿ ದಾರಿ ಮಧ್ಯೆ ಸಂಬಂಧಿಕರು ಸಿಕ್ಕಿದ್ದರಿಂದ ಜತೆಗೆ ಮನೆಗೆ ತೆರಳುತ್ತಿದ್ದರು. ಈವೇಳೆ ಬಯಲು ಬಸದಿ ಸಮೀಪ ಆನೆ ಒಂಟಿ ಸಲಗ ಎದುರಾಯಿತು. ತತ್‌ಕ್ಷಣ ಕಾರು ನಿಲ್ಲಿಸಿ ಹಿಂಬಾಗಿಲಿನಿಂದ ಇಬ್ಬರು ಕಾರಿನಿಂದ ಇಳಿಯುತ್ತಿದ್ದಂತೆ ಆನೆ ಕಾರಿನ ಮೇಲೆ ದಾಳಿ ನಡೆಸಿ, ದಾಡೆಯಿಂದ ತಿವಿದು, ಎತ್ತಿ ಮಗುಚಲು ನೋಡಿತು. ಆಗ ವೇಳೆ ಕಾರಿನಲ್ಲಿದ್ದವರಿಗೆ ಗಾಯವಾಗಿದೆ.

ಪಟಾಕಿ ಸದ್ದು, ಜನರ
ಚೀರಾಟಕ್ಕೆ ಆನೆ ದಾಳಿ
ನ. 27ರಂದು ಮಕ್ಕಳ ಹುಣ್ಣಿಮೆ ಯಾದ್ದರಿಂದ ಸಂಪ್ರದಾಯದಂತೆ ಪಟಾಕಿ ಸಿಡಿಸುತ್ತಿದ್ದರು. ಒಂದೆಡೆ ಪಟಾಕಿ ಸದ್ದಿಗೆ ವಿಚಲಿತವಾಗಿದ್ದ ಆನೆ ಕಾರಿನ ಮೇಳೆ ದಾಳಿಗೆ ಮುಂದಾಗಿದೆ. ಈಮಧ್ಯೆ ಸ್ಥಳೀಯರ ಬೊಬ್ಬೆಯಿಂದ ಆನೆ ಮತ್ತಷ್ಟು ದಾಳಿಗೆ ಮುಂದಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಎಸಿಎಫ್‌ ಶ್ರೀಧರ್‌ ಭೇಟಿ
ಮಂಗಳೂರು ಎಸಿಎಫ್‌ ಶ್ರೀಧರ್‌ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿ, ಅನೆ ದಾಳಿಯಿಂದ ಮಗು ಸೇರಿ ಇಬ್ಬರಿಗೆ ಗಾಯವಾಗಿದೆ. ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಆನೆ ದಾಳಿಗೆ ಸಂಬಂಧಿಸಿ ಇಲಾಖೆಯಿಂದ ಫೆನ್ಸಿಂಗ್‌ ಅಳವಡಿಸಲು ಹಾಗೂ ರೈತರು ಮುಂದೆ
ಬಂದಲ್ಲಿ ಶೇ. 50 ಸಹಾಯಧನ ಒದಗಿಸಲಾಗುವುದು. ಕುದುರೆ ಮುಖ ದಿಂದ ಭಾಗಮಂಡಲ ವರೆಗೆ ಈ ಆನೆ ಪ್ರತೀ ವರ್ಷ ಸಂಚರಿಸುತ್ತದೆ. ಸ್ವಲ್ಪ ಮಟ್ಟಿನ ಶಬ್ದದಿಂದ ವಿಚಲಿತವಾಗಿ ದಾಳಿ ನಡೆಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ಬೆಳ್ತಂಗಡಿಯಲ್ಲಿ ಮೊದಲ ದಾಳಿ
ಪ್ರತಿವರ್ಷ ಪ್ರತೀ ದಿನ ಎಂಬಂತೆ ಒಂದಲ್ಲ ಇಂದು ಕಡೆ ಆನೆಗಳು ಕೃಷಿಗೆ ಬೆಳ್ತಂಗಡಿ ತಾಲೂಕಿನಲ್ಲಿ ದಾಳಿ ನಡೆಸುತ್ತಿದೆ. ಆದರೆ ರೈತರು ಪರಿಹಾರದ ನಿರೀಕ್ಷೆ ಬಿಟ್ಟಿದ್ದಾರೆ. ಅನೇಕ ಬಾರಿ ಮನೆಮುಂದೆಯೇ ಹಾಗೂ ಚಾರ್ಮಾಡಿ ಘಾಟಿಯಲ್ಲಿ ವಾಹನದ ಮುಂದೆಯೇ ಅನೇಕ ಬಾರಿ ಹಾದು ಹೋಗಿವೆ. ಆದರೆ ಆನೆಯಿಂದ ವಾಹನ ಮತ್ತು ಮಾನವನ ಮೇಲೆ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ಮೊದಲ ಬಾರಿ ದಾಳಿ ನಡೆಸಿದ ಘಟನೆ ನಡೆದಿದೆ.

ಅಧಿಕಾರಿಗಳಿಂದ ಅಸ್ಪಷ್ಟ ಮಾಹಿತಿ
ಘಟನೆ ನಡೆದ ಬಳಿಕ ಕಾರಿನಲ್ಲಿ ಐವರು ಇರುವುದಾಗಿ ಮೇಲ್ನೋಟಕ್ಕೆ ಮಾಹಿತಿ ಲಭಿಸಿತ್ತು. ಈ ಕುರಿತು ಮಾಧ್ಯಮದ ಮಂದಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲ. “ನಾವು ಆನೆ ಅಟ್ಟುವುದರಲ್ಲಿ ನಿರತರಾಗಿದ್ದೆವು, ಗಾಯಾಳುಗಳು ಅರ್ಜಿ ನೀಡಿದ ಬಳಿಕ ಸರಕಾರದ ಮಾರ್ಗಸೂಚಿಯಂತೆ ಪರಿಹಾರ ಧನ ನೀಡಲಾಗುವುದು’ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಆನೆಗೆ ಊಟ ಕೊಡಬೇಕಾ?
ವಲಯಾರಣ್ಯಾಧಿಕಾರಿ ಮೋಹನ್‌ ಕುಮಾರ್‌ ಸಹಿತ ಸಿಬಂದಿ ರಾತ್ರಿ ಘಟನಾ ಸ್ಥಳಕ್ಕೆ ತೆರಳಿದಾಗ ಸ್ಥಳೀಯರು ನಿರಂತರ ಆನೆ ದಾಳಿಯಿಂದ ನಾವು ಭಯಭೀತರಾಗಿದ್ದೇವೆ; ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಉತ್ತರಿಸಿ ಅಧಿಕಾರಿ, “ಆನೆಗೆ ಏನು ಊಟ ನೀಡಬೇಕಾ’ ಎಂದು ಕೇಳಿದರು. ಇದಕ್ಕೆ ಸ್ಥಳದಲ್ಲಿದ್ದ ವ್ಯಕ್ತಿ “ನಮ್ಮ ಮನೆಮಂದಿ ಯಾರಾದರು ಆನೆ ದಾಳಿಗೆ ಬಲಿಯಾದರೆ ನೀವು ಊಟ ನೀಡುತ್ತೀರಾ?’ ಎಂದು ಮರು ಪ್ರಶ್ನೆ ಹಾಕಿದರು. ಈ ಮಧ್ಯೆ ಘಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಎಸಿಎಫ್‌ ಶ್ರೀಧರ್‌ ಗಾಯಗೊಂಡ ಮಗುವನ್ನು ಭೇಟಿಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next