Advertisement

‘ಓಟ್‌ ಬ್ಯಾಂಕ್‌ಗೆ ದಲಿತರನ್ನು ಎತ್ತಿಕಟ್ಟುವ ಯತ್ನ’ 

11:07 AM Sep 07, 2018 | Team Udayavani |

ಬೆಳ್ತಂಗಡಿ : ಜಂತರ್‌-ಮಂಥರ್‌ ನಲ್ಲಿ ಸಂವಿಧಾನ ಸುಟ್ಟು ಅಂಬೇಡ್ಕರ್‌ ಅವರಿಗೆ ಧಿಕ್ಕಾರ ಕೂಗುತ್ತಿದ್ದವರು ಆರೆಸ್ಸೆಸ್‌ನವರು ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದ್ದು, ಆದರೆ ಅಲ್ಲಿ ಮೋದಿ ಹಾಗೂ ಅಮಿತ್‌ಗೂ ಧಿಕ್ಕಾರ ಹಾಕಲಾಗುತ್ತಿತ್ತು. ಆದರೆ ಕೆಲವರು ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಚಿ.ನಾ. ರಾಮು ಆರೋಪಿಸಿದರು. ಅವರು ಗುರುವಾರ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕೇಸರಿ ಸುಟ್ಟು ಪ್ರಕರಣವನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

Advertisement

ಹಿಂದೆ ಅಖಂಡ ಭಾರತವನ್ನು ವಿಭಜನೆ ಮಾಡುವ ಸಂದರ್ಭದಲ್ಲೂ ಅದನ್ನು ಅಂಬೇಡ್ಕರ್‌ ವಿರೋಧಿಸಿದ್ದರು. ಆದರೆ ದೇಶ ವಿಭಜನೆಯೇ ಈಗ ದೊಡ್ಡ ಸಮಸ್ಯೆಯಾಗಿದೆ. ಸಂವಿಧಾನವನ್ನು ರೂಪಿಸುವ ಸಂದರ್ಭದಲ್ಲಿ ಕೇವಲ 6 ಜಾತಿಗಳಿಗೆ ಶೇ. 15 ದಲಿತ ಮೀಸಲಾತಿ ರೂಪಿಸಲಾಗಿತ್ತು. ಆದರೆ ಕಾಂಗ್ರೆಸ್‌ ಪಕ್ಷ ಓಟಿಗಾಗಿ ಅದಕ್ಕೆ 95 ಜಾತಿಯನ್ನು ಸೇರಿಸುವ ಕೆಲಸ ಮಾಡಿದೆ. ಮೀಸಲಾತಿ ಹೆಸರಿನಲ್ಲಿ ಶ್ರೀಮಂತರು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದು, ಬಡವರು ಬಡವರಾಗಿಯೇ ಉಳಿದಿದ್ದಾರೆ. ನಾವು ಸಂವಿಧಾನ, ಭಗವದ್ಗೀತೆ, ಭಗವಾಧ್ವಜ ಎಲ್ಲವನ್ನೂ ಗೌರವಿಸುವವರಾಗಿದ್ದು, ಯಾವುದಕ್ಕೂ ತೊಂದರೆಯಾದರೂ ವಿರೋಧಿಸುತ್ತೇವೆ. ಸಂವಿಧಾನ ಸುಟ್ಟ ಪ್ರಕರಣವನ್ನೂ ವಿರೋಧಿಸಿ, ಪ್ರತಿಭಟನೆ ನಡೆಸಿದ್ದೇವೆ. ಹೀಗಾಗಿ ಬೆಳ್ತಂಗಡಿ ಕೇಸರಿ ಸುಟ್ಟ ಪ್ರಕರಣವನ್ನು ಖಂಡಿಸುತ್ತೇನೆ ಎಂದರು.

ಸಂಘಟನೆಗಳ ಮುಂದಾಳು ಫಟಾಫಟ್‌ ಶ್ರೀನಿವಾಸ್‌ ಮಾತನಾಡಿ, ನಾವು ಸಂವಿಧಾನ ಸುಟ್ಟ ಪ್ರಕರಣವನ್ನು ಮೊತ್ತ ಮೊದಲು ಖಂಡಿಸಿದ್ದೇವೆ. ಆದರೆ ಅದನ್ನೇ ಗುರಿಯಾಗಿಸಿ ಬೆಳ್ತಂಗಡಿಯ ದಲಿತ ಸಂಘಟನೆಗಳು ಕೇಸರಿಯನ್ನು ಸುಟ್ಟಿರುವುದು ರಾಷ್ಟ್ರಧ್ವಜದ ಒಂದು ಭಾಗವನ್ನೇ ಸುಟ್ಟಂತೆ. ಅಂಬೇಡ್ಕರ್‌ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿದ ಕಾಂಗ್ರೆಸ್‌ ಗೆ ಈಗ ಅವರ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ. ದಲಿತರೆಂದು ಬೊಬ್ಬೆ ಹಾಕುವ ಇವರು ಮಲ್ಲಿಕಾರ್ಜುನ ಖರ್ಗೆಯನ್ನು ಸಿಎಂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಪ್ರಮುಖರಾದ ಮುರಳಿಕೃಷ್ಣ ಹಸಂತ್ತಡ್ಕ, ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ದಿನೇಶ್‌ ಅಮ್ಟೂರು, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್‌ ಡಿ. ಧರ್ಮಸ್ಥಳ, ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಕ್‌ ಭಟ್‌ ಮೊದಲಾದವರಿದ್ದರು. ವಿಹಿಂಪ ಬೆಳ್ತಂಗಡಿ ಅಧ್ಯಕ್ಷ ಸುಬ್ರಹ್ಮಣ್ಯಕುಮಾರ್‌ ಅಗರ್ತ ಸ್ವಾಗತಿಸಿ, ಕಾರ್ಯದರ್ಶಿ ನವೀನ್‌ ನೆರಿಯ ನಿರೂಪಿಸಿದರು. ಬಳಿಕ ಶಾಸಕ ಹರೀಶ್‌ ಪೂಂಜ ನೇತೃತ್ವದಲ್ಲಿ ಕೇಸರಿ ಸುಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ, ತಹಶೀಲ್ದಾರ್‌ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.

ಕಾಂಗ್ರೆಸ್‌ ಕುಮಕ್ಕಿನ ಕೃತ್ಯ
ಶಾಸಕ ಹರೀಶ್‌ ಪೂಂಜ ಮಾತನಾಡಿ, ಹಿಂದೂ ಸಮಾಜದ ಭಾಗವಾದ ಕೇಸರಿಯನ್ನು ಸುಟ್ಟಿರುವುದು ಕಾಂಗ್ರೆಸ್‌ ಕುಮ್ಮಕ್ಕಿನ ಕೃತ್ಯ. ದಲಿತ ಸಂಘಟನೆಗಳ ಪ್ರತಿಭಟನೆಯಲ್ಲಿ ಮಾಜಿ ಶಾಸಕರು, ಕಾಂಗ್ರೆಸ್‌ ಜಿ.ಪಂ. ಸದಸ್ಯರು ಸಹಿತ ಮತ್ತಿತರರು ಭಾಗವಹಿಸಿರುವುದೇ ಅದಕ್ಕೆ ಸಾಕ್ಷಿ. ಜತೆಗೆ ಕಾಂಗ್ರೆಸ್‌ ಪ್ರೇರಿತ ಕೃತ್ಯ ಎಂದು ನೇರ ಆರೋಪ ಮಾಡಿದಾಗಲೂ ಅಲ್ಲ ಎಂದಿಲ್ಲ. ಚುನಾವಣೆ ಸಮೀಪಿಸುತ್ತಿರುವಾಗ ಕಾಂಗ್ರೆಸ್‌ ಇಂತಹ ಕೃತ್ಯಗಳನ್ನು ಅಲ್ಲಲ್ಲಿ ಮಾಡುತ್ತದೆ. ಕೆಲವರು ಕಲೆಕ್ಷನ್‌ಗೆ ಬೇಕಾಗಿ ಹಿಂದುತ್ವದ ನಾಟಕವಾಡುತ್ತಿದ್ದು, ಅಂಥವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next