Advertisement

ಆನಂದ್‌ಸಿಂಗ್‌ ಬಿಜೆಪಿಯಿಂದ ಸ್ಪರ್ಧೆ

12:27 PM Nov 14, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಸುಪ್ರೀಂಕೋರ್ಟ್‌ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಆನಂದ್‌ ಸಿಂಗ್‌ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪ ಮುಂದಿನ ನಡೆ ಕುತೂಹಲ ಮೂಡಿಸಿದೆ.

Advertisement

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಆನಂದ್‌ಸಿಂಗ್‌ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪ ಕೇವಲ 8228 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಸೋಲು ಕ್ಷೇತ್ರದಲ್ಲಿ ಗವಿಯಪ್ಪರಿಗೆ ಅನುಕಂಪದ ಅಲೆ ಸೃಷ್ಟಿಸಿದ್ದು, ಮುಂದಿನ ಚುನಾವಣೆಗಳಲ್ಲಿ ಗೆಲುವಿನ ವಿಶ್ವಾಸ ಮೂಡಿಸಿತ್ತು. ಆ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಆನಂದ್‌ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಗವಿಯಪ್ಪರಿಗೆ ಬಿಜೆಪಿ ಟಿಕೆಟ್‌ ಲಭಿಸುವ ನಿರೀಕ್ಷೆ ಹೊಂದಿದ್ದರು. ಒಂದು ವೇಳೆ ಸುಪ್ರೀಂಕೋರ್ಟ್ ನಲ್ಲಿ ಆನಂದ್‌ಸಿಂಗ್‌ ವಿರುದ್ಧ ತೀರ್ಪು ಬಂದರೂ ಪಕ್ಷದ ರಾಜ್ಯ ವರಿಷ್ಠರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಪರಿಗಣಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಹೊಂದಿದ್ದರು. ಅದಕ್ಕಾಗಿ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾಗುವುದನ್ನೇ ಕಾದುಕುಳಿತಿದ್ದರು.

ಆದರೆ ತೀರ್ಪು ಅನರ್ಹರ ಪರವಾಗಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್‌ ದೊರೆಯುವ ನಿರೀಕ್ಷೆ ಹುಸಿಯಾಗಿದ್ದು, ಮುಂದೆಯೂ ಬಿಜೆಪಿಯಲ್ಲೇ ಮುಂದುವರೆಯಲಿದ್ದಾರೆಯೇ? ಅಥವಾ ಈಗಾಗಲೇ ಕ್ಷೇತ್ರದಲ್ಲಿ ಹಬ್ಬಿರುವ ಗಾಳಿಸುದ್ದಿಯಂತೆ ಮಾತೃ ಪಕ್ಷ ಕಾಂಗ್ರೆಸ್‌ ನಿಂದ ಕಣಕ್ಕಿಳಿಯಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ.

ಡಿ. 4ನಂತರ ಗವಿಯಪ್ಪ ನಿರ್ಣಯ: ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾಗುತ್ತಿದ್ದಂತೆ ಬಿಜೆಪಿ ಟಿಕೆಟ್‌ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ ಮೇಲಿನ ಆಸೆಯನ್ನು ಕೈಬಿಟ್ಟಿರುವ ಗವಿಯಪ್ಪ ಉಪಚುನಾವಣೆಯಲ್ಲಿ ಸ್ಪರ್ಧೆಯಿಂದಲೇ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಮೇಲಾಗಿ ಪಕ್ಷದ ರಾಜ್ಯ ಮುಖಂಡರೇ ದೂರವಾಣಿ ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಸಹ ಈ ಉಪಚುನಾವಣೆಯಲ್ಲಿ ಸ್ಪ ರ್ಧಿಸುವುದಿಲ್ಲ. ಒಂದು ಹಡಗಿನಲ್ಲಿ ಎರಡು ಕ್ಯಾಪ್ಟನ್‌ ಗಳು ಇರೋಕಾಗಲ್ಲ. ಹೀಗಾಗಿ ಡಿಸೆಂಬರ್‌ 4ರ ನಂತರ ಮುಂದಿನ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕ್ಷೇತ್ರದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಕ್ಷೇತ್ರದ ರಾಜಕೀಯ ಚಿತ್ರಣ: ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಅನರ್ಹ ಶಾಸಕ ಆನಂದ್‌ಸಿಂಗ್‌ ಪ್ರಭಾವಿ ಮುಖಂಡರು. ಕ್ಷೇತ್ರದಲ್ಲೇ ತನ್ನೆದೇ ಆದ ವರ್ಚಸ್ಸು ಹೊಂದಿರುವ ಆನಂದ್‌ಸಿಂಗ್‌ ಎಲ್ಲ ಸಮುದಾಯಗಳ ಮನ್ನಣೆ ಪಡೆದಿದ್ದಾರೆ. ಇದು ಕ್ಷೇತ್ರದಲ್ಲಿ ಆನಂದ್‌ಸಿಂಗ್‌ ಹ್ಯಾಟ್ರಿಕ್‌ ಗೆಲುವು ಸಾಧಿ ಸಲು ಕಾರಣ. ಜತೆಗೆ ಕ್ಷೇತ್ರದಲ್ಲಿ ತನ್ನದೇ ಆದ ಯುವಪಡೆಯನ್ನು ಹೊಂದಿದ್ದು, ಸರ್ಕಾರಿ ಸೌಲಭ್ಯಗಳು ಪ್ರತಿ ಮನೆಗೆ ತಲುಪಿಸುವಲ್ಲಿ ಸದಾ ಶ್ರಮಿಸುತ್ತಿರುವ ಈ ಯುವಪಡೆ, ಜನಮಾನಸದಿಂದ ಸಿಂಗ್‌ ಹೆಸರು ಮಾಸದಂತೆ ಜಾಗೃತಗೊಳಿಸುತ್ತಾರೆ.

Advertisement

ಇದು ಕ್ಷೇತ್ರದಲ್ಲಿ ಸಿಂಗ್‌ ಸುಲಭವಾಗಿ ಗೆಲುವು ಸಾಧಿಸುವಲ್ಲಿ ಸಹಕಾರಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಂದಷ್ಟು ವಿರೋಧಿ ಅಲೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಗೆಲುವಿನ ಅಂತರ ಕಡಿಮೆಯಾಯಿತು. ಇನ್ನು ಕ್ಷೇತ್ರದಲ್ಲಿ ಆನಂದ್‌ ಸಿಂಗ್‌ಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಎಂದರೆ ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪ. ಆರ್ಥಿಕವಾಗಿಯೂ ಸಮಬಲರಾಗಿರುವ ಗವಿಯಪ್ಪ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು, ಕಾರ್ಯಕರ್ತರ ಬಲವನ್ನು ಹೊಂದಿದ್ದಾರೆ. ಗವಿಯಪ್ಪಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಂಗ್‌ಗೆ ಸೂಕ್ತ ಎದುರಾಳಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಆಕಾಂಕ್ಷಿಗಳು: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿ ಸುವ ಆಕಾಂಕ್ಷಿಗಳ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಕ್ಷೇತ್ರದಲ್ಲಿ ಮುಸ್ಲಿಂ, ಕುರುಬ, ಸಾಮಾನ್ಯ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮುಸ್ಲಿಂ ಸಮುದಾಯದಿಂದ ಶಿರಾಜ್‌ಶೇಖ್‌, ಎಚ್‌. ಎನ್‌.ಎಫ್‌.ಇಮಾಮ್‌ ನಿಯಾಜಿ, ಕುರುಬ ಸಮುದಾಯದಿಂದ ಕೆ.ಎಸ್‌.ಎಲ್‌.ಸ್ವಾಮಿ, ಕಲ್ಲುಕಂಬ ಪಂಪಾಪತಿ, ಸಾಮಾನ್ಯದಿಂದ ವೆಂಕಟರಾವ್‌ ಘೋರ್ಪಡೆ ಅವರು ಆಕಾಂಕ್ಷಿಗಳಾಗಿದ್ದಾರೆ.

ಜತೆಗೆ ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯುವ ತೆರೆಮರೆಯ ಪ್ರಯತ್ನಗಳು ನಡೆದಿವೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಮುಗಿದಿದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಲಭಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next