Advertisement

ಕರ್ತವ್ಯದೊಂದಿಗೆ ಹವ್ಯಾಸ ಬೆಳೆಸಿಕೊಳ್ಳಿ

12:42 PM Dec 14, 2019 | Naveen |

ಬಳ್ಳಾರಿ: ಪೊಲೀಸ್‌ ಇಲಾಖೆಯ ಸಿಬ್ಬಂದಿಯವರು ಕರ್ತವ್ಯದ ಜೊತೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಕರೆ ನೀಡಿದರು.

Advertisement

ನಗರದ ಡಿ.ಎ.ಆರ್‌ ಪೊಲೀಸ್‌ ಕವಾಯತು ಮೈದಾನದಲ್ಲಿ ಶುಕ್ರವಾರ ಬಳ್ಳಾರಿ ಜಿಲ್ಲಾ ಪೊಲೀಸ್‌ ಇಲಾಖೆಯ ವಾರ್ಷಿಕ ಕ್ರೀಡಾಕೂಟ-2019ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಂದು ಸಭೆ, ಸಮಾರಂಭ, ಅಪರಾಧ ಪ್ರಕರಣ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಒತ್ತಡದ ಕೆಲಸದಲ್ಲಿ ಕೌಟುಂಬಿಕ ಜೀವನಕ್ಕೆ ನಿಗದಿತ ಸಮಯ ಅವಕಾಶ ಕಡಿಮೆ ಇರುತ್ತದೆ. ಒತ್ತಡವನ್ನು ಹೊಗಲಾಡಿಸಲು ತಾವುಗಳು ಕುಟುಂಬಕ್ಕೆ ಸಮಯ ನೀಡಬೇಕು ಮತ್ತು ಅವರೊಂದಿಗೆ ಬೆರೆಯಬೇಕು ಎಂದರು.

ಸಾರ್ವಜನಿಕರು ಸುಖ ನಿದ್ರೆ, ನೆಮ್ಮದಿ ಜೀವನ ಸಾಗಿಸುತ್ತಿರುವಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿಯ ಪಾತ್ರ ಅತ್ಯಂತ ಪ್ರಶಂಸನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿ ನಕುಲ್‌ ಅವರು ಈ ಕ್ರೀಡಾಕೂಟದಲ್ಲಿ ಸಿಬ್ಬಂದಿ ಸ್ಫೂರ್ತಿಯಿಂದ ಭಾಗವಹಿಸಿ, ಈ ಸಮಯವನ್ನು ತಾವುಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು ಮಾತನಾಡಿ, ಸಿಬ್ಬಂದಿ ವರ್ಷದುದ್ದಕ್ಕೂ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ಹೊಸ ಹೊಸ ಕ್ರೈಂಗಳು ಸೃಷ್ಟಿಯಾಗುತ್ತಿವೆ. ಈ ಕುರಿತು ಪೊಲೀಸ್‌ ಇಲಾಖೆ ಸಿಬ್ಬಂದಿ ಆರ್ಥಿಕ ವಂಚನೆ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಹಾಗೂ ಇತರೆ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ವೀಡಿಯೋ ತುಣುಕು, ಕರಪತ್ರಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ ಎಂದರು. ಈ ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗೆ ತಿಳಿಸಿದರು.

ಎಲ್ಲರು ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದರು. ಹೆಚ್ಚುವರಿ ಪೊಲೀಸ್‌ ಅಧಿಧೀಕ್ಷಕಿ ಲಾವಣ್ಯ ಬಿ. ಎನ್‌ ಅವರು ವಂದಿಸಿದರು. ಈ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿ, ಗಣ್ಯವ್ಯಕ್ತಿಗಳು ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next