Advertisement

ನೌಕರರ ಕ್ಷೇಮಾಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸೋಣ

04:41 PM Jul 19, 2019 | Naveen |

ಬಳ್ಳಾರಿ: ನೌಕರರ ನಡುವಿನ ಸ್ಪರ್ಧೆ ಕೇವಲ ಚುನಾವಣೆಗಷ್ಟೇ ಸೀಮಿತ. ನಂತರ ನಾವೆಲ್ಲ ಒಗ್ಗೂಡಿ ನೌಕರರ ಯೋಗಕ್ಷೇಮಕ್ಕಾಗಿ ಶ್ರಮಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ| ಎಂ.ಟಿ. ಮಲ್ಲೇಶ್‌ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯ ಈಜುಕೊಳದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಂ. ಶಿವಾಜಿರಾವ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಮಾತನಾಡಿದರು.

ಸ್ಪರ್ಧೆಗಳು ಕೇವಲ ಚುನಾವಣೆಗಷ್ಟೇ ಸೀಮಿತವಾಗಿರಲಿ. ನಂತರ ನಾವೆಲ್ಲರೂ ಸರ್ಕಾರಿ ನೌಕರರೆ. ನಮ್ಮಲ್ಲಿ ಯಾವುದೇ ವೈಷಮ್ಯ ಇರಬಾರದು ಎಂದ ಅವರು, ಈ ವರೆಗೆ ರಾಜ್ಯ ಸಂಘದಲ್ಲಿ ಖಜಾಂಚಿ ಸ್ಥಾನವನ್ನು ಬೆಂಗಳೂರಿನವರೇ ಆಯ್ಕೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರಾದೇಶಿಕವಾಗಿ ಮಹತ್ವ ನೀಡಬೇಕೆಂಬ ಉದ್ದೇಶದಿಂದಾಗಿ ಗದಗ್‌ನ ರವಿಗುಂಜೇರಿ ಎಂಬುವವರನ್ನು ಸ್ಪರ್ಧಾ ಕಣಕ್ಕಿಳಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ರಾಧಾಕೃಷ್ಣ ಅವರು, ಸಂಘಕ್ಕೆ ಯಾರೇ ಆಯ್ಕೆ ಆದರೂ ಎಲ್ಲರೂ ಸರ್ಕಾರಿ ನೌಕರರ ಕಲ್ಯಾಣಕ್ಕೆ ಶ್ರಮಿಸಬೇಕು ಎಂದರು.

ತಾಲೂಕು ಅಧ್ಯಕ್ಷರಾದ ಕಂಪ್ಲಿಯ ಕೆ.ಸಿ. ಭೀಮಣ್ಣ, ಹಡಗಲಿಯ ಎಂ.ಪಿ.ಎಂ.ಅಶೋಕ್‌, ಕೂಡ್ಲಿಗಿಯ ಪಿ.ಶಿವರಾಜ್‌, ಹರಪನಹಳ್ಳಿಯ ಸಿದ್ದಲಿಂಗನಗೌಡ, ಸಂಡೂರಿನ ಪರುಶುರಾಮ್‌, ಕೆ.ಜಗದೀಶ್‌ ಮೊದಲಾದವರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ನೌಕರರ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆ (ಎನ್‌.ಪಿ.ಎಸ್‌) ವಿರುದ್ಧ ಹೋರಾಟಕ್ಕೆ ಧ್ವನಿಯಾಗಬೇಕು ಎಂದು ಕೋರಿದರು.

Advertisement

ಸದಸ್ಯರ ಆಕ್ಷೇಪ: ಇದೇ ವೇಳೆ ಸಂಘದ ಗೌರವಾಧ್ಯಕ್ಷರನ್ನಾಗಿ ಎಂ.ಟಿ. ಮಲ್ಲೇಶ್‌ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕುರುಗೋಡು ತಾಲೂಕು ಅಧ್ಯಕ್ಷ ಗುಂಡಪ್ಪ ನಾಗರಾಜ್‌, ಸಂಘದ ಬೈಲಾದ 40 ಎ ಪ್ರಕಾರ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರನ್ನು ಮಾತ್ರ ಗೌರವ ಅಧ್ಯಕ್ಷ ಪದವಿಗೆ ಪರಿಗಣಿಸಬೇಕು ಎಂದು ಸೂಚಿಸುತ್ತಿದೆ ಎಂದರು. ಆಗ ಸಭೆಯಲ್ಲಿದ್ದ ಅನೇಕ ಸದಸ್ಯರು ಅವರ ಅಭಿಪ್ರಾಯಕ್ಕೆ ಆಕ್ಷೇಪಿಸುತ್ತಿದ್ದಂತೆ ಕೆಲ ಸದಸ್ಯರು ಇದು ಪದಗ್ರಹಣ ಸಮಾರಂಭವಾಗಿದ್ದು, ಅದಕ್ಕೆ ಸಂಬಂಧಿಸಿ ಮಾತನಾಡಬೇಕು. ಅದು ಬಿಟ್ಟು ಬೇರೆ ವಿಷಯ ಆನಂತರ ಮಾತನಾಡುವುದು ಸೂಕ್ತ ಎಂದು ನಾಗರಾಜ ಅವರ ವಿರುದ್ಧ ವಾಗ್ಧಾಳಿ ನಡೆಸಿದರು.

ಇವೇ ವೇಳೆ ಚುನಾವಣೆಯಲ್ಲಿ ಖಜಾಂಚಿಯಾಗಿ ಆಯ್ಕೆಯಾಗಿದ್ದ ಸಿ.ನಿಂಗಪ್ಪ ಗುಂಪಿನ ಎಸ್‌.ಎಂ.ಭದ್ರಯ್ಯ ಅವರು ಪದಗ್ರಹಣ ಸಮಾರಂಭಕ್ಕೆ ಗೈರು ಹಾಜರಾಗಿದ್ದು ಗಮನ ಸೆಳೆಯಿತು. ಸಮಾರಂಭದಲ್ಲಿ ಐಜಿ ಕಚೇರಿಯ ಅಧೀಕ್ಷಕ ಈರಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಕೆ. ರಾಮಕೃಷ್ಣ ಸ್ವಾಗತಿಸಿದರು. ರಾಜ್ಯ ಪರಿಷತ್‌ ಸದಸ್ಯ ಡಿ. ಗುರುರಾಜ್‌ ಮೊದಲಾದವರು ವೇದಿಕೆಯಲ್ಲಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಹರಿಪ್ರಸಾದ್‌ ಪ್ರಾರ್ಥಿಸಿದರು. ಬಳಿಕ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next