Advertisement

ಹೈ-ಕ ಕಾಮಗಾರಿಗಳ ಸಮಗ್ರ ವರದಿ ನೀಡಿ

11:25 AM Jul 13, 2019 | Naveen |

ಬಳ್ಳಾರಿ: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅನುಮೋದಿಸಲಾಗಿರುವ ಕಾಮಗಾರಿಗಳನ್ನು ಅನುಷ್ಠಾನ ಏಜೆನ್ಸಿಗಳು ಸ್ಥಳಕ್ಕೆ ತೆರಳಿ ನಿವೇಶನ ಇದೆಯೋ ಅಥವಾ ಸಮಸ್ಯೆ ಇದೆಯೋ, ಕಾಮಗಾರಿ ಮಾಡಲು ಆಗುತ್ತದೆಯೋ ಆಗುವುದಿಲ್ಲವೋ ಎಂಬುದನ್ನು ಪರಿಶೀಲಿಸಿ ಜು. 31ರೊಳಗಾಗಿ ವರದಿ ಸಲ್ಲಿಸಬೇಕು ಎಂದು ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಷಯವಾರು ಹಂಚಿಕೆ ಮಾಡಲಾಗಿರುವ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿವೇಶನ ಸಮಸ್ಯೆ ಇದ್ದಲ್ಲಿ ಕಾಮಗಾರಿ ಬದಲಾವಣೆ ಕೋರಿ ಪತ್ರ ಬರೆದು ತಿಳಿಸಬಹುದಾಗಿದೆ. ಕಾಮಗಾರಿಗಳ ಹಂಚಿಕೆ ಮತ್ತು ಏಜೆನ್ಸಿಗಳ ಬದಲಾವಣೆ ಇದ್ದಲ್ಲಿ ಪತ್ರಮುಖೇನ ಜು. 31ರೊಳಗೆ ತಿಳಿಸಬಹುದಾಗಿದೆ. ಯಾವುದೇ ರೀತಿಯ ಸಮಸ್ಯೆಗಳು ಇರದಿದ್ದಲ್ಲಿ ಅಂದಾಜುಪಟ್ಟಿ ತಯಾರಿಸಿ, ಟೆಂಡರ್‌ ಆಹ್ವಾನ ಸೇರಿದಂತೆ ಇನ್ನಿತರೆ ಕ್ರಮಗಳನ್ನು ತುರ್ತಾಗಿ ಜರುಗಿಸಬೇಕು. ಯಾವುದೇ ಕಾರಣಕ್ಕೂ ತಡಮಾಡಬಾರದು ಎಂದು ಅವರು ಅನುಷ್ಠಾನ ಏಜೆನ್ಸಿಗಳಿಗೆ ಸೂಚನೆ ನೀಡಿದರು.

ಪ್ರಸಕ್ತ ಸಾಲಿನ ಎಲ್ಲ ಕೆಲಸಗಳು ಕೂಡಲೇ ಪ್ರಾರಂಭವಾಗಬೇಕು ಎಂದ ಸುಬೋದ್‌ ಯಾದವ್‌, ಜಿಲ್ಲೆಯಲ್ಲಿ 77 ಕೆಲಸಗಳು ಇನ್ನೂ ಪ್ರಾರಂಭವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅನುಷ್ಠಾನ ಏಜೆನ್ಸಿಗಳಾದ ಪಿಡಬ್ಲೂಡಿ, ಪಿಆರ್‌ಇಡಿ ಮತ್ತು ಕೆಆರ್‌ಐಡಿಎಲ್ಗಳ ಮೇಲೆ ಅತೃಪ್ತಿ ವ್ಯಕ್ತಪಡಿಸಿದರು. ಸೈಟ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಡಿಸಿ, ಜಿಪಂ ಸಿಇಒ ಅವರ ಗಮನಕ್ಕೆ ತರಬೇಕು. ಆ ರೀತಿ ತರದೇ ಕಾಮಗಾರಿ ಡ್ರಾಪ್‌ ಮಾಡುವಂತೆ ಹೇಗೆ ವರದಿ ನೀಡುತ್ತೀರಿ ಎಂದು ಹಗರಿಬೊಮ್ಮನಳ್ಳಿ ಲೋಕೋಪಯೋಗಿ ಎಇಇ ಮೂರು ಕಾಮಗಾರಿಗಳು ಡ್ರಾಪ್‌ ಮಾಡುವಂತೆ ಹೇಳಿದ್ದಕ್ಕೆ ಸುಬೋದ್‌ಯಾದವ್‌ ಗರಂ ಆದರು. ಕಳೆದ ನವೆಂಬರ್‌ನಿಂದ ಈ ವಿಷಯಗಳಿಗೆ ಸಂಬಂಸಿದಂತೆ ಹೇಳುತ್ತಾ ಬಂದರೂ ತಾವು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಕಾಲದಲ್ಲಿ ಬಳಸದ ಕಾರಣ ಜನರಿಗೆ ಸಮಸ್ಯೆ: ಹೈಕ ಅಭಿವೃದ್ಧಿ ಮಂಡಳಿಯಿಂದ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಅಪಾರ ಪ್ರಮಾಣದ ಹಣ ಬಿಡುಗಡೆಯಾಗಿದ್ದರೂ ಸಹ ಸಕಾಲದಲ್ಲಿ ಬಳಸಿಕೊಳ್ಳದೇ ಇರುವುದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು ಕಾಮಗಾರಿಗಳು ಅನುಷ್ಠಾನವಾದಾಗ ಫಿಲ್ಡ್ನಲ್ಲಿ ಕೆಲ ಸಮಸ್ಯೆಗಳಿರುವುದು ಸಹಜ. ಸುಮ್ಮನೆ ಕುಳಿತುಕೊಳ್ಳದೆ ಗಮನಕ್ಕೆ ತರುವ ಕೆಲಸವಾಗಬೇಕು ಎಂದು ತಿಳಿಸಿದರು.

ಈ ಮಾಹಿತಿ ಎಂಜನಿಯರ್‌ಗಳಿಗೆ ತಿಳಿಸಿ: ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭೆಯಲ್ಲಿ 30 ಲಕ್ಷ ರೂ.ಒಳಗಿನ ಕಾಮಗಾರಿಗಳು 3 ತಿಂಗಳೊಳಗೆ ಸ್ಟಾರ್ಟ್‌ ಆಗಬೇಕು. 30 ಲಕ್ಷ ರೂಗಳಿಂದ 1 ಕೋಟಿ ರೂ.ವರೆಗಿನ ಕಾಮಗಾರಿಗಳು 5 ತಿಂಗಳಲ್ಲಿ ಮತ್ತು 1 ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳು 6 ತಿಂಗಳಲ್ಲಿ ಆರಂಭವಾಗಬೇಕು ಎಂದು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಕೈಗೊಳ್ಳಲಾದ ಗೈಡ್‌ಲೈನ್‌ ಅನುಸಾರವೇ ಕಾರ್ಯನಿರ್ವಹಿಸಬೇಕು. ಹೈಕ ಮಂಡಳಿಯಿಂದ ಕೈಗೆತ್ತಿಕೊಳ್ಳಲಾದ 675 ಕಾಮಗಾರಿಗಳನ್ನು ಖುದ್ದಾಗಿ ನಾನೇ ಪರಿಶೀಲಿಸಿದ್ದೇನೆ. ಅದರಲ್ಲಿ 370 ಕಾಮಗಾರಿಗಳು ಇನ್ನೂ ಚಾಲನೆ ಪಡೆದುಕೊಂಡಿಲ್ಲ. ಅದರಲ್ಲಿ ಕೆಆರ್‌ಐಡಿಎಲ್ ಏಜೆನ್ಸಿಗಳದ್ದೇ 240 ಕಾಮಗಾರಿಗಳು ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬಳಿಕ ಡಿಸಿ ಎಸ್‌.ಎಸ್‌. ನಕುಲ್ ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್‌, ಪ್ರೊಬೇಷನರಿ ಐಎಎಸ್‌ ಈಶ್ವರ್‌ ಸೇರಿದಂತೆ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next