Advertisement

ಮೈತ್ರಿ ಮುನಿಸು-ಬಿಜೆಪಿಗೆ ಲೀಡ್‌ ಸಲೀಸು

10:54 AM May 05, 2019 | Naveen |

ಬಳ್ಳಾರಿ: ಲೋಕಸಭೆ ಸಮರಕ್ಕೆ ತೆರೆಬಿದ್ದ ಬೆನ್ನಲ್ಲೇ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಲೋಕಸಭೆ ಉಪ ಚುನಾವಣೆಯಂತೆ ಈ ಚುನಾವಣೆಯಲ್ಲೂ ಲೀಡ್‌ ದೊರೆಯಲಿದೆ ಎಂಬ ನಿರೀಕ್ಷೆ ಮೈತ್ರಿ ಪಕ್ಷಗಳದ್ದಾಗಿದ್ದು, ಇದಕ್ಕೆ ಬಿಜೆಪಿ ಬ್ರೇಕ್‌ ಹಾಕುವ ಸಾಧ್ಯತೆಯೂ ಇದೆ. ಮೈತ್ರಿಪಕ್ಷಗಳ ಮುಖಂಡರಲ್ಲಿನ ಅಸಮಾಧಾನವೇ ಬಿಜೆಪಿಗೆ ವರವಾಗಲಿದೆ ಎನ್ನಲಾಗುತ್ತಿದೆ.

Advertisement

ಉಪಚುನಾವಣೆಯಲ್ಲಿ ಕೈ ಗೆ ಲೀಡ್‌: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಮೂರು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸದ್ಯ ಬಿಜೆಪಿಯ ಎನ್‌.ವೈ. ಗೋಪಾಲಕೃಷ್ಣ ಹಾಲಿ ಶಾಸಕರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಎನ್‌.ಟಿ. ಬೊಮ್ಮಣ್ಣ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ ಎರಡನೇ ಸ್ಥಾನಗಳಿಸಿದ್ದು, ಕ್ಷೇತ್ರದಲ್ಲಿ ಜೆಡಿಎಸ್‌ ಸಹ ಬಲವಾಗಿಯೇ ಇದೆ. ಆಗ ನಾಲ್ಕನೇ ಸ್ಥಾನಗಳಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿಗಿಂತಲೂ ಕಡಿಮೆ ಮತ ಪಡೆದಿದ್ದೂ ಸಹ ವಿಶೇಷವಾಗಿತ್ತು. ಆದರೆ, ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ 22029 ಮತಗಳು ಲೀಡ್‌ ಸಿಕ್ಕಿದ್ದವು.

ಮೂಡದ ಒಗ್ಗಟ್ಟು: ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಖಂಡರು, ಕಾರ್ಯಕರ್ತರ ದೊಡ್ಡ ಪಡೆ ಇದೆಯಲ್ಲದೆ ತನ್ನದೇ ಆದ ಮತಬ್ಯಾಂಕ್‌ ಸಹ ಇದೆ. ಆದರೆ ಪಕ್ಷದಲ್ಲಿನ ಆಂತರಿಕ ಅಸಮಾಧಾನ ಅನ್ಯ ಪಕ್ಷಗಳಿಗೆ ವರದಾನವಾಗಲಿದೆ. ಕಾಂಗ್ರೆಸ್‌ನ ಮಾಜಿ ಶಾಸಕ ಎನ್‌.ಎಂ. ನಬಿ ಈಚೆಗೆ ಜೆಡಿಎಸ್‌ ಸೇರುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಲಬಂದಂತಾದರೂ, ಕಾಂಗ್ರೆಸ್‌ನ ಹಾಲಿ, ಮಾಜಿ ಮುಖಂಡರ ನಡುವಿನ ಅಸಮಾಧಾನ ಒಗ್ಗೂಡದಂತೆ ಮಾಡಿದೆ. ಇದು ಚನಾವಣೆಯಲ್ಲಿ ಬಿಜೆಪಿಗೆ ನೆರವಾಗುವ ಸಾಧ್ಯತೆಯಿದೆ.

ಬಿಜೆಪಿಗೆ ಗೆಲುವು: ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಶೇ.76.35 ರಷ್ಟು ಮತದಾನವಾಗಿತ್ತು. ಹೆಚ್ಚು ಮತದಾನವಾಗಿದ್ದು, ಬಿಜೆಪಿಗೆ ಲಾಭವಾಗಿ ಎನ್‌.ವೈ.ಗೋಪಾಲಕೃಷ್ಣ 50,085 ಮತ ಪಡೆದು ಸಮೀಪದ ಸ್ಪರ್ಧಿ ಜೆಡಿಎಸ್‌ನ ಎನ್‌.ಟಿ. ಬೊಮ್ಮಣ್ಣ ವಿರುದ್ಧ 10,813 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಕೇವಲ ಶೇ.57.25 ರಷ್ಟು ಅತ್ಯಂತ ಕಡಿಮೆ ಮತದಾನವಾಗಿತ್ತು. ಆದರೂ, ಬಿಜೆಪಿಗಿಂತ ಮೈತ್ರಿ ಪಕ್ಷಕ್ಕೆ 22,029 ಮತಗಳ ಮುನ್ನಡೆ ಲಭಿಸಿತ್ತು. ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಮತದಾರ ಯಾರ ಕೈ ಹಿಡಿದಿರಬಹುದು ಎಂಬ ಲೆಕ್ಕಚಾರ ಹಾಕಲಾಗುತ್ತಿದೆ.

ಹೆಚ್ಚು ಮತದಾನ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 1,02,407 ಪುರುಷ, 99696 ಮಹಿಳೆ, 10 ಇತರೆ ಸೇರಿ ಒಟ್ಟು 2,02,113 ಮತದಾರರಿದ್ದು, 72196 ಪುರುಷ, 67713 ಮಹಿಳೆ ಸೇರಿ ಒಟ್ಟು 1,39,909 ಮತದಾರರು ಈ ಬಾರಿ ಹಕ್ಕು ಚಲಾಯಿಸಿದ್ದಾರೆ. ಶೇ.69.22 ರಷ್ಟು ಮತದಾನವಾಗಿದೆ. ಕಳೆದ ಉಪಚುನಾವಣೆಗಿಂತ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚು ಮತದಾನವಾಗಿದ್ದು, ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಜತೆಗೆ ಕಾಂಗ್ರೆಸ್‌ಗಿಂತಲೂ ಬಿಜೆಪಿಯವರು ಮತದ ‘ಮೌಲ್ಯ’ವನ್ನು ವೃದ್ಧಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ಬಿಜೆಪಿ ಲೀಡ್‌ ಹೆಚ್ಚಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಅಲ್ಲದೇ, ಕಳೆದ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಸಚಿವ, ಶಾಸಕರ ದಂಡು ಕ್ಷೇತ್ರದಲ್ಲಿ ಬೀಡುಬಿಟ್ಟಿತ್ತು. ಜತೆಗೆ ಮೈತ್ರಿ ಪಕ್ಷದವರು ಮತದ ಮೌಲ್ಯವನ್ನು ವೃದ್ಧಿಸಿದ್ದರು. ಇದು ಮೈತ್ರಿ ಅಭ್ಯರ್ಥಿಗೆ ಲೀಡ್‌ ದೊರೆಯಲು ನೆರವಾಗಿತ್ತು. ಆಗ ಬಿಜೆಪಿಯವರು ಸಹ ಕೇವಲ ಐದು ತಿಂಗಳ ಅವಧಿ ಎಂದು ನಿರ್ಲಕ್ಷ್ಯ ತಾಳಿ ಮತದಾರರ ಮತಗಳಿಗೆ ಮೌಲ್ಯವನ್ನೇ ವೃದ್ಧಿಸಿರಲಿಲ್ಲ. ಇದು ಆಗ ಬಿಜೆಪಿಯವರಿಗೆ ಮೈನಸ್‌ ಆಗಲು ಕಾರಣವಾಗಿತ್ತು. ಇದೀಗ ಸಾರ್ವತ್ರಿಕ ಚುನಾವಣೆಯಲ್ಲಿ ಕಮಲ ಮೇಲುಗೈ ಎನ್ನಲಾಗುತ್ತಿದೆ.

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ವಾಲ್ಮೀಕಿ, ಲಿಂಗಾಯತ, ಕುರುಬ, ದಲಿತ, ಮುಸ್ಲಿಂ ಮತಗಳು ಪ್ರಮುಖ ಪಾತ್ರ ವಹಿಸಲಿವೆ. ಕ್ಷೇತ್ರದಲ್ಲಿ ದೊಡ್ಡ ಸಮುದಾಯವಾದ ವಾಲ್ಮೀಕಿ, ಲಿಂಗಾಯತ ಮತಗಳು ಬಿಜೆಪಿಯನ್ನು ಬೆಂಬಲಿಸಬಹುದಾಗಿದೆ. ದಲಿತ, ಕುರುಬ, ಮುಸ್ಲಿಂ ಮತಗಳು ಕಾಂಗ್ರೆಸ್‌ ಬೆನ್ನಿಗೆ ನಿಲ್ಲಲಿವೆ. ಮೇಲಾಗಿ ಈ ಬಾರಿ ಕ್ಷೇತ್ರದ ದಲಿತ ಮತಗಳು ಬಿಎಸ್‌ಪಿ ಪಕ್ಷಕ್ಕೂ ಹಂಚಿ ಹೋಗಿವೆ ಎನ್ನಲಾಗುತ್ತಿದ್ದು, ಯಾವ ಅಭ್ಯರ್ಥಿಗೆ ಎಷ್ಟು ಮತಗಳು ಲಭಿಸಿವೆ ಎಂಬುದು ಫಲಿತಾಂಶದಿಂದಷ್ಟೇ ಸ್ಪಷ್ಟವಾಗಲಿದೆ.

ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಸಚಿವರು, ಶಾಸಕರ ದಂಡೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಹಿನ್ನೆಲೆಯಲ್ಲಿ 22 ಸಾವಿರ ಮತಗಳ ಲೀಡ್‌ ಲಭಿಸಿತ್ತು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಅಷ್ಟು ನಿರೀಕ್ಷೆಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಕ್ಷೇತ್ರದಲ್ಲಿ ಹೆಚ್ಚು ಸಂಚರಿಸಿಲ್ಲ. ಇದು ಕ್ಷೇತ್ರದಲ್ಲಿ ನಿರೀಕ್ಷಿತ ಮತಗಳು ಲಭಿಸುವಲ್ಲಿ ತೊಡಕಾಗಲಿದ್ದು, ಅಲ್ಪ ಸ್ವಲ್ಪ ಲೀಡ್‌ ದೊರೆಯುವ ಸಾಧ್ಯತೆಯಿದೆ.
•ಕೋಗಳಿ ಮಂಜುನಾಥ್‌,
ಮಾಜಿ ಅಧ್ಯಕ್ಷರು, ಕೂಡ್ಲಿಗಿ ಬ್ಲಾಕ್‌ ಕಾಂಗ್ರೆಸ್‌.

ಬಳ್ಳಾರಿ ಲೋಕಸಭೆ ಚುನಾವಣೆಯ ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ 8-10 ಸಾವಿರ ಮತಗಳ ಲೀಡ್‌ ದೊರೆಯುವ ಸಾಧ್ಯತೆಯಿದೆ. ಬೇರೆ ಜಿಲ್ಲೆ, ರಾಜ್ಯ, ದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಕ್ಷೇತ್ರದ ಮತದಾರರು ಮೋದಿಯವರ ಕೈ ಬಲಪಡಿಸಲೆಂದೇ ಕ್ಷೇತ್ರಕ್ಕೆ ಬಂದು ಹಕ್ಕು ಚಲಾಯಿಸಿದ್ದಾರೆ. ಜತೆಗೆ ಕ್ಷೇತ್ರದಲ್ಲಿ 2 ಸಾವಿರ ಯುವಕರು ಸ್ವಯಂ ಪ್ರೇರಣೆಯಿಂದ ಪ್ರಧಾನಿ ಮೋದಿ ಅವರ ಪರವಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಸೇರಿ ಹಲವು ಯೋಜನೆಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಲಭಿಸುವ ವಿಶ್ವಾಸವಿದೆ.
•ಸಚಿನ್‌ಕುಮಾರ್‌,
ಬಿಜೆಪಿ ಯುವ ಮುಖಂಡರು, ಕೂಡ್ಲಿಗಿ

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next