Advertisement

ಬಾಲಕಿ ಸಾವಿನ ತನಿಖೆ ಆಗಲಿ: ಉಗ್ರಪ್ಪ

11:39 AM Sep 15, 2019 | Team Udayavani |

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ವಡ್ಡು ಗ್ರಾಮದಲ್ಲಿ ಆರು ವರ್ಷದ ಬಾಲಕಿ ನಿಗೂಢ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿವೆ. ಗ್ರಾಮದ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ವಲಸಿಗರ ಮೇಲೆ ಹೆಚ್ಚಿನ ನಿಗಾವಹಿಸಿ ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚಬೇಕು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಅಮಾನವೀಯ ಕೃತ್ಯ. ಸೆ. 8ರಂದು ಕಾಣೆಯಾಗಿದ್ದ ಆ ಬಾಲಕಿ ಸೆ. 9ರಂದು ಬೆಳಗ್ಗೆ ಶವವಾಗಿ ಗೋಣಿ ಚೀಲದಲ್ಲಿ ಪತ್ತೆಯಾಗಿದ್ದಾಳೆ. ಇದು ಮಾನವೀಯ ಮೌಲ್ಯಗಳನ್ನು ಮರೆಮಾಚುವಂತಹ ಹೇಯಕರ ಕೃತ್ಯವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದರು.

ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷನಾಗಿದ್ದ ನಾನು 6 ಸಾವಿರ ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಅದರಲ್ಲಿ ಘಟನೆಯಿಂದ ನೊಂದ ಕುಟುಂಬಕ್ಕೆ ತಕ್ಷಣ ಸಹಾಯ ಮಾಡಬೇಕು ಎಂದು ಇದೆ. ಆದರೆ ಈ ಪ್ರಕರಣದಲ್ಲಿ ಈವರಗೆ ಜಿಲ್ಲಾಡಳಿತ ಒಂದು ಪೈಸೆ ಸಹ ಕೊಟ್ಟಿಲ್ಲ. ಮೃತ ಬಾಲಕಿ ಅಂತ್ಯಸಂಸ್ಕಾರಕ್ಕೆಂದು 20 ಸಾವಿರ ರೂಗಳ ಹಣ ಬಿಡುಗಡೆ ಮಾಡಬೇಕೆಂಬ ನಿಯಮವಿದ್ದರೂ ಈವರೆಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿಲ್ಲ. ಆ ಕುರಿತು ಮಾಹಿತಿಯೇ ಇಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿರೋದು ಆಶ್ಚರ್ಯಕರ ಸಂಗತಿ ಎಂದರು.

ಪರಿಹಾರಕ್ಕೆ ಒತ್ತಾಯ: ನೆರೆಹೊರೆಯ ರಾಜ್ಯದ ನೂರಾರು ಕಾರ್ಮಿಕರು ಇಲ್ಲಿ ಬಂದು ನೆಲೆಸಿ, ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲೆ ನಿಗಾ ಇರಿಸಬೇಕು. ಯಾವುದಾದ್ರೂ ಇಂಥ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದು ಸಾಬೀತು ಆದಲ್ಲಿ, ಆ ಕಾರ್ಖಾನೆಯ ಮಾಲೀಕರನ್ನೂ ಕೂಡ ನೇರ ಹೊಣೆಗಾರರನ್ನಾಗಿಸಬೇಕೆಂದು ಕಾಯಿದೆಯಲ್ಲಿದೆ. ಈ ಕುರಿತು ಜಿಲ್ಲಾಧಿಕಾರಿ ನಕುಲ್ ಅವರ ಗಮನ ಸೆಳೆದಿರುವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದ 3 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದ 8.25 ಲಕ್ಷ ರೂಗಳ ಪರಿಹಾರವನ್ನು ಸಂತ್ರಸ್ತೆ ಬಾಲಕಿ ಕುಟುಂಬಸ್ಥರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಹಳಿ ತಪ್ಪಿದೆ. ಒಂದೆಡೆ ಪ್ರವಾಹ, ಮತ್ತೂಂದಡೆ ಬರ ಆವರಿಸಿದೆ. ಪ್ರವಾಹದಿಂದ ಲಕ್ಷಾಂತರ ಕೋಟಿ ರೂಗಳ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಈವರೆಗೆ ಕೇವಲ 374 ಕೋಟಿ ರೂ. ಬಿಡುಗಡೆ ಮಾಡಿದೆ. 7.98 ಲಕ್ಷ ಹೆಕೇrರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2 ಲಕ್ಷಕ್ಕೂ ಅಧಿಕ ಮನೆಗಳು ಬಿದ್ದಿವೆ. ಒಟ್ಟಾರೆಯಾಗಿ 38,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಆದರೆ 3800 ಕೋಟಿ ರೂ. ಮಾತ್ರ ಕೇಂದ್ರಕ್ಕೆ ಪರಿಹಾರ ಕೇಳಿರುವುದು ತಿಳಿಯದಂತಾಗಿದೆ.

Advertisement

ಹೋರಾಟದ ಅಗತ್ಯವಿದೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆಸ್ತಿ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರದ ಐಟಿ, ಇಡಿ ಅಧಿಕಾರಿಗಳಿಗೆ ಕೇಂದ್ರ ಸಚಿವರಾದ ಅಮಿತ್‌ ಶಾ ಮತ್ತು ಗಡ್ಕರಿ ಪುತ್ರರ ಆದಾಯ ಹೆಚ್ಚಾಗಿರುವ ಬಗ್ಗೆ ಗೊತ್ತಿಲ್ಲವೇ. ರಾಜಕೀಯ ಸೇಡಿನಿಂದ ಡಿ.ಕೆ.ಶಿವಕುಮಾರ್‌ ಮೇಲೆ ಮುಗಿಬಿದ್ದಿದ್ದಾರೆ ಎಂದು ಆರೋಪಿಸಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂವಿಧಾನಿಕವಾದ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ನಡೆಸುತ್ತೇವೆಂದು ಸಂಸತ್‌ನಲ್ಲಿ ಹೇಳಿದ್ದರು. ಆದರೆ ಅದನ್ನು ಮಾಡದೆ ಮತ್ತೆ ಇಂಗ್ಲೀಷ್‌ ಮತ್ತು ಹಿಂದಿ ಭಾಷೆಯಲ್ಲಿ ನಡೆಸುತ್ತಿದ್ದಾರೆ. ಒಂದು ಸಂವಿಧಾನ, ಒಂದು ದೇಶ, ಒಂದೇ ರೀತಿಯ ಕಾನೂನು ಎನ್ನುವ ಇವರು ಒಂದೇ ಭಾಷೆ ಎನ್ನುವಂತೆ ಕಾಣುತ್ತಿದೆ. ದೇಶದ ವಿವಿಧತೆ ಬಗ್ಗೆ ಇವರಿಗೆ ಅರಿವಿಲ್ಲವೇ ಎಂದರು. ಪ್ರಾದೇಶಿಕ ಮತ್ತು ರಾಷ್ಟ್ರೀಯ ಬ್ಯಾಂಕ್‌ಗಳ ಪರೀಕ್ಷೆ ಪ್ರಾಂತೀಯ ಭಾಷೆಯಲ್ಲಿ ನಡೆಸಬೇಕು. ಅದಕ್ಕಾಗಿ ಕನ್ನಡ ಪರ ಸಂಘಟನೆಗಳ ಹೋರಾಟ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next