Advertisement

ಬಾ ಮಗು..ಆಂಗ್ಲ ಮಾಧ್ಯಮ ಸರಕಾರಿ ಶಾಲೆಗೆ

12:03 PM May 29, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ 39 ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದ್ದು, ಶಿಕ್ಷಕರಿಗೆ ತರಬೇತಿ, ಕೊಠಡಿಗಳು ಸೇರಿ ಅಗತ್ಯ ಸಿದ್ಧತಾ ಕಾರ್ಯ ಕೈಗೊಂಡಿದೆ. ಮೇ 29 ರಿಂದ ಮಕ್ಕಳ ದಾಖಲಾತಿಗೆ ಚಾಲನೆ ದೊರೆಯಲಿದೆ.

Advertisement

ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ), ಗ್ರಾಮೀಣ ಪ್ರದೇಶಗಳಲ್ಲೂ ನಾಯಿಕೊಡೆಗಳಂತೆ ವರ್ಷದಿಂದ ವರ್ಷಕ್ಕೆ ತಲೆಎತ್ತುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯಿಂದಾಗಿ ಬಡಮಕ್ಕಳು ಸಹ ಪ್ರತಿಷ್ಠಿತ ಶಾಲೆಗಳತ್ತ ಮುಖ ಮಾಡಿದರೆ, ಶ್ರೀಮಂತರು, ಮಧ್ಯಮ ವರ್ಗದವರು ಸರ್ಕಾರಿ ಶಾಲೆಗಳಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಮುಚ್ಚುವ ಹಂತಕ್ಕೆ ತಲುಪಿರುವ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ರಾಜ್ಯ ಸರ್ಕಾರ ನಿರ್ಣಯಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಯ್ದ 39 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.

ವಿಧಾನಸಭಾ ಕ್ಷೇತ್ರಕ್ಕೆ 4-5 ಶಾಲೆಗಳ ಆಯ್ಕೆ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿಗಳನ್ನು ಆರಂಭಿಸಲು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಅಥವಾ ಐದು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ 4, ಬಳ್ಳಾರಿ ನಗರ 4, ಹಗರಿ ಬೊಮ್ಮನಹಳ್ಳಿ 4, ಹಡಗಲಿ 4, ಕಂಪ್ಲಿ 5, ಕೂಡ್ಲಿಗಿ 4, ಸಂಡೂರು 4, ಸಿರುಗುಪ್ಪ 5, ಹೊಸಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 5 ಸೇರಿ ಜಿಲ್ಲೆಯಲ್ಲಿ ಒಟ್ಟು 39 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಆಂಗ್ಲ ಮಾಧ್ಯಮಕ್ಕಾಗಿ 1 ರಿಂದ 10ನೇ ತರಗತಿವರೆಗೆ ಇರುವ ಶಾಲೆಗಳನ್ನೇ ಆಯ್ಕೆ ಮಾಡಲಾಗಿದೆ. ಸದ್ಯ ಇರುವ ಕೊಠಡಿಗಳಲ್ಲೇ ಆಂಗ್ಲಮಾಧ್ಯಮ ತರಗತಿ ಆರಂಭಿಸುವಂತೆ ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ.

56 ಶಿಕ್ಷಕರಿಗೆ ತರಬೇತಿ: ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮಕ್ಕೆ ಸೇರುವ ಮಕ್ಕಳಿಗೆ ಬೋಧಿಸಲು ಜಿಲ್ಲೆಯಾದ್ಯಂತ ಒಟ್ಟು 56 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮೊದಲ ವರ್ಷ ಏಕೋಪಾಧ್ಯಾಯ ಶಾಲೆಗಳನ್ನಾಗಿ ಆರಂಭಿಸಲಾಗುತ್ತಿದ್ದು, 39 ಶಾಲೆಗಳಿಗೆ 39 ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಹೆಚ್ಚುವರಿ 17 ಶಿಕ್ಷಕರನ್ನು ಅಗತ್ಯವಿದ್ದಲ್ಲಿ ಬಳಸಿಕೊಳ್ಳಲು ನಿರ್ಣಯಿಸ ಲಾಗಿದೆ. ಆಂಗ್ಲಮಾಧ್ಯಮದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾದಲ್ಲಿ ಅತಿಥಿ ಶಿಕ್ಷಕರನ್ನು ಪಡೆದು ಶಿಕ್ಷಕರ ಕೊರತೆ ನೀಗಿಸಲಾಗುವುದು. ಜಿಲ್ಲೆಯಾದ್ಯಂತ ಶಾಲೆಗಳು ತೆರೆಯಲಾಗುವ ಮೇ 29ರಂದು ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಮಕ್ಕಳ ಪ್ರವೇಶಕ್ಕೆ ದಾಖಲಾತಿ ಪ್ರಕ್ರಿಯೆ ಚಾಲನೆ ಪಡೆದುಕೊಳ್ಳಲಿದೆ. ಆಂಗ್ಲ ಮಾಧ್ಯಮ ಸೇರುವ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೇ, ಉಚಿತ ಪ್ರವೇಶ ಕಲ್ಪಿಸಲಾಗಿದೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಧರನ್‌.

ಆಂಗ್ಲಮಾಧ್ಯಮ ವಿಭಾಗ: ಆಂಗ್ಲ ಮಾಧ್ಯಮವನ್ನು ಆರಂಭಿಸಲು ಜಿಲ್ಲೆಯಲ್ಲಿ ಆಯ್ದ 39 ಶಾಲೆಗಳಲ್ಲೇ ಆಂಗ್ಲಮಾಧ್ಯಮ ವಿಭಾಗವನ್ನು ಆರಂಭಿಸಲಾಗುತ್ತದೆ. ಆರಂಭಿಕವಾಗಿ ಒಂದನೇ ತರಗತಿಗೆ ಕೇವಲ 30 ಮಕ್ಕಳಿಗೆ ಮಾತ್ರ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಪೋಷಕರು ಒತ್ತಡ ಹೇರಿದಲ್ಲಿ ಒಬ್ಬರು ಅಥವಾ ಇಬ್ಬರು ಮಕ್ಕಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲು ಅವಕಾಶವಿದೆ ಹೊರತು, ಅದಕ್ಕೂ ಹೆಚ್ಚು ಮಕ್ಕಳಿಗೆ ಅವಕಾಶವಿಲ್ಲ. ಸದ್ಯ ಇರುವ ಕೊಠಡಿಗಳಲ್ಲೇ ತರಗತಿ ಆರಂಭಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗಾಗಿ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುವುದಾಗಿ ಡಿಡಿಪಿಐ ಶ್ರೀಧರನ್‌ ತಿಳಿಸುತ್ತಾರೆ.

Advertisement

ಜಿಲ್ಲೆಯ 39 ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಲಾಗುತ್ತದೆ. ಇದಕ್ಕಾಗಿ ಜಿಲ್ಲೆಯ ಪ್ರತಿವಿಧಾನಸಭಾ ಕ್ಷೇತ್ರವಾರು 1 ರಿಂದ 10ನೇ ತರಗತಿವರೆಗೆ ಇರುವ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಆಂಗ್ಲಮಾಧ್ಯಮದಲ್ಲಿ ಒಂದನೇ ತರಗತಿಗೆ ಮಾತ್ರ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, 30 ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಆಂಗ್ಲ ಮಾಧ್ಯಮ ಬೋಧಿಸಲು 56 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇರುವ ಎಲ್ಲ ಮೂಲ ಸೌಲಭ್ಯಗಳು ಆಂಗ್ಲಮಾಧ್ಯಮ ವಿದ್ಯಾರ್ಥಿಗಳಿಗೆ ಲಭಿಸಲಿವೆ. ಗ್ರಾಮೀಣ ಭಾಗದಲ್ಲಿ ಎಷ್ಟರ ಮಟ್ಟಿಗೆ ಬೇಡಿಕೆ ಇದೆ ಎಂಬುದು ದಾಖಲಾತಿ ಆರಂಭವಾದ ಬಳಿಕ ತಿಳಿಯಲಿದೆ.
ಶ್ರೀಧರನ್‌, ಡಿಡಿಪಿಐ,
ಸಾರ್ವಜನಿಕ ಶಿಕ್ಷಣ ಇಲಾಖೆ.

ಆಂಗ್ಲಮಾಧ್ಯಮದಲ್ಲಿ ಸದ್ಯ ಒಂದನೇ ತರಗತಿ ಆರಂಭಿಸಲಾಗುತ್ತಿರುವುದರಿಂದ ಪ್ರತ್ಯೇಕ ಒಂದು ಕೊಠಡಿ ಮೀಸಲಿರಿಸಲಾಗಿದೆ. ಶಾಲೆಯ ಇಬ್ಬರು ಶಿಕ್ಷಕರು ಇತ್ತೀಚೆಗೆ ಡಯಟ್‌ನಲ್ಲಿ ತರಬೇತಿ ಪಡೆದಿದ್ದಾರೆ. ಮಕ್ಕಳು ಕೂಡಲು ಬೆಂಚ್‌ಗಳ ವ್ಯವಸ್ಥೆಯೂ ಇದೆ. ಪೋಷಕರು ಮಕ್ಕಳನ್ನು ಸೇರಿಸುವುದೊಂದೇ ಬಾಕಿ ಇದೆ. ಅಲ್ಲದೇ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಸಿದ್ಧಪಡಿಸಲಾಗಿದ್ದು, ನಾಳೆಯಿಂದ ಪ್ರಭಾತ್‌ ಪೇರಿ ನಡೆಸಿ ಜಾಗೃತಿ ಮೂಡಿಸಲಾಗುತ್ತದೆ.
ಎನ್‌.ವಿರೂಪಾಕ್ಷಪ್ಪ
ಮುಖ್ಯೋಪಾಧ್ಯಾಯರು,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಂಪುರಂ ಕಾಲೋನಿ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next