Advertisement

ವೈದ್ಯೆಯರ ವೃತ್ತಿ ನಿರ್ವಹಣೆ ಅದ್ಭುತ: ತೇಜಸ್ವಿನಿ

11:27 AM Jul 22, 2019 | Naveen |

ಬಳ್ಳಾರಿ: ಮಹಿಳಾ ವೈದ್ಯರು ಕುಟುಂಬದೊಂದಿಗೆ ವೃತ್ತಿ ಜೀವನವನ್ನೂ ಸಮರ್ಪಕವಾಗಿ ನಿರ್ವಹಿಸುವ ರೀತಿ ಅದ್ಭುತವಾದುದು ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ನಿರ್ದೇಶಕಿ ತೇಜಸ್ವಿನಿ ಅನಂತಕುಮಾರ್‌ ಮಹಿಳಾ ವೈದ್ಯರ ಬಗ್ಗೆ ಗುಣಗಾನ ಮಾಡಿದರು.

Advertisement

ನಗರ ಹೊರವಲಯದ ಅಲ್ಲಂ ಭವನದಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಮತ್ತು ವೈದ್ಯರ ವಿಭಾಗದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಮತ್ತು ರಾಜ್ಯಮಟ್ಟದ ಮಹಿಳಾ ವೈದ್ಯರ ಸಮ್ಮೇಳನ ‘ಅದ್ವಿತಿ-2019’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವೈದ್ಯರೂ ಮನುಷ್ಯರೇ, ಅವರ ಮನಸ್ಸು ಎಲ್ಲಾ ನೋವುಗಳನ್ನು ಅನುಭವಿಸುತ್ತದೆ. ಅದರಲ್ಲೂ ಮಹಿಳಾ ವೈದ್ಯರು ಕುಟುಂಬದೊಂದಿಗೆ ವೃತ್ತಿ ಜೀವನವನ್ನು ನಿರ್ವಹಿಸುವ ರೀತಿ ಅದ್ಭುತವಾದುದು. ವೈದ್ಯರು ಎಷ್ಟೇ ದೊಡ್ಡ ವ್ಯಕ್ತಿಯನ್ನು ಪ್ರಭಾವಿಸಬಲ್ಲರು ಎಂದು ತಿಳಿಸಿದರು.

ಮಹಿಳೆಯರು ಮನೆಯೊಂದಿಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರೆ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮನಸ್ಥಿತಿ ಇರಬೇಕು ಎಂದ ಅವರು, ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ, ಕಸವನ್ನು ಮರುಬಳಕೆ ಮಾಡಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಭಾರತೀಯ ವಿಚಾರ ಮತ್ತು ತತ್ವಗಳು ಇಂದಿಗೂ ನಮ್ಮಲ್ಲಿವೆ. ಕೇವಲ ಸೀರೆ ಮತ್ತು ಕುಂಕುಮ ಇಟ್ಟುಕೊಂಡರೆ ಸಂಸ್ಕೃತಿಯನ್ನು ಗೌರವಿಸಿದಂತೆ ಅಲ್ಲ. ಅದು ನಮ್ಮ ನಡವಳಿಕೆಯಲ್ಲಿ ಕಾಣಿಸಬೇಕು. ಸಾಧನೆ ಮಾಡಲು ಕಾಯಬಾರದು, ಕಾರ್ಯ ಪ್ರವೃತ್ತರಾಗಬೇಕು ಎಂದರು.

ಸಂಘದ ರಾಜ್ಯಾಧ್ಯಕ್ಷ ಡಾ| ಅನ್ನದಾನಿ.ಎಂ. ಮೇಟಿ ಮಾತನಾಡಿ, ದೇಶದಲ್ಲಿ ಮಹಿಳಾ ವೈದ್ಯರು ತಮ್ಮದೇ ಆದ ಸ್ಥಾನಮಾನ ಹೊಂದಿದ್ದರೂ ಸಮಸ್ಯೆಗಳಿವೆ. ಮಹಿಳಾ ವೈದ್ಯರ ಮೇಲಿನ ಹಲ್ಲೆಗಳನ್ನು ತಡೆದು ರಕ್ಷಣೆಗಾಗಿ ಮಹಿಳಾ ವೈದ್ಯರೆಲ್ಲರೂ ಸಂಘಟಿತರಾಗಬೇಕು. ರಾಷ್ಟ್ರಮಟ್ಟದಲ್ಲಿ ವೈದ್ಯರ ಮೇಲಿನ ಹಲ್ಲೆ ತಡೆಯಲು ಕಾಯ್ದೆ ಜಾರಿಯಾಗಬೇಕಿದೆ ಎಂದರು.

Advertisement

ಹೃದ್ರೋಗ ತಜ್ಞೆ ಡಾ| ವಿಜಯಲಕ್ಷ್ಮೀ ಮತ್ತು ಉನ್ನತಿ ಫೌಂಡೇಶನ್‌ ಅಧ್ಯಕ್ಷೆ ಡಾ| ಸರಸ್ವತಿ ಹೆಗಡೆ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳ ಮಹಿಳಾ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮಹಿಳಾ ವೈದ್ಯರ ಸಂಘಟನೆ ಬಲಪಡಿಸುವುದು, ವೃತ್ತಿಯ ಸಮಸ್ಯೆಗಳಿಗೆ ಪರಿಹಾರ, ಮಹಿಳಾ ವೈದ್ಯರಾಗುವ ವಿದ್ಯಾರ್ಥಿನಿಯರಿಗೆ ಉತ್ತೇಜನ ನೀಡುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಸಮತೋಲನದ ಜೀವನ, ಡಿಜಿಟಲ್ ಯುಗದಲ್ಲಿ ಮಕ್ಕಳ ಪಾಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವಿಧ ಕ್ಷೇತ್ರಗಳ ಸಾಧಕರು ಉಪನ್ಯಾಸ ನೀಡಿದರು.

ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಾ| ಎನ್‌. ಶ್ರೀನಿವಾಸ್‌, ಕಾರ್ಯದರ್ಶಿ ಗೋವರ್ಧನ್‌ ರೆಡ್ಡಿ, ಡಾ| ಯೋಗಾನಂದ ರೆಡ್ಡಿ, ಡಾ| ಅರುಣಾ ಕಾಮಿನೇನಿ, ವೆಂಕಟರಾವ್‌ ಚಲಪತಿ, ಡಾ| ಮಧುಸೂಧನ್‌ ಕಾರಿಗನೂರು, ಡಾ| ನಾಜ್‌ಜಹಾನ್‌ ಶೈಕ್‌, ಡಾ| ಗಂಗಮ್ಮ, ಡಾ| ಜಯಶ್ರೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next