Advertisement

ಕೇಂದ್ರ ಗ್ರಂಥಾಲಯಕ್ಕೆಅನುದಾನದಕೊರತೆ

07:51 PM Nov 07, 2019 | Team Udayavani |

ಬಳ್ಳಾರಿ: ಕಳೆದ ಎರಡ್ಮೂರು ದಶಕಗಳಿಂದ ಬಳ್ಳಾರಿ ನಗರದ ಜನರಿಗೆ ಅಕ್ಷರಜ್ಞಾನ ಮೂಡಿಸುತ್ತಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಅನುದಾನದ ಕೊರತೆ ಎದುರಾಗಿದೆ. ಇದು ಗ್ರಂಥಾಲಯದ ಡಿಜಿಟಲೀಕರಣಕ್ಕೆ ತೊಡಕಾಗಿದ್ದು, ನಿತ್ಯ ಬರುವ ಪುಸ್ತಕಪ್ರಿಯರು ಸೌಲಭ್ಯವಂಚಿತ ಗ್ರಂಥಾಲಯದಲ್ಲೇ ಓದುವಂತಾಗಿದೆ.

Advertisement

ನಗರದ ಡಾ| ರಾಜ್‌ಕುಮಾರ್‌ ರಸ್ತೆಯಲ್ಲಿನ ಸಾಂಸ್ಕೃತಿಕ ಸಮುತ್ಛಯ ಆವರಣದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಕಳೆದ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದಕ್ಕೂ ಮುನ್ನ ನಗರದ ಹಳೆಬಸ್‌ ನಿಲ್ದಾಣ ಬಳಿಯ ಎಸ್‌ಸಿಎಸ್‌ಟಿ ಹಾಸ್ಟೆಲ್‌ ಹತ್ತಿರ ಇದ್ದ ಜಿಲ್ಲಾ ಗ್ರಂಥಾಲಯವನ್ನು ಬೇರ್ಪಡಿಸಿ
1998ರಲ್ಲಿ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ನಗರ ಕೇಂದ್ರ ಗ್ರಂಥಾಲಯವನ್ನು ಆರಂಭಿಸಲಾಯಿತು.

ಜ್ಞಾನಾರ್ಜನೆಯ ಮೂಲವಾದ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡ, ಉತ್ತಮ ವಾತಾವರಣವನ್ನು ಕಲ್ಪಿಸಲಾಗಿದೆ ಹೊರತು, ದಿನೆದಿನೇ ಹೊಸಹೊಸ ಆವಿಷ್ಕಾರಗೊಳ್ಳುತ್ತಿರುವ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಡಿಜಿಟಲೀಕರಣಗೊಳಿಸುವ ಕನಸು ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿದೆ.

ಇದಕ್ಕೆ ಇಲ್ಲಿನ ಮಹಾನಗರ ಪಾಲಿಕೆ ಪ್ರತಿವರ್ಷ ನಿಗದಿತ ಅನುದಾನ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದ್ದು, ಗ್ರಂಥಾಲಯದ ಡಿಜಿಟಲೀಕರಣಕ್ಕೆ ತೊಡಕಾಗಿ ಪರಿಣಮಿಸಿದೆ.

ಪಾಲಿಕೆಯಿಂದ ಶೇ.6 ರಷ್ಟು ಅನುದಾನ: ಇಲ್ಲಿನ ಮಹಾನಗರ ಪಾಲಿಕೆಯು ತನ್ನ ವಾರ್ಷಿಕ ಬಜೆಟ್‌ ನಲ್ಲಿ ಶೇ. 6ರಷ್ಟು ನಗರ ಕೇಂದ್ರ ಗ್ರಂಥಾಲಯಕ್ಕೆ ನೀಡಬೇಕು. ನಿಗದಿತ ಅನುದಾನವನ್ನು ಸಂಪೂರ್ಣವಾಗಿ ನೀಡಿದಲ್ಲಿ ಗ್ರಂಥಾಲಯಕ್ಕೆ ಅನುದಾನದ ಕೊರತೆಯೇ ಬರುವುದಿಲ್ಲ. ಆದರೆ, ಅನುದಾನವನ್ನು ಹಂತಹಂತವಾಗಿ ನೀಡುವುದರ ಜತೆಗೆ ನೀಡಬೇಕಿದ್ದ ನಿಗದಿತ ಅನುದಾನ ನೀಡುವುದಿಲ್ಲ. ಶೇ.6 ರಷ್ಟು ಅನುದಾನದಲ್ಲಿ ಪ್ರತಿವರ್ಷ ಸರಾಸರಿ 40 ಲಕ್ಷ ನೀಡಲಾಗುತ್ತಿದೆ.

Advertisement

ಇಷ್ಟು ಹಣದಲ್ಲಿ ಗ್ರಂಥಾಲಯ ಅಧಿಕಾರಿ, ಸಿಬ್ಬಂದಿಗಳ ವೇತನ, ಪತ್ರಿಕೆಗಳ ಖರೀದಿ, ಮೂಲಸೌಲಭ್ಯಗಳ ನಿರ್ವಹಣೆ ಮಾಡಬೇಕಾಗಿದೆ. ಜತೆಗೆ ಗ್ರಂಥಾಲಯದ ಡಿಜಿಟಲೀಕರಣವನ್ನೂ ಮಾಡಬೇಕಾಗಿದೆ. ನಿಗದಿತ ಪ್ರಮಾಣದಲ್ಲಿ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆಗೊಳಿಸುವಂತೆ ಹಲವು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಂಥಾಲಯದ ಡಿಜಿಟಲೀಕರಣ ನೆನೆಗುದಿಗೆ ಬೀಳಲು ಕಾರಣವಾಗಿದೆ.

ನಗರದ ಹೃದಯ ಭಾಗದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಓದುಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಗ್ರಂಥಾಲಯ ಹೊರಗೆ ಸಾಂಸ್ಕೃತಿಕ ಸಮುಚ್ಛಯ ಗಿಡಮರಗಳಿಂದ ಕೂಡಿದ್ದು, ಓದುವ ವಾತಾವರಣ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಯುವಕರು ಸೇರಿ ಪ್ರತಿದಿನ ಸರಾಸರಿ 700 ಜನರು ಗ್ರಂಥಾಲಯಕ್ಕೆ ಭೇಟಿ ನೀಡಿ ದಿನಪತ್ರಿಕೆ, ವಾರಪತ್ರಿಕೆಗಳನ್ನು ಓದುತ್ತಾರೆ. ಗ್ರಂಥಾಲಯದಲ್ಲಿ 9463 ಓದುಗರು ಸದಸ್ಯತ್ವ ಹೊಂದಿದ್ದಾರೆ. ಗ್ರಂಥಾಲಯದಲ್ಲಿ ಕಥೆ, ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಸೇರಿದಂತೆ ಹಲವಾರು ಪುಸ್ತಕಗಳು ಗ್ರಂಥಾಲಯದಲ್ಲಿ ಲಭಿಸಲಿವೆ. ಪ್ರತಿದಿನ 50 ಕನ್ನಡ ದಿನಪತ್ರಿಕೆ, 15 ಆಂಗ್ಲ ಪತ್ರಿಕೆ, 6 ತೆಲುವು ಪತ್ರಿಕೆ, 15 ವಾರಪತ್ರಿಕೆ, 26 ಮಾಸ ಪತ್ರಿಕೆಗಳು ಬರಲಿವೆ. ಉಳಿದಂತೆ ಕ್ರೀಡೆ ಸೇರಿ ಇನ್ನಿತರೆ ಮ್ಯಾಗ್ಜಿನ್‌ಗಳು ಸಹ ಓದುಗರಿಗೆ ಲಭಿಸಲಿವೆ ಎನ್ನುತ್ತಾರೆ ಗ್ರಂಥಾಲಯದ ಅಧಿಕಾರಿ ಲಕ್ಷ್ಮಿಕಿರಣ್‌.

ಸಿಬ್ಬಂದಿ ಕೊರತೆ: ನಗರ ಕೇಂದ್ರ ಗ್ರಂಥಾಲಯದಲ್ಲಿ 10 ಸಾವಿರಕ್ಕೂ ವಿವಿಧ ರೀತಿಯ ಪುಸ್ತಕಗಳು ಇವೆ. ಜತೆಗೆ ಇದರ ವ್ಯಾಪ್ತಿಗೆ 7 ಶಾಖಾ ಗ್ರಂಥಾಲಯಗಳು, 13 ಸೇವಾ ಕೇಂದ್ರಗಳು, 1 ಸಂಚಾರಿ ಗ್ರಂಥಾಲಯ, 1 ಮಕ್ಕಳ ಗ್ರಂಥಾಲಯ, 1 ಬಿಸಿಲಹಳ್ಳಿ ಗ್ರಾಪಂ ಗ್ರಂಥಾಲಯ ಬರುತ್ತವೆ. ಇಷ್ಟು ಗ್ರಂಥಾಲಯಗಳನ್ನು ನಿರ್ವಹಿಸಲು ಸುಮಾರು 22 ಸಿಬ್ಬಂದಿ ಬೇಕು. ಆದರೆ, ಸದ್ಯ ಗ್ರಂಥಾಲಯಾಧಿಕಾರಿ ಸೇರಿ ಏಳು ಸಿಬ್ಬಂದಿ ಮಾತ್ರ ಕಾಯಂ ಇದ್ದು, ಉಳಿದ 16 ಜನರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.ಇಷ್ಟು ಜನರಿಗೂ ಪಾಲಿಕೆ ನೀಡುವ ಅನುದಾನದಲ್ಲೇ ವೇತನ ನೀಡಬೇಕಾಗಿದೆ.

ಶೀಘ್ರದಲ್ಲೇ ಬ್ರೌಸಿಂಗ್‌ ಸೆಂಟರ್‌: ನಗರ ಕೇಂದ್ರ ಗ್ರಂಥಾಲಯದಲ್ಲಿ ಶೀಘ್ರದಲ್ಲೇ ಬ್ರೌಸಿಂಗ್‌ ಸೆಂಟರ್‌ (ಅಂತರ್ಜಾಲ ಕೇಂದ್ರ)ವನ್ನು ಆರಂಭಿಸಲಾಗುತ್ತದೆ. ಇದಕ್ಕಾಗಿ ಗ್ರಂಥಾಲಯ ಕಟ್ಟಡದ ಮೇಲೆ ಪ್ರತ್ಯೇಕ ಕೊಠಡಿಯನ್ನು ಸಿದ್ಧಪಡಿಸಲಾಗುತ್ತಿದ್ದು, 10 ಕಂಪ್ಯೂಟರ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಉದ್ಯೋಗ ಮಾಹಿತಿ, ಎನ್‌ ಸಿಇಆರ್‌ಟಿ ಪುಸ್ತಕಗಳಲ್ಲಿನ ಮಾಹಿತಿಯನ್ನು ಪಡೆಯಬಹುದು. ಇದನ್ನು ಬೆಂಗಳೂರಿನಿಂದಲೇ ನಿರ್ವಹಿಸಲಾಗುತ್ತದೆ. ಗ್ರಂಥಾಲಯ ಡಿಜಿಟಲೀಕರಣಗೊಳಿಸಲು ಇಲಾಖೆಯ ಮೇಲಧಿಕಾರಿಗಳು ಇದೀಗ ಮಾಹಿತಿಗಳು ಸಂಗ್ರಹಿಸುತ್ತಿದ್ದು, ಇನ್ನೆರಡು ವರ್ಷದಲ್ಲಿ ಪೂರ್ಣಗೊಂಡು ಪುಸ್ತಕ ಪ್ರಿಯರಿಗೆ ಅಣಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next