Advertisement

ಬೆಳಗಾವಿ: ಮನೆ ಮುಂದೆ ಉಗುಳಿದ್ದ ದ್ವೇಷ ಕೊಲೆಯಲ್ಲಿ ಅಂತ್ಯ

06:42 PM Jul 15, 2023 | Team Udayavani |

ಬೆಳಗಾವಿ: ನಾಲ್ಕು ವರ್ಷದ ಹಿಂದೆ ಮನೆ ಮುಂದೆ ಉಗುಳಿದ್ದೇ ನೆಪ ಇಟ್ಟುಕೊಂಡು ಇಬ್ಬರು ಯುವಕರ ಮಧ್ಯೆ ಇದ್ದ ದ್ವೇಷ ಈಗ ಕೊಲೆಯಲ್ಲಿ ಅಂತ್ಯಗೊಂಡಿದ್ದು, ನಗರದ ಪೀರನವಾಡಿಯ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ.ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪೀರನವಾಡಿಯ ಅರ್ಬಾಜ್‌ ರಫೀಕ್‌ ಮುಲ್ಲಾ(26) ಎಂಬ ಯುವಕ ಕೊಲೆಗೀಡಾಗಿದ್ದಾನೆ. ಕೈಯಲ್ಲಿರುವ ಕಡಗದಿಂದ ತಲೆಗೆ
ಗುದ್ದಿ ಕೊಲೆ ಮಾಡಲಾಗಿದೆ. ಕೊಲೆ ಆರೋಪಿಗಳಾದ ಪೀರನವಾಡಿಯ ಪ್ರಸಾದ ನಾಗೇಶ ವಡ್ಡರ ಹಾಗೂ ಪ್ರಶಾಂತ ರಮೇಶ ಕಲೇಕರ ಎಂಬಾತರನ್ನು ಬಂಧಿಸಲಾಗಿದೆ.

ನಾಲ್ಕು ವರ್ಷದ ಹಿಂದೆ ಅರ್ಬಾಜ ಮುಲ್ಲಾ ಎಂಬಾತನ ಮನೆ ಎದುರು ಪ್ರಸಾದ ವಡ್ಡರ ಉಗುಳಿದ್ದನು. ಇದರಿಂದ ಅರ್ಬಾಜ ಹಾಗೂ ಪ್ರಸಾದನ ಮಧ್ಯೆ ದ್ವೇಷ ಇತ್ತು. ಆಗಾಗ ಇಬ್ಬರೂ ಜಗಳವಾಡುತ್ತಿದ್ದರು. 15 ದಿನಗಳ ಹಿಂದೆ ಪ್ರಸಾದನನ್ನು ಮುಗಿಸುವುದಾಗಿ ಅರ್ಬಾಜ್‌ ಬೆದರಿಕೆ ಹಾಕಿದ್ದನು. ಅಂದಿನಿಂದ ಈ ದ್ವೇಷ ಮತ್ತಷ್ಟು ಹೆಚ್ಚಾಗಿತ್ತು.

ನನ್ನನ್ನೇ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದರೆ ಅರ್ಬಾಜನನ್ನು ಬಿಡುವುದು ಬೇಡ ಎಂದು ಪ್ರಸಾದ ವಿಷಕಾರುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಪೀರನವಾಡಿಯ ಜೈನ ಇಂಜಿನಿಯರಿಂಗ್‌ ಕಾಲೇಜಿನ ಹಿಂಭಾಗದ ನಿರ್ಜನ ಪ್ರದೇಶದಲ್ಲಿ
ಗುರುವಾರ ರಾತ್ರಿ ಈ ಎಲ್ಲರೂ ಸಾರಾಯಿ ಕುಡಿಯುತ್ತ ಕುಳಿತಿದ್ದರು.

ಆಗ ಜಗಳವಾಗಿ ಮಾತಿಗೆ ಮಾತು ಬೆಳೆದು ಅರ್ಬಾಜನನ್ನು ಕೈಯಲ್ಲಿರುವ ಕಡಗದಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಮೃತದೇಹ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎಸ್‌.ಟಿ ಶೇಖರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿ ಬಿಮ್ಸ್‌ಗೆ ಅರ್ಬಾಜ್‌ ಮುಲ್ಲಾ ಮೃತದೇಹ ರವಾನೆ ಮಾಡಲಾಯಿತು. ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next