Advertisement

ಯಾರಪ್ಪಂದ ಏನೈತಿ ಬೆಳಗಾವಿ ನಮ್ಮ ದೈತಿ

04:40 PM Oct 30, 2018 | |

ಬೆಳಗಾವಿ: ಗಡಿ ನೆಲದಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವಕ್ಕಾಗಿ ಹೊಸ ಹುರುಪು ಹೆಚ್ಚುತ್ತಿದ್ದು, ಕೆಚ್ಚೆದೆಯ ಬೆಳಗಾವಿ ಹುಡುಗ್ರು ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ ಎಂಬ ಹಾಡು ರಚಿಸಿ ನಿರ್ದೇಶಿಸುವ ಮೂಲಕ ಕನ್ನಡ ಜಾತ್ರೆಯಲ್ಲಿ ಧೂಳೆಬ್ಬಿಸಲು ಹೊರಟಿದ್ದಾರೆ.

Advertisement

ಬೆಳಗಾವಿಯ ನಾಲ್ಕೈದು ಯುವಕ-ಯುವತಿಯರು ಸೇರಿ ಈ ಹಾಡು ರಚಿಸಿ ವಿಡಿಯೋ ಮಾಡಿ ಪ್ರೊಮೊ ಬಿಡುಗಡೆ ಮಾಡಿದ್ದು, ಅ. 30ರಂದು ಪೂರ್ತಿ ಹಾಡನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ನಟ ಶಿವರಾಜಕುಮಾರ ಹಾಗೂ ಸುದೀಪ ಅಭಿನಯದ ದಿ ವಿಲನ್‌ ಚಿತ್ರದ ಟಿಕ್‌ ಟಿಕ್‌ ಟಿಕ್‌ ಹಾಡಿನ ಸಂಗೀತವನ್ನು ಬಳಸಿಕೊಂಡು ಈ ಹಾಡು ರಚಿಸಿ ಫೇಸ್‌ಬುಕ್‌ ಪೇಜ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ಬೆಳಗಾವಿ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಹಾಡಿನ ಪ್ರೊಮೋ ಬಿಡಲಾಗಿದ್ದು, ಇನಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಸೇರಿ ಒಂದೇ ದಿನದಲ್ಲಿ70 ಸಾವಿರಕ್ಕೂ ಹೆಚ್ಚು ಜನರಿಗೆ ಈ ಹಾಡು ತಲುಪಿದೆ. ಅ. 30ರಂದು ಪೂರ್ತಿ ಹಾಡು ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ರಾಜ್ಯೋತ್ಸವದ ಡಾಲ್ಬಿಯಲ್ಲಿ ಈ ಹಾಡಿಗೆ ಯುವ ಪಡೆ ಹುಚ್ಚೆದ್ದು ಕುಣಿಯಲು ಸನ್ನದ್ಧವಾಗಿದೆ. ಇಂಜಿನಿಯರಿಂಗ್‌ ಓದಿರುವ ಕನ್ನಡದ ಯುವಕರು ಬೆಳಗಾವಿ ಫೇಸ್‌ಬುಕ್‌ ಪೇಜ್‌ ತಯಾರಿಸಿ ಕನ್ನಡದ ಅಭಿಮಾನ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ದಯಾನಂದ ಸಂಬರಗಿಮಠ ಎಂಬ ಯುವಕ ಈ ಹಾಡು ಸುಮಧುರವಾಗಿ ಹಾಡಿದ್ದಾರೆ. ಎಂ.ಟೆಕ್‌ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಕಿರಣ ಮಾಳನ್ನವರ ಎಂಬ ಉತ್ಸಾಹಿ ಯುವಕ ತನ್ನ ಜೊತೆಗಾರರನ್ನು ಸೇರಿಸಿಕೊಂಡು ಹಾಡು ತಯಾರಿಸಿದ್ದಾರೆ. ಬೆಳಗಾವಿ ಫೇಸ್‌ಬುಕ್‌ ಪೇಜ್‌ನ ಅಡ್ಮಿನ್‌ ಆಗಿರುವ ಕಿರಣ ಮಾಳಮ್ಮನವರ ಹಾಗೂ ಇನ್ನೂ 10ಕ್ಕೂ ಹೆಚ್ಚು ಇಂಜಿನಿಯರಿಂಗ್‌ ಹುಡುಗರ ಪರಿಕಲ್ಪನೆಯಲ್ಲಿ ಈ ಹಾಡು ಮೂಡಿ ಬಂದಿದೆ.

ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೇಳೆ ಈ ಸಲ ಕಪ್‌ ನಮ್ಮದೇ ಎಂಬ ಘೋಷ ವಾಕ್ಯ ಎಲ್ಲೆಡೆ ಹರಿದಾಡುತ್ತಿತ್ತು. ಇದಕ್ಕೆ ಪೂರಕವಾಗಿ ಬೆಳಗಾವಿ ಬಗ್ಗೆ ಏನಾದರೂ ಮಾಡಬೇಕೆಂಬ ಯೋಚನೆಯೊಂದಿಗೆ 2017ರಲ್ಲಿ ಯಾರಪ್ಪಂದ ಏನೈತಿ ಆರ್‌ಸಿಬಿ ನಮ್ಮದೈತಿ ಎಂಬ ವಾಕ್ಯವನ್ನು ಬೆಳಗಾವಿ ಫೇಸ್‌ಬುಕ್‌ ಪೇಜ್‌ ಹಾಕಿದಾಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರದಲ್ಲಿ ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ ಎಂದು ಅಪ್‌ ಲೋಡ್‌ ಮಾಡುತ್ತಿದ್ದಂತೆ ರಾಜ್ಯಾದ್ಯಂತ ಜನ ಮೆಚ್ಚಿಕೊಡಿದ್ದಾರೆ. ಎಲ್ಲ ಕಡೆ ಇದು ಡಿಜೆ ಸಾಂಗ್‌ ಆಗಿಯೂ ತಯಾರಾಗಿದೆ ಎನ್ನುತ್ತಾರೆ ಕಿರಣ ಮಾಳಮ್ಮನವರ.

Advertisement

ಇದನ್ನೇ ನಾವು ಟೀ ಶರ್ಟ್‌ ಹಿಂದೆ ಬರೆಯಿಸಿ ಪ್ರಚಾರ ಮಾಡಿದ್ದು, ಬೆಳಗಾವಿ ರಾಜ್ಯೋತ್ಸವದಲ್ಲಿ ಹೆಚ್ಚಿನ ಯುವ ಪಡೆ ಸೇರಲಿ ಎಂಬ ಉದ್ದೇಶ ಹೊಂದಲಾಗಿತ್ತು. ಸದ್ಯ ಎರಡು ಸಾವಿರಕ್ಕೂ ಹೆಚ್ಚು ಟೀ ಶರ್ಟ್ ಗಳು ಮಾರಾಟವಾಗಿವೆ. ಬೇರೆ ಬೇರೆ ಜಿಲ್ಲೆಗಳಿಂದಲೂ ಜನ ಕೇಳುತ್ತಿದ್ದಾರೆ. ಅಮೆರಿಕಕ್ಕೂ ಈ ಟೀ ಶರ್ಟ್‌ಗಳು ಮಾರಾಟವಾಗಿವೆ. ಜೊತೆಗೆ ಇದನ್ನೇ ಹಾಡು ಮಾಡಿ ವಿಡಿಯೋ ಮಾಡಲಾಗಿದೆ ಎಂದು ಕಿರಣ ವಿವರಿಸಿದರು.

ಸೌರಭ ಪಾಟೀಲ ವಿಡಿಯೋ ಎಡಿಟಿಂಗ್‌ ಮಾಡಿದ್ದು, ಸಚಿನ್‌ ಮುನ್ನೋಳ್ಳಿ ಫೋಟೋಗ್ರಾಫಿ, ಮೇಘನಾ, ಸುಷ್ಮಿತಾ ಪಿಟಗಿ, ದೀಪಾ ಗೋಂಡಬಾಳ, ಸಾಗರ ಬೋರಗಲ್ಲ, ಸಂಪತ್‌, ಸಂಪೂರ್ಣಾ, ಪ್ರೇಮಕಿರಣ ಯಂಗಟ್ಟಿ, ರಜತ್‌ ಅಂಕಲೆ, ನಾಗವೇಣಿ, ಸ್ನೇಹಾ, ಅಭಿಜಿತ್‌, ಕನ್ನಡಿಗ ದೀಪಕ ಸೇರಿದಂತೆ ಅನೇಕ ಯುವಕರು ನೃತ್ಯ ಮಾಡಿದ್ದಾರೆ. ಸಾಗರ ಹಾಗೂ ಆದರ್ಶ ಹಾಡಿಗಾಗಿ ಶ್ರಮ ವಹಿಸಿದ್ದಾರೆ.

ಬೆಳಗಾವಿ ಹುಡುಗ್ರು ಮೈಯೆಲ್ಲ ಪೊಗರು
ಬೆಳಗಾವಿ ಕ್ರಿಯೇಷನ್ಸ್‌ ಅಡಿಯಲ್ಲಿ ಇನ್ನೊಂದು ಹಾಡು ತಯಾರಾಗಿದ್ದು, ಬೆಳಗಾವಿ ಹುಡುಗ್ರು ರ್ಯಾಪ್‌ ಸಾಂಗ್‌ ತಯಾರಿಸುವ ಮೂಲಕ ರಾಜ್ಯೋತ್ಸವದಲ್ಲಿ ಕುಣಿಯಲು ರೆಡಿಯಾಗಿದ್ದಾರೆ. ಶಿವರಾಯ ಏಳುಕೋಟೆ ನಿರ್ಮಾಣದಲ್ಲಿ ಮೂಡಿ ಬಂದಿರುವ ಬೆಳಗಾವಿ ಹುಡುಗ್ರು ಮೈಯೆಲ್ಲ ಪೊಗರು ಎಂಬ ಹಾಡೂ ಸಖತ್‌ ಹಿಟ್‌ ಆಗಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿರುವ ಈ ಹಾಡನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ರ್ಯಾಪ್‌ ಸಾಂಗ್‌ ಆಗಿರುವ ಇದನ್ನು ಜನರೂ ಮೆಚ್ಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಬೆಳಗಾವಿಯಲ್ಲಿ ವಿಭಿನ್ನ ಹಾಡುಗಳು ಬರುತ್ತಿದ್ದು, ಜನರ ಕುತೂಹಲಕ್ಕೆ ಕಾರಣವಾಗಿವೆ.

ಬೆಳಗಾವಿಯಲ್ಲಿ ಮೊದಲಿನಿಂದಲೂ ಗಡಿ ವಿವಾದ ಇದ್ದೇ ಇದೆ. ಇದಕ್ಕೆ ನಾವು ಈ ಹಾಡನ್ನು ರಚಿಸಿ ಹಾಡಿ ವೈರಲ್‌ ಮಾಡುವ ಮೂಲಕ ಟಾಂಗ್‌ ನೀಡಿದ್ದೇವೆ. ಜೊತೆಗೆ ಬೆಳಗಾಗಾವಿ ಜಿಲ್ಲೆಯನ್ನು ವಿಭಜನೆ ಮಾಡಲೂ ಕೆಲವರು ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿಯೇ ಇಡೀ ಬೆಳಗಾವಿ ಒಂದೇ ಎಂಬರ್ಥವೂ ಇದರಲ್ಲಿದೆ. ಸಂಕೇಶ್ವರ, ಹುಕ್ಕೇರಿ, ಚಿಕ್ಕೋಡಿಯ ಜನ ಇದನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ದಯಾನಂದ ಸಂಬರಗಿಮಠ, ಗಾಯಕ

ಭೈರೋಬಾ ಕಾಂಬಳೆ 

Advertisement

Udayavani is now on Telegram. Click here to join our channel and stay updated with the latest news.

Next