Advertisement

ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ

03:30 PM Nov 10, 2022 | Team Udayavani |

ಹುಬ್ಬಳ್ಳಿ: ಬಿಆರ್‌ಟಿಎಸ್‌ ಕಂಟ್ರೋಲ್‌ ರೂಮ್‌ ನಲ್ಲಿ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ್‌ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ ಚಿಗರಿ ಬಸ್‌ ಚಾಲಕರಿಗಾಗಿ ಎರಡು ದಿನಗಳ ವಿಶೇಷ ಪುನಶ್ಚೇತನ ಕಾರ್ಯಾಗಾರ ನಡೆಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಗರಿ ಬಸ್‌ನ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯಯುತವಾದ ವರ್ತನೆ, ಸಂಚಾರ ನಿಯಮಗಳ ಪಾಲನೆ, ಬಿಆರ್‌ಟಿಎಸ್‌ ಕಾರಿಡಾರ್‌ ನಲ್ಲಿ ಶಿಸ್ತುಬದ್ಧವಾದ ಸುರಕ್ಷಿತ ಚಾಲನೆಯನ್ನು ತಮ್ಮ ದಿನನಿತ್ಯದ ಕರ್ತವ್ಯದಲ್ಲಿ ಅಳವಡಿಸಿಕೊಂಡಲ್ಲಿ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಆಗುತ್ತಿರುವ ಸಂಚಾರ ನಿಯಮಗಳ ಉಲ್ಲಂಘನೆ ತಗ್ಗಿಸಲು ಸಹಕಾರಿಯಾಗಲಿದೆ. ಜತೆಗೆ ಸಾರ್ವಜನಿಕ ಪ್ರಯಾಣಿಕರಲ್ಲೂ ತಮ್ಮ ಬಿಆರ್‌ಟಿಎಸ್‌ ಚಿಗರಿ ಬಸ್‌ ಗಳ ಸೇವೆಗಳ ಬಗ್ಗೆ ವಿಶ್ವಾಸ ಹೆಚ್ಚಾಗಲಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಸ್ತೆಗಳಲ್ಲಿ ಎಲ್ಲಾ ಬಗೆಯ ವಾಹನಗಳ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ವಾಹನಗಳ ಸುಗಮ ಸಂಚಾರ ಒಂದು ಸವಾಲಾಗಿದ್ದು, ಅಪಘಾತಗಳಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಹಾನಿ ತಗ್ಗಿಸಬೇಕಾದರೆ ಸಂಚಾರ ನಿಯಮಗಳ ಪಾಲನೆ ಅತ್ಯವಶ್ಯ ಎಂದರು. ಕಾರ್ಯಾಗಾರದಲ್ಲಿ ಹುಬ್ಬಳ್ಳಿಯ ಉತ್ತರ ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಆರ್‌.ಡಿ. ಮರುಳಸಿದ್ದಪ್ಪ ಮಾತನಾಡಿ, ಜಂಕ್ಷನ್‌ಗಳಲ್ಲಿನ ಸಿಗ್ನಲ್‌ಗ‌ಳ ಸೂಚನೆ ಪಾಲಿಸುವ ಕುರಿತು, ಪ್ರಸ್ತುತ ಚಾಲ್ತಿಯಲ್ಲಿರುವ ಸಂಚಾರ ನಿಯಮ ಮತ್ತು ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು.

ಬಿಆರ್‌ಟಿಎಸ್‌ ಚಾಲಕರೊಂದಿಗೆ ಸಂವಾದ ನಡೆಸಿ, ಅವರಿಂದಾಗುವ ತಪ್ಪುಗಳನ್ನು ಪಟ್ಟಿ ಮಾಡಿ ಪರಿಹಾರೋಪಾಯಗಳನ್ನು ಸೂಚಿಸಿದರು. ಅವರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಜತೆಗೆ ಎರಡು ನಗರಗಳಲ್ಲಿನ ಪ್ರಮುಖ ಜಂಕ್ಷನ್‌, ತಿರುವುಗಳಲ್ಲಿ ಆಗುತ್ತಿರುವ ಸಂಚಾರ ನಿಯಮಗಳ ಉಲ್ಲಂಘನೆ ತಡೆಯುವಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿದೆ ಎಂದರು.

Advertisement

ಬುಧವಾರ ನಡೆದ 2ನೇ ದಿನದ ಕಾರ್ಯಾಗಾರದಲ್ಲಿ ದಕ್ಷಿಣ ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಸುರೇಶ ಕುಂಬಾರ ಮಾತನಾಡಿ, ರಸ್ತೆಗಳ ಮೇಲಾಗುತ್ತಿರುವ ಅಪಘಾತಗಳು ಮತ್ತು ಕಾರಣಗಳ ಬಗ್ಗೆ ಸಾಕ್ಷéಚಿತ್ರಗಳ ಮೂಲಕ ಚಾಲಕರಿಗೆ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬ ವಾಹನ ಸವಾರರು ಪರವಾನಗಿ ಲೈಸನ್ಸ್‌ ಹೊಂದುವುದು ಮಹತ್ವದಾಗಿದೆ. ಪ್ರಯಾಣಿಕರ ವಾಹನ ಚಾಲನೆ ಮಾಡುವ ಚಾಲಕರು ದೈಹಿಕವಾಗಿ, ಮಾನಸಿಕವಾಗಿ ಸದೃಢತೆ ಹೊಂದಿದ್ದಲ್ಲಿ ಅಪಘಾತಗಳಾಗುವ ಸಂಭವ ಹೆಚ್ಚಾಗುವುದಲ್ಲದೆ, ಪ್ರಯಾಣಿಕರ ಪ್ರಾಣಹಾನಿ ಹಾಗೂ ಗಾಯಗಳಾಗುವುದು ನಿಶ್ಚಿತ. ಕಾರಣ ಸುರಕ್ಷಿತ ಚಾಲನೆಗೆ ದೈಹಿಕ-ಮಾನಸಿಕ ಆರೋಗ್ಯ ಮುಖ್ಯ. ಜತೆಗೆ ಸಂಚಾರ ನಿಯಮಗಳ ಜ್ಞಾನ, ಪಾಲನೆ ಅವಶ್ಯವಾಗಿದೆ ಎಂದರು.

ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ವಿಭಾಗೀಯ ಸಾರಿಗೆ ಅಧಿಕಾರಿ ಕೆಂಪಣ್ಣ ಗುಡೇನವರ, ಬಿಆರ್‌ಟಿಎಸ್‌ ಘಟಕ ವ್ಯವಸ್ಥಾಪಕರಾದ ಸಂತೋಷ ಕಾಮತ, ದೀಪಕ ಜಾಧವ, ರವಿ ಅಂಚಗಾವಿ ಮಾತನಾಡಿದರು.

ಬಿಆರ್‌ಟಿಎಸ್‌ ಪಿಆರ್‌ಒ ಮಂಜುನಾಥ ಜಡೇನವರ ನಿರೂಪಿಸಿದರು. ಕಾರ್ಯಾಗಾರದಲ್ಲಿ ಒಟ್ಟು 150 ಚಾಲಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next