Advertisement

ಜಿಲ್ಲೆಗೆ ಕೃಷಿ ಕಾಲೇಜಿಗಾಗಿ ಪ್ರಸ್ತಾವನೆ

11:57 AM Jan 27, 2020 | |

ಬೀದರ: ಬೀದರನಲ್ಲಿ ಈಗಾಗಲೇ ಎಂಜಿನೀಯರಿಂಗ್‌ ಕಾಲೇಜು ಸಿದ್ಧಗೊಳ್ಳುತ್ತಿದೆ. ನಮಗೆ ಕೃಷಿ ಕಾಲೇಜಿನ ಅವಶ್ಯಕತೆಯಿದ್ದು, ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಎಲ್ಲ ಜನಪ್ರತಿನಿಧಿಗಳ ಸಹಕಾರ ಪಡೆದು, ಪ್ರಸಕ್ತ ಬಜೆಟ್‌ನಲ್ಲಿಯೇ ಘೋಷಣೆಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪಶು ಸಂಗೋಪನೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರವಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅವರು, ಜನರ ಆಶಯದಂತೆ ಔರಾದ-ಬೀದರ ಮಧ್ಯದ ರಸ್ತೆ 336 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಸುಸ್ಸಜ್ಜಿತವಾಗಿ ನಿರ್ಮಾಣವಾಗಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಸೋಲಾರ್‌ ಪಾರ್ಕ್‌ ಮಂಜೂರು: ಕೇಂದ್ರ ಸರ್ಕಾರದಿಂದ ಬೀದರ ಜಿಲ್ಲೆಗೆ ಸೋಲಾರ್‌ ಪಾರ್ಕ್‌ ಮಂಜೂರಾಗಿದೆ. ಇದಕ್ಕಾಗಿ 12,000 ಎಕರೆ ಪ್ರದೇಶ ಅಗತ್ಯವಿದ್ದು, ಭೂಮಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆ ಸಾಕಾರಗೊಂಡಲ್ಲಿ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಮುಂಬೈ, ಹೈದ್ರಾಬಾದ್‌, ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ ಎಂದು ತಿಳಿಸಿದ ಅವರು, ಜಿಲ್ಲೆಯ ಬಹುಜನರ ಕನಸಾದ ವಿಮಾನಯಾನಕ್ಕೆ ಬರುವ ಫೆ.7ರಂದು ಮುಖ್ಯಮಂತ್ರಿಗಳಿಂದ ಚಾಲನೆ ಸಿಗಲಿದೆ. ಫೆ. 7ರಂದು ಜಿಲ್ಲೆಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಪಶುಮೇಳ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದು, ದೇಶದ ವಿವಿಧೆಡೆಗಳಿಂದ ಪಶುಗಳು ಆಗಮಿಸಲಿವೆ ಎಂದರು.

ಔರಾದ ಮಾರ್ಗವಾಗಿ ಹೊರಡುವ ಬೀದರ- ನಾಂದೇಡ್‌ ರೈಲ್ವೆ ಯೋಜನೆ ಪ್ರಗತಿಯಲ್ಲಿದೆ. ಜೊತೆಗೆ ರೈಲ್ವೆ ಸಂಚಾರ ಮಾರ್ಗದಲ್ಲಿ ಜಿಲ್ಲೆಯ ಜನತೆಗೆ ಅನುಕೂಲವಾಗುವ ಕೆಲವು ಮಾರ್ಪಾಡುಗಳನ್ನು ಮಾಡಲು ಪ್ರಯತ್ನಿಸುತ್ತಿರುವ ಸಂಸದ ಭಗವಂತ ಖೂಬಾ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಈ ರೈಲ್ವೆ ಯೋಜನೆ ಯಶಸ್ವಿಯಾದಲ್ಲಿ ಜಿಲ್ಲೆಯಲ್ಲಿ ಹೊಸ ಕಾರ್ಖಾನೆಗಳು ಸ್ಥಾಪನೆಯಾಗುವ ಜೊತೆಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಜಿಲ್ಲೆಯಲ್ಲಿ ಗುರುದ್ವಾರಾ, ಪಾಪನಾಶ್‌, ನರಸಿಂಹ ಝರಣಾದಂತಹ ವಿಶಿಷ್ಟ ಐತಿಹಾಸಿಕ ಸ್ಥಳಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಬದ್ಧರಾಗಿದೆ. ಶಿಕ್ಷಣದ ಏಳಿಗೆಗೆ ಮೊದಲ ಆದ್ಯತೆ ನೀಡಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ವೈದ್ಯರಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬೇಕಿರುವ ಎಲ್ಲ ನೆರವು ನೀಡಲಾಗುವುದು. ಕಳೆದ ಮೂರು ವರ್ಷಗಳಿಂದ ಬೀದರ ಉತ್ಸವ ಆಚರಿಸಿಲ್ಲ. ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ತಿಳಿಸಿದರು.

Advertisement

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಮೂರು ಕಂತುಗಳು ಸೇರಿ 61.42 ಕೋಟಿ ರೂ. ಸಹಾಯಧನವನ್ನು ಸುಮಾರು 1,55,526 ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು, ಮೌಲಾನಾ ಆಜಾದ್‌ ಮಾದರಿ ಶಾಲೆ/ ವಸತಿ ನಿಲಯಗಳ ನಿರ್ವಹಣೆ ವೆಚ್ಚಕ್ಕಾಗಿ
361.84 ಲಕ್ಷ ರೂ. ಬಿಡುಗಡೆಯಾದ ಅನುದಾನದಲ್ಲಿ 214.83 ಲಕ್ಷ ರೂ. ಅನುದಾನ ಬಳಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಬಿದಾಯಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದ ಹೆಣ್ಣುಮಕ್ಕಳ ಮದುವೆಯ ಕಾರ್ಯಕ್ರಮದ ವೆಚ್ಚಕ್ಕಾಗಿ ಸಹಾಯಧನ ನೀಡಲು ಅರ್ಹ 706 ಫಲಾನುಭವಿಗಳಿಗೆ
ತಲಾ 50,000 ರೂ.ದಂತೆ ಒಟ್ಟು 353 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಕ್ರಿಶ್ಚಿಯನ್‌ ಅಭಿವೃದ್ಧಿ ಯೋಜನೆ, ಚರ್ಚ್‌ ದುರಸ್ಥಿ/ ನವೀಕರಣ, ಚರ್ಚ್‌ಗಳ ಜಿರ್ಣೋದ್ಧಾರ/ ನವೀಕರಣ, ಚರ್ಚ್‌ ಕಂಪೌಂಡ್‌ವಾಲ್‌ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಸಂಸದ ಭಗವಂತ ಖೂಬಾ, ಶಾಸಕರಾದ ರಹೀಮ್‌ ಖಾನ್‌, ಬಂಡೆಪ್ಪ ಖಾಶೆಂಪೂರ, ರಘುನಾಥರಾವ್‌ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ವಿಜಯಸಿಂಗ್‌, ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ, ತಾಪಂ ಅಧ್ಯಕ್ಷ ವಿಜಯಕುಮಾರ ಬರೂರ್‌, ಜಿಲ್ಲಾ ಧಿಕಾರಿ ಎಚ್‌.ಆರ್‌. ಮಹಾದೇವ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಉಪಸ್ಥಿತರಿದ್ದರು.

ಪಥಸಂಚಲನ: ಗಣರಾಜ್ಯೋತ್ಸವ ಪ್ರಯುಕ್ತ ನಾಗರಿಕ ಪೊಲೀಸ್‌, ಅರಣ್ಯ ಇಲಾಖೆ, ಸಶಸ್ತ್ರ ಪೊಲೀಸ್‌, ಗೃಹರಕ್ಷಕ ದಳ, ಎನ್‌ಸಿಸಿ ಭಾರತೀಯ ಸೇವಾದಳ ಹೀಗೆ 13 ತುಕಡಿಗಳಿಂದ ಭಾಲ್ಕಿ ಡಿವೈಎಸ್ಪಿ ಡಾ|ದೇವರಾಜ ಅವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next