Advertisement

“ಲಿಂಗಾಯತ ರ್ಯಾಲಿ’ಗೆ ಬೀದರ ಸಜ್ಜು

03:32 PM Jul 19, 2017 | |

ಬೀದರ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ
ಸರ್ಕಾರಕ್ಕೆ ಆಗ್ರಹಿಸಿ ಜು.19ರಂದು ಲಿಂಗಾಯತ ಸಮನ್ವಯ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ “ಲಿಂಗಾಯತ ಮಹಾ
ರ್ಯಾಲಿ’ಗೆ ಬೀದರ ಸಜ್ಜಾಗಿದ್ದು, ಸಾವಿರಾರು ಜನ ಸೇರುವ ನಿರೀಕ್ಷೆ ಇದೆ.

Advertisement

ಲಿಂಗಾಯತ ರ್ಯಾಲಿಯ ಪ್ರಚಾರಾರ್ಥ ಜಿಲ್ಲೆಯ ತಾಲೂಕು ಕೇಂದ್ರ ಹಾಗೂ ಹೋಬಳಿ ಮಟ್ಟದಲ್ಲಿ ವಾಹನಗಳ ಮೂಲಕ
ಪ್ರಚಾರ ನಡೆಸಲಾಗಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ರ್ಯಾಲಿ ಕುರಿತು ಕಟೌಟ್‌ಗಳನ್ನು ಹಾಕಲಾಗಿದೆ. ನಗರದಲ್ಲಿ ಸಮನ್ವಯ ಸಮಿತಿ
ಕಾರ್ಯಕರ್ತರು ಮನೆ ಮನೆಗೂ ತೆರಳಿ ರ್ಯಾಲಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಮಂಗಳವಾರ ನಗರದಲ್ಲಿ
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೈಕ್‌ ರ್ಯಾಲಿ ನಡೆಸಿ ರ್ಯಾಲಿಯ ಪ್ರಚಾರ ಮಾಡಲಾಗಿದೆ. ಈಗಾಗಲೇ ವಿವಿಧ
ಒಳಪಂಗಡಗಳು, ಲಿಂಗಾಯತ ಪರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. 

ಬೀದರ ಮಾತ್ರವಲ್ಲದೇ ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರದ ವಿವಿಧೆಡೆಯಿಂದ ಸಾವಿರಾರು ಜನ ಬಸವಾನುಯಾಯಿಗಳು ಸೇರಲಿದ್ದಾರೆ. ಕಲಬುರಗಿಯ ಸುಲಫಲ ಮಠದ ಶ್ರೀಗಳ ನೇತೃತ್ವದಲ್ಲಿ ಸುಮಾರು 20 ಜನ ಸ್ವಾಮೀಜಿಗಳು ರ್ಯಾಲಿಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಇದು ಮೌನ ಮೆರವಣಿಗೆ ಆಗಿದ್ದು, ಯಾವುದೇ ಜಯಘೋಷ ಇರುವುದಿಲ್ಲ. ಅಂದು ಬೆಳಗ್ಗೆ 11 ಗಂಟೆಗೆ ನಗರದ ನೆಹರು ಕ್ರೀಡಾಂಗಣದಿಂದ ಶುರುವಾಗಲಿರುವ ರ್ಯಾಲಿಯು ಸರ್ವಿಸ್‌ ಸ್ಯಾಂಡ್‌, ಅಂಬೇಡ್ಕರ ವೃತ್ತ, ಶಹಾಗಂಜ್‌, ಗವಾನ್‌ ವೃತ್ತ,
ಚೌಬಾರಾ, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಜಿಲ್ಲಾ ಧಿಕಾರಿ ಕಚೇರಿ ಎದುರು ಸಮಾವೇಶಗೊಳ್ಳುವುದು. ನಂತರ
ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾಗಳಿಗೆ ಸಲ್ಲಿಸಲಿದ್ದಾರೆ.

ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಎರಡು ಬೇರೆ ಪದ. ಹಿಂದೆ ವೀರಶೈವ ಲಿಂಗಾಯತ ಎಂದು ಶಿಫಾರಸ್ಸು ಮಾಡಿದ್ದ ಪ್ರಸ್ತಾವನೆಗೆ ಮೂರು ಬಾರಿ ತಿರಸ್ಕಾರಗೊಂಡಿದೆ. ಹಾಗಾಗಿ ಲಿಂಗಾಯತ ಪದದೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ರ್ಯಾಲಿ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಇದೊಂದು ಲಿಂಗಾಯತರ ಸ್ವಾಭಿಮಾನದ ರ್ಯಾಲಿ ಆಗಿದ್ದು, ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲೆಯ ಮಠಾಧೀಶರುಗಳು ಕೋರಿದ್ದಾರೆ. 

ಈ ಬೃಹತ್‌ ಪ್ರತಿಭಟನೆಯಲ್ಲಿ ಲಿಂಗಾಯತ ಭಕ್ತಾದಿಗಳು ಭಾಗವಹಿಸಬೇಕು. ಪ್ರಕೃತಿಯ ಯಾವುದೇ ಪ್ರತಿಕೂಲ ವಾತಾವರಣ ಇರಲಿ ಅಥವ ಇರದೇ ಇರಲಿ ಯಾವುದಕ್ಕೂ ಲೆಕ್ಕಿಸದೇ ಧರ್ಮ ಕ್ರಾಂತಿಯ ಈ ಪ್ರತಿಭಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಸಮಿತಿ
ಪ್ರಕಟಣೆಯಲ್ಲಿ ಕರೆ ನೀಡಿದೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಬುಧವಾರವೂ ಮಳೆ ಮುಂದುವರಿದಲ್ಲಿ ರ್ಯಾಲಿಯಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್‌ನಿಂದ ಅಗತ್ಯ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 

Advertisement

ವಾಹನ ನಿಲುಗಡೆಗೆ ಸ್ಥಳ ನಿಗದಿ-ಪ್ರಸಾದ ವ್ಯವಸ್ಥೆ
ಲಿಂಗಾಯತ ರ್ಯಾಲಿಯಲ್ಲಿ ಭಾಗವಹಿಸಲು ವಿವಿಧ ಭಾಗಗಳಿಂದ ಬರುವ ಜನರಿಗೆ ಅವರ ವಾಹನಗಳ ನಿಲುಗಡೆಗಾಗಿ ಸೂಚಿಸಿದ ಸ್ಥಳಗಳಲ್ಲಿಯೇ ನಿಲ್ಲಿಸಿ ಬರಬೇಕೆಂದು ಲಿಂಗಾಯತ ಸಮನ್ವಯ ಸಮಿತಿ ಕೋರಿದೆ. ಔರಾದ ಮತ್ತು ಮಹಾರಾಷ್ಟ್ರ ಕಡೆಯಿಂದ
ಬರುವ ವಾಹನಗಳಿಗೆ ನವದಗೇರಿ ಹತ್ತಿರ ಇರುವ ರಿಂಗ್‌ ರೋಡ್‌ನಿಂದ ಹೌಸಿಂಗ್‌ ಬೋರ್ಡ್‌ ಕಾಲೋನಿಯ ಜೈಲ್‌ ಕಾರ್ನರ್‌ ಬಳಿ ಇರುವ ಶಿವ ಮಂದಿರ ಬಳಿ ಇಳಿದು, ಕೆಳಗಡೆ ಇರುವ ಝೀರಾ ಕನವೇನನಲ್‌ ಹಾಲ್‌ ಮತ್ತು ಗುರುದ್ವಾರ ಪರಿಸರದಲ್ಲಿ ನಿಲ್ಲಿಸಬೇಕು. ಝೀರಾ ಕನ್ವೆನನ್‌ ಹಾಲ್‌ನಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹುಮನಾಬಾದ್‌, ಬಸವಕಲ್ಯಾಣ ಮತ್ತು ಭಾಲ್ಕಿ ಕಡೆಯಿಂದ ಬರುವವರು ನ್ಯಾಷನಲ್‌ ಕಾಲೇಜು, ಬರೀದ್‌ ಶಾಹಿ, ಶಿವನಗರದ ಶಾಹೇಬ್‌ ಲೇಔಟ್‌ ಗಳಲ್ಲಿ ಪಾರ್ಕಿಂಗ್‌ ಮಾಡಬೇಕು. ಬೆಲ್ದಾಳೆ ಕಲ್ಯಾಣ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಮನ್ನಳಿ, ಕಮಠಾಣ, ಬೀದರ ದಕ್ಷಿಣ ಕ್ಷೇತ್ರ, ಜಹೀರಾಬಾದ ಮತ್ತು ಹೈದ್ರಾಬಾದ ಕಡೆಯಿಂದ ಬರುವವರಿಗೆ ಬಿ.ವಿ.ಬಿ. ಕಾಲೇಜು,
ಕೆಆರ್‌ಇ ಕಾಲೇಜು ಆವರಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಎಂಎಸ್‌ ಕಲ್ಯಾಣ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ
ಮಾಡಲಾಗಿದೆ. ಪ್ರಸಾದ ವ್ಯವಸ್ಥೆಯನ್ನು ರ್ಯಾಲಿ ಮುಗಿದ ನಂತರ ಏರ್ಪಡಿಸಲಾಗಿದೆ. ನೆರೆ ರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆ, ಸ್ಥಳೀಯ ತಾಲೂಕುಗಳಿಂದ ಜನರು ಬರುವುದರಿಂದ ನಗರದ ಸಾರ್ವಜನಿಕರು ಸಹಕರಿಸಬೇಕು ಎಂದು ಸಮಿತಿ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next