Advertisement

ಒತ್ತಡಕ್ಕೆ ಮಣಿಯದೇ ಜನರ ಕೆಲಸ ಮಾಡಲು ಮುಂದಾಗಿ

02:08 PM Sep 10, 2019 | Team Udayavani |

ತರೀಕೆರೆ: ಅಧಿಕಾರಿಗಳು ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸಬೇಕು. ಒತ್ತಡದಿಂದ ತಪ್ಪುಗಳಾದಲ್ಲಿ ಅಧಿಕಾರಿಗಳನ್ನು ಅದರ ಹೊಣೆಯನ್ನು ಹೊರಬೇಕಾಗುತ್ತದೆ. ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಪ್ರಭಾರ ಡಿವೈಎಸ್‌ಪಿ ಸಚಿನ್‌ಕುಮಾರ್‌ ಹೇಳಿದರು.

Advertisement

ಪಟ್ಟಣದ ಪ್ರವಾಸಿಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾರ್ವಜನಿಕರಿಂದ ಹಲವಾರು ರೀತಿಯ ದೂರುಗಳು ಲೋಕಾಯುಕ್ತ ಕಚೇರಿಗೆ ಬರುತ್ತಿವೆ. ಅಂತಹ ದೂರುಗಳು ಬಂದಲ್ಲಿ ಲೋಕಾಯುಕ್ತ ಸಂಸ್ಥೆ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದು ಅನಿವಾರ್ಯ. ತಿಂಗಳಿಗೊಮ್ಮೆ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಭೇಟಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಾಗುವುದು, ಕೆಲವೊಮ್ಮೆ ಅನಿರೀಕ್ಷತವಾಗಿ ಸರಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.

ಲೋಕಾಯುಕ್ತರು ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳಿಗೂ ಮೊದಲು ಸೂಚನೆ ನೀಡಲಾಗುತ್ತಿದೆ. ಅಧಿಕಾರಿಗಳು ವಿಳಂಬ ನೀತಿ ಅನುಸರಿಸದೆ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಸಕಾಲದಲ್ಲಿ ಬರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ನಿಯಮ ಮೀರಿ ಕೆಲಸ ನಿರ್ವಹಿಸಿದಲ್ಲಿ ಅಮಾನತು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದರು.

ಕೆರೆಗಳ ಒತ್ತುವರಿಗಳ ಬಗ್ಗೆ ಹಲವಾರು ದೂರುಗಳಿವೆ, ಕೆರೆಗಳ ವಿಸ್ತೀರ್ಣ, ಒತ್ತುವರಿಯಾಗಿರುವ ಪ್ರದೇಶ, ಒತ್ತುವರಿ ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳು ಏನು ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಆರ್‌.ಎನ್‌.ಚನ್ನಬಸಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಸಿದ ಎಇಇ ಇಲಾಖಾ ವ್ಯಾಪ್ತಿಯಲ್ಲಿ 29 ಕೆರೆಗಳಿವೆ, ಇವುಗಳಲ್ಲಿ ಕೆಲವು ಕೆರೆಗಳು ಒತ್ತುವರಿಯಾಗಿರುವುದು ಕಂಡು ಬಂದಿದೆ, ಒತ್ತುವರಿಯಾಗಿರುವ ಪ್ರದೇಶಗಳನ್ನು ಗುರುತಿಸಲು ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಬಂದಿರುವ ವರದಿಗಳನ್ನು ತಹಶೀಲ್ದಾರ್‌ ಅವರಿಗೆ ತೆರವುಗೊಳಿಸಿಕೊಡಲು ಪತ್ರವನ್ನು ನೀಡಲಾಗಿದೆ ಎಂದರು.

ಸರಕಾರ ಜನಸಾಮಾನ್ಯರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ, ಆದರೆ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂಬ ದೂರುಗಳು ಇವೆ. ಯೋಜನೆಗಳು ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗುತ್ತಿದೆ ಅವುಗಳು ನಿಲ್ಲಬೇಕು. ಅರ್ಹ ಫಲಾನುಭವಿಗಳಿಗೆ ದೊರಕುವಂತಾಗಬೇಕು. ಒಂದೊಮ್ಮೆ ಹೊರಿಗಿನ ಒತ್ತಡ ಬಂದಲ್ಲಿ ಅವರಿಗೆ ಸೂಕ್ತ ಮಾಹಿತಿ ನೀಡಿ. ನಿಯಮಗಳ ಅಡಿಯಲ್ಲಿ ನಾವು ಕೆಲಸ ನಿರ್ವಹಿಸಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಿ ಎಂದರು.

Advertisement

ನಿಮ್ಮ ಕೈಕೆಳಗಿನ ನೌಕರರು ತಪ್ಪು ಮಾಹಿತಿ ನೀಡುವುದು, ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮಿಂದ ತಪ್ಪುಗಳನ್ನು ಮಾಡಿಸುತ್ತಾರೆ, ಪತ್ರಗಳಿಗೆ ಸಹಿ ಮಾಡುವಾಗ ಎಚ್ಚರದಿಂದ ಸಹಿ ಮಾಡಿ, ನೌಕರರು ತಪ್ಪು ಮಾಡಿದರು ನಿಮಗೆ ತೊಂದರೆ ಉಂಟಾಗುತ್ತದೆ ಎಂಬುದು ಅಧಿಕಾರಿಗಳ ಗಮನದಲ್ಲಿರಬೇಕು. ಕಳಪೆ ಕಾಮಗಾರಿಗಳನ್ನು ನಿರ್ವಹಿಸಿದ ದೂರುಗಳು ಬಂದಲ್ಲಿ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ಅಧಿಕಾರಿಗಳು ತನಿಖೆ ನಡೆಸಿ ಇಂಜಿನಿಯರ್‌ ಮತ್ತು ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳುತ್ತಾರೆ. ಅಧಿಕಾರಿಗಳ ವಿರುದ್ದ ಗುಪ್ತ ಮಾಹಿತಿಯನ್ನು ಲೋಕಾಯುಕ್ತರಿಗೆ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳಿಗೆ ಅಕಾರ ನೀಡಲಾಗಿದೆ ಇದರಿಂದ ಎಚ್ಚರದಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಸಭೆಯಲ್ಲಿ ತಹಸಿಲ್ದಾರ್‌ ಎನ್‌.ಟಿ.ಧರ್ಮೋಜಿರಾವ್‌ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಲೋಕಾಯುಕ್ತ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next