Advertisement

ಮಾನವೀಯತೆಯೇ ಧರ್ಮವಾಗಲಿ

11:17 PM Nov 16, 2019 | mahesh |

ತೀರ್ಪು ಬಂದ 2ನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ. ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋಭಾವದಿಂದ ಸಂಭ್ರಮಿಸಲಾಯಿತು.

Advertisement

ನಮ್ಮ ಧರ್ಮ ಯಾವುದೆಂದರೆ- ಮಾನವಧರ್ಮ ಎನ್ನುವಂತಾಗಬೇಕಿದೆ. ಎಡ ಹಾಗೂ ಬಲ ಸಿದ್ಧಾಂತಗಳಾಚೆಗೆ ನಿನ್ನ ಸಿದ್ಧಾಂತ ಯಾವುದೆಂದರೆ-ಅದು ನನ್ನ ದೇಶದ ಸಂವಿಧಾನ ಹೇಳಿಕೊಡುವ ಸಿದ್ಧಾಂತ ಎನ್ನುವಂಥ ಗುಣ ನಮ್ಮದಾಗಬೇಕಿದೆ!

ನಮ್ಮ ಪೀಳಿಗೆಯ ಸರಿ ಸುಮಾರು ಅರ್ಧಕ್ಕಿಂತ ಹೆಚ್ಚು ಜನರು ರಾಜಕೀಯ ದ್ವೇಷದಾಟದಲ್ಲಿ ಕಿರುಕುಳವನ್ನು ಅನುಭವಿಸುತ್ತಲೇ ಬಂದವರು. ಈ “ಕಿರುಕುಳದ ರಾಜಕೀಯ ಸಿದ್ಧಾಂತ’ವು, ಜಾತಿಯ ಕುಚೇಷ್ಟೆಗಳಿಗೆ, ಧಾರ್ಮಿಕ ದಳ್ಳುರಿಗೆ ಸೇರಿದ್ದು. ಇವೆಲ್ಲವೂ ನಮ್ಮಲ್ಲೇ ಹಲವರನ್ನು ಬಲಿಪಡೆದುಕೊಂಡಾಗಿದೆ. ಈ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರೆಲ್ಲ ರಾಜಕೀಯ ದಾಸರಾಗಿ ಹೋದರು. ಹಾಗಾಗಿ ಚಿಂತನಶೀಲ, ಚೈತನ್ಯಶೀಲ, ಸಹನಾಶೀಲ ರಾಜಕೀಯ ಎನ್ನುವುದು ಇಂದಿನ ಅನಿವಾರ್ಯ ಗಳಲ್ಲೊಂದು.

ಈ ರಾಜಕಾರಣದ ಕುತಂತ್ರ ಮನೋಭಾವವನ್ನು ಕೋರ್ಟಿನ ಕಟಕಟೆಯಲ್ಲಿ ತಂದು ನಿಲ್ಲಿಸಿದರೆ ನ್ಯಾಯ ದೇವತೆಯೂ ಕೂಡ ಒಂದು ಕ್ಷಣ ಆ ಕುತಂತ್ರದ ಆಳವನ್ನು ಅರಿಯಲಾರಳೇನೋ ಅನಿಸುತ್ತದೆ! ಆದರೆ ಈ ಬಾರಿ ಹಾಗಾಗಲಿಲ್ಲ, ಕಾರಣ ಹಲವು ವರುಷಗಳ ರಾಜಕೀಯ ಕುತಂತ್ರಕ್ಕೆ ನ್ಯಾಯದೇವತೆ ಬ್ರೇಕ್‌ ನೀಡಿದ್ದಾಳೆ. ಗಮನಾರ್ಹ ಸಂಗತಿಯೆಂದರೆ, ಅಯೋಧ್ಯೆ ತೀರ್ಪು ಹೊರಬಿದ್ದ ನಂತರದ ದಿನಗಳಲ್ಲಿ ನಮ್ಮೂರಿನ ಬೀದಿಗಳಲ್ಲಿ ನಾನು ಕಂಡದ್ದು, ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದ ನಿರಾಳ ಚಿತ್ರಣಗಳನ್ನು ಮಾತ್ರ!

ವಸುದೈವ ಕುಟುಂಬಕಂ: ರಾಮನೂ ನಮ್ಮವನೇ ರಹೀಮನೂ ನಮ್ಮವನೇ ಎನ್ನುವ ರೀತಿಯಲ್ಲಿ ಇಡೀ ದೇಶ ಒಂದು ಕುಟುಂಬವಾಗಿ ತನ್ನ ಏಕತೆಯ ನಿಲುವನ್ನು ಈ ದಿನಗಳಲ್ಲಿ ಪ್ರದರ್ಶಿಸಿದೆ. ಈ ಏಕತೆಗೆ ರಾಜಕೀಯದ ಕೆಟ್ಟ ದೃಷ್ಟಿ ತಾಗದಿರಲಿ.

Advertisement

ಹಸಿರು ಕೇಸರಿ: ತೀರ್ಪು ಬಂದ ಎರಡನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋ ಭಾವದಿಂದ ಸಂಭ್ರಮಿಸಲಾಯಿತು. ರ್ಯಾಲಿಯಲ್ಲಿ ತೊಡಗಿದ್ದ ಇಬ್ಬರು ಯುವಕರ ಬೈಕ್‌ಗಳಿಗೆ ಕಟ್ಟಿದ್ದ ಕೇಸರಿ, ಹಸಿರು ಧ್ವಜಗಳನ್ನು ನೋಡಿ ಮೈ ರೋಮಾಂಚನವೆನಿಸಿತು. ಇದ್ಯಾವುದನ್ನೂ ಸಹಿಸಲಾಗದ ದುಬುìದ್ಧಿಗಳನ್ನು ಪೈಗಂಬರ್‌-ಶ್ರೀರಾಮನ ಆದರ್ಶಗಳು ಆವರಿಸಿಕೊಂಡು, ಮನುಕುಲವೇ ಧರ್ಮ ಎಂಬುದು ಅರಿವಾಗಲಿ.

ಯಾವ ಧರ್ಮ, ಯಾವ ಸಿದ್ಧಾಂತ?: ನಮ್ಮ ಮನೆ ಹಾಗೂ ನಮ್ಮ ಮನಸ್ಸಿನಿಂದಾಚೆ ಬಂದು ನಿಂತಾಗ ನಮ್ಮ ಧರ್ಮ ಯಾವುದೆಂದರೆ- ಮಾನವಧರ್ಮ ಎನ್ನುವಂತಾ ಗಬೇಕಿದೆ. ಎಡ ಹಾಗೂ ಬಲ ಸಿದ್ಧಾಂತಗಳಾಚೆಗೆ ನಿನ್ನ ಸಿದ್ಧಾಂತ ಯಾವುದೆಂದರೆ-ಅದು ನನ್ನ ದೇಶದ ಸಂವಿಧಾನ ಹೇಳಿಕೊಡುವ ಸಿದ್ಧಾಂತ ಎನ್ನುವಂತಾಗಬೇಕಿದೆ. “ಧರ್ಮ’ ಎಂಬುದು ಮತಬೇಟೆಯ ಪ್ರಮುಖ ಅಸ್ತ್ರಗಳಲ್ಲೊಂದು. ಸವೊìಚ್ಚ ನ್ಯಾಯಾಲಯದ ಒಂದು ತೀರ್ಪು ಈ ದೇಶವನ್ನು ಅಂತಹ ಕಪಿಮುಷ್ಟಿಯಿಂದ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಮುಂಬರುವ ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರುಗಳಿಗೆ ಮಂದಿರ, ಮಸೀದಿ, ಚರ್ಚುಗಳನ್ನು ಹೊರತುಪಡಿಸಿ ಓಟ್‌ ಕೇಳಲು ಉಳಿಯಬೇಕಾದ ವಿಷಯ ಯಾವುದಯ್ಯ ಎಂದರೆ ರಾಷ್ಟ್ರದ ಅಭಿವೃದ್ಧಿ ಮಾತ್ರ ಎನ್ನುವಂತಾಗಬೇಕು.

ನಮ್ಮೆಲ್ಲರ ದುರ್ದೈವ ನೋಡಿ, ನಮಗೆ ಸುಂದರವಾದ ಬದುಕು ರೂಪಿಸಿಕೊಟ್ಟು, ದಾಸ್ಯದಿಂದಾಚೆ ಕರೆತಂದು ಸ್ವತಂತ್ರವಾಗಿ ಜೀವಿಸಲು ಅನುವು ಮಾಡಿಕೊಟ್ಟ ಹೋರಾಟ ಗಾರರನ್ನೂ ಕೂಡ ಈ ರಾಜಕೀಯ ಸಿದ್ಧಾಂತಗಳು ಬೀದಿಗೆ ತಂದು ನಿಲ್ಲಿಸುತ್ತಿವೆ. ಆ ಕ್ಷಣಕ್ಕೆ ಅವರಿಗೆ ತೋಚಿದ ಹಾಗೆ ಅವರೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದಿದ್ದಾರೆ. ಆದರೆ ಇವತ್ತಿನ ನಮ್ಮ ನಮ್ಮ ಆಲೋಚನೆಗಳಿಗೆ ಅವರ ಹೋರಾಟದ ಪರಿ ಸರಿ ಎನಿಸುತ್ತಿಲ್ಲ ಎಂಬ ಕಾರಣಕ್ಕೆ ಸಾವರ್ಕರ್‌ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದರೆ ಹೇಗೆ? ಟಿಪ್ಪು ಶಹೀದ್‌ ಅಲ್ಲ ಎಂದು ದೂರಿದರೆ ಹೇಗೆ? ಅದೆಷ್ಟೋ ಬಾರಿ ಈ ಯಾವ ಆಲೋಚನೆಗಳೂ ನಮ್ಮವಲ್ಲ ಎಂದೂ ನಿಮಗೂ ಅನಿಸಿದ್ದಿರಬಹುದು. ಹೌದು, ಅವ್ಯಾವೂ ನಮ್ಮಲ್ಲಿ ಜನ್ಮ ತಳಿದವುಗಳಲ್ಲ. ಬದಲಾಗಿ ಈ ರಾಜ ಕೀಯ ವ್ಯವಸ್ಥೆ ನಮ್ಮೊಳಗೆ ಬಲವಂತ ದಿಂದ ತುರುಕಿದ್ದು ಅಷ್ಟೆ. ಸಮೂಹ ಸನ್ನಿಗೆ ಒಳಗಾಗದೇ ಪ್ರಬುದ್ಧ ನಡತೆಯನ್ನು ನಾವು ಪ್ರದರ್ಶಿಸಬೇಕಿದೆ. ಆಗ ಮಾತ್ರ, “”ಸಿಲುಕದಿರೈ ಮತವೆಂಬ ಮೋಹಜ್ಞಾನಕ್ಕೆ/ ಮತಿಯಿಂದ ದುಡಿಯಿರೈ ಲೋಕ ಹಿತಕೆ/ ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ/ ಓ ಬನ್ನಿ ಸೋದರರೇ, ವಿಶ್ವ ಪಥಕೆ” ಎಂಬ ಕುವೆಂಪು ಅವರ ಮಾತುಗಳು ಜೀವಂತವಾಗುತ್ತವೆ!

– ಉಮರ್‌ ಫಾರೂಕ್‌ ಮೀರಾನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next