ಉಡುಪಿ: ದೇಶದಲ್ಲಿ ಜನಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು, ಅದಕ್ಕೆ ಬೇಕಾದ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಮಾನವ ಸಂಪನ್ಮೂಲವನ್ನು ಸಮರ್ಪಕ ರೀತಿಯಲ್ಲಿ ಸದ್ಭಳಿಕೆ ಮಾಡಲು ಆಡಳಿತ ವರ್ಗ ಚಿಂತಿಸಬೇಕಿದೆ
ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಬಿ. ರಾಜೀವ್ ಶೆಟ್ಟಿ ಹೇಳಿದರು.
ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಹೆನ್ರಿ ಡ್ಯುನಾಂಟ್ ಹಾಲ್ನಲ್ಲಿ ಡಾ| ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಥಮ ಚಿಕಿತ್ಸಾ ತರಬೇತಿ ಮತ್ತು ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಹೆಚ್ಚುತ್ತಿದ್ದು, ಅದರಲ್ಲೂ ಹೆಚ್ಚಾಗಿ ಯುವಕರೇ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ವಿದ್ಯಾಭ್ಯಾಸದ ಅವಧಿದಲ್ಲಿÉಯೇ ಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ತರಬೇತಿ ನೀಡಬೇಕು. ಸದ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಒನ್ಲೈನ್ ಮೂಲಕ ರಾಜ್ಯದಲ್ಲಿ 7 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡುವ ಕಾರ್ಯಕ್ರಮ ಪ್ರಾರಂಭಿಸಿದೆ. ಕಾಲೇಜಿನ ಪ್ರಾಂಶುಪಾಲರು ಸದುಪಯೋಗ ಪಡಿಸಿಕೊಳ್ಳಲಿ ಎಂದು ಅವರು ವಿನಂತಿಸಿದರು.
ಡಾ| ಅಶೋಕ್ ಕುಮಾರ್ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು. ಡಾ| ಜಿ. ಶಂಕರ್ ಮಹಿಳಾ ಪ್ರ. ದರ್ಜೆ ಕಾಲೇಜು ಅಜ್ಜರಕಾಡಿನ ಪ್ರಾಂಶುಪಾಲ ಪ್ರೊ| ಜಗದೀಶ್ ರಾವ್ ಉಪಸ್ಥಿತರಿದ್ದರು.
ಡಾ| ರಾಮಚಂದ್ರ ಕಾಮತ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಿದರು. ಯುವ ರೆಡ್ ಕ್ರಾಸ್ ಕೋ-ಆರ್ಡಿನೇಟರ್ ಶೋಭಾ ಸ್ವಾಗತಿಸಿದರು. ಜನಾರ್ಧನ್ ವಂದಿಸಿದರು. ಡಾ| ಅರವಿಂದ ನಾಯಕ್ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.