Advertisement

ಆರ್‌ಬಿಐ ಮೀಸಲು ನಿಧಿ ಬಳಕೆಯಲ್ಲಿ ವಿವೇಚನೆಯಿರಲಿ

01:03 AM Aug 29, 2019 | mahesh |

ಆರ್ಥಿಕ ಹಿಂಜರಿತವನ್ನು ತಡೆಯಲು ಸಮರೋಪಾದಿಯಲ್ಲಿ ಕಾರ್ಯನಿರತವಾಗಿರುವ ಸರಕಾರ ಈ ನಿಟ್ಟಿನಲ್ಲಿ ಆರ್‌ಬಿಐ ಮೀಸಲು ನಿಧಿಯಿಂದ 1.76 ಲಕ್ಷ ಕೋ. ರೂ. ಪಡೆಯಲು ಮುಂದಾಗಿರುವ ಕ್ರಮ ವ್ಯಾಪಕ ಟೀಕೆ ಮತ್ತು ಕಳವಳಕ್ಕೆ ಗುರಿಯಾಗಿದೆ. ಆರ್‌ಬಿಐಯ ಮಾಜಿ ಗವರ್ನರ್‌ ಬಿಮಲ್ ಜಲನ್‌ ನೇತೃತ್ವದ ಸಮಿತಿ ಮಾಡಿದ ಶಿಫಾರಸಿನಂತೆ ಸರಕಾರಕ್ಕೆ 1.76 ಲಕ್ಷ ಕೋ. ರೂ. ವರ್ಗಾವಣೆ ಮಾಡಲು ಸೋಮವಾರ ಆರ್‌ಬಿಐ ನಿರ್ಧರಿಸಿದೆ. ವಿಪಕ್ಷಗಳು ಇದನ್ನು ಆರ್‌ಬಿಐ ಮೀಸಲು ನಿಧಿಗೆ ಹಾಕಿರುವ ಕನ್ನ ಎಂದು ಬಣ್ಣಿಸಿವೆಯಾದರೂ ಇದು ರಾಜಕೀಯ ಹಿನ್ನೆಲೆಯ ಟೀಕೆ ಎಂದು ಸಮಾಧಾನಪಟ್ಟುಕೊಳ್ಳಬಹುದು. ಆದರೆ ಆರ್ಥಿಕ ತಜ್ಞರಲ್ಲೂ ಸರಕಾರ ಆರ್‌ಬಿಐ ಮೀಸಲು ನಿಧಿಯಿಂದ ಇಷ್ಟೊಂದು ಭಾರೀ ಮೊತ್ತವನ್ನು ಪಡೆಯುತ್ತಿರುವುದಕ್ಕೆ ಒಮ್ಮತವಿಲ್ಲ. ಬಹುತೇಕ ತಜ್ಞರು ಆರ್ಥಿಕ ಕುಸಿತಕ್ಕೆ ಇಂಥ ತಕ್ಷಣ ಶಮನ ನೀಡುವ ಮದ್ದು ಕುಡಿಸುವುದರಿಂದ ಯಾವ ಲಾಭವೂ ಇಲ್ಲ. ಇದು ಕ್ಷಣಿಕ ಪರಿಹಾರವಾಗಬಹುದಷ್ಟೆ. ನಮ್ಮ ಆರ್ಥಿಕತೆಗೆ ಬೇಕಿರುವುದು ಶಾಶ್ವತ ಪರಿಹಾರ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

Advertisement

ಸರಕಾರ ಆರ್‌ಬಿಐ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂ. ಪಡೆಯುತ್ತಿದೆ ಎನ್ನುವುದು ನಿಜ. ಆದರೆ ಇದು ಈ ವ್ಯವಹಾರದ ಪೂರ್ಣಚಿತ್ರಣವಲ್ಲ. ನಿಜ ಏನೆಂದರೆ 1.76 ಲಕ್ಷ ಕೋ. ರೂ.ಯಲ್ಲಿ 1.23 ಲಕ್ಷ ಕೋ. ರೂ. ಆರ್‌ಬಿಐ ವಾರ್ಷಿಕವಾಗಿ ಸರಕಾರಕ್ಕೆ ಪಾವತಿ ಮಾಡಬೇಕಿರುವ ಡಿವಿಡೆಂಡ್‌. ಉಳಿದ 52.6 ಸಾವಿರ ಕೋಟಿ ಮಾತ್ರ ಏಕಕಾಲಕ್ಕೆ ಪಾವತಿಯಾಗುವ ಮೊತ್ತ. ಅದಾಗ್ಯೂ ಇದು ಈ ಹಿಂದಿನ ವರ್ಷಗಳ ಪಾವತಿಗಿಂತ ದೊಡ್ಡ ಮೊತ್ತ. ಆರ್‌ಬಿಐ ಮೀಸಲು ನಿಧಿ ಎನ್ನುವುದು ಒಂದು ರೀತಿಯಲ್ಲಿ ಆಪದ್ಧನವಿದ್ದಂತೆ. ಚಿಕ್ಕಪುಟ್ಟ ಕಾರಣಗಳಿಗೆಲ್ಲ ಈ ಹಣವನ್ನು ಖರ್ಚು ಮಾಡುವುದು ಅಪಾಯಕಾರಿ ಎನ್ನುವುದು ಈ ನಿರ್ಧಾರವನ್ನು ವಿರೋಧಿಸುತ್ತಿರುವವರು ಹೇಳುವ ಕಾರಣ.

ನರೇಂದ್ರ ಮೋದಿ ಸರಕಾರ ಆರ್‌ಬಿಐಯಿಂದ ಈ ರೀತಿಯ ದೊಡ್ಡ ಮೊತ್ತದ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದಿನ ಗವರ್ನರ್‌ಗಳಾದ ರಘುರಾಮ್‌ ರಾಜನ್‌ ಮತ್ತು ಊರ್ಜಿತ್‌ ಪಟೇಲ್ ರಾಜೀನಾಮೆಗೆ ಸರಕಾರದ ಈ ಅತಿಯಾದ ಬೇಡಿಕೆಯೇ ಕಾರಣ ಎನ್ನಲಾಗುತ್ತಿದೆ. ಇದು ನಿಜವೇ ಆಗಿದ್ದರೆ ಆರ್ಥಿಕತೆ ಎಲ್ಲೋ ಹಳಿ ತಪ್ಪುತ್ತಿದೆ ಎಂದೇ ಅರ್ಥ. ಈ ಕುರಿತಾಗಿರುವ ಅನುಮಾನಗಳನ್ನು ನಿವಾರಿ ಸುವುದು ಸರಕಾರದ ಕರ್ತವ್ಯ. ಆರ್‌ಬಿಐ ಬ್ಯಾಲನ್ಸ್‌ ಶೀಟ್ ಸದೃಢವಾಗಿ ರುವುದರಿಂದ ಸದ್ಯ ವರ್ಗಾವಣೆ ಮಾಡಲೊಪ್ಪಿರುವ ಮೊತ್ತದ ಬಗ್ಗೆ ಹೆಚ್ಚಿನ ಚಿಂತೆ ಮಾಡುವ ಅಗತ್ಯವಿಲ್ಲ ಎನ್ನುವ ವಿವರಣೆಯನ್ನು ಸರಕಾರ ನೀಡಿದೆ.

ಜಿಎಸ್‌ಟಿ ಮತ್ತು ಆದಾಯ ಕರ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗದೇ ಇರುವುದು ಸರಕಾರದ ಹಣಕಾಸು ಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ವಾಹನೋದ್ಯಮ, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಔದ್ಯೋಗಿಕ ವಲಯಗಳಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಪರಿಣಾಮ ಈಗ ಗೋಚರಿಸಲಾರಂಭಿಸಿದೆ. ಇದರ ಜತೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಎನ್‌ಪಿಎ ಸಂಕಷ್ಟದಿಂದ ಪಾರು ಮಾಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ 70,000 ಕೋ. ರೂ. ನೆರವು ಘೋಷಿಸಿದ್ದಾರೆ. ಇದಕ್ಕೆಲ್ಲ ಹಣ ಹೊಂದಿಸಲು ಸರಕಾರ ಆರ್‌ಬಿಐ ಮೀಸಲು ನಿಧಿಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.

ಆರ್ಥಿಕ ಹಿಂಜರಿತದಿಂದಾಗಿ ಗ್ರಾಹಕ ಉತ್ಪನ್ನಗಳ ಮಾರುಕಟ್ಟೆ ಕುಸಿದಿದೆ ಹಾಗೂ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗಿದೆ. ಈ ಎರಡು ವಲಯ ಗಳನ್ನು ಉತ್ತೇಜಿಸುವ ಸಲುವಾಗಿ ನಿರ್ಮಲಾ ಸೀತಾರಾಮನ್‌ ಹಲವು ಉಪಕ್ರಮಗಳನ್ನು ಪ್ರಕಟಿಸಿದ್ದಾರೆ. ಆದರೆ ಆರ್‌ಬಿಐಯಿಂದ ಪಡೆದ ಹಣವನ್ನು ಈ ಉದ್ದೇಶಗಳಿಗಾಗಿ ಬಳಸುವುದು ಸರಿಯಲ್ಲ ಎಂದು ಹಲವು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಆರ್‌ಬಿಐ ಹಣವನ್ನು ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಳಸುವ ಬದಲು ಬಂಡವಾಳ ಮರುಪೂರಣದ ಮೂಲಕ ಪ್ರಮುಖ ವಲಯಗಳು ಚೇತರಿಸಿಕೊಳ್ಳಲು ಅನುಕೂಲವಾಗುವಂತೆ ವಿನಿಯೋಗಿಸಬೇಕೆಂಬ ತಜ್ಞರ ಸಲಹೆಗಳನ್ನು ಸರಕಾರ ಕೇಳಿಸಿಕೊಳ್ಳಬೇಕು. ಆರ್‌ಬಿಐ ಕೆಲಸ ಹಣಕಾಸು ನೀತಿ ರೂಪಿಸುವುದು. ಹಣಕಾಸು ವ್ಯವಹಾರಗಳನ್ನು ನಿಭಾಯಿಸಿಕೊಂಡು ಹೋಗುವ ಕೆಲಸ ಸರಕಾರದ್ದು. ಇದರಲ್ಲಿ ಎಡವಿದರೆ ಮುಂದಿನ ದಿನಗಳಲ್ಲಿ ಕಷ್ಟ ವಾಗಬಹುದು. ಮೀಸಲು ನಿಧಿಗೆ ಕೈ ಹಾಕುವುದು ಅಪರೂಪದ ಕ್ರಮವಾಗಬೇಕೆ ಹೊರತು ಅಭ್ಯಾಸವಾಗಬಾರದು ಎಂಬ ಎಚ್ಚರಿಕೆ ಇರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next