Advertisement

ಅಪರಿಚಿತರೊಂದಿಗೆ ಜಾಗೃತರಾಗಿರಿ: ದೊಡ್ಡಕುರುಬರ

05:34 PM Jun 17, 2022 | Team Udayavani |

ಹಾನಗಲ್ಲ: ಅಪರಿಚಿತರೊಂದಿಗೆ ಜಾಗೃತವಾಗಿದ್ದು, ಹಣ ಹಾಗೂ ಗೌರವ ಉಳಿಸಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ಹೆಚ್ಚಾಗುತ್ತಿವೆ ಎಂದು ಹಾವೇರಿ ಜಿಲ್ಲಾ ಸೈಬರ್‌ ಕ್ರೈಂ ಪೇದೆ ಆನಂದ ದೊಡ್ಡಕುರುಬರ ತಿಳಿಸಿದರು.

Advertisement

ತಾಲೂಕಿನ ಅಕ್ಕಿಆಲೂರು ಸಿ.ಜಿ.ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಸೈಬರ್‌ ಕ್ರೈಂ ವಿಭಾಗದ ಅಧಿಕಾರಿಗಳು ಆಯೋಜಿಸಿದ್ದ ಸೈಬರ್‌ ಕ್ರೈಂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ಯಾಂಕ್‌ಗಳಲ್ಲಿ ಆನ್‌ಲೈನ್‌ ಮೂಲಕ ವ್ಯವಹರಿಸುವಾಗ ಎಚ್ಚರಿಕೆ ಇರಲಿ. ಮೊಬೈಲ್‌ ಸಂದೇಶಗಳ ಮೂಲಕ ಅಪರಿಚಿತರು ಹಣಕಾಸು ಹಾಗೂ ಇತರ ಮಾಹಿತಿ ಕೇಳಿದಾಗ ಪ್ರತಿಕ್ರಿಯಿಸುವುದು ಒಳ್ಳೆಯದಲ್ಲ. ಬ್ಯಾಂಕ್‌ಗಳ ಹೆಸರಿನಲ್ಲಿ ಮೊಬೈಲ್‌ ಮೂಲಕ ಮಾಹಿತಿ ಕೇಳಿದರೆ ನೇರವಾಗಿ ತಮಗೆ ಸಂಬಂಧಿಸಿದ ಬ್ಯಾಂಕ್‌ ಗಳನ್ನು ಸಂಪರ್ಕಿಸಬೇಕು. ಹೀಗೆ ಮಾಡದೆ ಮೊಬೈಲ್‌ ಮೂಲಕ ಕೇಳಿದ ಹಣಕಾಸು ಹಾಗೂ ಇತರೇ ಮಾಹಿತಿ ನೀಡಿ ಲಕ್ಷಾಂತರ ರೂ. ನಷ್ಟ ಮಾಡಿಕೊಂಡವರಿದ್ದಾರೆ. ಹೀಗಾಗಿ, ಅಪರಿಚಿತರೊಂದಿಗೆ ವ್ಯವಹರಿಸುವಾಗ ಮೈಮರೆಯಬಾರದು ಎಂದರು.

ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮಾಹಿತಿಗಳನ್ನು ಹಾಕುವುದು. ಕೋಮು ಸಂದೇಶಗಳನ್ನು ಬಿಡುಗಡೆ ಮಾಡುವುದು ಬಹುದೊಡ್ಡ ಅಪರಾಧವಾಗುತ್ತದೆ. ಇದರಿಂದ ಸಾಮಾಜಿಕ ಗೊಂದಲಗಳುಂಟಾಗಿ ಇಂತಹ ಸಂದೇಶ ಹಾಕಿದವರು ಪೊಲೀಸ್‌ ಬಂಧನಕ್ಕೆ ಒಳಗಾಗಿ ವಿಚಾರಣೆ ಎದುರಿಸಬೇಕಾದೀತು. ಇಂತಹ ವಿಷಯದಲ್ಲಿ ಬಹುತೇಕ ಯುವಕರು ಅಪರಾಧಿಗಳಾಗುತ್ತಿರುವುದು ವಿಷಾದದ ಸಂಗತಿ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಮಾಹಿತಿಗಳಿಗೆ ಮುಂದಾಗದೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಂ. ಎನ.ಕಡ್ಡಿಪುಡಿ, ಸೈಬರ್‌ ಕ್ರೈಂ ವಿಭಾಗ ಯುವಕರು ಹಾಗೂ ಸಾರ್ವಜನಿಕರು ಅಪರ  ಕೃತ್ಯಗಳಲ್ಲಿ ಭಾಗಿಯಾಗದಂತೆ ಅರಿವು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ವಿಶೇಷವಾಗಿ ಮೊಬೈಲ್‌ ಬಳಸುತ್ತಿರುವ ಯುವಕರಿಗೆ ಈ ಸಂದೇಶ ಅತ್ಯವಶ್ಯಕವಾಗಿದೆ. ಇಂತಹ ಅತ್ಯುತ್ತಮ ಮಾಹಿತಿಯನ್ನು ವಿದ್ಯಾರ್ಥಿಗಳು ತಮ್ಮ ಗ್ರಾಮಗಳ ಜನರಿಗೆ ಹೇಳಿ ಜಾಗೃತಿ ಮೂಡಿಸಬೇಕೆಂದರು.

ಕಾರ್ಯಕ್ರಮದಲ್ಲಿ ಪ್ರೊ.ದಿಲೀಪ ಕಂಬಳಿ, ಪ್ರೊ.ರಾಜಕುಮಾರ, ಪ್ರೊ.ಯಮುನಾ ಕೋನೇಸರ, ಪ್ರೊ.ಬಸವಣ್ಣ, ಪ್ರೊ.ಬಿ.ಆರ್‌.ಗಿರಿಯಪ್ಪನವರ, ಪ್ರೊ. ಎಚ್‌.ಡಿ.ಕೆಂಗೊಂಡ, ಪ್ರೊ.ಮಂಜುನಾಥ ಬಾರ್ಕಿ, ಪ್ರೊ. ಎಸ್‌.ಎಫ್‌.ಲಮಾಣಿ, ಪೊಲೀಸ್‌ ಪೇದೆಗಳಾದ ಮಂಜುನಾಥ ಎರೆಸೀಮಿ, ಶಿವಾನಂದ ಜಾಡರ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next