Advertisement

ಆಡುವ ಮಕ್ಕಳ ಮೇಲಿರಲಿ ನಿಗಾ

10:29 AM Apr 06, 2019 | Naveen |

ಕಡಬ : ಮನುಷ್ಯನ ಬದುಕಿನಲ್ಲಿ ಬಾಲ್ಯ ಎನ್ನುವುದು ಅತ್ಯಂತ
ಸುಂದರವಾದ ಅನುಭವ. ಯಾವುದೇ ಇತಿಮಿತಿಗಳಿಲ್ಲದೆ ಸ್ವತ್ಛಂದವಾಗಿ ಪ್ರಕೃತಿಯೊಂದಿಗೆ ಬೆರೆತು ಆಟವಾಡುವ ಆ ರಸ ನಿಮಿಷಗಳನ್ನು ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ಆದರೆ ಮಕ್ಕಳ ಬಾಲ್ಯದ ಕುತೂಹಲಗಳು, ರಜೆಯ ಮಜಾ, ಸಾಹಸದ ಹುಮ್ಮಸ್ಸು ಇತ್ಯಾದಿಗಳು ಕೆಲವು ಸಂದರ್ಭಗಳಲ್ಲಿ ಅಪಾಯಕ್ಕೆ ಎಡೆಮಾಡಿಕೊಡುತ್ತಿವೆ. ಮಕ್ಕಳಾಟ ಪ್ರಾಣಕ್ಕೆ ಎರವಾಗದಂತೆ ನೋಡಿಕೊಳ್ಳಬೇಕಿರುವುದು ಹೆತ್ತವರ ಆದ್ಯ ಕರ್ತವ್ಯ.

Advertisement

ಮಕ್ಕಳಿಗೆ ರಜಾ ಸಮಯವೆಂದರೆ ಎಲ್ಲಿಲ್ಲದ ಖುಷಿ. ಪರೀಕ್ಷೆಗಳ ಒತ್ತಡ ಮುಗಿದು, ಶಿಕ್ಷಕರ ಕಟ್ಟುನಿಟ್ಟಿನ ತರಗತಿ ಕೊಠಡಿಯ ಬಂಧನವಿಲ್ಲದ ರಜೆಯನ್ನು ಎದುರುಗೊಳ್ಳಲು ಮಕ್ಕಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಹೆತ್ತವರಿಗೆ ಮಾತ್ರ ರಜಾಕಾಲದಲ್ಲಿ ಮಕ್ಕಳನ್ನು ಸಂಬಾಳಿಸುವುದೇ ದೊಡ್ಡ ತಲೆನೋವು. ಹಾಗಂತ ಮಕ್ಕಳನ್ನು ನಿರ್ಬಂಧಿಸುವುದೂ ಸಾಧ್ಯವಿಲ್ಲದ ಮಾತು. ಇಡೀ ವರ್ಷ ಓದುವುದು, ಬರೆಯುವುದು, ಮನೆಪಾಠ ಇತ್ಯಾದಿ ಒತ್ತಡಗಳಲ್ಲಿ ಮುಳುಗಿರುವ ಮಕ್ಕಳ ಮನಸ್ಸಿಗೆ ಮುದ ನೀಡುವ ಈ ರಜೆಯ ಸಂತೋಷದ ಕ್ಷಣಗಳನ್ನು ಅವರಿಂದ ಕಸಿದುಕೊಂಡರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಮಕ್ಕಳಿಗೆ ಪ್ರಕೃತಿಯೊಂದಿಗೆ ಒಡನಾಡಲು, ಸಂಬಂಧಿಕರ
ಮನೆಗಳಿಗೆ ತೆರಳಿ ಕೌಟುಂಬಿಕ ಮೌಲ್ಯಗಳು ಹಾಗೂ ಮಾನವೀಯ
ಸಂಬಂಧಗಳ ಬಗ್ಗೆ ತಿಳಿದುಕೊಳ್ಳಲು ಇದು ಸುವರ್ಣಾವಕಾಶ. ಆದರೆ ರಜಾ ಕಾಲದಲ್ಲಿಯೂ ಬೇಸಗೆ ಶಿಬಿರ, ಟ್ಯೂಷನ್‌ ಎಂದು ಅವರ ಖುಷಿಯನ್ನು ಕಸಿದುಕೊಳ್ಳುವುದೇಕೆ? ಶಿಕ್ಷಣ ತಜ್ಞರು ಹೇಳುವ ಪ್ರಕಾರ, ಮಕ್ಕಳಿಗೆ ರಜೆಯನ್ನು ಅನುಭವಿಸಲು ಅವಕಾಶ ಸಿಗಬೇಕು.

ಬಾಲ್ಯದ ಸಂತೋಷದ ಕ್ಷಣಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಆದರೆ, ರಜೆಯ ಮಜವೇ ಈ ಮಕ್ಕಳಿಗೆ ಅಪಾಯಕಾರಿಯಾಗದಂತೆ ಮುನ್ನೆಚ್ಚರಿಗೆ ವಹಿಸುವುದು ಹೆತ್ತವರ
ಬಲುದೊಡ್ಡ ಜವಾಬ್ದಾರಿ. ಎಳೆಯ ಮಕ್ಕಳಿಗೆ ಅಪಾಯ ಇರುವುದು
ನದಿ, ತೊರೆ, ಕೆರೆ ಮುಂತಾದ ಜಲಮೂಲಗಳಿಂದ. ದೊಡ್ಡವರ
ಕಣ್ಗಾವಲು ಇಲ್ಲದೇ ಹೋದರೆ ಇಂತಹ ಸ್ಥಳಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಮೂರು ದಿನಗಳ ಹಿಂದೆ ಪುತ್ತೂರಿನ ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಮಿತ್ತಡ್ಕ ಉಡ್ಡಂಗಳದಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು ನೀರಿನಲ್ಲಿ ಮುಳುಗಿ ಮೂವರು ಪುಟ್ಟ ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಕೊಳ್ತಿಗೆಯಲ್ಲೂ
ನೀರು ಸಂಗ್ರಹ ತೊಟ್ಟಿಗೆ ಬಿದ್ದು ಮಕ್ಕಳು ಅಸುನೀಗಿದ್ದರು. ಹೆತ್ತವರ ಕಣ್ತಪ್ಪಿಸಿ ಆಡಲು ಹೋಗುವ ಮಕ್ಕಳು ಅಪಾಯ ತಂದುಕೊಳ್ಳುತ್ತಾರೆ. ಇಂತಹ ಚಟುವಟಿಕೆಗೆ ತಡೆಯೊಡ್ಡುವುದು
ಸಾಧ್ಯವಿಲ್ಲದಿದ್ದರೂ ಅವರ ಚಟುವಟಿಕೆ ಮೇಲೆ ನಿಗಾ ಇರಿಸುವುದು ಅಗತ್ಯ. ಹೆತ್ತವರು ಜಾಗೃತರಾದರೆ ಮಾತ್ರ ಇಂತಹ ದುರ್ಘ‌ಟನೆಗಳನ್ನು ತಡೆಯಬಹುದು.

ಆತ್ಮರಕ್ಷಣೆ ಕಲೆ ಕಲಿಸಿ
ಬೇಸಗೆ ರಜೆಯ ವೇಳೆಯಲ್ಲಿ ಮಕ್ಕಳನ್ನು ಹಿರಿಯರ ಉಸ್ತುವಾರಿಯಲ್ಲಿಯೇ ಆಟ ಆಡುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡುವುದು ಕೂಡ ಅಪಾಯಕ್ಕೆ ಆಹ್ವಾನ ನೀಡಿದಂತೆ. ನದಿ, ತೊರೆ, ಕೆರೆ, ವಾಹನ ಇತ್ಯಾದಿಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಅಪಾಯ ಎದುರಾಗುವ ವೇಳೆ ಆತ್ಮರಕ್ಷಣೆಯ ಕಲೆ ಅಥವಾ ಇತರರನ್ನು ರಕ್ಷಿಸುವ ಕುರಿತು ಪ್ರಾಥಮಿಕ ಜ್ಞಾನ ಮಕ್ಕಳಲ್ಲಿ ಇರಬೇಕು. ಅದನ್ನು ಹೇಳಿಕೊಡುವುದು ಶಿಕ್ಷಕರು ಮತ್ತು ಹೆತ್ತವರ ಕರ್ತವ್ಯ.
-ಟಿ. ನಾರಾಯಣ ಭಟ್‌ ರಾಮಕುಂಜ
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರು

Advertisement

ಕಣ್ಗಾವಲು ಇರಬೇಕು
ಅತೀ ಹೆಚ್ಚು ಪ್ರಕರಣಗಳಲ್ಲಿ ಮಕ್ಕಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾಯುತ್ತಿರುವುದು ವರದಿಯಾಗುತ್ತಿದೆ. ರಜಾ ಕಾಲದಲ್ಲಂತೂ ಇಂತಹ ಪ್ರಕರಣಗಳು ಹೆಚ್ಚು. ಮಕ್ಕಳಿಗೆ ಪ್ರಕೃತಿಯ ಕುರಿತು ಹೆಚ್ಚು ಆಸಕ್ತಿ. ಅದರಲ್ಲಿಯೂ ನದಿ, ತೊರೆ ಮುಂತಾದ ನೀರಿನ ಜಾಗಗಳ ಬಗ್ಗೆ ಕುತೂಹಲ ಹೆಚ್ಚು. ಸೆಕೆಯ ಕಾಲವಾಗಿರುವುದರಿಂದ ಮಕ್ಕಳು ನೀರಿಗಿಳಿಯಲು ಮುಂದಾಗುವುದು ಸಹಜ. ರಜೆಯ ಸಮಯದಲ್ಲಿ ಮಕ್ಕಳ ಜತೆಗೆ ಹಿರಿಯರು ಇರುವುದು ಅತ್ಯಗತ್ಯ. ಅಪಾಯ ಸಂಭವಿಸಬಹುದಾದ ಸ್ಥಳಗಳಲ್ಲಿ ಹಿರಿಯರ ಕಣ್ಗಾವಲು ಇಲ್ಲದೇ ಮಕ್ಕಳನ್ನು ಮಾತ್ರ ಆಟವಾಡಲು ಬಿಡಲೇ ಬಾರದು.
ಡಾ| ಸಿ.ಕೆ. ಶಾಸ್ತ್ರೀ
ಹಿರಿಯ ವೈದ್ಯರು, ಕಡಬ

ನಾಗರಾಜ್‌ ಎನ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next