Advertisement

ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಿ

07:17 PM Oct 24, 2020 | Suhan S |

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೋವಿಡ್‌-19 ಸೋಂಕು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್‌ ಜತೆಗೆ ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆಯೂ ಗಮನಹರಿಸಿ ಎಂದು ಜಿಪಂ ಸಿಇಒ ಟಿ.ಯೋಗೇಶ ತಿಳಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಿಕ್ಷಣ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮನ್ವಯ ಸಮಿತಿಸಭೆಯಲ್ಲಿ ಕೋವಿಡ್‌-19 ಬಗ್ಗೆ ಪ್ರತಿಜ್ಞಾ ವಿಧಿ  ಬೋಧಿಸಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌-19 ಸೋಂಕಿತ ರೋಗಿಗಳು ದಾಖಲಾಗಿರುವುದರಿಂದ ಸೋಂಕು ಮಕ್ಕಳಿಗೆ ತಗುಲದಂತೆ ಸಮೀಪದ ಆಸ್ಪತ್ರೆಗಳಲ್ಲಿ ಅನುಕೂಲವಾಗುವಂತೆ ಅಪೌಷ್ಟಿಕತೆ ಇರುವ ಮಕ್ಕಳನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅವರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ವಯ ಕೋವಿಡ್‌-19 ನಿಯಂತ್ರಣದಲ್ಲಿಡಲು ಕಾರ್ಯಕ್ರಮಪ್ರಚಾರದಲ್ಲಿ ಪಾಲ್ಗೊಂಡು ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್‌-19 ಸೋಂಕು ಹತೋಟಿಗೆ ಕೈ ಜೋಡಿಸಬೇಕು ಎಂದರು.

ಡಿಎಚ್‌ಒ ಡಾ.ಸಿ.ಎಲ್‌ .ಫಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ ದಿನದ 24 ಗಂಟೆಯೂ ಸೇವೆ ನೀಡುವ ಸಮೀಪದ ಆಸ್ಪತ್ರೆಗಳಲ್ಲಿ ಅಪೌಷ್ಟಿಕತೆ ಇರುವ ಮಕ್ಕಳನ್ನು ನೋಂದಾಯಿಸಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಮಾಡುವುದಾಗಿ ಸಭೆಗೆ ಮಾಹಿತಿ ನೀಡಿದರು.

ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿ ಕಾರಿ ಡಾ.ತುಳಸಿರಂಗನಾಥ್‌, ಡಾ.ರಂಗನಾಥ್‌, ಡಾ.ರೇಣುಪ್ರಸಾದ್‌, ಡಾ.ಚಂದ್ರಶೇಖರ್‌ ಕಂಬಾಳಿಮಠ, ಡಾ.ಬಿ.ಜಯಮ್ಮ, ಮತ್ತಿತರರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next