Advertisement

ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗರೂಕರಾಗಿ: ಜಿಲ್ಲಾಧಿಕಾರಿ ಕರೆ

04:10 AM May 30, 2018 | Karthik A |

ಮಡಿಕೇರಿ: ನಗರಸಭೆ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬರೆ ಕೆಳಗೆ ವಾಸಮಾಡುತ್ತಿರುವ ಜನರಿಗೆ ಮುನ್ನೆಚ್ಚರಿಕೆ ನೀಡಿ ತಾತ್ಕಾಲಿಕ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಉಂಟಾಗುವ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಹಾಗೂ ಆ ಸಂದರ್ಭದಲ್ಲಿ ಹರಡುವ ಕಾಯಿಲೆಗಳಿಗೆ ಔಷಧಗಳನ್ನು ಮೊದಲೇ ದಾಸ್ತಾನು ಇರಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 

Advertisement

ನಗರ, ಪಟ್ಟಣ ಹಾಗೂ ಗ್ರಾ.ಪಂ.ಮಟ್ಟದಲ್ಲಿ ಶುಚಿತ್ವ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಪಿ.ಐ. ಶ್ರೀವಿದ್ಯಾ ಅವರು ನಿರ್ದೇಶನ ನೀಡಿದರು. ಮಳೆ ಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಅಪಾಯ ಸಂಭವಿಸಬಹುದಾದ ಮೂನ್ಸೂಚನೆಯನ್ನು ಪ್ರತಿ ದಿನ ದೂರವಾಣಿ ಮುಖಾಂತರ ಮಾಹಿತಿ ನೀಡಬೇಕು. ಜಲಾವೃತ ಸ್ಥಳವಾದ ಭಾಗಮಂಡಲ ಹಾಗೂ ದುಬಾರೆಯಲ್ಲಿ ಯಂತ್ರ ಚಾಲಿತ ದೋಣಿಗಳನ್ನು ನುರಿತ ಚಾಲಕರ ನೇಮಕಾತಿಯೊಂದಿಗೆ ಬಳಸಲು ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.   

ಅಗತ್ಯ ಬೋಟ್‌ ವ್ಯವಸ್ಥೆ, ಮುಳುಗು ತಜ್ಞರ ಪಟ್ಟಿ ಮತ್ತಿತರವನ್ನು ಗೃಹ ರಕ್ಷಕದಳ ಇಲಾಖೆಯವರು ಸಿದ್ಧತೆ ಮಾಡಿಕೊಳ್ಳುವಂತೆ ಗೃಹ ರಕ್ಷಕದಳದ ಅಧಿಕಾರಿಗೆ ತಿಳಿಸಲಾಯಿತು. ತುರ್ತು ಸಂದರ್ಭದಲ್ಲಿ ಬೇಕಾಗಬಹುದಾದಂತಹ ಸಾಧನ ಸಲಕರಣೆಗಳು ತಾಲೂಕು ಕೇಂದ್ರಗಳಲ್ಲಿ ಹಾಗೂ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್‌ ಹಂತದಲ್ಲೂ ಇರಬೇಕಾಗುತ್ತದೆ ಎಂದರು. ಮಳೆಗಾಲದಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಾಗ ಮಾಹಿತಿಯು  ತತ್‌ ಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದು ಕಷ್ಟವಾಗುವುದರಿಂದ ನಗರಸಭೆ ಕಚೇರಿ ಹಾಗೂ ಪ್ರತಿ ತಾಲೂಕು ಕಚೇರಿಗಳಿಗೆ ಒಂದರಂತೆ ಮತ್ತು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್‌ ರೂಮ್‌ ಗಳಲ್ಲಿ ವಯರ್‌ ಲೆಸ್‌ ಬೇಸ್‌ಸೆಟ್‌ ನೀಡಿದ್ದು ಅದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. ಅತಿವೃಷ್ಟಿಯಿಂದ ಉಂಟಾಗುವ ಹಾನಿ ಸಂಬಂಧ ತತ್‌ಕ್ಷಣವೇ ವರದಿ ಕಳುಹಿಸಬೇಕು, ಜತೆಗೆ ಒಂದು ವಾರದೊಳಗೆ ಪರಿಹಾರ  ವಿತರಣೆ ಮಾಡಬೇಕು ಎಂದು ಜಿಲಾಧಿಕಾರಿ ವಿದ್ಯಾಧಿಕಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ‘ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ತಹಶೀಲ್ದಾರರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಿಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.  

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಅವರು ಮಾತನಾಡಿ ಭಾಗಮಂಡಲದಲ್ಲಿ ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಪ್ರವಾಹ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಅನಾಹುತಗಳನ್ನು ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ಅವರು ಹೇಳಿದರು. ಭಾಗಮಂಡಲದ ಜೊತೆಗೆ ಅಯ್ಯಂಗೇರಿ, ನಾಪೋಕ್ಲು,   ಕರಡಿಗೋಡು, ದುಬಾರೆ, ಲಕ್ಷ್ಮಣತೀರ್ಥ, ಗುಹ್ಯ, ಕಣಿವೆ, ನೆಲ್ಯಹುದಿಕೇರಿ ಇನ್ನು ಹಲವು ಕಡೆಗಳಲ್ಲಿ ವ್ಯಾಪಕ ಮಳೆ ಬಂದ ಸಂದರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್‌ ಕುಮಾರ್‌ ಅವರು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬರೆ ಕುಸಿತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಇಂತಹ ಪ್ರದೇಶಗಳಲ್ಲಿ ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಮೈಕಲ್‌ ಅವರು ನಿಯಂತ್ರಣ ಕೊಠಡಿಗೆ ನಿಯೋಜಿಸಿರುವ ಸಿಬಂದಿ ಕಡ್ಡಾಯವಾಗಿ ತಮ್ಮ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಸಹಕರಿಸುವಂತೆ ಸಭೆಯ ಗಮನಕ್ಕೆ ತಂದರು.

ಡಿವೈಎಸ್‌ಪಿ ಸುಂದರರಾಜ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ್‌, ಗೃಹ ರಕ್ಷಕದಳದ ಅಧಿಕಾರಿ ಚಂದನ್‌, ಸೆಸ್ಕ್ ಇಇ ಸೋಮಶೇಖರ, ಲೋಕೋಪಯೋಗಿ ಇಲಾಖೆ EE ವಿನಯಕುಮಾರ್‌, ಪೌರಾಯುಕ್ತರಾದ ಬಿ. ಶುಭಾ, ತಹಶೀಲ್ದಾರರಾದ ಶಾರದಾಂಬಾ, ಗೋವಿಂದರಾಜು, ಬಾಡ್ಕರ್‌, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಸುರೇಶ್‌, AEEಗಳಾದ ಇಬ್ರಾಹಿಂ, ಸ್ವಾಮಿ, ಸುರೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆಯ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್‌,  ತಾ.ಪಂ. ಇಒಗಳಾದ ಜೀವನ್‌ ಕುಮಾರ್‌, ಮತ್ತಿತರರು ಪ್ರವಾಹ ಮುನ್ನೆಚ್ಚರಿಕೆ ನಿಭಾಯಿಸುವ ಸಂಬಂಧ ಹಲವು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next