Advertisement

ತಿಂಗಳೊಳಗೆ ಬಿಸಿಸಿಐಗೆ ಹೊಸ ಸಂವಿಧಾನ

06:00 AM Aug 10, 2018 | Team Udayavani |

ಹೊಸದಿಲ್ಲಿ: ಕಳೆದ 2 ವರ್ಷಗಳಿಂದ ಬಿಸಿಸಿಐ ಮತ್ತು ಅದರ ನಿಯೋಜಿತ ಆಡಳಿತಾಧಿಕಾರಿಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಬಿಸಿಸಿಐನ ಸಂವಿಧಾನ ಬದಲಾವಣೆ ಮಾಡಲೇಬೇಕೆಂದು ಸರ್ವೋಚ್ಚ ನ್ಯಾಯಾಲಯ ಗುರುವಾರ ಅಂತಿಮ ಆದೇಶ ನೀಡಿದೆ. 

Advertisement

ಬಿಸಿಸಿಐ ಪಾಲಿಗೆ ಸಮಾಧಾನಕರ ಸಂಗತಿಯೆಂದರೆ, ಅದರ ಕೆಲ ಬೇಡಿಕೆಗಳನ್ನು ನ್ಯಾಯಪೀಠ ಮನ್ನಿಸಿದೆ.2016, ಜು. 18ರಂದು ಸರ್ವೋಚ್ಚ ನ್ಯಾಯಾಲಯ ಲೋಧಾ ಶಿಫಾರಸಿನ ಆಧಾರದ ಮೇಲೆ ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆ ಘೋಷಿಸಿತ್ತು. ಆದರೆ ಲೋಧಾ ಸಮಿತಿಯ 4 ಮುಖ್ಯ ಶಿಫಾರಸುಗಳನ್ನು ಬಿಸಿಸಿಐ ಪದಾಧಿಕಾರಿಗಳು ಹಾಗೂ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಬಲವಾಗಿ ವಿರೋಧಿಸಿದ್ದವು.

ಒಂದು ರಾಜ್ಯಕ್ಕೆ ಒಂದೇ ಮತ, ಒಂದು ಅಧಿಕಾರಾವಧಿ ನಂತರ 3 ವರ್ಷಗಳ ಕಡ್ಡಾಯ ವಿಶ್ರಾಂತಿ, 70 ವರ್ಷ ಮೀರಿದವರಿಗೆ ಅಧಿಕಾರವಿಲ್ಲ, ಒಬ್ಬ ಸದಸ್ಯನಿಗೆ ಒಂದೇ ಹುದ್ದೆ… ಇವನ್ನು ಇಡೀ ದೇಶದಲ್ಲಿ ಬಹುತೇಕ ಕ್ರಿಕೆಟ್‌ ಸಂಸ್ಥೆಗಳು ವಿರೋಧಿಸಿದ್ದವು.

ಒಂದು ರಾಜ್ಯಕ್ಕೆ ಒಂದು ಮತ ರದ್ದು
ಒಂದು ರಾಜ್ಯಕ್ಕೆ ಒಂದೇ ಮತ ಎಂಬ ನೀತಿಯಿಂದ ಕೆಲವು ರಾಜ್ಯಗಳಲ್ಲಿರುವ ಇತರೆ ಕ್ರಿಕೆಟ್‌ ಸಂಸ್ಥೆಗಳು ಇಕ್ಕಟ್ಟಿಗೆ ಸಿಲುಕಿದ್ದವು. ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯಲ್ಲದೇ ಮುಂಬಯಿ, ವಿದರ್ಭ ಎಂಬ ಇನ್ನಿತರ ಎರಡು ಸಂಸ್ಥೆಗಳು ಇದ್ದವು. ಗುಜರಾತ್‌ನಲ್ಲಿ ವಡೋದರಾ, ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯೂ ಇದ್ದವು. ಇವೆಲ್ಲ ಮತದಾನದ ಅಧಿಕಾರ ಕಳೆದುಕೊಂಡಿದ್ದವು.

ತೀಪೇìನು?: ಎಲ್ಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಪೂರ್ಣ ಸದಸ್ಯತ್ವ ಲಭಿಸಿದೆ. ಅವೆಲ್ಲ ಈಗ ಆರಾಮಾಗಿ ಬಿಸಿಸಿಐನಿಂದ ತಮ್ಮ ಸೌಲಭ್ಯಕ್ಕಾಗಿ ಒತ್ತಾಯಿಸಬಹುದು.

Advertisement

ರೈಲ್ವೇಸ್‌, ಸರ್ವಿಸಸ್‌ ಬಚಾವ್‌
ಒಂದು ರಾಜ್ಯಕ್ಕೆ ಒಂದೇ ಮತದ ನಿಯಮದಿಂದ ದೀರ್ಘ‌ ಕಾಲದಿಂದ ಕ್ರಿಕೆಟನ್ನು ಪೋಷಿಸಿಕೊಂಡು ಬಂದಿದ್ದ ರೈಲ್ವೇಸ್‌, ಸರ್ವಿಸಸ್‌, ಯೂನಿವರ್ಸಿಟೀಸ್‌ ಎಂಬ ಸಂಸ್ಥೆಗಳು ಮಾನ್ಯತೆ ಕಳೆದುಕೊಂಡಿದ್ದವು.

ನ್ಯಾಯಪೀಠ ಈ ಸಂಸ್ಥೆಗಳಿಗೂ ಈಗ ಮಾನ್ಯತೆ ನೀಡಿದೆ. ಹಾಗಾಗಿ ಇವು ಮತದಾನ ಮಾಡುವುದರ ಜತೆಗೆ ಕ್ರಿಕೆಟ್‌ ಚಟುವಟಿಕೆಯಲ್ಲೂ ನಿರಾತಂಕವಾಗಿ ಪಾಲ್ಗೊಳ್ಳಬಹುದು.

2 ಅವಧಿ ಬಳಿಕ ಕಡ್ಡಾಯ ವಿಶ್ರಾಂತಿ
ಮೂರು ವರ್ಷಗಳ ಒಂದು ಅಧಿಕಾರಾವಧಿ ಬಳಿಕ 3 ವರ್ಷ ಕಡ್ಡಾಯ ವಿಶ್ರಾಂತಿ ಪಡೆಯಲೇಬೇಕೆಂದು ಲೋಧಾ ಹೇಳಿತ್ತು. ಇದರಿಂದ ಅನುಭವದ ಬಳಕೆಗೆ ತೊಂದರೆಯಾಗುತ್ತದೆ ಎಂದು ಬಿಸಿಸಿಐ ವಾದಿಸಿತ್ತು.

ಒಂದು ಅಧಿಕಾರಾವಧಿ ಬಳಿಕ ಕಡ್ಡಾಯ ವಿಶ್ರಾಂತಿಯನ್ನು ನ್ಯಾಯಪೀಠ ರದ್ದುಗೊಳಿಸಿದೆ. ಅದರ ಬದಲು ಸತತ 2 ಅಧಿಕಾರಾವಧಿ ನಂತರ 3 ವರ್ಷ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಹೇಳಿದೆ. ಇದು ಬಿಸಿಸಿಐ ಪಾಲಿಗೆ ಸಮಾಧಾನದ ಸಂಗತಿ.

30 ದಿನದಲ್ಲಿ ಜಾರಿಯಾಗಬೇಕು
ಬಿಸಿಸಿಐ ನೋಂದಾವಣಿಗೊಂಡಿರುವುದು ತಮಿಳುನಾಡು ಸೊಸೈಟೀಸ್‌ ಕಾಯ್ದೆಯಡಿ. ಆ ಸಂಸ್ಥೆಯ ರಿಜಿಸ್ಟ್ರಾರ್‌ ಜನರಲ್‌ಗೆ ಆದೇಶ ನೀಡಿರುವ ಸರ್ವೋಚ್ಚ ನ್ಯಾಯಾಲಯ, ಇನ್ನು 4 ವಾರದೊಳಗೆ ಹೊಸ ಸಂವಿಧಾನವನ್ನು ಸಿದ್ಧ ಮಾಡಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದೆ. ಇದನ್ನು 30 ದಿನದೊಳಗೆ ಕಡ್ಡಾಯವಾಗಿ ಜಾರಿ ಮಾಡಲೇಬೇಕೆಂದು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಕಠಿನ ಸೂಚನೆ ನೀಡಿದೆ. ಒಂದಷ್ಟು ನಿರಾಳತೆ ಲಭಿಸಿರುವುದನ್ನು ಹೊರತುಪಡಿಸಿದರೆ ತೀರ್ಪನ್ನು ಜಾರಿಮಾಡದೇ ಬಿಸಿಸಿಐ ಪದಾಧಿಕಾರಿಗಳು ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಇನ್ನು ಯಾವುದೇ ಅವಕಾಶಗಳು ಉಳಿದಿಲ್ಲ.

ಪ್ರಕರಣದ ಹಿನ್ನೆಲೆಯೇನು?
2013ರ ಐಪಿಎಲ್‌ನಲ್ಲಿ ಭಾರೀ ಹಗರಣಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಸಿಸಿಐಯನ್ನು ಮುಕುಲ್‌ ಮುದ್ಗಲ್‌ ಸಮಿತಿ ತನಿಖೆಗೊಳಪಡಿಸಿ ಸಮಗ್ರ ಸುಧಾರಣೆಗೆ ಶಿಫಾರಸು ಮಾಡಿತ್ತು. ಅದರ ಹಿನ್ನೆಲೆಯಲ್ಲಿ ಲೋಧಾ ಸಮಿತಿ ಜಾರಿಯಾಗಿತ್ತು. ಅದು ದೀರ್ಘ‌ ಕಾಲ ಅಧ್ಯಯನ ಮಾಡಿ ಶಿಫಾರಸುಗಳನ್ನು ಸಿದ್ಧಪಡಿಸಿತ್ತು. 2016, ಜು. 18ರಂದು ಈ ಶಿಫಾರಸನ್ನು ನ್ಯಾಯಪೀಠ ಪುರಸ್ಕರಿಸಿತ್ತು. ಅದರ ವಿರುದ್ಧ ಪದಾಧಿಕಾರಿಗಳು ಮತ್ತೆ ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ಮುಂದುವರಿದಿತ್ತು.

ಅಮಿತಾಭ್‌, ಅನಿರುದ್ಧ್ಗೆ ಸಂಕಷ್ಟ
ನ್ಯಾಯಪೀಠದ ತೀರ್ಪಿನಿಂದ ಒಟ್ಟಾರೆ ಬಿಸಿಸಿಐ ವಲಯದಲ್ಲಿ ಅಲ್ಪ ಸಮಾಧಾನ ನೆಲೆಸಿದೆ. ಆದರೆ ಇಬ್ಬರು ಪ್ರಮುಖ ವ್ಯಕ್ತಿಗಳು ಮಾತ್ರ ಇಕಟ್ಟಿಗೆ ಸಿಲುಕಿದ್ದಾರೆ. ಕಾರ್ಯದರ್ಶಿ ಅಮಿತಾಭ್‌ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿ ಇಬ್ಬರೂ ಕೂಡಲೇ ಅಧಿಕಾರ ಬಿಡಲೇಬೇಕಾಗುತ್ತದೆ. ನ್ಯಾಯಪೀಠದ ತೀರ್ಪಿನ ಒಂದು ಸಾಲು ಹೀಗಿದೆ: “ಸತತ 2ಅಧಿಕಾರಾವಾಧಿ ನಂತರ 3 ವರ್ಷ ವಿಶ್ರಾಂತಿ ತೆಗೆದುಕೊಳ್ಳಲೇಬೇಕು. ಅದು ಬಿಸಿಸಿಐನಲ್ಲಾಗಿರಲಿ ಅಥವಾ ರಾಜ್ಯ ಸಂಸ್ಥೆಯಲ್ಲಾಗಿರಲಿ ಅಥವಾ ಎರಡೂ ಸಂಸ್ಥೆಗಳಲ್ಲಿ ಸೇರಿ ಕಾರ್ಯ ನಿರ್ವಹಿಸಿದ್ದರೂ ವಿಶ್ರಾಂತಿ ಕಡ್ಡಾಯ’.

ಈ  ಪ್ರಕಾರ ನೋಡಿದರೆ ಅಮಿತಾಭ್‌, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೂ ಮುನ್ನ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ 10 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದರು. ಅನಿರುದ್ಧ ಚೌಧರಿ ಹರ್ಯಾಣ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿಯಾಗಿ 6 ವರ್ಷ ಕಾರ್ಯ ನಿರ್ವಹಿಸಿ ಬಿಸಿಸಿಐಗೆ ಬಂದಿದ್ದರು! ಇದು ಅವರ ಸ್ಥಿತಿಯನ್ನು ಸಂಕಷ್ಟಕ್ಕೆ ಒಡ್ಡಿದೆ.

Advertisement

Udayavani is now on Telegram. Click here to join our channel and stay updated with the latest news.

Next