Advertisement

ಬಿಸಿರೋಡ್‌ ಕೆಎಸ್‌ಆರ್‌ಟಿಸಿ ಜಂಕ್ಷನ್‌ ವೃತ್ತನಿರ್ಮಾಣಕ್ಕೆನೀಡಿಆದ್ಯತೆ

10:35 AM Aug 20, 2018 | |

ಬಂಟ್ವಾಳ : ರಕ್ತನಾಳಗಳಂತೆ ದೇಶವನ್ನು ಬೆಸೆಯುವ ರಸ್ತೆಗಳು ಸಂಪರ್ಕದ ಜೀವನಾಡಿಗಳಂತಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಬಿ.ಸಿ.ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಜಂಕ್ಷನ್‌ನಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇಲ್ಲಿ ಸೂಕ್ತ ಜಂಕ್ಷನ್‌ ವೃತ್ತ ಎಂಬುದಿಲ್ಲ. ನೇರ ಸಂಚಾರ ಇರುವುದರಿಂದ ಅಪಘಾತಕ್ಕೆ ಕಾರಣವಾಗಿದೆ. ಹೆದ್ದಾರಿಯ ಡಿವೈಡರ್‌ ಒಡೆದು ಬಸ್ಸು ಕೆಎಸ್‌ ಆರ್‌ ಟಿಸಿ ನಿಲ್ದಾಣವನ್ನು ಪ್ರವೇಶಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ವಾಹನಗಳನ್ನು ತಿರುವು ತೆಗೆದುಕೊಳ್ಳಲಾಗದ ಸ್ಥಿತಿಯೂ ಉದ್ಭವಿಸುತ್ತದೆ. ವಾಹನಗಳು ಸುತ್ತುವರಿದು ಹೋಗುವಂತೆ ಸಮರ್ಪಕ ವೃತ್ತವೊಂದರ ನಿರ್ಮಾಣ ಇಲ್ಲಿ ಬಹು ಆಯಾಮದ ಮಹತ್ವ ಪಡೆದುಕೊಂಡಿದೆ.

Advertisement

ಬಿ.ಸಿ.ರೋಡ್‌ನ‌ಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವಿದೆ. ಇಲ್ಲಿಗೆ ಬೆಳ್ತಂಗಡಿ-ಮೂಡಬಿದಿರೆ, ಬಂಟ್ವಾಳ ಪೇಟೆ, ಪುತ್ತೂರು-ಉಪ್ಪಿನಂಗಡಿ, ಪಾಣೆಮಂಗಳೂರು ಪೇಟೆ, ಮಂಗಳೂರಿಗೆ ಹೋಗುವ ಫ್ಲೆ$ಓವರ್‌ ಮತ್ತು ಸರ್ವಿಸ್‌ ರಸ್ತೆ ಸೇರಿ ಆರು ಸಂಪರ್ಕಗಳ ಸಂಗಮವಾಗಿದೆ. ಇಷ್ಟೊಂದು ವಾಹನ ನಿಬಿಡತೆ ಇದ್ದರೂ ಇಲ್ಲಿ ಸಿಗ್ನಲ್‌ ಇಲ್ಲ,. ನುಗ್ಗಿ ಬರುವ ವಾಹನಗಳಿಗೆ ಯಾವ ತಡೆಯೂ ಇಲ್ಲ.

ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣ
ಇಲ್ಲಿ ಮಂಗಳೂರು ಕಡೆಗೆ 600 ಮೀ. ದೂರದಲ್ಲಿ ನೂತನ ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣವಿದೆ. ಆದರೆ, ಮಂಗಳೂರಿನಿಂದ ಬರುವ ವಾಹನಗಳು ನಿಲ್ದಾಣಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ನಿಲ್ದಾಣದ ಎದುರು ಕೆಲವೇ ಅಡಿಗಳಷ್ಟು ದೂರಕ್ಕೆ ಹೆದ್ದಾರಿಯಲ್ಲಿ ಒಂದು ತಿರುವನ್ನು ನೀಡುವ ಮೂಲಕ ವಾಹನ ಸಂಚರಿಸಲು ಅವಕಾಶ ಕಲ್ಪಿಸಿದೆ. ಇದನ್ನು ಕೆಎಸ್‌ಆರ್‌ಟಿಸಿ ಜಂಕ್ಷನ್‌ ಎನ್ನುವ ಬದಲು ಅನೇಕರು ರಂಗೋಲಿ ಜಂಕ್ಷನ್‌ ಎನ್ನುತ್ತಾರೆ. ಎದುರಿಗೆ ರಂಗೋಲಿ ಹೊಟೇಲ್‌ಗೆ ಹೋಗುವ ದೊಡ್ಡ ಬೋರ್ಡ್‌ ಕಾಣುವುದರಿಂದ ಜನ ಸಾಮಾನ್ಯರ ನೆನಪಲ್ಲಿ ಅದು ಉಳಿದಿದೆ. ಆದರೆ ಈ ಜಂಕ್ಷನ್‌ನಲ್ಲಿ ಘನ ವಾಹನ, ಬಸ್‌ಗಳು ತಿರುವು ತೆಗೆದುಕೊಳ್ಳುವಾಗ ಹೆದ್ದಾರಿಯಲ್ಲಿ ಮತ್ತು ಸರ್ವಿಸ್‌ ರಸ್ತೆಯಲ್ಲಿ, ಮಂಗಳೂರಿಂದ ಬರುವ ಎಲ್ಲ ವಾಹನಗಳು ನಿಲುಗಡೆ ಆಗುತ್ತವೆ.

ಜಂಕ್ಷನ್‌ನಲ್ಲಿ ರಸ್ತೆ ವಿಭಾಗವನ್ನು ವೃತ್ತಾಕಾರ ಮಾಡದೆ ನೇರವಾಗಿ ಮಾಡಿರುವುದು ಎಡವಟ್ಟಿಗೆ ಕಾರಣವಾಗಿದೆ. ಬಸ್‌ನಂತಹ ದೊಡ್ಡ ವಾಹನ ಇಲ್ಲಿ ಒಂದೇ ಸಲಕ್ಕೆ ತಿರುಗುವುದು ಸಾಧ್ಯವಾಗುವುದಿಲ್ಲ. ಒಂದೆರಡು ಸಲ ಹಿಂದೆ- ಮುಂದಕ್ಕೆ ಚಲಿಸಿ ರಸ್ತೆಗೆ ಹೊಂದಿಸಿಕೊಂಡು ಮುಂದೆ ಸಾಗುವುದು ಅನಿವಾರ್ಯ. ಅಷ್ಟು ಹೊತ್ತು ಇತರ ವಾಹನಗಳು ಹೆದ್ದಾರಿಯಲ್ಲಿ ನಿಲ್ಲುವುದು ಅನಿವಾರ್ಯ. ಫ್ಲೈ ಓವರ್‌ ನಲ್ಲಿ ಸಾಗುವ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಹೀಗಾಗಿ, ಬಿ.ಸಿ. ರೋಡ್‌ ಕೆಎಸ್‌ ಆರ್‌ಟಿಸಿ ಜಂಕ್ಷನ್‌ ಅನ್ನು ವೃತ್ತಾಕಾರವಾಗಿ ರಚಿಸಿದರೆ, ವಾಹನಗಳು ತಿರುವು ಪಡೆಯುವ ಸಮಯದ ಉಳಿತಾಯವಾಗಿ, ಸಂಚಾರ ಅಡಚಣೆ ತಪ್ಪಿಸಬಹುದು. ಬಸ್‌ ನಿಲ್ದಾಣಕ್ಕೆ ಈಗ ಮಂಗಳೂರಿಂದ ಬರುವ ಬಸ್‌ಗಳು ಬರುವುದಿಲ್ಲ ಎಂಬ ಅಪವಾದವನ್ನೂ ತಪ್ಪಿಸಬಹುದು.

ಸರ್ವೀಸ್‌ ರಸ್ತೆ ವಿಸ್ತರಣೆ
ಏಕಮುಖ ಸಂಚಾರದ ಫ್ಲೈ ಓವರ್‌ ರಸ್ತೆಯಲ್ಲಿ ಜಂಕ್ಷನ್‌ಗೆ ಹತ್ತಿರ ಆಗುವಾಗ ಡೂಮ್‌ ಮಾದರಿ ರಸ್ತೆ ಉಬ್ಬು ನಿರ್ಮಿಸಿ ತಡೆ ರಹಿತ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು. ಆದರೆ, ಬಿ.ಸಿ.ರೋಡ್‌ ಯೋಜಿತ ಜಂಕ್ಷನ್‌ ವ್ಯವಸ್ಥೆ ಇಲ್ಲದೆ ಅಡಚಣೆ ಎದುರಿಸುತ್ತಿದೆ. ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿ. ಜಿಲ್ಲಾ ಕೇಂದ್ರ ಮಂಗಳೂರು ಸಹಿತ ಕೇರಳ, ಉಡುಪಿ, ಧರ್ಮಸ್ಥಳ, ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಕೊಣಾಜೆಯಂತಹ ಧಾರ್ಮಿಕ, ಶೈಕ್ಷಣಿಕ ಕೇಂದ್ರಗಳಿಗೆ ಸಂಪರ್ಕಿಸಲು ಲಕ್ಷಾಂತರ ಮಂದಿ ಬಿ.ಸಿ. ರೋಡ್‌ ಮೂಲಕವೇ ಹಾದು ಹೋಗುತ್ತಾರೆ. 400ಕ್ಕೂ ಮಿಕ್ಕಿದ ಸರಕಾರಿ ಬಸ್‌, 380ಕ್ಕೂ ಮಿಕ್ಕಿದ ಖಾಸಗಿ ಸರ್ವಿಸ್‌ ಬಸ್‌ ಗಳು, ಪ್ರವಾಸಿ ಬಸ್‌ ಗಳು, ಖಾಸಗಿ ವಾಹ ನ ಗಳು, ಲಾರಿ, ಟೆಂಪೋ – ಇವುಗಳ ಸಂಖ್ಯೆಯನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ವಾಹನ ಗಣತಿಯಂತಹ ಉಪಕ್ರಮಗಳು ನಡೆಯದೇ ಇರುವುದರಿಂದ ಸಂಬಂಧಪಟ್ಟ ಇಲಾಖೆಯಲ್ಲೂ ದಾಖಲಾತ್ಮಕ ವಿವರಗಳಿಲ್ಲ. ಬ್ಯುಸಿ ಜಂಕ್ಷನ್‌ ಆಗಿರುವ ಬಿ.ಸಿ. ರೋಡ್‌ನ‌ ಸಂಚಾರ ಸಮಸ್ಯೆ ನಿವಾರಿಸಲು ಯೋಜಿತವಾಗಿ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರು ಆಶಯ. 

Advertisement

3 ದಶಕಗಳಿಂದ ಬಿ.ಸಿ. ರೋಡ್‌ ಸಂಚಾರ ಅಡಚಣೆಗೆ ಹೆಸರುವಾಸಿ. ಮೊದಲಿಗೆ ರಸ್ತೆ ಕಿರಿದಾಗಿತ್ತು. ಅನಂತರ ಫ್ಲೈ ಒವರ್‌ ಬಂತು. ಆದರೂ ಸಮಸ್ಯೆ ಬಗೆಹರಿದಿಲ್ಲ. ಇಲ್ಲಿನ ಸರ್ವಿಸ್‌ ರಸ್ತೆಗಳನ್ನು ವಿಸ್ತರಿಸುವಲ್ಲಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ರಾಜಕೀಯ ಇಚ್ಛಾ ಶಕ್ತಿಯ ಕೊರತೆ, ಕೇಂದ್ರ – ರಾಜ್ಯ ಎಂಬ ತಾರತಮ್ಯ, ಹೆದ್ದಾರಿ ವಿನ್ಯಾಸದಲ್ಲಿಯೇ ದೋಷ, ಎಂಜಿನಿಯರ್‌ಗಳು ದೂರಾಲೋಚನೆ ಮಾಡದಿರುವುದು. ಸಕಾಲಿಕವಾಗಿ ಸಾರ್ವಜನಿಕರಿಂದ ಸೂಕ್ತ ಪ್ರತಿಕ್ರಿಯೆ ಇಲ್ಲದಿರುವುದು ಇಲ್ಲಿನ ಅವ್ಯವಸ್ಥೆಗೆ ಮೂಲ ಕಾರಣ ಎಂದರೂ ತಪ್ಪಲ್ಲ.

ಪರಿಹಾರ ಏನು?
ಬಿ.ಸಿ. ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಒಂದು ವೃತ್ತಾಕಾರದ ಜಂಕ್ಷನ್‌ ನಿರ್ಮಿಸಿ ಎಲ್ಲ ವಾಹನಗಳು ಸಂಚರಿಸಲು ಅನುಕೂಲ ಕಲ್ಪಿಸುವುದು. ಮಂಗಳೂರಿಂದ ಬರುವ ವಾಹನಗಳು ಕೂಡ ನೇರವಾಗಿ ಕೆಎಸ್‌ಆಟ್‌ಟಿಸಿ ನಿಲ್ದಾಣಕ್ಕೆ ಬರಲು ಅನುಕೂಲ ಆಗುವಂತೆ ವ್ಯವಸ್ಥೆ ರೂಪಿಸುವುದು.

ವರದಿ ಬಳಿಕ ಅನುಷ್ಠಾನ
ಬಿ.ಸಿ. ರೋಡ್‌ ಫ್ಲೈ ಓವರ್‌ ಮಂಗಳೂರು ಕಡೆಗೆ, ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರಿಗೆ ವೃತ್ತ ನಿರ್ಮಾಣ ಮಾಡುವ ಮೂಲಕ ಬಸ್‌ ನಿಲ್ದಾಣಕ್ಕೆ ಎಲ್ಲ ಸರಕಾರಿ ಬಸ್‌ಗಳು ಬರುವಂತೆ ವ್ಯವಸ್ಥೆ ರೂಪಿಸುವ ಬಗ್ಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಸಲ್ಲಿಸಿ ಪರಿಸ್ಥಿತಿ ವಿವರಿಸಲಾಗಿದೆ. ನಿರ್ದಿಷ್ಟ ತಾಂತ್ರಿಕ ವರದಿಯ ಬಳಿಕ ಕಾರ್ಯ ಯೊಜನೆ ಅನುಷ್ಠಾನಕ್ಕೆ ಬರುವುದು.
– ನಳಿನ್‌ ಕುಮಾರ್‌ ಕಟೀಲು
ದ.ಕ. ಸಂಸದರು

ವೈಜ್ಞಾನಿಕವಾಗಲಿ
ಬಿ.ಸಿ. ರೋಡ್‌ ಸಂಚಾರ ನಿಬಿಡತೆ ಇರುವ ಹೆದ್ದಾರಿ. ಫ್ಲೈ ಓವರ್‌ ಮುಕ್ತಾಯದಲ್ಲಿ ನೂತನ ಬಸ್‌ ನಿಲ್ದಾಣದ ಎದುರುಗಡೆ ವಾಹನ ತಿರುವಿಗೆ ಅನುಕೂಲ ಆಗುವಂತೆ ಹೆದ್ದಾರಿಯನ್ನು ವಿಶಾಲವಾಗಿ ಪರಿವರ್ತಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಭವಿಷ್ಯದ ಹೆದ್ದಾರಿ ಜಂಕ್ಷನ್‌ಗಳ ರೂಪಿಸಬೇಕು. 
– ಮಂಜುಳಾ ಕೆ.ಎಂ.
ಎಸ್‌ಐ- ಬಂಟ್ವಾಳ ಸಂಚಾರ ಠಾಣೆ

58 ಗ್ರಾಮಗಳ 3 ಲಕ್ಷಕ್ಕೂ ಅಧಿಕ ಜನ
ತಾಲೂಕಿನ ಎಲ್ಲ 58 ಗ್ರಾಮಗಳ 3 ಲಕ್ಷಕ್ಕೂ ಅಧಿಕ ಜನರು ಒಂದಲ್ಲ ಒಂದು ಕಾರಣಕ್ಕೆ ಬಿ.ಸಿ.ರೋಡನ್ನೆ ಸಂಪರ್ಕಿಸಬೇಕು. ಕಂದಾಯ ಸಹಿತ ಎಲ್ಲ ಇಲಾಖೆಗಳ ಕಚೇರಿಗಳು ಇರುವುದು ಬಿ.ಸಿ. ರೋಡಿನಲ್ಲಿ. ಬಂಟ್ವಾಳ- ಬೆಳ್ತಂಗಡಿ ತಾಲೂಕು ಒಟ್ಟಾಗಿ ಬಂಟ್ವಾಳ ಉಪವಿಭಾಗವಾಗಿ ರೂಪಿಸಲಾಗಿದೆ. ಬಂಟ್ವಾಳ ಪೊಲೀಸ್‌ ಉಪವಿಭಾಗ, ಕಂದಾಯ, ಆರ್‌ಟಿಒ ಉಪವಿಭಾಗ, ಹೆಚ್ಚುವರಿ ನ್ಯಾಯಾಲಯ ಸಹಿತ ಇತರ ಎಲ್ಲ ಇಲಾಖೆಗಳ ಕಚೇರಿಗಳು ಇಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next