Advertisement

ಪ್ರವಾಸಿ ತಾಣವಾದ ಬಸವಸಾಗರ ಜಲಾಶಯ

02:55 PM Jul 30, 2018 | |

ನಾರಾಯಣಪುರ: ಆಲಮಟ್ಟಿ ಜಲಾಶಯದ ಒಳಹರಿವು ತಗ್ಗಿದ್ದರಿಂದ ಇಲ್ಲಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿ ಪಾತ್ರಕ್ಕೆ ನೀರು ಹರಿಸುವ ಪ್ರಮಾಣ ಕಡಿಮೆ ಮಾಡಲಾಗಿದ್ದು, ಕಳೆದ 10 ದಿನಗಳಿಂದ ಮೈದುಂಬಿ ಹರಿಯುತ್ತಿದ ಕೃಷ್ಣಾ ನದಿ ಪ್ರವಾಹ ಪ್ರಮಾಣ ಕಡಿಮೆಯಾಗಿದೆ.

Advertisement

ಕೆಬಿಜೆಎನ್ನೆಲ್‌ ಅಣೆಕಟ್ಟು ಅಧಿಕಾರಿಗಳ ಮಾಹಿತಿಯಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಆಲಮಟ್ಟಿ ಲಾಲ್‌ ಬಹದ್ಧೂರ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಆಲಮಟ್ಟಿಯಿಂದ 30 ಸಾವಿರ ಕ್ಯೂಸೆಕ್‌ ನೀರನ್ನು ಬಸವಸಾಗರ ಜಲಾಶಯಕ್ಕೆ ಹರಿಬಿಡುಲಾಗುತ್ತಿದೆ.

ಶನಿವಾರ ಒಳಹರಿವು ಕಡಿಮೆಯಾಗಿದ್ದು, ರವಿವಾರ ಬೆಳಗ್ಗೆಯಿಂದಲೇ ಜಲಾಶಯದ 2 ಕ್ರಸ್ಟ್‌ಗೇಟ್‌ ಹಾಗೂ ಎಂಪಿಸಿಎಲ್‌ ಜಲವಿದ್ಯುತ್‌ ಸ್ಥಾವರ ಸೇರಿದಂತೆ ಎಡ, ಬಲ ದಂಡೆ ಮುಖ್ಯ ಕಾಲುವೆಗಳ ಮುಖಾಂತರ ಒಟ್ಟು 30 ಸಾವಿರ ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರಬಿಡಲಾಗಿದೆ.
 
ಪ್ರಸ್ತುತ ಮುಂಗಾರು ಹಂಗಾಮಿನ ಬೆಳೆಗಳಿಗಾಗಿ ಅಚ್ಚುಕಟ್ಟು ವ್ಯಾಪ್ತಿಯ ಜಮೀನುಗಳಿಗೆ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ಜು. 17ರಿಂದ ಎಡ, ಬಲದಂಡೆ ಮುಖ್ಯ ಕಾಲುವೆಗಳಿಗೆ ನೀರು ಹರಿಸಲು ಆರಂಭಿಸಲಾಗಿತ್ತು. ನಂತರದಲ್ಲಿ ಭರ್ತಿಯಾದ ಜಲಾಶಯಕ್ಕೆ ಆಲಮಟ್ಟಿ ಅಣೆಕಟ್ಟಿನಿಂದ ಬರುವ ಒಳಹರಿವು 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಬಿಟ್ಟಿದ್ದರಿಂದ ಬಸವಸಾಗರ ಜಲಾಶಯದಿಂದ ನಿರಂತರ 1 ಲಕ್ಷ ಕ್ಯೂಸೆಕ್‌ ಹೆಚ್ಚು ಪ್ರಮಾಣದ ನೀರನ್ನು ಅಣೆಕಟ್ಟಿನ ಕ್ರಸ್ಟ್‌ಗೇಟ್‌ಗಳ ಮೂಲಕ ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗಿತ್ತು. 

ಪ್ರವಾಸಿಗರು ಸಂಭ್ರಮ: ಬಸವಸಾಗರ ಜಲಾಶಯ ವೀಕ್ಷಣೆಗೆ ಸುತ್ತಮುತ್ತಲಿನ ಜಿಲ್ಲೆಗಳ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸಿ ಜಲಾಶಯ ಕ್ರಸ್ಟ್‌ಗೇಟ್‌ ಮೂಲಕ ರಭಸದಿಂದ ಬರುವ ಜಲಧಾರೆ ಕಣ್ತುಂಬಿಕೊಂಡು ಸಂಭ್ರಮಿಸುವುದು ಕಂಡು ಬಂತು. ನಂತರದಲ್ಲಿ ಜಲಾಶಯ ಪ್ರದೇಶದ ಮರದ ನೆರಳಿನಲ್ಲಿ ಬಂಧು ಮಿತ್ರರೊಂದಿಗೆ ಭೋಜನ ಸವಿದರು. ಇತರೆ ದಿನಗಳಿಗೆ ಹೋಲಿಸಿದರೆ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ರವಿವಾರ ಹೆಚ್ಚಾಗಿರುತ್ತದೆ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

ತಗ್ಗಿದ ಪ್ರವಾಹ: 1 ಲಕ್ಷ ಕ್ಯೂಸೆಕ್‌ ಹೆಚ್ಚು ಪ್ರಮಾಣದ ನೀರಿನ ಪ್ರವಾಹದಿಂದ ಕೃಷ್ಣಾ ನದಿ ತೀರದಲ್ಲಿ ಬರುವ ಜನ ವಸತಿಗಳಿರುವ ನಡುಗಡ್ಡೆಗಳು ಜಲಾವೃತಗೊಂಡು, ಅಲ್ಲಿನ ಜನತೆ ತೊಂದರೆ ಅನುಭವಿಸಿದನ್ನು ಸ್ಮರಿಸಬಹುದು. ಪ್ರಸ್ತುತ ಒಳಹರಿವು ತಗ್ಗಿದ್ದರಿಂದ ಪ್ರವಾಹ ಭಾದಿತ ಸಂತ್ರಸ್ತರು ನಿರಾಳಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next