Advertisement

ಈ ವರ್ಷವೇ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಆರಂಭ: ಸಿಎಂ ಬೊಮ್ಮಾಯಿ

09:59 PM Apr 24, 2022 | Team Udayavani |

ಬೆಂಗಳೂರು; ರಾಜ್ಯ ಸರ್ಕಾರವು ಈ ವರ್ಷವೇ ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣ ಆರಂಭ ಮಾಡಲಿದೆ ಮತ್ತು ಎಲ್ಲಾ ಜಿಲ್ಲೆಗಳಲ್ಲಿಯೂ ರಾಜಕುಮಾರ್‌ ಜನ್ಮದಿನ ಆಚರಿಸಲು ಈಗಾಗಲೇ ಆದೇಶ ಹೊರಡಿಸಿದ್ದು, ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಇಲಾಖೆಯಿಂದ ಏರ್ಪಡಿಸಿದ್ದ ಡಾ.ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆ ಮತ್ತು 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವು ಚಿತ್ರರಂಗಕ್ಕೆ ಸದಾ ಬೆಂಬಲ ನೀಡಲಿದೆ. ಚಿತ್ರರಂಗ ಕೂಡ ಅದೇ ರೀತಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್‌ ಪರಾಕಾಯ ಪ್ರವೇಶ ಅಧ್ಯಯನ ನಡೆಯಲಿ:
ಭಾರತದ ಚಲನಚಿತ್ರ ರಂಗದಲ್ಲಿ ರಾಜ್‌ಕಪೂರ್‌, ಎನ್‌.ಟಿ. ರಾಮರಾವ್‌, ಎಂ.ಜಿ. ರಾಮಚಂದ್ರನ್‌ ಸೇರಿದಂತೆ ಕೆಲವೇ ಕೆಲವು ಶೋಮ್ಯಾನ್‌ಗಳಿದ್ದಾರೆ. ಆದರೆ ರಾಜಕುಮಾರ್‌ ಅವರು ಅತ್ಯಂತ ಶ್ರೇಷ್ಠ ಶೋಮ್ಯಾನ್‌ ಆಗಿದ್ದಾರೆ. ಯಾರ ಮನಸ್ಸನ್ನೂ ನೋಯಿಸಿದವರಲ್ಲ. ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣವಾಗಿದ್ದರೂ ವೀರಪ್ಪನ್‌ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ. ಅವರ ಸರಳತೆಯೇ ಅವರ ನಡವಳಿಕೆಯಾಗಿತ್ತು. ಆದ್ದರಿಂದ ವರನಟ ಡಾ.ರಾಜ್‌ಕುಮಾರ್‌ ಅವರ ಬಾಲ್ಯ, ಸಿನಿ ಪಯಣ, ಪಾತ್ರದಲ್ಲಿ ಮಾಡುತ್ತಿದ್ದ ಪರಾಕಾಯ ಪ್ರವೇಶದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ ಎಂದು ಮುಖ್ಯಮಂತ್ರಿಗಳು ಆಶಿಸಿದರು.

ರಾಜಕುಮಾರ್‌ ಅವರ ಪ್ರತಿ ಚಿತ್ರವೂ ವಿಭಿನ್ನವಾಗಿದ್ದು ಅದ್ಭುತವಾಗಿ ಮೂಡಿ ಬಂದಿವೆ. ಪೌರಾಣಿಕ, ಸಾಂಸಾರಿಕ, ಬಾಂಡ್‌ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಅಮೋಘವಾಗಿ ನಟಿಸಿದ್ದಾರೆ. ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ. ಜನಿಸಿದಾಗ ಇದ್ದ ಮುಗ್ಧತೆ ಕೊನೆಯವರೆಗೂ ಹಾಗೆಯೇ ಇತ್ತು. ಸ್ಥಿತಪ್ರಜ್ಞೆ ಕಳೆದುಕೊಳ್ಳಲಿಲ್ಲ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ವೈಜ್ಞಾನಿಕ ಅಧ್ಯಯನ ನಡೆಯುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

Advertisement

ರಾಜಕಾರಣಿಗಳು ಚುನಾವಣೆಯಲ್ಲಿ ಜಯಗಳಿಸಿದಾಗ, ಚಿತ್ರಗಳು ಯಶಸ್ವಿಯಾದಾಗ ನಟ-ನಟಿಯರ ಬಾಡಿ ಲಾಂಗ್ವೇಜ್‌ ಬದಲಾಗುತ್ತದೆ. ನಡೆಯುವ ಧಾಟಿಯೇ ವಿಭಿನ್ನವಾಗಿರುತ್ತದೆ. ಆದರೆ, ಇಷ್ಟೆಲ್ಲಾ ಸಾಧನೆ ಮಾಡಿದರೂ ರಾಜ್‌ಕುಮಾರ್‌ ಅವರು ಸಮಚಿತ್ತರಾಗಿಯೇ ಇದ್ದರು. ಕನ್ನಡ ನಾಡಿನಲ್ಲಿ ಜನಿಸಿ ನಮಗೆಲ್ಲಾ ಆದರ್ಶವಾಗಿದ್ದಾರೆ ಎಂದು ಬಣ್ಣಿಸಿದರು.

ಅಪ್ಪಾಜಿಯವರ ಸರಳತೆ, ತಾಳ್ಮೆ ದೊಡ್ಡದು:
ಡಾ. ರಾಜ್‌ಕುಮಾರ್‌ ಅವರು ನಟನೆ ಜೊತೆಗೆ ಅವರು ಅಳವಡಿಸಿಕೊಂಡಿದ್ದ ಸರಳತೆ ಮತ್ತು ತಾಳ್ಮೆ ಅವರನ್ನು ಎತ್ತರಕ್ಕೆ ಕರೆದುಕೊಂಡು ಹೋಯಿತು ಎಂದು ರಾಘವೇಂದ್ರ ರಾಜಕುಮಾರ್‌ ತಮ್ಮ ತಂದೆಯೊಂದಿಗಿನ ಒಡನಾಟವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಡರ ಕಣ್ಣಪ್ಪ ಸಿನಿಮಾ ಆರಂಭವಾಗುವ ವೇಳೆ ಬಿಳಿ ಪಂಚೆ, ಬಿಳಿ ಅಂಗಿ ಧರಿಸಿ ಭೂಮಿ ತಾಯಿಗೆ “ಇದೇ ಬಟ್ಟೆ ನಿನ್ನ ಗರ್ಭ ಸೇರುವ ತನಕ ಇದ್ದರೆ ನನ್ನ ಜನ್ಮ ಸಾರ್ಥಕ ಎಂದು ನಮಸ್ಕರಿಸಿದ್ದರಂತೆ’. ಕೊನೆಗೂ ಅವರು ಬಿಳಿ ಅಂಗಿ, ಬಿಳಿ ಪಂಚೆಯಲ್ಲಿಯೇ ಜೀವನ ಕೊನೆಗೊಳಿಸಿದರು.

ಅವರು 100 ಸಿನಿಮಾ ಪೂರೈಸಿದಾಗ, ಚಿತ್ರರಂಗದಲ್ಲಿ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್‌ಪಾಲ್ಕೆ ಪ್ರಶಸ್ತಿ ದೊರೆತಾಗಲೂ ಅವರು ಇದೇ ಸರಳತೆಯನ್ನು ಮೆರೆದಿದ್ದರು. ಅಲ್ಲದೆ, ಪ್ರತಿ ಬಾರಿ ಪ್ರಶಸ್ತಿ ಬಂದಾಗಲೂ ಮಹಾನ್‌ ಕಲಾವಿದರನ್ನು ಬಿಟ್ಟು ಪ್ರಶಸ್ತಿ ನನಗೆ ಸಿಗುತ್ತಿದೆ ಎಂದು ಕೋಪ ಮಾಡಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.

ಎಷ್ಟೇ ಅವಕಾಶಗಳಿದ್ದರೂ ಕಲಾ ಸೇವೆಯನ್ನು ಬಿಟ್ಟು ಬೇರೇನೂ ಮಾಡಿಲ್ಲ. ಆದ್ದರಿಂದಲೇ ಕೊನೆಗೆ ಶೂಟಿಂಗ್‌ ಮಾಡುತ್ತಿದ್ದ ಸ್ಥಳದಲ್ಲಿಯೇ ಸೇರಿಬಿಟ್ಟುರು. ವೇದಿಕೆಯಲ್ಲಿ ಬಂದಾಗ ಜನರಿಗೆ ಕಣ್ಣಿಗೆ ಕಾಣುವ ಮೈಕಟ್ಟು ಮತ್ತು ಕಿವಿಗೆ ಕೇಳುವ ನುಡಿ ಇಂಪಾಗಿರಬೇಕು ಎಂದು ತಮ್ಮ ತಾತ ನಮ್ಮ ತಂದೆಗೆ ಹೇಳಿಕೊಟ್ಟಿದ್ದ ವಿದ್ಯೆ. ಅದನ್ನು ಕೂಡ ಕೊನೆವರೆಗೂ ಪಾಲಿಸಿದರು ಎಂದರು.

ಆತ್ಮಕತೆ ಬೇಡವೆಂದಿದ್ದ ರಾಜ್‌:
ಒಮ್ಮೆ ಆತ್ಮಕತೆ ಬರೆಯಬೇಕು ಎಂಬ ವಿಚಾರ ಬಂದಾಗ ಪುನೀತ್‌ ಬರೆಯುತ್ತೇನೆಂದ. ಆದರೆ, ತಮ್ಮ ತಂದೆ ಬಗ್ಗೆ ಮಕ್ಕಳು ಆತ್ಮಕತೆ ಬರೆಯುವುದು ಶ್ರೇಯಸ್ಸು ಅಲ್ಲವೆಂದು ನಿರಾಕರಿಸಿದ್ದರು. ನಮ್ಮ ಆತ್ಮಕತೆ ಬರೆಯುವುದೇ ಏನಿದೆ? 1929ರಲ್ಲಿ ತಮ್ಮ ತಂದೆ-ತಾಯಿಗೆ ಮುತ್ತತ್ತಿ ರಾಯನ ವರಪ್ರಸಾದದಿಂದ ಸಾಮಾನ್ಯ ಮಗುವಾಗಿ ಜನಿಸಿದೆ ಎಂದಿದ್ದರು ಎಂದು ರಾಘವೇಂದ್ರ ರಾಜಕುಮಾರ್‌ ತಂದೆಯೊಂದಿಗನ ದಿನಗಳಲ್ಲಿ ನೆನಪು ಮಾಡಿಕೊಂಡರು.

ಅದೃಷ್ಟ ಇದ್ದರೆ ಮಾತ್ರ ಸಿನಿಮಾದಲ್ಲಿ ಮೇಲೆ ಬರಲು ಸಾಧ್ಯ. ಅದರಲ್ಲಿಯೂ ರಾಜಕುಮಾರ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲು ಪುಣ್ಯ ಮಾಡಿರಬೇಕು. ಇಂದು ಅವರ ಆಶೀರ್ವಾದ ಇದ್ದರಿಂದಲೇ ನನಗೆ ಡಾ. ರಾಜ್‌ ಪ್ರಶಸ್ತಿ ಸಿಕ್ಕಿದೆ.
– ಲಕ್ಷ್ಮೀ, ಡಾ. ರಾಜ್‌ ಪ್ರಶಸ್ತಿ ಪುರಸ್ಕೃತ ನಟಿ

ಕಳೆದ ಐದು ವರ್ಷಗಳಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಕೊನೆಗೂ ಪ್ರದಾನ ಮಾಡಿದರಲ್ಲ ಎಂಬ ಸಮಾಧಾನ ತಂದಿದೆ. ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ಪ್ರದಾನ ಮಾಡಿದರೆ, ಕಲಾವಿದರಿಗೆ ಖುಷಿ ನೀಡಲಿದೆ.
– ತಾರಾ ಅನುರಾಧ, ಅತ್ಯುತ್ತಮ ನಟಿ ಪ್ರಶಸ್ತಿ ವಿಜೇತೆ

ನಿರ್ದೇಶಕ ಪುಟ್ಟಣ ಕಣಗಾಲ್‌ ಅವರ ಜತೆ ಕೆಲಸ ಮಾಡುವ ಅವಕಾಶ ದೊರೆಯಲಿಲ್ಲ. ಆದರೆ, ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಅತ್ಯಂತ ಹೆಮ್ಮೆಯ ವಿಷಯ. ಅದರಲ್ಲಿಯೂ ಡಾ. ರಾಜ್‌ಕುಮಾರ್‌ ಅವರ ಜನ್ಮದಿನದಂದೇ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಅತ್ಯಂತ ಸಂತಸವನ್ನುಂಟು ಮಾಡಿದೆ. ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ.
– ಎಸ್‌. ನಾರಾಯಣ್‌, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಪುರಸ್ಕೃತ ನಿರ್ದೇಶಕ

41 ಮಂದಿಗೆ 2017ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
ಚಿತ್ರರಂಗದಲ್ಲಿ ಉತ್ತಮವಾಗಿ ಕೆಲಸ ಮಾಡಿದ 41 ಮಂದಿಗೆ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲಾಯಿತು.
ಡಾ. ರಾಜ್‌ಕುಮಾರ್‌ ಪ್ರಶಸ್ತಿ: ನಟಿ ಲಕ್ಷ್ಮೀ
ಪುಟ್ಟಣ ಕಣಗಾಲ್‌ ಪ್ರಶಸ್ತಿ: ನಿರ್ದೇಶಕ ಎಸ್‌. ನಾರಾಯಣ್‌
ಡಾ. ವಿಷ್ಣುವರ್ಧನ್‌ ಪ್ರಶಸ್ತಿ : ಬಿ.ಎನ್‌ ಲಕ್ಷ್ಮೀಪತಿ( ಅವರ ಪರವಾಗಿ ಪುತ್ರ ರಾಮ್‌ ಪ್ರಸಾದ್‌ ಸ್ವೀಕಾರ)
ಅತ್ಯುತ್ತಮ ನಟಿ : ತಾರ ಅನುರಾಧಾ -ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕಾಗಿ
ಅತ್ಯುತ್ತಮ ನಟ : ವಿಶೃತ್‌ ನಾಯ್ಡು

Advertisement

Udayavani is now on Telegram. Click here to join our channel and stay updated with the latest news.

Next