Advertisement

ದುಡಿಮೆಯಲ್ಲಿ ದೇವರ ಕಂಡ ಬಸವಣ್ಣ

10:07 PM May 07, 2019 | Lakshmi GovindaRaj |

ಚಾಮರಾಜನಗರ: ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯಲ್ಲಿ ದೇವರನ್ನು ಕಂಡ ಕಾಯಕ ಯೋಗಿ ಬಸವಣ್ಣನವರು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು.

Advertisement

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ: ಕುವೆಂಪು ಅವರು 20ನೇ ಶತಮಾನದಲ್ಲಿ ವಿಶ್ವಮಾನವತೆಯ ಕನಸು ಕಂಡಿದ್ದರು. ಅದನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾರಿ ಮಾಡಿದ್ದರು. ಜನಸಾಮಾನ್ಯರಿಗೆ ಅರ್ಥವಾಗುವ ಸರಳಭಾಷೆ ಕನ್ನಡದಲ್ಲಿ ಸಾಕಷ್ಟು ವಚನಗಳನ್ನು ರಚಿಸಿ ಅರಿವಿನ ಬೆಳಕನ್ನು ತೋರಿ ಸಮ ಸಮಾಜಕ್ಕೆ ನಾಂದಿ ಹಾಡಿದರು. ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು ಎಂದರು.

ಜಾತಿ ವ್ಯವಸ್ಥೆ ಧಿಕ್ಕರಿಸಿದ ಬಸವಣ್ಣ: ಬಸವಣ್ಣನವರು ಅನುಭವ ಮಂಟಪದ ಮೂಲಕ ದೇಶದ ಮೊದಲ ಸಂಸತ್ತನ್ನು ಸ್ಥಾಪಿಸಿ ಅಲ್ಲಿ ಸಾಮಾಜಿಕ, ಧಾರ್ಮಿಕ ಚರ್ಚೆಗಳನ್ನು ನಡೆಸುತ್ತಿದ್ದರು. ಅಂದಿನ ಸಮಾಜದಲ್ಲಿದ್ದ ಜಾತಿವ್ಯವಸ್ಥೆ, ವರ್ಣಭೇದ ಲಿಂಗಭೇದವನ್ನು ಧಿಕ್ಕರಿಸಿ ಬಡವರು, ದೀನ ದಲಿತರು, ಮಹಿಳೆಯರನ್ನು ಅನುಭವ ಮಂಟಪದಲ್ಲಿ ಒಂದೆಡೆ ಸೇರಿಸಿ ಕ್ರಾಂತಿಕಾರಿ ವಿಚಾರಗಳನ್ನು ವಚನಗಳ ಮೂಲಕ ಜನರಿಗೆ ತಲುಪಿಸಿದರು ಎಂದು ಅವರು ತಿಳಿಸಿದರು.

ವಚನಗಳು ಇಂದಿಗೂ ಜೀವಂತ: ಜಾತಿ ಭಾಷೆಯ ಭೇದವಿಲ್ಲದೆ ಲಿಂಗಶರಣ ತತ್ವವನ್ನು ಪ್ರತಿಪಾದಿಸಿದ ಬಸವಣ್ಣನವರು ತಳ ಸಮುದಾಯದವರಿಗೆ ದೇವಾಲಯ ಹಾಗೂ ಊರಿನ ಒಳಗಡೆ ಪ್ರವೇಶ, ಕುಡಿಯುವ ನೀರಿನ ಹಕ್ಕು, ಮಹಿಳೆಯರು ಪುರುಷರಷ್ಟೇ ಸಮಾನ ಜೀವನ ನಡೆಸಲು ಕಾರಣರಾಗಿ ಕ್ರಾಂತಿಯೋಗಿ ಬಸವಣ್ಣ ಎನಿಸಿಕೊಂಡರು. ನುಡಿದಂತೆ ನಡೆದ ಬಸವಣ್ಣನವರು ರಚಿಸಿದ ವಚನಗಳು ಇಂದಿಗೂ ಜೀವಂತವಾಗಿವೆ ಎಂದು ಹೇಳಿದರು.

Advertisement

ಆತ್ಮವಿಶ್ವಾಸ ತುಂಬಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಸಾಮಾಜಿಕ ಅಸಮಾನತೆ ವಿರುದ್ಧ ದನಿ ಎತ್ತಿದ ಅನೇಕ ಸಾಧು ಸಂತರು, ಶರಣರಲ್ಲಿ ಬಸವಣ್ಣನವರು ಅಗ್ರಗಣ್ಯರಾಗಿದ್ದಾರೆ. ಸಾಂಪ್ರದಾಯಿಕ ಮೌಡ್ಯಗಳು, ಡಾಂಭಿಕತೆಯನ್ನು ಪ್ರಶ್ನಿಸಿ ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜವನ್ನು ಪರಿಷ್ಕರಣೆಗೊಳಪಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.

ವಿಶ್ವಮಾನ್ಯರಾದ ಬಸವಣ್ಣ: ಜಗತ್ತಿನ ಎಲ್ಲಾ ಧರ್ಮಗಳ ಸಾರವನ್ನು ಅರಿತಿದ್ದ ಬಸವಣ್ಣನವರು ದಯೆ, ಕರುಣೆ ಇಲ್ಲದ ಧರ್ಮ ಯಾವುದೂ ಇಲ್ಲ. ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿ ವಿಶ್ವಮಾನ್ಯರಾದರು. ಅವರ ನಡೆ. ನುಡಿ, ಸದ್ಗುಣ, ವಚನಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮ ಸಮಾಜ ನಿರ್ಮಾಣ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಮಾತನಾಡಿ ಸಮಾಜದ ಎಲ್ಲರನ್ನು ಸಮಾನತೆಯಿಂದ ಕಾಣಬೇಕೆಂದು 12ನೇ ಶತಮಾನದಲ್ಲಿಯೆ ಬಸವಣ್ಣನವರು ತಿಳಿಸಿದ್ದರು. ಅವರ ಉದ್ದೇಶ ಸಮ ಸಮಾಜದ ನಿರ್ಮಾಣವೇ ಆಗಿತ್ತು. ಅದನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌. ಚನ್ನಪ್ಪ ಬಸವ ಜಯಂತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕದಳಿ ಮಹಿಳಾ ತಂಡದ ಸದಸ್ಯರು ನಡೆಸಿಕೊಟ್ಟ ಬಸವಣ್ಣನವರ ವಚನಗಳ ಗಾಯನ ಸಂಗೀತ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next