Advertisement

ಪಾಳು ಬಿದ್ದಿದೆ¬ಬಸವಕಲ್ಯಾಣ ಕೋಟ

10:30 AM Jul 14, 2018 | Team Udayavani |

ಬೀದರ: ಸಮಾನತೆ ತತ್ವದಡಿ ಕ್ರಾಂತಿಯ ಮೂಲಕ ಗುರುತಿಸಿಕೊಂಡ ಗುರು ಬಸವಣ್ಣನ ಕಾಯಕ ಭೂಮಿಯಾದ ಬಸವಕಲ್ಯಾಣ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎನ್ನುವ ಸರ್ಕಾರಗಳ ನಿರ್ಧಾರ ಕೇವಲ ಘೋಷಣೆಗೆ, ಭರವಸೆಗೆ ಮಾತ್ರ ಸೀಮಿತವಾಗಿದೆ.

Advertisement

ಕರ್ನಾಟಕವನ್ನು ಆಳಿದ ಪ್ರಭಾವಶಾಲಿ ರಾಜಮನೆತನಗಳ ಅವಧಿಯಲ್ಲಿ ಅನೇಕ ಸ್ಮಾರಕಗಳನ್ನು ಸಾಂಸ್ಕೃತಿಕ ಕುರುಹುಗಳನ್ನಾಗಿಸಿ ಮುಂದಿನ ಪೀಳಿಗೆಗೆ ಉಳಿಸಿ ಹೋಗಿದ್ದಾರೆ. ಅದೇ ರೀತಿ ಬಸವಕಲ್ಯಾಣದಲ್ಲಿ 10ನೇ ಶತಮಾನದಲ್ಲಿ ನಿರ್ಮಿಸಲಾದ ಕೋಟೆಯಲ್ಲಿ ಹತ್ತಾರು ರಾಜ ಮನೆತನಗಳು ಆಳಿವೆ. ಸದ್ಯ ಈ ಕೋಟೆ ಸೂಕ್ತ ರಕ್ಷಣೆ ಇಲ್ಲದೇ ಪಾಳುಬಿದ್ದು ಹಾಳಾಗುತ್ತಿದೆ.

ಅಂತರ್ಜಾಲದಲ್ಲೂ ಕೂಡ ಬಸವಕಲ್ಯಾಣ ಕೋಟೆ ಎಂದು ನಮೂದಿಸಿದರೆ ಹಾಳು-ಪಾಳು ಕೋಟೆ ಎನ್ನುವ ಮಾಹಿತಿ ಬರುತ್ತಿದ್ದು, ಇದು ಸರ್ಕಾರದ ಕರ್ತವ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಚುನಾವಣೆ ವೇಳೆ ಬಸವಕಲ್ಯಾಣಕ್ಕೆ ಭೇಟಿ
ನೀಡುವ ರಾಜಕಾರಣಿಗಳು ಬಸವಕಲ್ಯಾಣವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸುವ ಮಾತುಗಳನ್ನು ಆಡುತ್ತಾರೆ. ನೂರಾರು ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸುತ್ತಾರೆ. 

ಆದರೆ, ವಾಸ್ತವದಲ್ಲಿ ಯಾರೊಬ್ಬರು ಕಲ್ಯಾಣ ನಾಡಿನ ಕುರುಹುಗಳನ್ನು ಸಂರಕ್ಷಿಸಲು, ಪ್ರವಾಸಿ ತಾಣವನ್ನಾಗಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಮುಂದೆ ಬರುತ್ತಿಲ್ಲ. ಪ್ರತಿ ವರ್ಷ ಬಸವಕಲ್ಯಾಣಕ್ಕೆ ಬರುವ
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದರೂ ಕೋಟೆ ನೋಡುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ.

ಪ್ರತಿ ವರ್ಷ ಸರಾಸರಿ 30 ಸಾವಿರ ಪ್ರವಾಸಿಗರು ಕಲ್ಯಾಣಕ್ಕೆ ಭೇಟಿ ನೀಡುತ್ತಿದ್ದು, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿ ಕೋಟೆ ವೀಕ್ಷಿಸುತ್ತಿದ್ದಾರೆ. ಕೋಟೆ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವರಿಗೆ ತಲಾ 4 ರೂ. ಮಕ್ಕಳಿಗೆ 2 ರೂ. ಟಿಕೆಟ್‌ ವ್ಯವಸ್ಥೆ ಮಾಡಿದ್ದು, ಪ್ರತಿವರ್ಷ ಸುಮಾರು ಒಂದು ಲಕ್ಷ ರೂ. ವರೆಗೆ ಸಂಗ್ರಹ ಮಾಡಲಾಗುತ್ತಿದೆ. ಸದ್ಯ ಕೋಟೆ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆ ಅಧೀನದಲ್ಲಿದೆ.

Advertisement

ಕೋಟೆ ಸ್ವರೂಪ: ಕೋಟೆ ಆಳಿದ ರಾಜರು ತಮ್ಮದೇ ರೀತಿಯಲ್ಲಿ ಕೋಟೆಯನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ. ಇಲ್ಲಿನ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ನೋಡಿದಾಗ ಸಮಯಕ್ಕೆ ಅನುಗುಣವಾಗಿ ಬದಲಾವಣೆ ಕಂಡಿರುವ ಕುರುಹುಗಳು ಸಿಗುತ್ತವೆ. ಕೋಟೆ ಸುತ್ತಲೂ ಸುಮಾರು 20ರಿಂದ 25 ಅಡಿ ಆಳದ ಕಂದಕ ನಿರ್ಮಿಸಲಾಗಿದೆ. ಕಂದಕದಲ್ಲಿ ನೀರು ಭರ್ತಿ ಮಾಡಲಾಗುತ್ತಿತ್ತು. ಕಂದಕ ಯಾವಾಗಲೂ ನೀರಿನಿಂದ ತುಂಬಿರುತ್ತಿದ್ದರಿಂದ ಕೋಟೆ ಆವರಣವನ್ನು ಯಾರೂ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಈ ರೀತಿಯಲ್ಲಿ ಕಂದಕವನ್ನು ನಿರ್ಮಿಸಲಾಗಿದೆ.

ಅಲ್ಲದೇ ಕೋಟೆಯ ಒಳಗೆ ಬಾರುದ್‌ ಇಡುವ ಕೋಣೆ, ಕೈದಿಗಳ ಜೈಲು, ರಂಗ ಮಹಲ್‌, ತೋಪುಗಳು ನೋಡುಗರ ಗಮನ ಸೆಳೆಯುತ್ತವೆ. ಗೈಡ್‌ ವ್ಯವಸ್ಥೆ ಇಲ್ಲ: ಕೋಟೆ ಮತ್ತು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮಾಹಿತಿ ನೀಡುವ ಗೈಡ್‌ಗಳ ಕೊರತೆ ಇದೆ. ಪ್ರವಾಸಿಗರು ಸುಮ್ಮನೆ ಒಂದು ಸುತ್ತುಹಾಕಿ ಮರಳಿ ಹೋಗುತ್ತಿದ್ದಾರೆ. ಗತಕಾಲದ ಇತಿಹಾಸ ತಿಳಿಸುವ ಕಾರ್ಯ ಇಲ್ಲಿ ನಡೆಯಬೇಕು ಎನ್ನುವುದು ಅನೇಕ ಪ್ರವಾಸಿಗರ ಅಭಿಪ್ರಾಯವಾಗಿದೆ.

ಮೂಲ ಸೌಕರ್ಯ ಕೊರತೆ: ಬಸವಕಲ್ಯಾಣಕ್ಕೆ ಭೇಟಿ ನೀಡಿದರೆ ಮೊದಲಿಗೆ ಸಿಗುವುದೇ ಹಾಳಾದ ರಸ್ತೆಗಳು. ದೂರದಿಂದ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಹೇಳಿಕೊಳ್ಳುವಂತಹ ಹೋಟೆಲ್‌ಗಳು ಇಲ್ಲಿಲ್ಲ. ಕಾರಣ ಪ್ರವಾಸಿಗರು ಕಲ್ಯಾಣಕ್ಕೆ ಭೇಟಿ ನೀಡಿ ಕಲಬುರಗಿ ಅಥವಾ ಬೀದರ ನಗರಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಕೋಟೆಯಲ್ಲಿ ಸ್ವತ್ಛತೆ ಕೊರತೆ ಇದೆ. ಕೋಟೆ ಆವರಣದಲ್ಲಿ ಗಿಡಮರಗಳು ಬೆಳೆದು ಅವಶೇಷಗಳು ಹಾಗೂ ಗೋಡೆಗಳು ಹಾಳಾಗುತ್ತಿದ್ದು, ಯಾವ ಸಂದರ್ಭದಲ್ಲಾದರೂ ಕುಸಿಯುವಂತೆ ಕಾಣುತ್ತಿವೆ. ಸರ್ಕಾರ ವಿಶೇಷ ಕಾಳಜಿ ವಹಿಸಿ ಪ್ರವಾಸಿ ತಾಣವನ್ನಾಗಿ ಬೆಳೆಸುವ ಜೊತೆಯಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ.

ಬಸವಕಲ್ಯಾಣದ ಕೋಟೆ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಕೋಟೆ ಸಂರಕ್ಷಣೆಗೆ ಅನುದಾನದ ಕೊರತೆ ಇರುವ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರ ಕೋಟೆ ಸಂರಕ್ಷಣೆಗೆ ಅನುದಾನ ಬಿಡುಗಡೆ ಗೊಳಿಸಿದರೆ ಸಂರಕ್ಷಣೆಯೊಂದಿಗೆ ಹೊಸತನದ ಸ್ಪರ್ಷ ನೀಡುವ ಕೆಲಸ ಮಾಡಲು ಸಾಧ್ಯ. 
ಷಡಕ್ಷರಪ್ಪ ಮಾಳಪುರ, ಇಂಜಿನಿಯರ್‌, ಪ್ರಾಚ್ಯವಸ್ತು ಇಲಾಖೆ ಹಂಪಿ

ಕಲ್ಯಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ಕೋಟೆಯ ಗೋಡೆಗಳು, ಕೋಟೆ ಒಳಗಿನ ಶಿಲ್ಪಕಲೆಗಳನ್ನು ನೋಡಿ ಈಗ ಇಂತಹ ಕೋಟೆ ನಿರ್ಮಿಸಲು ಸಾಧ್ಯವಿಲ್ಲ ಎನ್ನುವ ಉದ್ಘಾರ ತೆಗೆಯುತ್ತಾರೆ. ಕೋಟೆಗೆ ಹೊಸತನದ ಸ್ಪರ್ಶ ನೀಡುವ ಮೂಲಕ ಸುತ್ತಲಿನ 20 ಅಡಿ ಆಳದ ಕಂದಕದಲ್ಲಿ ಹಳೆ ಮಾದರಿಯಂತೆ ನೀರು ತುಂಬಿಸಿ ಮೊಸಳೆಗಳನ್ನು ಬಿಟ್ಟರೆ ಇನ್ನು ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಕುಮಾರ ಕ್ಯೂರೇಟರ್‌ ವಸ್ತುಸಂಗ್ರಹಾಲಯ, ಬಸವಕಲ್ಯಾಣ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next