Advertisement

ನಡೆ-ನುಡಿಗಳ ಸಮನ್ವಯದ ಜಗದ್ಗುರು ಬಸವಣ್ಣ

01:04 PM May 03, 2022 | Team Udayavani |

ಬಸವಣ್ಣನವರು ಜಾಗತಿಕ ಪುಣ್ಯ ಪುರುಷರಲ್ಲಿ ಅಗ್ರಗಣ್ಯರು. 12ನೇ ಶತಮಾನದಲ್ಲಿ ಜರುಗಿದ ಸಮಾಜೋಧಾರ್ಮಿಕ ಚಳವಳಿಯ ನೇತಾರರಾಗಿದ್ದ ಅವರು ಲೋಕದಲ್ಲಿ ಸದಾಚಾರ, ಶಿವಾಚಾರಗಳನ್ನು ನೆಲೆಗೊಳಿಸುವುದಕ್ಕಾಗಿ ಭಕ್ತಿಯ ಮಹಾಪ್ರವಾಹವನ್ನೇ ಹರಿಸಿದರು. ತಮ್ಮ ಅನವರತ ಭಕ್ತಿಯ ಸಾಧನೆಯಿಂದ, ಪಡೆದ ಸಿದ್ಧಿಯಿಂದ ವೈವಿಧ್ಯ ಮಯ ವ್ಯಕ್ತಿತ್ವ ಪಡೆದ ಅವರು ಮಹಾದೇವನೆನಿಸಿ ನಿಂತವರು. ಅನುಭಾವಿಯಾಗಿ, ಜಗಜ್ಯೋತಿಯಾಗಿ ಮನುಕುಲಕ್ಕೆ ಗುರುವಾಗಿ, ಜಗದ್ಗುರುವಾಗಿ ಶಿವಪಥ ತೋರಿದವರು. ಅಂತೆಯೇ ಮಹಾ ಮಹಿಮ ಸಂಗನಬಸವಣ್ಣ ನನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೂ ಗುರು ಕಾಣಾ ಗುಹೇಶ್ವರಾ’ ಎಂದು ಅಲ್ಲಮ ಪ್ರಭುದೇವರು ಅವರ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ.

Advertisement

ಬಸವಣ್ಣನವರದು ಉಪಮಿಸಬಾರದ ವ್ಯಕ್ತಿತ್ವ. ಬದುಕಿನಲ್ಲಿ ನಯ-ವಿನಯ, ಸತ್ಯ ಸಮತೆಗಳನ್ನು ರೂಢಿಸಿಕೊಂಡ ಸಂಪನ್ನವ್ಯಕ್ತಿತ್ವ ಅವರದು. ಅವರ ನಡೆ-ನುಡಿ, ದೃಷ್ಟಿ-ಹಸ್ತ, ಮನ-ಭಾವಗಳೆಲ್ಲವೂ ಪರುಷಮಯ. ಪರುಷಕ್ಕೆ ಸೋಂಕಿದ ಕಬ್ಬಿಣ ಹೊನ್ನಾಗುವಂತೆ ಬಸವಣ್ಣನವರ ಸಾಮೀಪ್ಯಕ್ಕೆ ಬಂದ ಸಾಮಾನ್ಯ ಮನುಷ್ಯರಷ್ಟೇ ಅಲ್ಲ ಕಳ್ಳರು-ಸುಳ್ಳರು, ಸಮಾಜ ಕಂಟಕರು ಭಕ್ತರಾಗಿ, ಶರಣರಾಗಿ ಪರಿವರ್ತನೆಗೊಂಡರು. ಸಮಾಜದಲ್ಲಿದ್ದ ಜಡತೆ, ಅಂಧಶ್ರದ್ಧೆ ಹಾಗೂ ಅಸಮಾನತೆಗಳನ್ನು ನೀಗಿ ಸುಸಂಸ್ಕೃತ, ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಬಸವಣ್ಣನವರು ಯುಗ ಪುರುಷರೆನಿಸಿದ್ದಾರೆ.

ಬಸವಣ್ಣನವರ ಜನ್ಮಸ್ಥಳ ಇಂದಿನ ಬಸವನಬಾಗೇವಾಡಿ. ಮಾದರಸ-ಮಾದಲಾಂಬಿಕೆಯರು ಅವರ ತಂದೆ- ತಾಯಿಗಳು. ಅವರಿಗೆ ದೇವರಾಜನೆಂಬ ಅಣ್ಣನೂ, ನಾಗಮ್ಮ ನೆಂಬ ಸಹೋದರಿಯೂ ಇರುವುದು ಲಭ್ಯ ಶಾಸನಗಳ ಆಧಾರಗಳಿಂದ ಸ್ಪಷ್ಟವಾಗಿದ್ದರೂ ಜನನದ ಕಾಲಾವ ಯ ಬಗ್ಗೆ ಸಂಶೋಧಕರಲ್ಲಿ, ವಿದ್ವಾಂಸರಲ್ಲಿ ಐಕ್ಯಮತ್ಯವಿಲ್ಲ. ಡಾ| ಪಿ.ಬಿ.ದೇಸಾಯಿ, ಬಾಡಾಲು ರಾಮಯ್ಯ ಹಾಗೂ ಡಾ| ಜಿ.ಎಸ್‌. ದೀಕ್ಷಿತ ಪ್ರಕಾರ ಬಸವಣ್ಣನವರು 62 ವರ್ಷ ಬದುಕಿರುವ ಸಾಧ್ಯತೆಯೇ ಹೆಚ್ಚು. ಅವರು ಕಲ್ಯಾಣ ಕ್ರಾಂತಿಯ ನಂತರ ಕ್ರಿಶ 1167 ಅಥವಾ 1168ರಲ್ಲಿ ಲಿಂಗೈಕ್ಯರಾಗಿರಬಹುದೆಂದಾದರೆ ಕ್ರಿಶ 1105 ಬಸವಣ್ಣನವರ ಜನನ ಕಾಲವೆಂದು ತಿಳಿಯಬಹುದು. ಇದರಿಂದ ಕ್ರಿಶ 1105ರಿಂದ ಕ್ರಿಶ1167 ಬಸವಣ್ಣನವರ ಜೀವಿತದ ಕಾಲಾವ ಧಿ ಎಂಬುದು ಸ್ಪಷ್ಟ.
ಕಲ್ಯಾಣದಲ್ಲಿ ಅರಸ ಬಿಜ್ಜಳನ ದಣ್ಣಾಯಕ (ದಂಡನಾಯಕ)ರಾಗಿದ್ದ ಬಸವಣ್ಣನವರು ಮಾಡಿದ ಮಹತ್ವದ ಕಾರ್ಯವೆಂದರೆ ಕಾಯಕ ದಾಸೋಹ ತತ್ವಗಳ ಆಧಾರದಲ್ಲಿ ಸರ್ವಸಮಾನತೆಯ ಸಮಾಜವನ್ನು ನಿರ್ಮಿಸುವುದಕ್ಕಾಗಿ “ಅನುಭವ ಮಂಟಪ’ವೆಂಬ ವಿನೂತನ ಸಂಸ್ಥೆಯನ್ನು ಹುಟ್ಟು ಹಾಕಿರುವುದು.

ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲಿ ಸ್ಥಾಪನೆಯಾಗಿದ್ದ ಅದು “ಜಗತ್ತಿನ ಪ್ರಪ್ರಥಮ ಸಂಸತ್ತು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯಾವುದೇ ವರ್ಗ, ವರ್ಣ, ಲಿಂಗ ಭೇದವಿಲ್ಲದೇ ಎಲ್ಲರೂ ಇಲ್ಲಿ ಒಂದೆಡೆ ಸೇರಿ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳ ಚಿಂತನೆ ನಡೆಸುತ್ತಿದ್ದರು. ಸಮಾ ಜದ ಕೆಳವರ್ಗಕ್ಕೆ ಸಂಬಂ ಧಿಸಿದ ಅಲ್ಲಮಪ್ರಭುವನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿಸುವ ಮೂಲಕ ಬಸವಣ್ಣನವರು ಜಾತಿಗಿಂತ ಗುಣಕ್ಕೆ ಪ್ರಾಧಾನ್ಯತೆ ನೀಡಿರುವುದು ಅತ್ಯಂತ ಸ್ಮರಣೀಯವಾದ ಘಟನೆ. ಈ ಅನುಭವ ಮಂಟಪದ ನಿಷ್ಪತ್ತಿ(ಫಲಶ್ರುತಿ) ಎಂಬಂತೆ ಸಮಾಜದ ಕೆಳವರ್ಗದ ಶೂದ್ರರು, ಅಸ್ಪೃಶ್ಯರು, ಎಲ್ಲ ವರ್ಗದ ಮಹಿಳೆಯರು ಶಿಕ್ಷಿತರಾಗಿ ವಚನಗಳನ್ನು ರಚಿಸಿರುವುದು, ಅನುಭಾವ ಗೋಷ್ಠಿಗಳಲ್ಲಿ ಅತ್ಯಂತ ಆಸಕ್ತಿಯಿಂದ ಭಾಗವಹಿಸಿರುವುದು ಮರೆಯಲಾಗದ ಘಟನೆಗಳು. ಬಸವಣ್ಣನವರು ಸ್ತ್ರೀ ಶಿಕ್ಷಣಕ್ಕೆ ಉತ್ತೇಜನ ನೀಡಿದವರಲ್ಲಿ ಜಗತ್ತಿನಲ್ಲಿಯೇ ಮೊದಲಿಗರು ಎಂದರೆ ಅತಿಶಯೋಕ್ತಿಯಲ್ಲ. ಈ ಅನುಭವ ಮಂಟ ಪದ ಸದಸ್ಯರಾಗಿ, ಕಾಯಕ ಜೀವಿ ಗಳಾಗಿ ದಾಸೋಹಂಭಾವಿಯಾಗಿ ಸಂತೃಪ್ತ ಜೀವನ ನಡೆಸಲು ಆ ಕಾಲದಲ್ಲಿ ದೇಶದ ಮೂಲೆಮೂಲೆಗಳಿಂದ ಕಲ್ಯಾಣ ದೆಡೆಗೆ ಶರಣರು-ಸಂತರು ಹರಿದು ಬಂದುದು ಐತಿ ಹಾಸಿಕ ಘಟನೆ. ಅಫ್ಘಾನಿಸ್ಥಾನ ದಿಂದ ಬಂದಿದ್ದ ಮರುಳಶಂಕರದೇವರು, ಕಾಶ್ಮೀರದ ಅರಸು ಮಹಾ ದೇವ ಭೂಪಾಲ ಮುಂತಾದವರು ಇವರಲ್ಲಿ ಪ್ರಮುಖರು.

ಬಸವಣ್ಣನವರ ಬದುಕಿನ ಘಟನೆಗಳಲ್ಲಿಯೇ ಅತ್ಯಂತ ಐತಿಹಾಸಿಕ ವಾದುದೆಂದರೆ- ಅವರು ಸಮಾಜದಲ್ಲಿ ಬೇರೂರಿದ್ದ ಜಾತೀಯತೆಯ ಪಿಡುಗನ್ನು ತೊಲಗಿಸುವುದಕ್ಕಾಗಿ ನಿಮ್ನವರ್ಗದ ಹರಳಯ್ಯ ಹಾಗೂ ಉಚ್ಚ ವರ್ಗದ ಮಧುವಯ್ಯಗಳ ಮಕ್ಕಳ ಮದುವೆಯನ್ನು ನೆರವೇರಿಸಿದ್ದು. ಉಂಬಲ್ಲಿ, ಉಡುವಲ್ಲಿ, ಕೊಂಬಲ್ಲಿ, ಕೊಡುವಲ್ಲಿ ಕುಲವನರಸಬಾರದೆಂಬುದು ಬಸವಣ್ಣ ನವರ ಸ್ಪಷ್ಟ ಅಭಿಪ್ರಾಯ. ಮನುಷ್ಯನ ಯೋಗ್ಯತೆಯನ್ನು ನಾವು ಅರಸಬೇಕಾದುದು ಅವನ ಹುಟ್ಟಿನಲ್ಲಿ ಅಲ್ಲ, ಅವನ ಗುಣಕರ್ಮಗಳಲ್ಲಿ. ಈ ದೃಷ್ಟಿಯಿಂದ ಗುಣಶೀಲರಾದ ಹರಳಯ್ಯನವರ ಮಗನಿಗೂ, ಮಧುವರಸರ ಮಗಳಿಗೂ ವಿವಾಹ ಸಂಬಂಧವನ್ನೇರ್ಪಡಿಸಿದರು. ಇದರಿಂದ ಮೊದಲೇ ಕುದಿಯುತ್ತಿದ್ದ ಜಾತಿವಾದಿಗಳು ವರ್ಣಸಂಕರವಾಯಿತೆಂದು ಗುಲ್ಲೆಬ್ಬಿಸಿ ದರು; ಬಿಜ್ಜಳನಲ್ಲಿ ದೂರು ಸಲ್ಲಿಸಿದರು. ಹರಳಯ್ಯ, ಮಧುವಯ್ಯ ಗಳಿಬ್ಬರೂ ಲಿಂಗಾಂಗಿ  ಗಳು, ಶಿವಭಕ್ತರು, ವರ್ಣಸಂಕರದ ಮಾತೆಲ್ಲಿ ಯದು ಎಂದು ಬಸ  ವಣ್ಣನವರು ಪ್ರಬಲವಾಗಿ ಪ್ರತಿಪಾದಿಸಿದರೂ ಜಾತಿವಾದಿಗಳ ಕೈ ಮೇಲಾಗಿ ಬಿಜ್ಜಳನು ಹರಳಯ್ಯ ಮಧು ವಯ್ಯ  ನವರಿಗೆ, ಅವರ ಮಕ್ಕಳಿಗೆ ಎಳೆಹೂಟೆ ಶಿಕ್ಷೆ ವಿಧಿ ಸಿದನು. ಇದರಿಂದ ಕಲ್ಯಾಣದಲ್ಲಿ ಅಶಾಂತಿ ಮೈದೋರಿತು. ಬಸವಣ್ಣನವರು ಕಲ್ಯಾಣವನ್ನು ತ್ಯಜಿಸಿ ಕೂಡಲಸಂಗಮದತ್ತ ನಿರ್ಗಮಿಸಿದರು. ಶರಣರೂ ಕಲ್ಯಾಣದಿಂದ ನಾಡಿನ ಮೂಲೆ ಮೂಲೆಗಳತ್ತ ತಮ್ಮಲ್ಲಿದ್ದ ಸಮೃದ್ಧ ವಚನ ಕಟ್ಟುಗಳನ್ನು ಹೊತ್ತು ಸಾಗಿದರು. ಈ ಘಟನೆಯಿಂದ ಬಸವಣ್ಣನವರು ನೊಂದು ಕೂಡಲಸಂಗಮನಲ್ಲಿ(ಲಿಂಗ) ಐಕ್ಯರಾದ ರೆಂಬುದು ಇತಿಹಾಸ ಮತ್ತು ಕಾವ್ಯಗಳಿಂದ ನಮಗೆ ತಿಳಿದು ಬರುವ ಸಂಗತಿಯಾಗಿದೆ.

Advertisement

ಬಸವಣ್ಣನವರ ಸಾಧನೆ-ಸಿದ್ಧಿಗಳ ಬಗ್ಗೆ ಹೇಳುವುದಾದರೆ ಅವರು ಆತ್ಮಕಲ್ಯಾಣದ ಜತೆಗೆ ಸಮಾಜ ಕಲ್ಯಾಣವನ್ನು ಸಾಧಿ ಸಿದ ಮಹಾತ್ಮರು. ಭಕ್ತಿ ಸಾಧನೆಯ ಮೂಲಕ ಅವರು ಅಧ್ಯಾತ್ಮದ ಔನ್ನತ್ಯಕ್ಕೆ ಏರಿದಂತೆಯೇ ಸಮಾಜದಲ್ಲಿರುವ ಅಸಮಾನತೆ, ಶೋಷಣೆ ಯನ್ನು ತೊಲಗಿಸಿ ಕಾಯಕ ದಾಸೋಹಗಳ ಮೂಲಕ ಲೌಕಿಕ ಜೀವನ ದಲ್ಲಿಯೂ ಅದ್ಭುತವಾದುದನ್ನು ಸಾ ಧಿಸಿದ್ದರು. ಲೌಕಿಕ, ಪಾರಲೌಕಿಕ ಸಾಧನೆ ಸಿದ್ಧಿಗಳ ಸಂದರ್ಭದಲ್ಲಿ ಉಂಟಾದ ಭಕ್ತಿಯ ಆವೇಶ, ಸಂದೇ ಹಗಳ ಹೊಯ್ದಾಟ ಹಾಗೂ ಸಮಾ ಜದ ಲೋಪ ದೋಷಗಳ ಬಗ್ಗೆ ಉಂಟಾದ ಅಸಮಾಧಾನ ಕಾರಣವಾಗಿ ಅವರು ರಚಿಸಿದ ವಚನಗಳಲ್ಲಿ ಅವರ ಸಾಧನೆಯ ಆಳ-ವಿಸ್ತಾರಗಳನ್ನು ತಿಳಿಯಬಹುದಾಗಿದೆ. ಅವರ ಆಧ್ಯಾತ್ಮಿಕ ಸಾಧನೆಯಲ್ಲಿ ಭಕ್ತಿಯ ತೀವ್ರತೆ ಪ್ರಮುಖವಾಗಿ ಕಂಡು ಬರುವ ಅಂಶವಾಗಿದೆ. “ಅಯ್ನಾ ಅಯ್ನಾ ಎಂದು ಕರೆಯುತ್ತಲಿದ್ದೇನೆ, ಅಯ್ನಾ ಅಯ್ನಾ ಎಂದು ಒರಲುತ್ತಿ ದ್ದೇನೆ?’ ಎಂದು ತಮ್ಮ ಆಂತರಿಕ ತಳಮಳವನ್ನು ತೋಡಿ ಕೊಳ್ಳುವ ಅವರು, ಭವ ಬಂಧನಕ್ಕೆ ಜನ್ಮಜನ್ಮಾಂತರದಲ್ಲಿ ಲಿಂಗ ಜಂಗಮವನ್ನು ಮರೆತಿರುವುದೇ ಕಾರಣವೆಂದು ಊಹಿಸುತ್ತಾರೆ. ಅದಕ್ಕಾಗಿ ಅವರು ತಮ್ಮನ್ನು ಆತ್ಮಶೋಧನೆಗೆ ಗುರಿಪಡಿಸುತ್ತಾರೆ. ಬಹುಶಃ ಬಸವಣ್ಣನವರ ಹಾಗೆ ತಮ್ಮಂತರಂಗದ ಅಂಕು-ಡೊಂಕುಗಳನ್ನು ಬಿಚ್ಚಿ ಬಯಲಾಗಿಸಿದವರು ಜಾಗತಿಕ ಇತಿಹಾಸದಲ್ಲಿ ಮತ್ತೂಬ್ಬರಿಲ್ಲ ಎಂದೇ ಹೇಳಬೇಕು.

ಬಸವಣ್ಣನವರ ಲಿಂಗಾಂಗ ಸಾಮರಸ್ಯವೆಂಬ (ನಿಷ್ಪತ್ತಿ) ಸಿದ್ಧಿಗೆ ಭಕ್ತಿಯೇ ಆಧಾರವಾಗಿದೆ. ಅರಿವೆಂಬ ಗುರುವಿನ ಮಾರ್ಗದರ್ಶನವಿದೆ, ಲಿಂಗವೆಂಬ ಸಾಧನವಿದೆ. ಹಾಗೆಯೇ ಆಚಾರ-ವಿಚಾರಗಳ ಸಮನ್ವಯತೆ ಇದೆ. ಜ್ಞಾನ-ಕ್ರಿಯೆಗಳ ಸಮನ್ವ ಯತೆಯೇ ನಿಷ್ಪತ್ತಿ ಎಂಬ ಹಣ್ಣಾಗಿ ಸಾರ್ಥಕತೆಯನ್ನು ಪಡೆದಿದೆ. ಈ ನಿಷ್ಪತ್ತಿ ಎಂಬ ಹಣ್ಣು ಬುದ್ಧಿಗೆ ಅಗ್ರಾಹ್ಯವಾದುದು. ಅನುಭವದ ತಲ್ಲೀನತೆಯಿಂದ ಲಭ್ಯವಾಗುವ ಈ ಲಿಂಗಾಂಗ ಸಾಮರಸ್ಯವನ್ನು ಸಾ ಧಿಸಿದ ಬಸವಣ್ಣನವರು ಲೌಕಿಕದಲ್ಲಿದ್ದು ಪಾರ ಮಾರ್ಥಿಕವನ್ನು ಸಾಧಿ ಸಿದ ಶ್ರೇಷ್ಠ ಜಾಗತಿಕ ಸಂತ. ಬುದ್ಧ ರಾಜ್ಯವನ್ನು ತ್ಯಜಿಸಿ ಉಗ್ರ ತಪಸ್ಸನ್ನಾಚರಿಸಿದ. ಆದರೆ ಬಸವಣ್ಣನವರು ಅದನ್ನು ಕಟ್ಟಿಕೊಂಡೇ ಸಾಧಿ ಸಿ ತೋರಿಸಿರುವುದೊಂದು ವಿಶೇಷ. ಬಸವಣ್ಣನವರ ಲೌಕಿಕ-ಪಾರಲೌಕಿಕ ಸಾಧನೆ- ಸಿದ್ಧಿಗಳನ್ನು ನಮ್ಮೆದುರು ಬಿಚ್ಚಿಟ್ಟ ಹರಿಹರ ಮಹಾಕವಿಯು-
ಬಸವನ ಮಾತೇ ಮಾತು, ಬಸವಣ್ಣನ ಭಕ್ತಿಯ
ಓಜೆಯೋಜೆ ಕೇಳ್‌, ಬಸವನ ರೀತಿ ರೀತಿ, ಬಸವಣ್ಣನ
ಕಿಂಕರ ವೃತ್ತಿ ವೃತ್ತಿ ಮೇಣ್‌, ಬಸವಣ್ಣನ ಬಟ್ಟೆ ಬಟ್ಟೆ,
ಬಸವಣ್ಣನ ಬಿಂಕದ ಭಾಷೆ ಭಾಷೆ, ಹೋ ಬಸವನ
ನಿಷ್ಠೆ ನಿಷ್ಠೆ. ಬಸವಣ್ಣನ ನೇಮವೇ ನೇಮವುರ್ವಿಯೊಳ್‌.
ಎನ್ನುತ್ತಾನೆ. ಬಸವಣ್ಣನವರು ಸಾಧಿ ಸಿದ ಲೋಕಹಿತ ಕಾರ್ಯಗಳಲ್ಲಿ ಅಸ್ಪೃಶ್ಯತೆಯನ್ನು ತೊಲಗಿಸಲು ನಿರಂತರ ಪ್ರಯತ್ನಿಸಿದ್ದು, ಜಾತಿ-ವರ್ಗ-ವರ್ಣ-ಲಿಂಗ ಭೇದವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳನ್ನು ಒದಗಿಸಿರುವುದು, ಮಹಿಳೆಯರಿಗೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿರುವುದು ಹಾಗೂ ಶ್ರಮಸಂಸ್ಕೃತಿಯಿಂದ ಸಮೃದ್ಧ ಮತ್ತು ಸಂತೃಪ್ತ ಸಮಾಜವನ್ನು ನಿರ್ಮಿಸಿರುವುದು ಪ್ರಮುಖವಾದವುಗಳಾಗಿವೆ. ಭರತ ಖಂಡದ ಆಧುನಿಕ ಸಮಾಜ ಸುಧಾರಕರು ಬಸವನ ನುಡಿಯನ್ನೇ ನುಡಿಯುತ್ತ, ಅವನ ಅಭಿಪ್ರಾಯವನ್ನೇ ಬೋಧಿ ಸುತ್ತಿರುವರು ಎಂದು ಸರ್‌ ಜೇಮ್ಸ್‌ ಕ್ಯಾಂಬೆಲ್‌ ಹೇಳಿರುವುದನ್ನು ಗಮನಿಸಿದರೆ ಲೋಕೋತ್ತರವಾದುದನ್ನು ಸಾಧಿ ಸಿದವರಲ್ಲಿ ಬಸವಣ್ಣನವರೇ ಅಗ್ರಗಣ್ಯರೆಂಬುದು ಸ್ಪಷ್ಟವಾಗುತ್ತದೆ.

ಕಾಸಿ ಕಮ್ಮಾರನಾದ,
ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ,
ವೇದವನೋದಿ ಹಾರುವನಾದ,
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
ಎಂದ ಬಸವಣ್ಣನವರು ಅಸ್ಪೃಶ್ಯತೆಯನ್ನು ಆಚರಿಸುವವರ ಕಣ್ಣು ತೆರೆಸುವ ಕಾರ್ಯ ಮಾಡು ತ್ತಾರೆ. ಅವರ ದೃಷ್ಟಿಯಲ್ಲಿ ಪ್ರಾಣಿ ಹಿಂಸೆ ಮಾಡುವವರು ಮಾದಿಗರು, ಅಭಕ್ಷé ವನ್ನು ಭುಂಜಿಸುವವರು ಹೊಲೆಯರು. ಸಕಲ ಜೀವಾತ್ಮರಿಗೆ ಲೇಸ ಬಯಸುವವರು, ನಡೆ-ನುಡಿಗಳ ಸಮನ್ವಯದಿಂದ ಉನ್ನತವಾದುದನ್ನು ಸಾ ಧಿಸಿದವರೇ ಶ್ರೇಷ್ಠರು. ಬಸವಣ್ಣ ನವರ ಲೋಕಹಿತ ಕಾರ್ಯಗಳಲ್ಲಿ ಮತ್ತೂಂದು ಮಹತ್ವದ ಕಾರ್ಯವೆಂದರೆ ಮಹಿಳೆ ಯರಿಗೂ ಎಲ್ಲ ರೀತಿಯ ಸಮಾನ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿರುವುದು. ಇದರಿಂದಾಗಿ 12ನೇ ಶತಮಾನದ ಕೆಳವರ್ಗದ ಮಹಿಳೆಯರೂ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ ಉನ್ನತವಾದುದನ್ನು ಸಾಧಿ ಸಲು ಸಾಧ್ಯವಾಯಿತು. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿ ದವರಲ್ಲಿ ಬಸವಣ್ಣನವರೇ ಮೊದಲಿಗರು. ಇದರ ಪರಿಣಾಮವಾಗಿ ಅನೇಕ ಮಹಿಳೆಯರು ಶರಣೆಯರಾಗಿ, ಅನುಭಾವಿಗಳಾಗಿ, ಲೋಕೋತ್ತರ ವಚನಕಾರ್ತಿ ಯರಾಗಿ, ಮಹಿಳಾರತ್ನಗಳಾಗಿ ದೇದೀಪ್ಯಮಾನವಾಗಿ ಬೆಳಗಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.

ಡಾ| ತೋಂಟದ ಸಿದ್ಧರಾಮ ಶ್ರೀ, ಪೀಠಾ ಧಿಪತಿಗಳು, ಯಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-ಡಂಬಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next