Advertisement

ಬಸನಗೌಡ ಯತ್ನಾಳ್‌ಗೆ ಸ್ವಪಕ್ಷೀಯರದ್ದೇ ಸಡ್ಡು

01:01 AM Mar 11, 2023 | Team Udayavani |

ವಿಜಯಪುರ: ಐತಿಹಾಸಿಕ ಬಸವನಾಡಿನ ಜಿಲ್ಲಾ ಕೇಂದ್ರವಾದ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ಗೆ ಪೈಪೋಟಿ ಏರ್ಪಟ್ಟಿದೆ.

Advertisement

ಈ ಕ್ಷೇತ್ರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತಿನಿ ಧಿಸುತ್ತಿದ್ದಾರೆ. ಹಿಂದೂಪರ ಹಾಗೂ ಪಂಚಮಸಾಲಿ ಮೀಸಲು ಹೋರಾಟದ ಮುಂಚೂಣಿಯಲ್ಲಿ ನಿಂತು ಸರಕಾರದ ವಿರುದ್ಧವೇ ಹರಿಹಾಯುತ್ತಿರುವ ಯತ್ನಾಳ, ವಿಪಕ್ಷಗಳಿಗಿಂತ ಸ್ವಪಕ್ಷದಲ್ಲೇ ದೊಡ್ಡ ಮಟ್ಟದ ವಿರೋಧಿ  ಪಾಳೆಯವನ್ನು ಸೃಷ್ಟಿಸಿಕೊಂಡಿದ್ದಾರೆ. ಮತ್ತೂಂದೆಡೆ ಯತ್ನಾಳ ಅವರ ಈ ನಡೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಸರಕಾರ ಹಾಗೂ ಪಕ್ಷಕ್ಕೆ ಸದಾ ಮುಜುಗುರ ತರುತ್ತಿರುವ ಅವರ ಬದಲು ತಮಗೇ ಟಿಕೆಟ್‌ ನೀಡುವಂತೆ ಬೇಡಿಕೆ ಮಂಡಿಸಿದ್ದಾರೆ.
ಇನ್ನು ಯತ್ನಾಳ ಅವರು ಸಂಸದರಾಗಿದ್ದಾಗ ವಿಜಯಪುರ ನಗರ ಕ್ಷೇತ್ರವನ್ನು ಬಿಜೆಪಿ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದ ಅಪ್ಪು ಪಟ್ಟಣಶೆಟ್ಟಿ ಈ ಬಾರಿ ತಮಗೇ ಟಿಕೆಟ್‌ ನೀಡುವಂತೆ ಬೇಡಿಕೆ ಮಂಡಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಸಚಿವರೂ ಆಗಿದ್ದ ಅಪ್ಪು ಪಟ್ಟಣಶೆಟ್ಟಿ ಕಳೆದ ಬಾರಿಯಂತೆ ಈ ಬಾರಿ ತಮ್ಮ ಮನವೊಲಿಕೆ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಒಂದೊಮ್ಮೆ ಜಾತಿ ಆಧಾರ ದಲ್ಲಿ ಪರಿಗಣಿಸುವುದಾದರೆ ನಮಗೆ ಆದ್ಯತೆ ನೀಡಿ ಎಂದು ಯತ್ನಾಳ ಅವರ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಹಲವರು ಬೇಡಿಕೆ ಇರಿಸಿದ್ದಾರೆ. ಯತ್ನಾಳ ವಿರುದ್ಧ ನೇರಾನೇರ ವಾಗ್ಧಾಳಿ ನಡೆಸುತ್ತಿರುವ ಸಚಿವ ಮುರುಗೇಶ ನಿರಾಣಿ ಮೂಲಕ ಡಾ|ಸುರೇಶ ಬಿರಾದಾರ ಟಿಕೆಟ್‌ಗೆ ಯತ್ನಿಸುತ್ತಿದ್ದರೆ; ಸಂಘ ಪರಿವಾರದ ಹಿನ್ನೆಲೆ ಮುಂದಿಟ್ಟು ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ತೆರೆಮರೆ ಕಸರತ್ತು ನಡೆಸಿದ್ದಾರೆ.

ಹಾಗಂತ ಯತ್ನಾಳಗೆ ಟಿಕೆಟ್‌ ತಪ್ಪಿದರೆ ಪಂಚಮಸಾಲಿ ಸಮುದಾಯ ಹಾಗೂ ಕಟ್ಟರ್‌ ಹಿಂದೂತ್ವವಾದಿಗಳ ಮತಗಳು ಕೈತಪ್ಪಲಿವೆ ಎಂಬ ಭೀತಿಯೂ ಬಿಜೆಪಿಗಿದೆ. ಇಂಥ ಪರಿಸ್ಥಿತಿ ಯಲ್ಲಿ ಅಪ್ಪು ಪಟ್ಟಣಶೆಟ್ಟಿ ಸಹಿತ ಕೆಲವರು ಅನ್ಯಪಕ್ಷಗಳಿಗೆ ವಲಸೆ ಹೋಗುವ ಇಲ್ಲವೇ ಬಂಡುಕೋರರಾಗಿ ಕಣಕ್ಕಿಳಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಕಾಂಗ್ರೆಸ್‌ ಕಳೆದ ಮೂರು ದಶಕಗಳಿಂದ ವಿಜಯಪುರ ನಗರ ಕ್ಷೇತ್ರವನ್ನು ಅಘೋಷಿತವಾಗಿ ಮೀಸಲು ಎಂಬಂತೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡುತ್ತಾ ರಾಜಕೀಯ ಸಂಪ್ರದಾಯ ಮಾಡಿಕೊಂಡು ಬಂದಿದೆ. ಇದೇ ಕಾರಣಕ್ಕೆ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ 27 ಆಕಾಂಕ್ಷಿಗಳ ಪೈಕಿ 25 ಮಂದಿ ಮುಸ್ಲಿಂ ಸಮುದಾಯದವರೇ ಎನ್ನುವುದು ಗಮನೀಯ.

Advertisement

ಪ್ರಮುಖವಾಗಿ ಪೈಪೋಟಿ ನಡೆದಿರುವುದು ಮಾಜಿ ಶಾಸಕ ಡಾ|ಎಂ.ಎಸ್‌. ಬಾಗವಾನ ಹಾಗೂ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಮುಶ್ರೀಫ್‌ ಮಧ್ಯೆ. ಇದರ ಹೊರತಾಗಿ ಮಾಜಿ ಸಚಿವ ಎಂ.ಎಲ್‌.ಉಸ್ತಾದ್‌ ಅವರ ಪುತ್ರಿ ಸಲಿಮಾ ಉಸ್ತಾದ್‌, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲರ ಪುತ್ರಿ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ, ರಫೀಕ್‌ ಅಹ್ಮದ್‌ ಕಾಣಿ, ಮೊಹ್ಮದ್‌ ರಫೀಕ್‌ ಟಪಾಲ್‌, ಎಂ.ಎಸ್‌.ಹೊರ್ತಿ ಸಹಿತ ಇತರರು ಟಿಕೆಟ್‌ಗಾಗಿ ತಮ್ಮ ಆಪ್ತ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ.

ಈ ನಡುವೆ ವಿಜಯಪುರ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳಕ್ಕೆ ಅಭ್ಯರ್ಥಿಗಳನ್ನು ಘೋಷಿಸಿರುವ ಜೆಡಿಎಸ್‌, ವಿಜಯಪುರ ನಗರ ಕ್ಷೇತ್ರವನ್ನು ಮಾತ್ರ ಕಾಯ್ದಿರಿಸಿಕೊಂಡಿದೆ. ಘೋಷಿತ ಏಳು ಜನರೂ ಮುಸ್ಲಿಮೇತರರೇ ಆಗಿದ್ದಾರೆ. ಹೀಗಾಗಿ ಪಕ್ಷ ವಿಜಯಪುರ ನಗರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಿದೆ. ಇದು ಇತರ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಸಹಕಾರಿಯಾಗಲಿದೆ ಎಂಬುದರ ಜತೆಗೆ ಬಿಜೆಪಿ-ಕಾಂಗ್ರೆಸ್‌ನ ಅತೃಪ್ತ ನಾಯಕರಿಗೆ ಗಾಳ ಹಾಕುವ ಲೆಕ್ಕಾಚಾರವೂ ನಡೆದಿದೆೆ ಎನ್ನಲಾಗಿದೆ.

ಮೊದಲ ಬಾರಿಗೆ ಕಣಕ್ಕೆ
ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಾಯಕತ್ವದ ಆಮ್‌ ಆದ್ಮಿ ಪಕ್ಷ, ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಸಾರಥ್ಯದ ಎಐಎಂಐಎಂ, ರವಿಕೃಷ್ಣಾರೆಡ್ಡಿ ನೇತೃತ್ವದ ಕೆಆರ್‌ಎಸ್‌ ಪಕ್ಷ ಸಹಿತ ಹಲವು ಪಕ್ಷಗಳು ಮೊದಲ ಬಾರಿಗೆ ವಿಜಯಪುರ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿವೆ. ಅಲ್ಲದೆ ಒಂದೊಮ್ಮೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದಲ್ಲಿ ಪ್ರಬಲ ಆಕಾಂಕ್ಷಿಗಳಲ್ಲಿ ಕೆಲವರು ಎಂಐಎಂ, ಆಮ್‌ ಆದ್ಮಿ ಸಹಿತ ಇತರ ಪಕ್ಷಗಳಿಗೆ ವಲಸೆ ಹೋಗಿ ಟಿಕೆಟ್‌ ಗಿಟ್ಟಿಸುವ ನಿರೀಕ್ಷೆ ಇದೆ.

– ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next