Advertisement

ರಾಜಿಗೆ ವಕಾಲತ್ತು: ಸುಪ್ರೀಂ ಬಾರ್‌ ಕೌನ್ಸಿಲ್‌ಗ‌ಳಿಂದ ಪ್ರತ್ಯೇಕ ಸಭೆ

06:00 AM Jan 14, 2018 | Team Udayavani |

ನವದೆಹಲಿ/ಕೋಲ್ಕತಾ: ಸರ್ವೋಚ್ಚ ನ್ಯಾಯಾಲಯದಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟು  ತುರ್ತಾಗಿ ಬಗೆಹರಿಸಲೇಬೇಕೆಂದು ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಷನ್‌ ಮತ್ತು ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ನಿರ್ಧರಿಸಿವೆ. ಈ ಬಗ್ಗೆ ಎರಡೂ ಸಂಘಟನೆಗಳು ಪ್ರತ್ಯೇಕವಾಗಿ ಸಭೆ ನಡೆಸಿ ನಿರ್ಧಾರಕ್ಕೆ ಬಂದಿವೆ.

Advertisement

ಸುಪ್ರೀಂಕೋರ್ಟ್‌ನ ಪೂರ್ಣ ನ್ಯಾಯಪೀಠ ಕುಳಿತು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಬೇಕು ಎಂದು ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಷನ್‌ (ಎಸ್‌ಸಿಬಿಎ) ಒತ್ತಾಯಿಸಿದೆ. ನವದೆಹಲಿಯಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ. ಸದ್ಯದ ಬೆಳವಣಿಗೆ ಆತಂಕಕಾರಿ ಎಂದು ಬಣ್ಣಿಸಿರುವ ಅಸೋಸಿಯೇಷನ್‌ ಅಧ್ಯಕ್ಷ ವಿಕಾಸ್‌ ಸಿಂಗ್‌,  ಎಲ್ಲ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಗಳನ್ನು ಮುಖ್ಯ ನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿಗಳ ಉನ್ನತಾಧಿಕಾರ ಸಮಿತಿಯಲ್ಲಿರುವ (ಕೊಲೀಜಿಯಂ) ನ್ಯಾಯಮೂರ್ತಿಗಳು ವಿಚಾರಣೆ ನಡೆಸಬೇಕು ಎಂದಿದ್ದಾರೆ.

ಜ.15ರಂದು ಇತರ ನ್ಯಾಯಪೀಠಗಳಲ್ಲಿ ವಿಚಾರಣೆಗೆ ನಿಗದಿಯಾಗಿರುವ ಪಿಐಎಲ್‌ಗ‌ಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಅಥವಾ ಕೊಲೀಜಿಯಂನಲ್ಲಿರುವ ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಆದರೆ ನ್ಯಾಯಮೂರ್ತಿಗಳು ತಮಗೆ ಇರುವ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಬೇಕೋ ಬೇಡವೋ ಎಂಬ ಬಗ್ಗೆ ಎಸ್‌ಸಿಬಿಎ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಗತ್ಯ ಬಿದ್ದರೆ ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಭೇಟಿಯಾಗುವ ಬಗ್ಗೆ ಸಮಯ ನಿಗದಿಮಾಡುವ ಬಗ್ಗೆಯೂ ಕೋರಿಕೊಳ್ಳುತ್ತೇವೆ ಎಂದು ವಿಕಾಸ್‌ ಸಿಂಗ್‌ ಹೇಳಿದ್ದಾರೆ.

ಏಳು ಸದಸ್ಯರ ಸಮಿತಿ:
ಸದ್ಯದ ಬೆಳವಣಿಗೆ ಸರ್ವೋಚ್ಚ ನ್ಯಾಯಾಲಯದ ಆಂತರಿಕ ವಿಚಾರವಾಗಿದ್ದು, ಅದನ್ನು ಅದೇ ರೀತಿಯಾಗಿಯೇ ಬಗೆಹರಿಸಬೇಕು. ಅದಕ್ಕಾಗಿ ಏಳು ಸದಸ್ಯರ ಸಮಿತಿಯನ್ನು ನೇಮಕ ಮಾಡಿದ್ದೇವೆ ಎಂದು ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಹೇಳಿದೆ. ಭಾನುವಾರದಿಂದಲೇ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಉಳಿದ ನ್ಯಾಯಮೂರ್ತಿಗಳನ್ನು ಭೇಟಿ ಮಾಡುತ್ತೇವೆ ಎಂದು ಬಾರ್‌ ಕೌನ್ಸಿಲ್‌ ಅಧ್ಯಕ್ಷ ಮನ್ನನ್‌ ಕುಮಾರ್‌ ಮಿಶ್ರಾ ಹೇಳಿದ್ದಾರೆ.

“ಸಮಸ್ಯೆಯ ಬಗ್ಗೆ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಸಂಸ್ಥೆಯನ್ನು ಕುಗ್ಗಿಸಿದಂತಾಗುತ್ತದೆ. ನ್ಯಾಯಮೂರ್ತಿಗಳಿಗೆ ಮತ್ತು ಪೀಠ ಕೇಸುಗಳನ್ನು ಹಂಚಿಕೆ ವಿಚಾರವನ್ನು ಸುಪ್ರೀಂಕೋರ್ಟ್‌ನ ಆಂತರಿಕವಾಗಿರುವ ವ್ಯವಸ್ಥೆಯಲ್ಲಿಯೇ ಬಗೆಹರಿಸಬೇಕು. ಯಾವುದೇ ರಾಜಕೀಯ ಪಕ್ಷ ಈ ಪರಿಸ್ಥಿತಿಯ ಲಾಭವನ್ನು ಪಡೆಯಲೇ ಬಾರದು’ ಎಂದು ಮಿಶ್ರಾ ಹೇಳಿದ್ದಾರೆ.

Advertisement

ನ್ಯಾಯಾಂಗದ ಹಿತದೃಷ್ಟಿಯಿಂದ ಕ್ರಮ:
ಇನ್ನೊಂದೆಡೆ, ಕೊಚ್ಚಿಯಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿರುವ ನ್ಯಾ.ಕುರಿಯನ್‌ ಜೋಸೆಫ್, ನ್ಯಾಯಾಂಗದ ಹಿತದೃಷ್ಟಿಯಿಂದಲೇ ಶುಕ್ರವಾರ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ್ದು ಎಂದು ಹೇಳಿದ್ದಾರೆ. ಇಂಥ ಕ್ರಮದಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಪಾಲಿಸುವ ಶಿಸ್ತನ್ನು ಉಲ್ಲಂ ಸಿದಂತಾಗಿದೆ ಎಂಬ ವಾದವನ್ನು ತಿರಸ್ಕರಿಸಿದ್ದಾರೆ. “ಸುಪ್ರೀಂಕೋರ್ಟ್‌ನ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿರಬೇಕು ಮತ್ತು ನ್ಯಾಯ, ನ್ಯಾಯಾಂಗಕ್ಕಾಗಿಯೇ ಮಾತನಾಡಿದ್ದು. ಇದಕ್ಕಿಂತ ಬೇರೇನೂ ಇಲ್ಲ’ ಎಂದಿದ್ದಾರೆ. “ಒಂದು ಪ್ರಮುಖ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಅದು ಎಲ್ಲರ ಗಮನಕ್ಕೆ ಬಂದಿದೆ. ಹೀಗಾಗಿ ಅದನ್ನು ಪರಿಹರಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಯಾವುದೇ ಬಿಕ್ಕಟ್ಟು ಇಲ್ಲ- ನ್ಯಾ.ಗೊಗೊಯ್‌
ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ನ್ಯಾ.ರಂಜನ್‌ ಗೊಗೊಯ್‌ “ಯಾವುದೇ ರೀತಿಯ ಬಿಕ್ಕಟ್ಟು ಇಲ್ಲ’ ಎಂದು ಹೇಳಿದ್ದಾರೆ. ಕೋಲ್ಕತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಅವರು ನ್ಯಾಯಮೂರ್ತಿಗಳ ಈ ಕ್ರಮ ಶಿಸ್ತು ಉಲ್ಲಂಘನೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ “ನನಗೆ ಲಕ್ನೋಗೆ ಹೋಗಬೇಕಾಗಿರುವ ವಿಮಾನ ಹಿಡಿಯಬೇಕಾಗಿದೆ. ಹೀಗಾಗಿ ಮಾತನಾಡಲು ಸಾಧ್ಯವಿಲ್ಲ’ ಎಂದಷ್ಟೇ ಹೇಳಿದ್ದಾರೆ.

ಸಿಜೆಐ ಮಿಶ್ರಾ ಭೇಟಿಗೆ ನೃಪೇಂದ್ರ ಮಿಶ್ರಾ ಯತ್ನ
ಶನಿವಾರ ನಡೆದ ಬೆಳವಣಿಗೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾರನ್ನು ಭೇಟಿಯಾಗುವ ಪ್ರಯತ್ನ ನಡೆಸಿದ್ದರು. ನವದೆಹಲಿಯಲ್ಲಿರುವ ನ್ಯಾ.ಮಿಶ್ರಾ ನಿವಾಸಕ್ಕೆ ನೃಪೇಂದ್ರ ಮಿಶ್ರಾ ಕಾರಿನಲ್ಲಿ ಆಗಮಿಸಿದ್ದು ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ. ನಿವಾಸದ ಗೇಟ್‌ ತೆರೆಯದೇ ಇದ್ದುದರಿಂದ ಕೆಲ ನಿಮಿಷಗಳ ಕಾರ್‌ನಲ್ಲಿಯೇ ಕಾದಿದ್ದ ನೃಪೇಂದ್ರ ಮಿಶ್ರಾ ನಂತರ ವಾಪಸಾದರು. ಈ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುಜೇìವಾಲಾ “ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯರ್ಶಿ ನೃಪೇಂದ್ರ ಮಿಶ್ರಾ ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದರ ಹಿಂದೆ ಇರುವ ರಹಸ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಅವರ ನಡುವೆಯೇ ಪರಿಹರಿಸಲು ಸಾಧ್ಯವಾಗದೇ ಇದ್ದರೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮಧ್ಯಪ್ರವೇಶಿಸಿ ಬಗೆಹರಿಸಬೇಕು.
ಎಂ.ಕೆ.ಸ್ಟಾಲಿನ್‌, ಡಿಎಂಕೆ ಕಾರ್ಯಾಧ್ಯಕ್ಷ

ಸುಪ್ರೀಂಕೋರ್ಟ್‌ನ ಅಧಿಕಾರ ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರ ಇಂಥ ಪ್ರಯತ್ನಗಳಿಗೆ ಮುಂದಾಗಬಾರದು. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ನಡೆಸಿದ ಕ್ರಮ ಸರಿಯಾಗಿಯೇ ಇದೆ.
ಉದ್ಧವ್‌ ಠಾಕ್ರೆ, ಶಿವಸೇನೆ ಕಾರ್ಯಾಧ್ಯಕ್ಷ

ಸುಪ್ರೀಂ ಬಾರ್‌ ಅಸೋಸಿಯೇಶನ್‌ ನಿರ್ಣಯಗಳು
– ಬಿಕ್ಕಟ್ಟು ನಿವಾರಣೆಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೂರ್ಣ ಪೀಠದಲ್ಲಿ ಸಭೆ
– ಎಲ್ಲ ಪಿಐಎಲ್‌ಗ‌ಳನ್ನು  ಸಿಜೆಐ ಅಥವಾ ಕೊಲೀಜಿಯಂನಲ್ಲಿರುವ ನ್ಯಾಯಮೂರ್ತಿಗಳು ವಿಚಾರಣೆ ನಡೆಸಬೇಕು
– ಸೋಮವಾರ ಇತರ ಪೀಠಗಳಲ್ಲಿ ವಿಚಾರಣೆಗೆ ನಿಗದಿಯಾಗಿರುವ ಪಿಐಎಲ್‌ಗ‌ಳು ಸಿಜೆಐ ವ್ಯಾಪ್ತಿಗೆ ಬರಲಿ

ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾದ ನಿರ್ಣಯಗಳು
– ಯಾವುದೇ ರಾಜಕೀಯ ಪಕ್ಷ ಸುಪ್ರೀಂಕೋರ್ಟ್‌ನ ಸದ್ಯದ ಪರಿಸ್ಥಿತಿಯ ಲಾಭ ಪಡೆಯುವುದು ಬೇಡ
– ಸಿಜೆಐ ಮತ್ತು ನಾಲ್ವರು ನ್ಯಾಯಮೂರ್ತಿಗಳ ಹೊರತುಪಡಿಸಿ ಇತರ ನ್ಯಾಯಮೂರ್ತಿಗಳ ಭೇಟಿ ಮಾಡಲು 7 ಸದಸ್ಯರ ಸಮಿತಿ
– ಬಹಿರಂಗವಾಗಿ ವಿಚಾರ ಚರ್ಚಿಸದಂತೆ ಮನವಿ
– ಸುಪ್ರೀಂಕೋರ್ಟ್‌ನ ಆಂತರಿಕ ಪರಿಹಾರ ವ್ಯವಸ್ಥೆಯಲ್ಲಿಯೇ ಬಿಕ್ಕಟ್ಟು ಪರಿಹಾರವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next