Advertisement

Bantwala; ಕೆಎಸ್ಆರ್ ಟಿಸಿ ಬಸ್ ಢಿಕ್ಕಿ:ಬೈಕ್ ಸವಾರ ಮೃತ್ಯು

10:03 PM Apr 12, 2023 | Team Udayavani |

ಬಂಟ್ವಾಳ:  ಕೆಎಸ್ಆರ್ ಟಿಸಿ ಬಸ್ ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

Advertisement

ಸರಪಾಡಿ ನಿವಾಸಿ ಅವಿವಾಹಿತ ಯುವಕ ಸೇಸಪ್ಪ ಯಾನೆ ಶ್ರೇಯಸ್ (30) ಮೃತ ದುರ್ದೈವಿ. ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಬಡಕುಟುಂಬದ ಯುವಕನಾಗಿದ್ದು, ಸಂಜೆ ವೇಳೆ ವೃತ್ತಿ ಮುಗಿಸಿ ಮನೆಗೆ ವಾಪಾಸು ಬೈಕಿನಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದೆ.

ಬಿಸಿರೋಡು ಕಡೆಯಿಂದ ಧರ್ಮಸ್ಥಳ ಹೆದ್ದಾರಿಯಲ್ಲಿ ಶ್ರೇಯಸ್ ಸರಪಾಡಿ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಧರ್ಮಸ್ಥಳ ಕಡೆಯಿಂದ ವೇಗವಾಗಿ ಬರುತ್ತಿದ್ದ ಸರಕಾರಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬೈಕಿಗೆ ಢಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು,ಯುವಕ ಗಂಭೀರವಾಗಿ ಗಾಯಗೊಂಡಿದ್ದ, ಅಪಘಾತಕ್ಕೆ ಒಳಗಾದ ಸ್ಥಳದಲ್ಲಿ ರಕ್ತದೋಕುಳಿ ಹರಿದಿತ್ತು. ಕೂಡಲೇ ಈತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಿದ್ದರು ,ಆದರೆ ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಅಪಘಾತ ಸ್ಪಾಟ್ ಅಗುತ್ತಿದೆ ಧರ್ಮಸ್ಥಳ -ಕಡೂರು ಹೆದ್ದಾರಿ

ಬಿಸಿರೋಡು -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಮಗಾರಿ ಮುಗಿದ ಅಗಲೀಕರಣಗೊಂಡ ಬಳಿಕ ಈ ಭಾಗದಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದಲ್ಲದೆ ಸಾವುನೋವುಗಳು ಸಂಭವಿಸಿದ್ದವು.

ಇತ್ತೀಚಿನ ದಿನಗಳಲ್ಲಿ ಇದೊಂದು ‌ಅಪಘಾತವಲಯವಾಗಿ‌ ಮಾರ್ಪಾಡಾಗಿರುವ ಬಗ್ಗೆ ವಾಹನ ಸವಾರರಿಗೆ ನಡುಕ ಉಂಟಾಗಿದೆ. ಈ ಕಾರಣಕ್ಕಾಗಿ ತಿರುವು ಹಾಗೂ ಅಗತ್ಯ ವಿರುವ ಕಡೆಗಳಲ್ಲಿ ಅಪಘಾತ ತಪ್ಪಿಸಲು ರಸ್ತೆಯಲ್ಲಿ ಸ್ಪೀಡ್ ಕಂಟ್ರೋಲ್ ಗಳನ್ನು ಹಾಕುವಂತೆ ಮತ್ತು ಸೂಚನ ಫಲಕಗಳನ್ನು ಹಾಕುವಂತೆ ಇತ್ತೀಚಿಗೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಬೇಟಿ ನೀಡಿದ ಶಾಸಕರು ಸೂಚನೆ ನೀಡಿದ್ದರು. ಆದರೆ ಇಲಾಖೆಯವರು ಎಲ್ಲಾ ಸೂಚನಾ ಕ್ರಮಗಳನ್ನು ಅಳವಡಿಸಲಾಗಿದೆಯಾದರೂ ಅಪಘಾತ ಸಂಭವಿಸುವುದು ಮಾತ್ರ ಕಡಿಮೆಯಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next