Advertisement

ಪುನಶ್ಚೇತನ ನಿರೀಕ್ಷೆಯಲ್ಲಿ ಕಂಚಿನಡ್ಕಪದವು ಸಂಸ್ಕರಣ ಘಟಕ

05:52 AM Jan 12, 2019 | Team Udayavani |

ಬಂಟ್ವಾಳ : ಬಂಟ್ವಾಳ ಪುರಸಭೆ ಪ್ರಾಯೋಜಿತ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕದ ಪುನಶ್ಚೇತನಕ್ಕೆ ಇಚ್ಛಾ ಶಕ್ತಿಯ ಕೊರತೆ ಕಾಡುತ್ತಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಸಾಕಾರಗೊಳ್ಳಲಿದೆ.

Advertisement

ಪುರಸಭೆ ತ್ಯಾಜ್ಯ ಮುಕ್ತವಾಗಬೇಕಿದ್ದರೆ ಪರಿಸರವನ್ನು ಚೊಕ್ಕವಾಗಿಡಲು ಕಲಿಯ ಬೇಕು. ಕಸವನ್ನು ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ನಿರ್ಮಲ ಬಂಟ್ವಾಳ ಪರಿಕಲ್ಪನೆಯನ್ನು ಜನರು ಅರಿತು ಆಡಳಿತದೊಂದಿಗೆ ಸಹಕರಿಸಬೇಕು.

ಬೃಹತ್‌ ಸಮಸ್ಯೆ
ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಹುನಿರೀಕ್ಷಿತ 2.8 ಕೋಟಿ ರೂ. ವೆಚ್ಚದ ಘನತ್ಯಾಜ್ಯ ವಿಲೇವಾರಿ ಕಂಚಿನಡ್ಕಪದವು ಘಟಕ ಯೋಜನೆ ಕಾರ್ಯರೂಪಕ್ಕೆ ಬರಬೇಕಿತ್ತು. ಈ ಯೋಜನೆ ನನೆಗುದಿಗೆ ಬಿದ್ದಿರುವ ಕಾರಣಕ್ಕೆ ಬಂಟ್ವಾಳದಲ್ಲಿ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ಲಾರಿಯಲ್ಲಿ ತುಂಬಿಸಿ ಮಂಗಳೂರಿಗೆ ಸಾಗಿಸಲಾಗುತ್ತಿದೆ. ಹಸಿ ಕಸವನ್ನು ಸಮೀಪದ ತೋಟವೊಂದಕ್ಕೆ ಒದಗಿಸಲಾಗುತ್ತಿದೆ. ಆದರೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಆದುದರಿಂದ ಸಮಸ್ಯೆ ಬೃಹತ್ತಾಗಿ ಬೆಳೆದು ನಿಂತಿದೆ.

ಪುರಸಭೆ ಸೂಕ್ತ ಜಾಗದಲ್ಲಿ ವಿಲೇವಾರಿ ಘಟಕ ನಿರ್ಮಿಸುವ ಯೋಜನೆ ಹೊಂದಿತ್ತು. ಸಜೀಪನಡು ಗ್ರಾಮಸ್ಥರು ಕಂಚಿನಡ್ಕಪದವು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಗ್ರಾ.ಪಂ., ತಾ.ಪಂ. ತ್ಯಾಜ್ಯ ವಿಲೇವಾರಿಯನ್ನು ಇಲ್ಲಿ ಮಾಡಬಾರದು ಎಂದು ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು.

ಕಂಚಿನಡ್ಕಪದವು ಘಟಕ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಅಭಿವೃದ್ಧಿ ಮಾಡಿತ್ತು. ಆದರೆ ಸಾರ್ವಜನಿಕ ಆಕ್ಷೇಪದ ಕಾರಣಕ್ಕೆ ಕಳೆದ ಆರು ವರ್ಷಗಳಿಂದ ಅಭಿವೃದ್ಧಿ ನಿಲುಗಡೆ ಆಗಿದೆ. ಅಲ್ಲಿ ಕಂಪೌಂಡ್‌ ಗೋಡೆ, ಕೊಳವೆಬಾವಿ, ಆಕ್ಸಿಡೇಶನ್‌ ವ್ಯವಸ್ಥೆ, ರಸ್ತೆ ಅಭಿವೃದ್ಧಿ ಹೀಗೆ ಹಲವು ಕೆಲಸಗಳು ನಡೆದಿವೆ.

Advertisement

ವೈಜ್ಞಾನಿಕವಾಗಿ ವಿಲೇವಾರಿ ವ್ಯವಸ್ಥೆ ನಿರೀಕ್ಷೆ 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುರಸಭೆಯ ತ್ಯಾಜ್ಯ ವಿಲೇವಾರಿಯೇ ಬಹುದೊಡ್ಡ ವಿಷಯವಾಗಿತ್ತು. ತಾಲೂಕು ಕೇಂದ್ರ ಸರಿಯಾದರಷ್ಟೇ ಉಳಿದ ಪ್ರದೇಶಗಳು ಚೆನ್ನಾಗಿರುತ್ತವೆ ಎನ್ನುವ ವಿಚಾರವೂ ಆದ್ಯತೆಯಾಗಿ ಕೇಳಿ ಬಂದಿತ್ತು. ಕಳೆದ ಅವಧಿಯ ಪುರಸಭೆಯ ಆಡಳಿತ ಪೈರೋಲಿಸಿಸ್‌ ಯಂತ್ರ ಅಳವಡಿಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯ ವಿವರ ಪ್ರಕಟಿಸಿತ್ತು. ಆದರೆ ಅದು ಅನುಷ್ಠಾನಕ್ಕೆ ಬರುವಲ್ಲಿ ವಿಳಂಬವಾಗಿದೆ. ಈ ಹೇಳಿಕೆಗಳು ಹೊರ ಬಿದ್ದು ತಿಂಗಳು ಆರು ಕಳೆಯಿತು. ಬಂಟ್ವಾಳದ ತ್ಯಾಜ್ಯ ತೆರೆದ ಲಾರಿಯಲ್ಲಿ ಹೆದ್ದಾರಿಯಲ್ಲಿ ಮಂಗಳೂರಿನತ್ತ ಸಾಗುತ್ತಲೇ ಇದೆ.

ಅನುಷ್ಠಾನಕ್ಕೆ ಕ್ರಮ
ಕಂಚಿನಡ್ಕಪದವಿನಲ್ಲಿ 2007ರಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಅಂದು 2.8 ಕೋಟಿ ರೂ. ಅಂದಾಜು ವೆಚ್ಚದ ಘಟಕವನ್ನು ಮಾದರಿಯಾಗಿ ರೂಪಿಸುವ ಯೋಜನೆ ಹಮ್ಮಿಕೊಂಡು, ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ, ಕಸ ವಿಲೇವಾರಿಗೆ ಆದ್ಯತೆ, ಎರೆಹುಳು ಗೊಬ್ಬರ ಮೊದಲಾದ ಉಪಉತ್ಪನ್ನ ಮಾಡುವುದು, ವಾಸನೆ ಬಾರದಂತೆ ಕಟ್ಟುನಿಟ್ಟಾಗಿ ಕಾರ್ಯಾಚರಣೆಯ ಮಾದರಿ ಘಟಕವನ್ನು ರೂಪಿಸಿತ್ತು. ಮುಂದಿನ ಆಡಳಿತದಲ್ಲಿ ಯೋಜನೆಯನ್ನು ಪೂರ್ಣ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 
– ರೇಖಾ ಜೆ. ಶೆಟ್ಟಿ 
ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next