Advertisement

ಬಂಟರ ಸಂಘ  ಮೀರಾ-ಭಾಯಂದರ್‌:ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ

04:03 PM Feb 14, 2019 | Team Udayavani |

ಮುಂಬಯಿ: ಶಿಕ್ಷಣಕ್ಕಾಗಿ ಹೂಡಿದ ಹಣವು ಖರ್ಚು ಎಂದು ಭಾವಿಸಬಾರದು.  ಅದೊಂದು ಗಳಿಕೆ ಎಂಬುದನ್ನು  ಪಾಲಕರು ಅರ್ಥ ಮಾಡಿಕೊಳ್ಳಬೇಕು ಎಂದು ಬಂಟರ ಸಂಘ ಮುಂಬಯಿ ಪೊವಾಯಿ ಎಸ್‌ಎಂ ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್‌ ಶೆಟ್ಟಿ ಅವರು ನುಡಿದರು.

Advertisement

ಇತ್ತೀಚೆಗೆ ದಹಿಸರ್‌ ಪೂರ್ವದ ಹೊಟೇಲ್‌ ಸನ್‌ಶೈನ್‌ ಇನ್‌ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್‌  ಪ್ರಾದೇಶಿಕ ಸಮಿತಿಯ ಶಿಕ್ಷಣ ಹಾಗೂ ಕಲ್ಯಾಣ ಸಮಿತಿ ಮತ್ತು ಮಹಿಳಾ ವಿಭಾಗ ಸಮಿತಿಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹತ್ತನೆಯ ಹಾಗೂ ಹನ್ನೆರಡನೆ ತರಗತಿಯ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,  ಸಂಶೋಧನೆಯ ಪ್ರಕಾರ ಮನುಷ್ಯನ ಜೀವನದಲ್ಲಿ 16ರಿಂದ 24ರ ಹರೆಯವು ಶಿಕ್ಷಣದ  ಫಲವತ್ತಾದ ವರ್ಷ ಎನ್ನಬಹುಬಹುದು. ಈ ಹರೆಯದಲ್ಲಿ ಶಿಕ್ಷಣದ ಬೀಜವನ್ನು ಬಿತ್ತಿದರೆ  ಜೀವನದುದ್ದಕ್ಕೂ ನೀವು ನಗು ನಗುತ್ತಾ ಇರಬಹುದು. ಕೆಲವೊಂದು ಪಾಲಕರು ಊರಿನ ಹಳ್ಳಿಯಲ್ಲಿ  ಹೈನುಗಾರಿಕೆ ಮುಂತಾದ ಉದ್ಯೋಗವನ್ನು ನಡೆಸುತ್ತಾ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿ ಇಂದು ಅವರ ಮಕ್ಕಳು ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಉತ್ತಮ ಉದ್ಯೋಗಗಳಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಹಿಂದೆ ಹಿರಿಯರ ಮುಂದೆ ನಿಂತು ಮಾತನಾಡಲು ಹೆದರುತ್ತಿ¨ªೆವು. ಮೊದಲು ಮೌಲ್ಯಗಳಿಗೆ ಹೆಚ್ಚು ಬೆಲೆ ಇರುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಪಾಲಕರು ಮಕ್ಕಳೊಂದಿಗೆ ಮಾರ್ಗದರ್ಶಿಯಾಗಿ  ಕೆಲವೊಮ್ಮೆ ಸ್ನೇಹಿತರಾಗಿ ಇರಬೇಕಾಗುತ್ತದೆ. ನಮ್ಮ ದಿನನಿತ್ಯದ ಕೆಲಸಗಳೇ ಆಗಲಿ, ಕಲಿಕೆಯಾಗಲಿ ಸಮಯಕ್ಕಿಂತ ಮೊದಲು ಮುಗಿಸುವುದು ಬುದ್ಧಿವಂತಿಕೆ. ಯಾವುದೇ ಶ್ರೇಷ್ಠ ವ್ಯಕ್ತಿಯ ಭಾಷಣ ಅಥವಾ ಒಳ್ಳೆಯ ಮಾತುಗಳು  ನಮ್ಮ ಬದುಕಿನಲ್ಲಿ  ಮಹತ್ತರವಾದ ಬದಲಾವಣೆಯನ್ನು ತರಬಹುದು. ನಮ್ಮನ್ನು ನಾವು ಜಡ್ಜ್ ಮಾಡಬೇಕು. ನಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳು ನಮಗೆ ತಿಳಿದಿರುತ್ತದೆ.  ಹಾಗಾಗಿ ನಮ್ಮ ಬುದ್ಧಿವಂತಿಕೆಯನ್ನು ನಾವೇ ಹೆಚ್ಚಿಸಿಕೊಳ್ಳಬೇಕು. ಓದಿನ ಕಡೆಗೆ ಹೆಚ್ಚಿನ ಗಮನ ನೀಡಿ, ಯಾವುದೇ ವಿಷಯವನ್ನು ಬಾಯಿಪಾಠ ಮಾಡುವುದಲ್ಲ, ಅದನ್ನು ಕರಗತ ಮಾಡಿಕೊಳ್ಳಬೇಕು.  ಆಗ ಅದು ಎಂದಿಗೂ ಮರೆತು ಹೋಗುವುದಿಲ್ಲ. ಪ್ರಾಮಾಣಿಕತೆ ಹಾಗೂ ಪರಿಶ್ರಮ ವಿದ್ಯಾರ್ಥಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಓದುವುದು, ಬರೆಯುವುದು, ಅರ್ಥಮಾಡಿಕೊಳ್ಳುವುದು ಇವು  ಮೂರು ಒಟ್ಟಿಗೆ ಆಗಬೇಕು. ವಿದ್ಯಾರ್ಥಿಗಳಿಗೆ ದೂರ ದೃಷ್ಟಿ ಇರಬೇಕು ಎಂದು ನುಡಿದು, ಯಾವುದೇ ಒಂದು ವಿಷಯವನ್ನು ಸಾವಿರ ಸಲ ಸ್ವಅಧ್ಯಯನ ಮಾಡುವುದಕ್ಕಿಂತ ಒಂದೇ  ಒಂದು ಸಲ ಆ ವಿಷಯವನ್ನು ತರಗತಿಯಲ್ಲಿ ಗಮನವಿಟ್ಟು ಆಲಿಸುವುದು ಅತ್ಯುತ್ತಮ ಎಂದು ನುಡಿದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ಪೊವಾಯಿ ಎಸ್‌ಎಂ  ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀಧರ ಶೆಟ್ಟಿ ಹಾಗೂ ಡಾ| ಪ್ರಭಾಕರ ಶೆಟ್ಟಿ ಬೋಳ, ಸ್ಥಳಾವಕಾಶ ನೀಡಿದ ಸನ್‌ ಶೈನ್‌ ಇನ್‌ ಹೊಟೇಲ್‌ನ ನಿರ್ದೇಶಕ ಶಿವರಾಜ್‌ ಶೆಟ್ಟಿ ಅವರನ್ನು  ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರು ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಸಮ್ಮಾನಿಸಲಾಯಿತು.   ಸೈಂಟ್‌ ಆಗ್ನೆಸ್‌ ಇಂಗ್ಲಿಷ್‌ ಹೈಸ್ಕೂಲ್‌ ಭಾಯಂದರ್‌  ಇದರ ಕಾರ್ಯಾಧ್ಯಕ್ಷರಾದ ಡಾ|  ಅರುಣೋದಯ ರೈ, ಅರುಣ್‌ ಕ್ಲಾಸಸ್‌ನ  ಅರುಣ್‌ ಪಕ್ಕಳ, ಶಾರದ ಕ್ಲಾಸಸ್‌ನ ಭಾಸ್ಕರ್‌ ಶೆಟ್ಟಿ ಮಾತನಾಡಿದರು.

ಆರಂಭದಲ್ಲಿ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಸಂತಿ ಶೆಟ್ಟಿ ಪ್ರಾರ್ಥನೆಗೈದರು.   ಅತಿಥಿಗಳನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್‌ ಶೆಟ್ಟಿ ಹಾಗೂ ಸಲಹೆಗಾರ ಕಿಶೋರ್‌  ಕುಮಾರ್‌ ಶೆಟ್ಟಿ ಕುತ್ಯಾರು ಪರಿಚಯಿಸಿದರು.  ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಕೋಶಾಧಿಕಾರಿ ಉದಯ ಶೆಟ್ಟಿ ಪೆಲತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ  ಕಿಶೋರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಬಾಪ್ರಸಾದ್‌ ಅರಸ ಕುತ್ಯಾರು ಹಾಗೂ ಕಿಶೋರ್‌ ಕುಮಾರ್‌  ಶೆಟ್ಟಿ ಕುತ್ಯಾರು ನಿರೂಪಿಸಿದರು. ಶಿಕ್ಷಣ ಹಾಗೂ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next