Advertisement

ಸಿರಿಬಾಗಿಲು: ರೈಲು ಮಾರ್ಗದಿಂದ ಮಣ್ಣು , ಮರ ತೆರವು

12:39 AM Jul 11, 2019 | Sriram |

ಸುಬ್ರಹ್ಮಣ್ಯ ಸಕಲೇಶಪುರ- ಸುಬ್ರಹ್ಮಣ್ಯ ರೈಲು ಹಳಿಯ ಮೇಲೆ ಮಂಗಳವಾರ ಜರಿದು ಬಿದ್ದಿದ್ದ ಮಣ್ಣಿನ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಬುಧವಾರ ರಾತ್ರಿಯ ಎರಡು ರೈಲುಗಳೂ ಸಂಚರಿಸಿವೆ.

Advertisement

ಘಾಟಿ ಪ್ರದೇಶದಲ್ಲಾಗುತ್ತಿರುವ ವರ್ಷ ಧಾರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಹಳಿಯ ಮೇಲೆ ಶಿರಿಬಾಗಿಲಿನಲ್ಲಿ ಜು. 4ರಂದು ಮಣ್ಣು ಜರಿದು ರೈಲು ಸಂಚಾರ ಎರಡು ತಾಸು ವಿಳಂಬವಾಗಿತ್ತು. ಮಂಗಳವಾರ ಮತ್ತೆ ಎರಡು ಕಡೆ ಮಣ್ಣು ಜರಿದ ಪರಿಣಾಮ ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು.

ಎಡಕುಮೇರಿ-ಸಿರಿಬಾಗಿಲು ಮಧ್ಯದ 80 ಕಿ.ಮೀ. ಮೈಲು ವ್ಯಾಪ್ತಿಯಲ್ಲಿ ಕಲ್ಲು ಮತ್ತು ಮರ ಹಳಿಯ ಮೇಲೆ ಮಂಗಳವಾರ ಬಿದ್ದಿತ್ತು. ಇದೇ ಮಾರ್ಗದ 86 ಕಿ.ಮೀ. ಮೈಲು ಪಕ್ಕದಲ್ಲೂ ಹಳಿ ಮೇಲೆ ಮಣ್ಣು ಕುಸಿದಿತ್ತು. ಬೆಂಗಳೂರಿಗೆ ತೆರಳುವ ರಾತ್ರಿ ರೈಲನ್ನು ನೆಟ್ಟಣ ರೈಲು ನಿಲ್ದಾಣದಲ್ಲಿ ತಡೆದು ನಿಲ್ಲಿಸಿ ಅದರಲ್ಲಿದ್ದ ಪ್ರಯಾಣಿಕರನ್ನು 2 ಬಸ್‌ಗಳಲ್ಲಿ ಹಾಸನಕ್ಕೆ ಮತ್ತು 3 ಬಸ್‌ಗಳಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು.
ಬುಧವಾರ ಸಂಜೆ ತನಕ ಈ ಮಾರ್ಗದಲ್ಲಿ ಯಾವುದೇ ಗುಡ್ಡ ಕುಸಿತ ಘಟನೆಗಳು ನಡೆದಿಲ್ಲ. ಹಗಲಿನ ರೈಲುಗಳು ನಿರಾತಂಕವಾಗಿ ಸಂಚರಿಸಿವೆ. ರಾತ್ರಿ 9 ಗಂಟೆಗೆ ಸಂಚರಿಸುವ ಕಾರವಾರ-ಕಣ್ಣೂರು ಎಕ್ಸ್‌ಪ್ರೆಸ್‌ ಹಾಗೂ ರಾತ್ರಿ 11 ಗಂಟೆಗೆ ಸಂಚರಿಸುವ ಮಂಗಳೂರು ಸೆಂಟ್ರಲ್‌-ಯಶವಂತಪುರ ರೈಲು ಸಂಚಾರದಲ್ಲೂ ಯಾವುದೇ ವ್ಯತ್ಯಯ ಆಗಲಾರದು ಎನ್ನುವ ವಿಶ್ವಾಸ ಇಲಾಖೆ ಅಧಿಕಾರಿಗಳದ್ದು.
ಘಾಟಿ ಪ್ರದೇಶದಲ್ಲಿ ಭಾರೀ ಮಳೆ ಯಾಗುತ್ತಿದ್ದು ರೈಲು ಮಾರ್ಗದ ಮೇಲೆ ನಿಗಾ ಇಡಲಾಗಿದೆ.

ತಡರಾತ್ರಿ ಕಾರ್ಯಾಚರಣೆ
ಹಳಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ಬುಧವಾರ ಸಂಜೆಯಿಂದ ಮುಂಜಾವ 3 ಗಂಟೆ ತನಕವೂ ನಡೆದಿತ್ತು. ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೈಲ್ವೇ ಕಾರ್ಮಿಕರನ್ನು ಕುಸಿತ ಸಂಭವಿಸಿದ ಸ್ಥಳಕ್ಕೆ ಕರೆದೊಯ್ದು ಮಣ್ಣು ತೆರವುಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next