Advertisement

ಕಾಳಸಂತೆಯಲ್ಲಿ ಬಿತ್ತನೆ ಬೀಜ ಮಾರಾಟ ತಡೆಯಿರಿ

10:21 PM Jun 08, 2021 | Team Udayavani |

ಬಳ್ಳಾರಿ: ಬಿತ್ತನೆ ಬೀಜ ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದರಲ್ಲಿ ಅಧಿಕಾರಿಗಳಿಂದ ಹಿಡಿದು ಮೇಲಿನ ಎಂಎಲ್‌ಎ, ಎಂಪಿ, ಸಚಿವರಿಗೂ ಶೇರ್‌ ಹೋಗಲಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಾರೆ. ಕೂಡಲೇ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ನಗರದ ಜಿಪಂ ನಜೀರ್‌ಸಾಬ್‌ ಸಭಾಂಗಣದಲ್ಲಿ ಸೋಮವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂ ಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆ ಆರಂಭವಾದ ಕೆಲಹೊತ್ತಿಗೆ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಈಶ್ವರಪ್ಪ, ಮೆಣಸಿನಕಾಯಿ ಬೀಜ ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದೀರಿ? ಎಂದು ಕೃಷಿ, ತೋಟಗಾರಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಿತ್ತನೆ ಬೀಜ ದೊರೆಯದೇ ರೈತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ ಎಂದರು.

ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುವುದರಲ್ಲಿ ಅಧಿಕಾರಿಗಳಿಗೂ ಶೇರ್‌ ಹೋಗಲಿದೆ. ಜತೆಗೆ ಸಾರ್ವಜನಿಕರು ಸಹ ಇದರಲ್ಲಿ ಅಧಿಕಾರಿಗಳಿಂದ ಹಿಡಿದು ಮೇಲಿನ ಎಂಎಲ್‌ಎ, ಎಂಪಿ, ಸಚಿವರವರೆಗೆ ಶೇರ್‌ ಹೋಗಲಿದೆ ಎಂದೆಲ್ಲ ಆಡಿಕೊಳ್ಳುತ್ತಾರೆ ಎಂದಾಗ, ಸಚಿವ ಈಶ್ವರಪ್ಪ ಮಾತನಾಡಿ, ನಮ್ಮದು ರೈತರ ಪರ ಸರ್ಕಾರ, ಯಾವುದೇ ಕಾರಣಕ್ಕೂ ಬೇಕಾಬಿಟ್ಟಿ ದರಕ್ಕೆ ಮೆಣಸಿನಕಾಯಿ ಬಿತ್ತನೆ ಬೀಜ ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಬಿಡುವುದಿಲ್ಲ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಬೀಜ ಮತ್ತು ಗೊಬ್ಬರದ ಅಂಗಡಿಗಳ ಮೇಲೆ ತಕ್ಷಣ ದಾಳಿ ನಡೆಸಿ ನಿರ್ಧಾಕ್ಷಿಣ್ಯ ಕ್ರಮಕೈಗೊಂಡು ವರದಿ ಒಪ್ಪಿಸಬೇಕು ಎಂದು ಸೂಚನೆ ನೀಡಿದ ಅವರು, ಸಭೆಯಲ್ಲಿ ತಮ್ಮ ಉಪಸ್ಥಿತಿಯ ಅವಶ್ಯಕತೆ ಇಲ್ಲ; ತಕ್ಷಣ ವಿಚಕ್ಷಣಾ ದಳ ಹಾಗೂ ಪೊಲೀಸರೊಡಗೂಡಿ ತೆರಳಿ ದಾಳಿ ನಡೆಸಿ ಸಂಜೆಯೊಳಗೆ ಒಂದಾದರೂ ಎಫ್‌ಐಆರ್‌ ದಾಖಲಿಸಬೇಕು ಎಂದು ಸಭೆಯ ಮಧ್ಯದಲ್ಲಿಯೇ ಅಧಿಕಾರಿಗಳನ್ನು ಹೊರಕಳುಹಿಸಿದರು.

ವಾಪಸ್‌ ಕಳುಹಿಸಲೇನು?: ಇದಕ್ಕೂ ಮುನ್ನ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯೀಕರಣ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡ ಸಚಿವ ಈಶ್ವರಪ್ಪ, ನಿಗದಿತ ಗುರಿಯಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಕಳೆದ ಸಭೆಯಲ್ಲೂ ಇದೆ ಉತ್ತರ ನೀಡಿದ್ದೀರಿ. ಸಭೆಗೆ ಅರಣ್ಯ ಇಲಾಖೆಯ ಜಿಲ್ಲಾ ಅರಣ್ಯಾಧಿಕಾರಿಗಳು ಬರದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪನವರು, ಜಿಲ್ಲಾ ಅಧಿಕಾರಿಗಳು ಕೋವಿಡ್‌ ಕೆಲಸಕ್ಕೆ ಹೋಗಿದ್ದಾರೆ ಎನ್ನುತ್ತಿದ್ದಂತೆ ದೇಶದಲ್ಲೇ ಕೋವಿಡ್‌ ಬಂದಿದೆ. ಎಲ್ಲ ಎಂಪಿ, ಎಂಎಲ್‌ಎಗಳು ತಮ್ಮ ಕೆಲಸಗಳನ್ನು ಬಿಟ್ಟು ಸಭೆಗೆ ಬಂದಿದ್ದಾರೆ. ತಮ್ಮನ್ನು ವಾಪಸ್‌ ಕಳುಹಿಸಲೇನು ? ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ನರೇಗಾ ಪರಿಣಾಮಕಾರಿ ಅನುಷ್ಠಾನ: ದೇಶದಲ್ಲಿ ಒಬ್ಬ ವ್ಯಕ್ತಿ ಕೂಡ ಉಪವಾಸದಿಂದ ಇರಬಾರದು ಎನ್ನುವ ಉದ್ದೇಶದಿಂದ ಕೋವಿಡ್‌ ಸಮಯದಲ್ಲೂ ಮುಂಜಾಗ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನರೇಗಾ ಕಾಮಗಾರಿಗಳನ್ನು ರಾಜ್ಯಾದ್ಯಂತ ನಿರ್ವಹಿಸಲಾಗುತ್ತಿದೆ. ಮಹಾನಗರಗಳಿಂದ ವಲಸೆ ಬಂದವರಿಗೂ ಜಾಬ್‌ಕಾರ್ಡ್‌ ಕೆಲಸ ನೀಡಲಾಗುತ್ತಿದೆ. ಕಳೆದ ವರ್ಷ ನಮ್ಮ ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳನ್ನು ನೀಡುವ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಕೇಂದ್ರ ಸರ್ಕಾರದಿಂದ 800 ಕೋಟಿ ಅ ಧಿಕ ಅನುದಾನವನ್ನು ರಾಜ್ಯಕ್ಕೆ ತರಲಾಗಿದೆ. ಕೋವಿಡ್‌ ಮಧ್ಯೆಯೂ ಜನರಿಗೆ ಉದ್ಯೋಗ ಕೊಡುವ ಉದ್ದೇಶದಿಂದ 40 ಜನರನ್ನು ಒಳಗೊಂಡ ಗುಂಪುಗಳನ್ನು ನಿರ್ಮಾಣ ಮಾಡಿ, ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.

Advertisement

ಗ್ರಾಪಂಗೆ 50 ಸಾವಿರ ಅನುದಾನ: ಸಚಿವರು ಗ್ರಾಮೀಣ ಮಟ್ಟದಲ್ಲಿ ರಚಿಸಲಾದ ಕಾರ್ಯಪಡೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. 14ನೇ ಹಣಕಾಸು ಯೋಜನೆ ಅಡಿ ಬಾಕಿ ಉಳಿದ ಅನುದಾನ, 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಳ್ಳುವುದರ ಜೊತೆಗೆ ಕೋವಿಡ್‌ ನಿರ್ವಹಣೆಗಾಗಿ ಪ್ರತಿ ಗ್ರಾಪಂಗಳಿಗೆ ತಲಾ 50 ಸಾವಿರ ರೂ. ಗಳನ್ನು ಇನ್ನೂ 3-4 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಅನುದಾನ ಬಳಸಿಕೊಂಡು ಸೋಂಕನ್ನು ಸಂಪೂರ್ಣ ತಹಬದಿಗೆ ತರಬೇಕು ಎಂದು ಅವರು ಸೂಚಿಸಿದರು.

ಬಾಲಚೈತನ್ಯ ಕೇಂದ್ರಗಳು ಆರಂಭ: ಜಿಪಂ ಸಿಇಒ ಕೆ.ಆರ್‌. ನಂದಿನಿ ಮಾತನಾಡಿ, ಕೊರೊನಾ 3ನೇ ಅಲೆಯಿಂದ ಮಕ್ಕಳನ್ನು ಪಾರು ಮಾಡಲು ಜಿಲ್ಲಾಡಳಿತ ಮತ್ತು ಜಿಪಂ ಜೊತೆಗೂಡಿ ಬಾಲಚೈತನ್ಯ ಹೆಸರಿನ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಜೂ.8ರಂದು ಪ್ರಾಯೋಗಿಕವಾಗಿ ಬಳ್ಳಾರಿ, ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ 2ನೇ ಹಂತದಲ್ಲಿ ಜೂ.10ರಂದು ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹರಪ್ಪನಹಳ್ಳಿ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲಿ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ಎಲ್ಲ ತಾಲ್ಲೂಕುಗಳಲಿ ತಲಾ 2 ಕೇಂದ್ರಗಳಂತೆ ಜಿಲ್ಲೆಯಲ್ಲಿ ಆರೈಕೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.

0-6 ವರ್ಷದೊಳಗಿನ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಒಟ್ಟು 827 ತೀವ್ರ ಅಪೌಷ್ಟಿಕ ಮಕ್ಕಳಿದ್ದು, 45,774 ಸಾಧರಣಾ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದ್ದು, ಈ ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆ ಹಾಗೂ ರೋಗನಿರೋಧಕ ಹೆಚ್ಚಿಸುವ ಸಲುವಾಗಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಕೇಂದ್ರಕ್ಕೆ ಅವಶ್ಯವಿರುವ ಔಷಧ, ವೈದ್ಯಕೀಯ ಸಿಬ್ಬಂದಿ, ಚಿಕಿತ್ಸೆಗೆ ಬಳಕೆ ಮಾಡುವ ಸಾಮಗ್ರಿಗಳ ಪಟ್ಟಿ ತಯಾರಿಸಲಾಗಿದೆ ಎಂದರು.

ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಸೈಯದ್‌ ನಾಸಿರ್‌ ಹುಸೇನ್‌, ಶಾಸಕರಾದ ಜಿ.ಕರುಣಾಕರರೆಡ್ಡಿ, ಈ.ತುಕಾರಾಂ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ, ಎಂ.ಎಸ್‌. ಸೋಮಲಿಂಗಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರು ಹಾಗೂ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್‌ ಮತ್ತು ಜಿಲ್ಲೆಯ 11 ಗ್ರಾಪಂಗಳ ಪಿಡಿಒಗಳು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next