Advertisement

ವರ್ಷದಿಂದ ಪರಿಹಾರ ಕೇಂದ್ರವೇ ಮನೆ!

12:21 PM Aug 15, 2019 | Team Udayavani |

ಬಾಳೆಹೊನ್ನೂರು: ಇದು ಎಲ್ಲವೂ ಇದ್ದು ಏನೂ ಇಲ್ಲ ಎಂಬ ದಯನೀಯ ಬದುಕು ನಡೆಸುತ್ತಿರುವವರ ಗೋಳಿನ ಕಥೆ. ಈ ವರ್ಷದ ಅತಿವೃಷ್ಟಿ ಹಲವರ ಬದುಕನ್ನೇ ಕಿತ್ತುಕೊಂಡಿದ್ದರೆ, ಕಳೆದ ವರ್ಷದ ಮಳೆಯಿಂದ ಅತಂತ್ರಗೊಂಡ ಮೂರು ಕುಟುಂಬಗಳು ಇನ್ನೂ ಶಾಶ್ವತ ನೆಲೆ ಇಲ್ಲದೆ ಪರದಾಡುತ್ತಿವೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಕುಟುಂಬಗಳು ಸಾಕ್ಷಿಯಾಗಿವೆ.

Advertisement

ಕಳೆದ ವರ್ಷ ಉಂಟಾದ ಭಾರೀ ಮಳೆಯಿಂದ ಬಾಳೆಹೊನ್ನೂರಿನ ಮೇಗುಂದ ಹೋಬಳಿಯ ಅಗಳ ಗಂಡಿ ಗ್ರಾಪಂ ವ್ಯಾಪ್ತಿಯ ಹುಲುಗರಡಿ ಗ್ರಾಮಸ್ಥರು ತೊಂದರೆಗೀಡಾಗಿದ್ದರು. ಆದರೆ, ಇವರ ಗೋಳು ಇಂದಿಗೂ ಬಗೆಹರಿದಿಲ್ಲ. ಅತಿವೃಷ್ಟಿ ಪರಿಹಾರ ಕೇಂದ್ರಕ್ಕೆ ತೆರಳಿದ ವೇಳೆ ಇವರ ಸಮಸ್ಯೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಅಳಲು ತೋಡಿಕೊಂಡ ಸ್ಥಳೀಯ ನಿವಾಸಿ ರಾಘವೇಂದ್ರ ಭಟ್, ಕಳೆದ ವರ್ಷ ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಮನೆ ಗೋಡೆಗಳು ಬಿರುಕು ಬಿಟ್ಟು ಸಮಸ್ಯೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮನೆಯಲ್ಲಿ ವಾಸ ಮಾಡುವುದು ಬೇಡವೆಂದು ತಿಳಿಸಿ, ಹುಲುಗರಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಿ ಹೋದವರು ಇದುವರೆಗೂ ಬಂದಿಲ್ಲವೆಂದರು.

ನಮ್ಮ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರಿಗೂ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದೇವೆ. ಜನಸಂಪರ್ಕ ಸಭೆಯಲ್ಲಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಧೀರ್‌ ಭಟ್ ಮಾತನಾಡಿ, ಕಳೆದ ವರ್ಷ ಭೂ ಕುಸಿತ ಉಂಟಾಗಿ ಮನೆ ಕುಸಿದಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭರವಸೆ ಕೊಟ್ಟು ಹೋದವರು ಇದುವರೆಗೂ ಹಿಂದಿರುಗಿಯೂ ನೋಡಿಲ್ಲ. ವೃದ್ಧ ತಾಯಿಯೊಂದಿಗೆ ತಾತ್ಕಾಲಿಕ ಕೊಟ್ಟಿಗೆಯಲ್ಲಿ ವಾಸಿಸುತ್ತಿದೇವೆ. ನಮ್ಮ ಬದುಕು ಪ್ರಾಣಿಗಳಿಗಿಂತ ಕೀಳಾಗಿದೆ ಎಂದು ನೋವು ತೋಡಿಕೊಂಡರು. ಕೃಷ್ಣಾನಂದ ಮಾತನಾಡಿ, ಕಳೆದ ವಾರ ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿ ಮನೆ ಹಿಂಭಾಗದ ದನದ ಕೊಟ್ಟಿಗೆ ಸಂಪೂರ್ಣ ನಾಶವಾಗಿದೆ. ಮನೆ ವರೆಗೂ ಗುಡ್ಡ ಕುಸಿಯುತ್ತಿದೆ. ಭಾರೀ ಮಳೆ ಬಂದರೂ ಮತ್ತಷ್ಟು ಭೂ ಕುಸಿತ ಉಂಟಾಗುವ ಸಂಭವವಿದೆ. ಯಾವೊಬ್ಬ ಅಧಿಕಾರಿಯೂ ಇತ್ತ ಮುಖ ಮಾಡಿಲ್ಲ. ವಿದ್ಯುತ್‌ ಹಾಗೂ ದೂರವಾಣಿ ಸೇವೆ ಸ್ಥಗಿತಗೊಂಡಿದ್ದು, ಭೂ ಕುಸಿತಕ್ಕೆ ಹತ್ತಾರು ಅಡಕೆ ಮರಗಳು ಮುರಿದುಬಿದ್ದಿವೆ. ಸರಕಾರ ನಮಗೆ ಪರಿಹಾರ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.

Advertisement

ಅಡಕೆ ತೋಟಕ್ಕೆ ತೊಂಡೆರೋಗ ತಗುಲಿ ಅಡಕೆ ಬೆಳೆ ಸಂಪೂರ್ಣ ನಾಶವಾಗಿದೆ. ಅಲ್ಪ ಸಲ್ಪ ಬೆಳೆದ ಕಾಫಿಯೂ ಅತಿವೃಷ್ಟಿಯಿಂದ ನಾಶವಾಗುತ್ತಿದೆ. ಒಂದೆಡೆ ಕಾಡುಕೋಣಗಳು ತಂಡೋಪತಂಡವಾಗಿ ಬಂದು ಭಯದ ವಾತಾವರಣ ಸೃಷ್ಟಿಸಿವೆ. ಶಾಶ್ವತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಹುಲಿ ಯೋಜನೆ ಅಥವಾ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿಗೆ ತಂದು ಪರಿಹಾರ ನೀಡಿ ನಮ್ಮನ್ನು ಇಲ್ಲಿಂದ ತೆರವು ಮಾಡಿಸಬೇಕು. ಈಗಾಗಲೇ ಮಲೆನಾಡಿನಲ್ಲಿ ಅಡಕೆ ಬೆಳೆಗಾರರು ನಷ್ಟ ಅನುಭವಿಸಿ ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ, ಕ್ಷೇತ್ರದ ಸಂಸದರು, ಶಾಸಕರು ಹಾಗೂ ಜಿಪಂ, ತಾಪಂ, ಗ್ರಾಪಂ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next