Advertisement

ಉಕ್ಕಿ ಹರಿದ ಭದ್ರೆ ಜನರಿಗಿಲ್ಲ ನಿದ್ರೆ

03:01 PM Aug 10, 2019 | Naveen |

ಬಾಳೆಹೊನ್ನೂರು: ಆಶ್ಲೇಷ ಮಳೆ ಅಬ್ಬರಕ್ಕೆ ಭದ್ರಾ ನದಿಯಲ್ಲಿ ಮೂರನೇ ದಿನವೂ ಪ್ರವಾಹ ಉಂಟಾಗಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಾಗಾಗಿ, ಬಾಳೆಹೊನ್ನೂರು ಮಾಗುಂಡಿ, ಹುಯಿಗೆರೆ, ಹೊರನಾಡು, ಕಳಸ, ಬಾಳೆಹೊಳೆ, ಕುದುರೆಮುಖ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Advertisement

ಹೊಳೆಬಾಗಿಲು, ತೆಪ್ಪದಗಂಡಿ ಹಾಗೂ ಮಾಗುಂಡಿ ಮತ್ತು ಮಹಲ್ಗೋಡಿನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಬಾಳೆಹೊನ್ನೂರಿನಿಂದ ನರಸಿಂಹರಾಜಪುರ- ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಡೊಬಿಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಅಕ್ಕಪಕ್ಕದಲ್ಲಿದ್ದ ಅಂಗಡಿ, ಮಳಿಗೆಗಳು ಹಾಗೂ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಗೃಹೋಪಯೋಗಿ ಹಾಗೂ ದಿನಸಿ ವಸ್ತುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಮುಖ್ಯ ರಸ್ತೆಯ ಅಕ್ಕಪಕ್ಕದ ಗದ್ದೆ ಹಾಗೂ ಅಡಕೆ ತೋಟಗಳು ಜಲಾವೃತಗೊಂಡಿದ್ದು, ಸಾರ್ವಜನಿಕರು ಆಂತಕಗೊಂಡಿದ್ದಾರೆ. ಮುಂಜಾಗ್ರತೆಗಾಗಿ ನದಿ ಪಾತ್ರದ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಶುಕ್ರವಾರವು ಕೂಡ ಮಳೆ ಪ್ರಮಾಣ ಜಾಸ್ತಿಯಾಗಿದ್ದು, ಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಬಾಳೆಹೊನ್ನೂರಿನಿಂದ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ವಾಟುಕುಡಿಗೆ ಎಂಬಲ್ಲಿ ಭದ್ರಾ ನದಿ ನೀರು ರಸ್ತೆಗೆ ಬಂದು ಸಂಚಾರ ಸ್ಥಗಿತಗೊಂಡಿದೆ.

ದ್ವೀಪವಾದ ಬನ್ನೂರು ಗ್ರಾಮ: ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿ ಬನ್ನೂರು, ಮಾಗುಂಡಿ ಹಾಗೂ ಹುಯಿಗೆರೆ ಗ್ರಾಮಸ್ಥರು ಪಟ್ಟಣದ ಸಂಪರ್ಕವನ್ನೇ ಕಡಿದುಕೊಂಡು ದ್ವೀಪದಲ್ಲಿ ವಾಸಿಸುವಂತಾಗಿದೆ. ಅಂಡುವಾನೆಗೆ ಹೋಗುವ ದಾರಿಯಲ್ಲಿ ಭದ್ರಾನದಿ ನೀರು ರಸ್ತೆ ಮೇಲೆ ಹರಿದಿದ್ದರಿಂದ ಬಿಕ್ಕರಣೆ, ಹುಯಿಗೆರೆ, ಮಾವಿನಕಟ್ಟೆ, ಮಣಬೂರು ಸೇರಿದಂತೆ ಇತರ ಗ್ರಾಮಗಳ ಸಂಪರ್ಕ ಕಡಿಗೊಂಡಿದೆ.

Advertisement

1995ರಲ್ಲಿ ಇದೇ ರೀತಿ ಪ್ರವಾಹ ಏರ್ಪಟ್ಟಿದ್ದು, ಈ ಬಾರಿ ಸತತ ಮೂರು ಬಾರಿ ಪ್ರವಾಹ ಉಂಟಾಗಿ ದಾಖಲೆ ನಿರ್ಮಿಸಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಮಟ್ಟ ಒಂದೇ ಸಮನೆ ಏರುತ್ತಿದ್ದು, ಜನರನ್ನು ಆಂತಕಕ್ಕೀಡು ಮಾಡಿದೆ.

ಪಟ್ಟಣದ ಡೋಬಿ ಹಳ್ಳದ ಸಮೀಪ ವಿದ್ಯುತ್‌ ಕಂಬವೊಂದು ವಾಲಿಕೊಂಡಿದ್ದು ಅಪಾಯದ ಹಂತದಲ್ಲಿತ್ತು. ತಕ್ಷಣವೇ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಾಲಿದ್ದ ಕಂಬವನ್ನು ಸರಿಪಡಿಸಿದರು. ನದಿ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ಪ್ರವಾಹವನ್ನು ವೀಕ್ಷಿಸಿದರು.

ವಿದ್ಯುತ್‌ ಸಂಪರ್ಕ ಕಡಿತ: ಅಕ್ಷರನಗರ, ಮೆಣಸುಕೂಡಿಗೆ, ಹಲಸೂರು, ದೊಡ್ಡಮುಂಡುಗ ಇನ್ನಿತರೆ ಭಾಗದಲ್ಲೂ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಸಮಸ್ಯೆ ಉಂಟಾಗಿದೆ. ಭಾರೀ ಮಳೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಹೊಳೆಬಾಗಿಲಿನಲ್ಲಿ ಜಿಪಂ ಸದಸ್ಯೆ ಚಂದ್ರಮ್ಮ ಅವರ ಮನೆಗೆ ನೀರು ನುಗ್ಗಿದ್ದು, ಒಟ್ಟು 5ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next