Advertisement

ಬೇಕಲ ಕೋಟೆ : “ಲೈಟ್‌ ಆ್ಯಂಡ್‌ ಸೌಂಡ್‌ ಶೋ’ಮೂಲೆಗುಂಪು

03:59 PM May 30, 2019 | sudhir |

ಕಾಸರಗೋಡು: ಇತಿಹಾಸ ಪ್ರಸಿದ್ಧ ಹಾಗೂ ಪ್ರವಾಸಿಗರ ಸ್ವರ್ಗವೆಂದೇ ಗುರುತಿಸಿ ಕೊಂಡಿರುವ ಕನ್ನಡಿಗರ ಶೌರ್ಯ ಸಾಹಸದ ಪ್ರತೀಕವಾದ ಬೇಕಲ ಕೋಟೆಯಲ್ಲಿ ಕೋಟೆಯ ಇತಿಹಾಸವನ್ನು ಪ್ರವಾಸಿಗರಿಗೆ ಉಣಬಡಿಸುವ ಉದ್ದೇಶದಿಂದ ಯೋಜಿಸಲಾಗಿದ್ದ “ಲೈಟ್‌ ಆ್ಯಂಡ್‌ ಸೌಂಡ್‌ ಶೋ’ ಇನ್ನೂ ಸಾಕಾರಗೊಂಡಿಲ್ಲ. ಸಂಬಂಧಪಟ್ಟವರ ಇಚ್ಛಾಶಕ್ತಿಯ ಕೊರತೆ ಇಂತಹ ಯೋಜನೆಗಳು ಮೂಲೆಗುಂಪಾಗಲು ಪ್ರಮುಖ ಕಾರಣವೆಂಬುದಾಗಿ ವ್ಯಾಪಕವಾಗಿ ಅಭಿಪ್ರಾಯಗಳು ಕೇಳಿ ಬರುತ್ತಿವೆ.

Advertisement

ಬೇಕಲ ಕೋಟೆಯಲ್ಲಿ ಲೈಟ್‌ ಆ್ಯಂಡ್‌ ಸೌಂಡ್‌ ಶೋ ಆರಂಭಿಸಲು ಕೇರಳ ಪ್ರವಾಸೋದ್ಯಮ ಇಲಾಖೆ ತೀರ್ಮಾನಿಸಿ ಪ್ರಕ್ರಿಯೆಯಲ್ಲಿ ತೊಡಗಿತ್ತು. ನಿರೀಕ್ಷೆಯಂತೆ ಪ್ರಕ್ರಿಯೆಗಳು ನಡೆದಿದ್ದರೆ ಕಳೆದ ಎಪ್ರಿಲ್‌ ತಿಂಗಳಿನಲ್ಲಿ ಲೈಟ್‌ ಆ್ಯಂಡ್‌ ಸೌಂಡ್‌ ಶೋ ಆರಂಭಿಸಲು ಸಾಧ್ಯವಾಗಬಹುದೆಂದು ಭರವಸೆ ಮೂಡಿಸಿತ್ತು.

ಈ ಮಹತ್ವದ ಯೋಜನೆಯ ಮೂಲ ಸೌಕರ್ಯ ಗಳನ್ನು ಕಲ್ಪಿಸುವ ಪ್ರಕ್ರಿಯೆ ಪೂರ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸಿದ್ದರು. ಧ್ವನಿ ಮತ್ತು ಬೆಳಕು ನಿಯಂತ್ರಣ ಕೊಠಡಿ ನಿರ್ಮಾಣ, ಕೇಬಲ್‌ ಸ್ಥಾಪಿಸುವ ಕೆಲಸ, ಪ್ರದರ್ಶನಕ್ಕೆ ಅಗತ್ಯವಾದ ವಿದ್ಯುತ್‌ ನೀಡಲು ಟ್ರಾನ್ಸ್‌ಫಾರ್ಮರ್‌ ಸ್ಥಾಪನೆ ಮೊದಲಾದ ಕಾಮಗಾರಿ ನಡೆಯಬೇಕಾಗಿದೆ. ಟ್ರಾನ್ಸ್‌ಫಾರ್ಮರ್‌ ಸ್ಥಾಪಿಸಲು 6,60,000 ರೂ. ಮಂಜೂರು ಮಾಡಲು ಅನುಮತಿ ಕೇಳಲಾಗಿತ್ತು.

400 ವರ್ಷಗಳ ಉತ್ತರ ಮಲಬಾರ್‌ನ ಚರಿತ್ರೆ, ದಕ್ಷಿಣ ಕರ್ನಾಟಕದ ಚರಿತ್ರೆ, ಕೊಡಗು ಚರಿತ್ರೆ, ಉತ್ತರ ಕೇರಳದ ಕರಾವಳಿ ಪ್ರದೇಶದ ಚರಿತ್ರೆ, ಕೋಟೆ ನಿರ್ಮಾಣದ ಚರಿತ್ರೆ ಮೊದಲಾದವುಗಳ ಸ್ಕ್ರಿಪ್ಟ್ ಅನ್ನು ಪ್ರವಾಸಿ ಇಲಾಖೆ ಕೇಂದ್ರ ಪುರಾತತ್ವ ಇಲಾಖೆಗೆ ಸಲ್ಲಿಸಿತ್ತು. ಈ ಮಾಹಿತಿಗಳನ್ನು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಸಮಗ್ರವಾಗಿ ಅಧ್ಯಯನ ನಡೆಸಿದ್ದರು. ಡಾ| ಸಿ. ಬಾಲನ್‌, ಡಾ| ಎಂ.ಜಿ.ಎಸ್‌. ನಾರಾಯಣನ್‌ ತಯಾರಿಸಿದ ಇತಿಹಾಸದ ಸ್ಕ್ರಿಪ್ಟ್ಗೆ ಕೇಂದ್ರ ಪುರಾತತ್ವ ಇಲಾಖೆ ಮಾನ್ಯತೆ ನೀಡಿದ್ದಲ್ಲಿ ಚಲನಚಿತ್ರ ರಂಗದ ಖ್ಯಾತ ಕಲಾವಿದರಿಂದ ಧ್ವನಿ ರೆಕಾರ್ಡಿಂಗ್‌ ಮಾಡಲು ಉದ್ದೇಶಿಸಲಾಗಿತ್ತು.

ಆ ಬಳಿಕ ಕೋಟೆಯೊಳಗೆ ರಾತ್ರಿ ಲೈಟ್‌ ಆ್ಯಂಡ್‌ ಶೋದ ಸ್ಪಷ್ಟತೆ, ರೆಕಾರ್ಡ್‌ ಮಾಡಿದ ಸ್ಕ್ರಿಪ್ಟ್ ಧ್ವನಿ ಟ್ರಯಲ್‌, ಪ್ರದರ್ಶನವನ್ನು ಕುಳಿತು ವೀಕ್ಷಿಸಲು ಸಾಧ್ಯವಾಗುವಂತೆ ಆಸನ ವ್ಯವಸ್ಥೆಗೊಳಿಸುವ ಮೂಲಕ ಲೈಟ್‌ ಆ್ಯಂಡ್‌ ಸೌಂಡ್‌ ಶೋ ಪ್ರದರ್ಶನ ಆರಂಭಿಸಲು ತೀರ್ಮಾನಿಸಲಾಗಿತ್ತು.

Advertisement

ಪ್ರಾಥಮಿಕ ಪ್ರದರ್ಶನದ ಯಶಸ್ಸಿಗೆ ಅನುಸರಿಸಿ ಲೈಟ್‌ ಆ್ಯಂಡ್‌ ಸೌಂಡ್‌ ಶೋ ಉದ್ಘಾಟಿಸಿದ ಬಳಿಕ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಪ್ರದರ್ಶನ 45 ನಿಮಿಷಗಳ ಕಾಲಾವಧಿಯದ್ದಾಗಿದೆ. ಲೈಟ್‌ ಆ್ಯಂಡ್‌ ಸೌಂಡ್‌ ಶೋ ಯೋಜನೆಯ ಸಿದ್ಧತೆಯ ಶೇ. 60 ಪ್ರಕ್ರಿಯೆ ಪೂರ್ಣಗೊಂಡಿತ್ತು. 200 ಮಂದಿ ಕುಳಿತು ವೀಕ್ಷಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು. ಈ ಯೋಜನೆ ಸಾಕಾರಗೊಳ್ಳಲು 4 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು.

ಯೋಜನೆ ಹಸ್ತಾಂತರ
ಕಾಸರಗೋಡು ಜಿಲ್ಲೆಯಲ್ಲಿ ಸಾಧ್ಯತೆಯಿರುವ ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಕಳೆದ ಫೆಬ್ರವರಿ ತಿಂಗಳಲ್ಲಿ ಸಲ್ಲಿಸಲಾಗಿದೆ ಎಂದು ಪ್ರವಾಸಿ ಇಲಾಖೆ ಡೆಪ್ಯುಟಿ ಡೈರೆಕ್ಟರ್‌ ಪಿ.ಐ. ಸುಬೈರ್‌ ಕುಟ್ಟಿ, ಡಿ.ಟಿ.ಪಿ.ಸಿ. ಸೆಕ್ರೆಟರಿ ಬಿಜು ರಾಘವನ್‌, ಪ್ರೊಜೆಕ್ಟ್ ಮ್ಯಾನೇಜರ್‌ ಸುನಿಲ್‌ ಕುಮಾರ್‌ ಹೇಳಿದ್ದರು.

ರಸ್ತೆ ನಿರ್ಮಾಣ
ಕೆ.ಎಸ್‌.ಟಿ.ಪಿ. ರಸ್ತೆಯಿಂದ ಬೇಕಲ ಕೋಟೆವರೆಗಿನ 230 ಮೀಟರ್‌ ರಸ್ತೆಯನ್ನು ಕೆ.ಎಸ್‌.ಟಿ.ಪಿ. ನೆರವಿನೊಂದಿಗೆ ಮೆಕಡಾಂ ಗೊಳಿಸಲು ನಿರ್ದೇಶಿಸಲಾಗಿದೆ. ರಸ್ತೆಯು ಐದೂವರೆ ಮೀಟರ್‌ ಅಗಲದಲ್ಲಿರುವುದು. ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ನೆಟ್ಟು ಬೆಳೆಸಲಾಗುವುದು. ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಮಾಹಿತಿ ಕೇಂದ್ರ ಸಹಿತ 5 ಕೋಟಿ ರೂ. ಯೋಜನೆಯನ್ನು ತಯಾರಿಸಲಾಗಿದೆ. ಪ್ರವೇಶ ಮಹಾದ್ವಾರವನ್ನೂ ನಿರ್ಮಿಸಲು ಉದ್ದೇಶಿಸಲಾಗಿತ್ತು.

ಸ್ಪೀಡ್‌ ಬೋಟ್‌, ಪಾರಾ ಗ್ಲೆಡಿಂಗ್‌
ಬೇಕಲ ಕೋಟೆ ಸಮೀಪದಲ್ಲಿ ಸ್ಪೀಡ್‌ ಬೋಟ್‌, ಪಾರಾ ಗ್ಲೆ$çಡಿಂಗ್‌ ಸೌಕರ್ಯ ಏರ್ಪಡಿಸಲಾಗುವುದು ಈ ಬಗ್ಗೆ 1.60 ಕೋಟಿ ರೂ. ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. 1.92 ಎಕರೆ ಸರಕಾರದ ಸ್ಥಳದಲ್ಲಿ ಪ್ರಥಮ ಹಂತದಲ್ಲಿ 50 ಸೆಂಟ್ಸ್‌ ಸ್ಥಳ ಪಡೆದುಕೊಂಡು ಯೋಜನೆ ಆರಂಭಿಸಲು ಅನುಮತಿ ಪಡೆಯಲು ನಿರ್ಧರಿಸಲಾಗಿತ್ತು.

ಕೋಟೆಯ ದಕ್ಷಿಣ ಭಾಗದಲ್ಲಿ ಸೈಕಲ್‌ ಓಡಿಸಲು ರಸ್ತೆ ನಿರ್ಮಿಸಲಾಗುವುದು. ಸ್ಥಳದ ಲಭ್ಯತೆಗನುಸಾರವಾಗಿ ಯೋಜನೆಯನ್ನು ನಿರ್ವಹಿಸಲಾಗುವುದು. ಈ ಎಲ್ಲ ಯೋಜನೆ ಗಳನ್ನು ಸಾಕಾರಗೊಳಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಜಿಲ್ಲೆಯ ಎಲ್ಲ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಹೊಸ ಆಶಯ, ಹೊಸ ಯೋಜನೆಗಳಿಗೆ ರೂಪು ಕಲ್ಪನೆ ನೀಡಿದ್ದರು. ಈ ಯೋಜನೆಗಳಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ಹೇಳಿಕೆಯಲ್ಲೇ ಉಳಿಯಿತು
ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿಗೆ ಅಗತ್ಯದ ಯೋಜನೆಗಳನ್ನು ತಯಾರಿಸಿ ಕೇರಳ ಸರಕಾರಕ್ಕೆ ಸಲ್ಲಿಸಲಾಗು ವುದು. ಪ್ರವಾಸಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಆದ್ಯತೆ ನೀಡ ಲಾಗಿದೆ. ಪ್ರವಾಸಿಗರಿಗೆ ಪ್ರಾಥಮಿಕ ಸೌಕರ್ಯ ಗಳನ್ನು ಏರ್ಪಡಿಸಲಾಗುವುದು. ಬೃಹತ್‌ ಯೋಜನೆಗಳಿಗೆ ಬದಲಾಗಿ ಕಿರು ಯೋಜನೆ ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸ ಲಾಗಿದ್ದು, ಅದರಂತೆ ಅಭಿವೃದ್ಧಿ ಕಾರ್ಯ ಶೀಘ್ರವೇ ನಡೆಯಲಿದೆ ಎಂದು ಕಳೆದ ಫೆಬ್ರವರಿ ತಿಂಗಳಲ್ಲಿ ಜಿಲ್ಲಾಧಿಕಾರಿ ಡಿ. ಸಜಿತ್‌ ಬಾಬು ತಿಳಿಸಿದ್ದರು. ಆದರೆ ಈ ವರೆಗೂ “ಲೈಟ್‌ ಆ್ಯಂಡ್‌ ಸೌಂಡ್‌ ಶೋ’ ಯೋಜನೆ ಇನ್ನೂ ಸಾಕಾರಗೊಳ್ಳದೆ ಮೂಲೆಗುಂಪಾಗುವತ್ತ ಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next