Advertisement

ಭಜರಂಗ್‌ಗೆ ಒಲಿಯಲಿದೆ ಖೇಲ್‌ ರತ್ನ

01:14 AM Aug 17, 2019 | Team Udayavani |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರ ಪದಕ ವಿಜೇತ ಕುಸ್ತಿಪಟು ಭಜರಂಗ್‌ ಪೂನಿಯ ಅವರನ್ನು ಪ್ರತಿಷ್ಠಿತ “ರಾಜೀವ್‌ ಗಾಂಧಿ ಖೇಲ್‌ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement

ಎಂ.ಸಿ. ಮೇರಿ ಕೋಮ್‌, ಭೈಚುಂಗ್‌ ಭುಟಿಯ ಅವರನ್ನೊಳಗೊಂಡ 12 ಸದಸ್ಯರ ಆಯ್ಕೆ ಸಮಿತಿ ಭಜರಂಗ್‌ ಪೂನಿಯ ಹೆಸರನ್ನು ಅಂತಿಮಗೊಳಿಸಿತು. ಶುಕ್ರವಾರ ಆರಂಭವಾದ 2 ದಿನಗಳ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಭಜರಂಗ್‌ ಪೂನಿಯ ಜತೆಗೆ ವಿನೇಶ್‌ ಪೋಗಟ್‌ ಹೆಸರನ್ನೂ ಖೇಲ್‌ ರತ್ನಕ್ಕಾಗಿ ಭಾರತೀಯ ಕುಸ್ತಿ ಫೆಡರೇಶನ್‌ ನಾಮನಿರ್ದೇಶ ಮಾಡಿತ್ತು.
ಮೂಲಗಳ ಪ್ರಕಾರ, ಉಳಿದ ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಕ್ರೀಡಾಪಟುಗಳ ಹೆಸರನ್ನು ಅಂತಿಮಗೊಳಿಸುವ ಮುನ್ನ ಖೇಲ್‌ ರತ್ನಕ್ಕೆ ಇನ್ನೂ ಒಬ್ಬರ ಹೆಸರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷ ವಿರಾಟ್‌ ಕೊಹ್ಲಿ ಮತ್ತು ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು.

“ಖೇಲ್‌ ರತ್ನ ಪ್ರಶಸ್ತಿಗೆ ಭಜರಂಗ್‌ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದು ಅವಿ ರೋಧ ಆಯ್ಕೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ತೋರ್ಪ ಡಿಸುತ್ತಿರುವ ಸ್ಥಿರವಾದ ಪ್ರದರ್ಶನ ಹಾಗೂ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಸಾಧನೆಗಾಗಿ ಭಜರಂಗ್‌ ಅವರನ್ನು ಈ ಪ್ರಶಸ್ತಿಗಾಗಿ ಆರಿಸಲಾಗಿದೆ’ ಎಂಬುದಾಗಿ ಆಯ್ಕೆ ಸಮಿತಿ ಮೂಲಗಳು ತಿಳಿಸಿವೆ.

ಭಜರಂಗ್‌ ಸಾಧನೆ
ಕಳೆದ ವರ್ಷ ಜಕಾರ್ತಾ ಏಶ್ಯಾಡ್‌ನ‌ಲ್ಲಿ ಭಜರಂಗ್‌ 65 ಕೆಜಿ ಫ್ರೀಸ್ಟೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಜಯಿಸಿದ್ದರು. ಬಳಿಕ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲೂ ಇದೇ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ದರು. ಇತ್ತೀಚೆಗೆ ಟಿಬಿಲಿಸಿ ಗ್ರ್ಯಾನ್‌ಪ್ರಿ ಕೂಟದಲ್ಲಿ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಪದಕ ಗೆದ್ದಿರುವ ಭಜರಂಗ್‌, ಚೀನದಲ್ಲಿ ನಡೆದ ಏಶ್ಯನ್‌ ರೆಸ್ಲಿಂಗ್‌ನಲ್ಲೂ ಚಾಂಪಿಯನ್‌ ಆಗಿದ್ದರು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಭರವಸೆಯಾಗಿದ್ದಾರೆ.

ಪ್ರಶಸ್ತಿ ಯಾವತ್ತೂ ಯೋಗ್ಯರನ್ನು ಹುಡುಕಿಕೊಂಡು ಬರಬೇಕು ಎಂಬುದು ನನ್ನ ಭಾವನೆ. ಈ ಪ್ರತಿಷ್ಠಿತ ಗೌರವಕ್ಕೆ ಅರ್ಹವಾಗುವಷ್ಟು ಸಾಧನೆ ಯನ್ನು ನಾನು ಖಂಡಿತವಾಗಿಯೂ ಮಾಡಿದ್ದೇನೆ.
– ಭಜರಂಗ್‌ ಪೂನಿಯ

Advertisement
Advertisement

Udayavani is now on Telegram. Click here to join our channel and stay updated with the latest news.

Next