Advertisement

ವಿಮಾನ ದುರಂತದ ನೆನಪು: ಸಾವಿಗಿಂತ ಬದುಕೇ ದೊಡ್ಡದು ಎಂಬುದನ್ನು ಅರ್ಥೈಸಿದ ಘಟನೆ

08:58 AM May 23, 2019 | keerthan |

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010 ಮೇ 22ರಂದು ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ದುರಂತಕ್ಕೆ ಇಂದಿಗೆ ಒಂಬತ್ತು ವರ್ಷ. ಕರಾವಳಿಗೆ ಮಾತ್ರವಲ್ಲದೆ ದೇಶದ ನಾಗರಿಕ ವಿಮಾನ ಯಾನ ರಂಗದ ಮಟ್ಟಿಗೂ ವರ್ಷಗಳೆಷ್ಟು ಕಳೆದರೂ ಮರೆಯಲಾಗದ ಭಾರೀ ಅವಘಡವದು.

Advertisement

ಮಂಗಳೂರು: “ಚಿನ್ನಕ್ಕಿಂತಲೂ ಮಾನವೀ ಯತೆಯೇ ಮುಖ್ಯ’ ಎನ್ನಿಸಿದ್ದು ಅಂದೇ..ಆ ಸಂದರ್ಭದಲ್ಲಿಯೇ. ವೈದ್ಯೆಯಾಗಿದ್ದ ನನಗೆ ಬದುಕು ಮತ್ತು ಸಾವು ಹೊಸದೇನಾಗಿರಲಿಲ್ಲ. ಔಷಧೋಪಾಚಾರ ನೀಡಿದ ಕೆಲವು ದಿನಗಳ ಬಳಿಕ ರೋಗಿ ಹುಷಾರಾಗಿ, ಅವರ ಮನೆಯವರು ಬಂದು “ನಮ್ಮನ್ನು ಬದುಕಿಸಿದೆಯಮ್ಮಾ’ ಎನ್ನುವಾಗ ಬದುಕಿನ ಮಹತ್ವ ತಿಳಿಯುತ್ತಿತ್ತು. ಹಾಗೆಯೇ ಯಾವುದಾದರೂ ರೋಗಿ ಸತ್ತ ಸಂದರ್ಭ ಕಂಡಾಗಲೆಲ್ಲಾ ಮರುಕ ಉಮ್ಮಳಿಸಿಬರುತ್ತಿತ್ತು.

ಆದರೆ ಸಾವಿನ ಭೀಕರ ಅಧ್ಯಾಯವನ್ನು ತೆರೆದು ತೋರಿಸಿದ್ದು ಮಾತ್ರ ಮಂಗಳೂರಿನಲ್ಲಿ 2010 ರ ಮೇ 22ರಂದು ಘಟಿಸಿದ ವಿಮಾನ ಅಪಘಾತ.
ಆ ದಿನದ ನೆನಪುಗಳು ಎಂದಿಗೂ ಮಾಸುವು ದಿಲ್ಲ. ದುರಂತದ ಕ್ಷಣಗಳು, ದುಃಖದ ಘಳಿಗೆಗಳು, ಸಾವಿನ ಮನೆಯ ಆಕ್ರೋಶದ ಮಾತುಗಳು- ಎಲ್ಲವನ್ನೂ ಮೌನವಾಗಿ ನೋಡು ವುದು, ಸೂಕ್ಷ¾ವಾಗಿ ನಿಭಾಯಿಸುವುದಷ್ಟೇ ಅಂದು ನಮ್ಮ ಮುಂದಿದ್ದ ಆಯ್ಕೆಗಳು.

ಇದು ಡಾ| ಸರೋಜಾರ ಅನುಭವದ ನುಡಿಗಳು. ಘಟನೆಯಾದ ಸಂದರ್ಭ ಒಬ್ಬ ವೈದ್ಯೆ ಯಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.


“2010ರಲ್ಲಿ ನಾನು ವೆನ್‌‍ಲಾಕ್‌ ಜಿಲ್ಲಾ ಶಸ್ತ್ರ ಚಿಕಿತ್ಸಕಿಯಾಗಿ ಹೆಚ್ಚುವರಿ ಹೊಣೆ ಹೊತ್ತು ಒಂದೆರಡು ತಿಂಗಳಾಗಿತ್ತು. ಬೆಳಗ್ಗೆ 6 ಗಂಟೆಗೆ ಎದ್ದು ಕಾಫಿ ಕುಡೀತಿದ್ದೆ. ಫೋನ್‌ಬಂತು. ಮಂಗಳೂರು ವಿಮಾನ ನಿಲ್ದಾಣದ ಹತ್ತಿರ ದುಬೈಯಿಂದ ಬರುವ ಏರ್‌ಇಂಡಿಯಾ ವಿಮಾನ ಪತನವಾಗಿದೆ’ ಎಂದು ಹೇಳಿದರು ಫೋನ್‌ ಮಾಡಿದವರು.

“ಯಾವುದೋ ಊರಲ್ಲಿ ಪ್ಲೇನ್‌ ಕ್ರಾಶ್‌ ಆಗಿ ಸಮುದ್ರಕ್ಕೆ ಬಿದ್ದಿತು’ ಎಂದೆಲ್ಲಾ ಕೇಳಿದ್ದ ನನಗೆ ಅಂಥದೊಂದು ಘಟನೆ ನನ್ನ ಅಂಗಳದಲ್ಲೇ ಘಟಿಸೀತು ಎಂದು ಊಹಿಸಿರಲಿಲ್ಲ. ಘಟನೆಯನ್ನು ಅರಗಿಸಿಕೊಳ್ಳಲು ಕೆಲವು ನಿಮಿಷಗಳೇ ಹಿಡಿದವು. ಆಘಾತದಿಂದ ಸುಧಾರಿಸಿಕೊಂಡು ಕೂಡಲೇ ಡ್ರೈವರ್‌ಗೆ ಬರಲು ಹೇಳಿ, ಆಸ್ಪತ್ರೆಗೆ ಹೊರಡಲು ಸಜ್ಜಾದೆ’ ಎಂದು ನೆನಪಿಸಿಕೊಂಡರು ಡಾ| ಸರೋಜ.

Advertisement

ಸಂದರ್ಭ ಅರ್ಥೈಸಿ ತುರ್ತು ವ್ಯವಸ್ಥೆ
ಆಸ್ಪತ್ರೆಗೆ ಬಂದು ವಾರ್ಡ್‌ನಲ್ಲಿದ್ದ ರೋಗಿಗಳನ್ನು ಮರು ಹಂಚಿಕೆ ಮಾಡಿ, ಅಪಘಾತದಿಂದ ಬಂದವರಿಗೆ ಎಲ್ಲಿ ಅವಕಾಶ ಕಲ್ಪಿಸಬೇಕು ಎಂದು ವ್ಯವಸ್ಥೆ ಮಾಡಿದೆ. ಲಭ್ಯವಿದ್ದ ಆ್ಯಂಬುಲೆನ್ಸ್‌ಗಳನ್ನು ಹೊಂದಿಸಿ, ಹಲವು ವೈದ್ಯರನ್ನು ಸ್ಥಳಕ್ಕೆ ಕಳುಹಿಸಿದೆ. ಬಳಿಕ ನಾನೂ ಹೊರಟೆ. ಅಬ್ಟಾ, ಅಲ್ಲಿಗೆ ಹೋಗಿ ನೋಡಿದರೆ ಬರೀ ಹೊಗೆಯಷ್ಟೇ ಕಾಣುತ್ತಿತ್ತು. 7-8 ಮಂದಿ ಪ್ರಾಣ ಉಳಿಸಿಕೊಂಡವರು ಅದಾಗಲೇ ಎಸ್‌.ಸಿ.ಎಸ್‌ ಆಸ್ಪತ್ರೆ ಸೇರಿದ್ದರು. ಉಳಿದವರ ಪತ್ತೆಯೇ ಸಿಗುತ್ತಿರಲಿಲ್ಲ’

“ಸತ್ತವರ ಮೃತದೇಹಗಳನ್ನು ಸಂಸ್ಕಾರ ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಹಲವು ಮೃತದೇಹಗಳನ್ನು ಲಾಂಡ್ರಿಯಲ್ಲಿ ಸಾಲಾಗಿ ಮಲಗಿಸಿದೆವು. ಅವುಗಳನ್ನು ಗುರುತಿಸಲು ಬಹಳಷ್ಟು ಜನ ಬಂದರು. ಹೆಣದ ಮೈಮೇಲಿನ ಚಿನ್ನ ಕದಿಯುವವರೂ ಅವರ ಮಧ್ಯೆ ಇದ್ದರು. ಬಂದವರಲ್ಲಿ ಕಳ್ಳರು ಯಾರು ಸಂಬಂಧಿಕರು ಯಾರು ಎಂದು ಹೇಗೆ ಪತ್ತೆ ಹೆಚ್ಚುವುದು ? ಬಹಳ ಸೂಕ್ಷ್ಮವಾದ ಸಂದರ್ಭ. ಹಾಗಾಗಿ ಚಿನ್ನಕ್ಕಿಂತಲೂ ಮಾನವೀಯತೆ ಮುಖ್ಯ ಎಂದುಕೊಂಡು ನಾವೆಲ್ಲರೂ ಸುಮ್ಮನಿರಲು ನಿರ್ಧರಿಸಿದೆವು’ ಎಂದು ನೆನಪಿಸಿಕೊಳ್ಳುತ್ತಾರೆ ಡಾ| ಸರೋಜಾ ಅವರು.

“ಅಷ್ಟರಲ್ಲಿ ಮೃತದೇಹಗಳು ಅದಲು ಬದಲಾಗಿವೆ ಎಂಬ ಗಲಾಟೆ ಆರಂಭ ವಾಯಿತು. ಕೇರಳದಿಂದ ಬಂದ ಒಬ್ಬರು ಬೆಳಿಗ್ಗೆ ನಮ್ಮವರದ್ದೇ ಎಂದುಕೊಂಡು ಮೃತದೇಹ ಕೊಂಡೊಯ್ದಿದ್ದರು. ಆದರೆ ಸಂಜೆ ಮೃತದೇಹವನ್ನು ವಾಪಸು ತಂದು ಇದು ನಮ್ಮವರದಲ್ಲ ಎಂದರು. ಮತ್ತೂಬ್ಬರು ಒಂದು ಮಗುವಿನ ಮೃತದೇಹ ಕೊಂಡು ಹೋಗಿ ಸಂಸ್ಕಾರ ಮಾಡಿದ ಮೇಲೆ ಅವರಿಗೆ ಅದು ತಮ್ಮ ಮಗುವಲ್ಲ ಎಂದು ತಿಳಿಯಿತು. ಆದರೆ ಮತ್ತೂಂದು ಮಗು ಅವರದ್ದೆಂದು ತಿಳಿಸಲಾಗದ ಅಸಹಾಯಕ ಸ್ಥಿತಿ ನಮ್ಮದು. ಕೊನೆಗೆ ಆ ಮಗುವಿನ ದೇಹವನ್ನು ಅನಾಥ ಮೃತದೇಹಗಳ ಜತೆ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು’ ಎನ್ನುವ  ಡಾ| ಸರೋಜಾ, “ಬದುಕು ಹೇಗೆ ಅಂತ್ಯಗೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವೆ ಇಲ್ಲ. ಆದರೂ ಸಾವಿಗಿಂತ ಬದುಕು ಎಷ್ಟು ದೊಡ್ಡದು ಎಂಬುದನ್ನು ಅರ್ಥ ಮಾಡಿಸಿಕೊಟ್ಟದ್ದು ಈ ಘಟನೆ’ ಎಂದು ಹೇಳಲು ಮರೆಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next