Advertisement

ಪಾಲಾರ್ ಪ್ರಕರಣ: ವೀರಪ್ಪನ್ ಸಹಚರ ಜ್ಞಾನಪ್ರಕಾಶ್‌ ಗೆ ಜಾಮೀನು

08:13 PM Dec 20, 2022 | Team Udayavani |

ಮೈಸೂರು: ಪಾಲಾರ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್‌ನನ್ನು(68)ಜಾಮೀನಿನ ಮೇಲೆ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

Advertisement

ಶ್ವಾಸ ಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜ್ಞಾನ ಪ್ರಕಾಶ್ ಅವರಿಗೆ ಸುಪ್ರಿಂ ಕೋರ್ಟ್ ಮಾನವೀಯತೆ ಆಧಾರ ಮೇಲೆ ಕಳೆದ ನ. 26 ರಂದು ಜಾಮೀನು ಮಂಜೂರು ಮಾಡಿತ್ತು. ಇದರ ಆಧಾರದ ಮೇಲೆ ಮಂಗಳವಾರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

ಸುಪ್ರಿಂ ಕೋರ್ಟ್ ಆದೇಶದಂತೆ ವಕೀಲ ಬಾಬುರಾಜ್ ಅವರು, ಚಾಮರಾಜ ನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಜ್ಞಾನ ಪ್ರಕಾಶ್ ಬಿಡುಗಡೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಇಬ್ಬರ ಶ್ಯೂರಿಟಿ ಮತ್ತು ಐದು ಲಕ್ಷ ಬಾಂಡ್ ನೀಡಿದ್ದರಿಂದ ನ್ಯಾಯಾಲಯ ಬಿಡುಗಡೆಗೆ ಆದೇಶ ನೀಡಿತು. ನಂತರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಜ್ಞಾನ ಪ್ರಕಾಶ್ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿತು.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಜ್ಞಾನ ಪ್ರಕಾಶ್ ಕಳೆದ 29 ವರ್ಷಗಳಿಂದ ಬೆಳಗಾವಿ ಹಿಂಡಲಗ ಮತ್ತು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ಒಂದುವರೆ ವರ್ಷಗಳಿಂದ ಶ್ವಾಸ ಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜ್ಞಾನ ಪ್ರಕಾಶ್‌ಗೆ ಬೆಂಗಳೂರಿನ ಕಿದ್ವಾಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಕೀಲರಾದ ವಿಕ್ರಂ ಹಾಗೂ ಭಾರತಿ ಅವರು, ಸುಪ್ರೀಂ ಕೋರ್ಟ್ ನಲ್ಲಿ ಜ್ಞಾನ ಪ್ರಕಾಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಸುಪ್ರೀಂ ಕೋರ್ಟ್ ಬಿಡುಗಡೆಗೆ ಪುರಸ್ಕರಿಸಿದೆ.

ಇದನ್ನೂ ಓದಿ: ತಾಜ್‌ಮಹಲ್‌ ಗೂ ತಟ್ಟಿದ ತೆರಿಗೆ ಬಿಸಿ: ಕೋಟಿ ತೆರಿಗೆ ಕಟ್ಟಲು 15 ದಿನ ಗಡುವು, ತಪ್ಪಿದರೆ ಜಪ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next